ಜನವರಿ 26ರ ಘಟನೆಯಿಂದ ಕುಗ್ಗಿಲ್ಲ; ಹೋರಾಟ ಮುಂದುವರಿಸುತ್ತೇವೆ: ಪ್ರತಿಭಟನಾ ರೈತರ ಒಕ್ಕೊರಲ ಮಾತು

ಗಾಜಿಪುರ್​ನಲ್ಲಿ ನೆಲೆಯೂರಿರುವ ಟ್ರ್ಯಾಕ್ಟರ್​ಗಳಲ್ಲಿ ರಾಷ್ಟ್ರ ನಾಯಕರ, ಸ್ವಾತಂತ್ರ್ಯ ಹೋರಾಟಗಾರರ ಫೊಟೊ ರಾರಾಜಿಸುತ್ತಿದೆ. ಜೊತೆಗೆ, ‘ಗರ್ವ್ ಸೇ ಕಹೊ ಕಿಸಾನ್ ಕೆ ಪುತ್ರ ಹೊ’ (ಹೆಮ್ಮೆಯಿಂದ ಹೇಳು, ನಾನು ರೈತನ ಮಗನೆಂದು) ಎಂಬ ಘೋಷಣೆಗಳು ಕಾಣಿಸಿಕೊಂಡಿವೆ.

ಜನವರಿ 26ರ ಘಟನೆಯಿಂದ ಕುಗ್ಗಿಲ್ಲ; ಹೋರಾಟ ಮುಂದುವರಿಸುತ್ತೇವೆ: ಪ್ರತಿಭಟನಾ ರೈತರ ಒಕ್ಕೊರಲ ಮಾತು
ಪ್ರತಿಭಟನಾ ನಿರತ ರೈತರು (ಫೈಲ್​ ಫೋಟೋ)
Edited By:

Updated on: Apr 06, 2022 | 8:27 PM

ದೆಹಲಿ: ರಾಜಸ್ಥಾನ್, ಉತ್ತರಾಖಂಡ್, ಉತ್ತರಪ್ರದೇಶ ಭಾಗಗಳಿಂದ ರೈತರು ದೆಹಲಿ ಗಡಿಭಾಗಕ್ಕೆ ಆಗಮಿಸಿದ್ದಾರೆ. ರೈತ ಹೋರಾಟವನ್ನು ಅಪಮಾನ ಮಾಡುವ ಯತ್ನವಾಗಿದೆ. ದಿಕ್ಕು ತಪ್ಪಿಸುವ ಪ್ರಯತ್ನವಾಗಿದೆ. ಆದರೆ, ಚಳುವಳಿಯು ಅದೆಲ್ಲವನ್ನೂ ಮೆಟ್ಟಿ ನಿಂತು ಮುಂದೆ ಬಂದಿದೆ ಎಂದು ಚಳುವಳಿಯ ಭಾಗವಾಗಿರುವ ರೈತರು ತಿಳಿಸಿದ್ದಾರೆ.

ಕೃಷಿ ಕಾಯ್ದೆಯ ನೂತನ ತಿದ್ದುಪಡಿಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರಿಸುವ ಸೂಚನೆ ನೀಡಿದ್ದಾರೆ. ಕೇಂದ್ರದ ವಿರುದ್ಧದ ಹೋರಾಟವನ್ನು ಯಾವುದೇ ಕಾರಣಕ್ಕೂ ಕೊನೆಗೊಳಿಸುವುದಿಲ್ಲ ಎಂದು ರೈತ ಮುಖಂಡರು ಹೇಳಿಕೆ ನೀಡಿದ್ದಾರೆ.

ಭಾರತೀಯ ಕಿಸಾನ್ ಯೂನಿಯನ್ (BKU) ವಕ್ತಾರ ರಾಕೇಶ್ ಟಿಕಾಯತ್ ಭಾವನಾತ್ಮಕ ಭಾಷಣದಿಂದ ಬಲಗೊಂಡ ರೈತ ಸಮುದಾಯ ಪ್ರತಿಭಟನೆ ಮುಂದುವರಿಸುವತ್ತ ಮತ್ತಷ್ಟು ಆಸಕ್ತಿ ತೋರಿದೆ. ಉತ್ತರ ಪ್ರದೇಶ, ಉತ್ತರಾಖಂಡ್ ಭಾಗದಿಂದ ಸಹಸ್ರಾರು ರೈತರು ದೆಹಲಿ-ಉತ್ತರ ಪ್ರದೇಶ ಗಡಿಭಾಗದತ್ತ ಬಂದು ಸೇರುತ್ತಿದ್ದಾರೆ. ಜನವರಿ 26 ಘಟನೆಯ ಬಳಿಕ ರಾಕೇಶ್ ಟಿಕಾಯತ್, ಶನಿವಾರ ಭಾಷಣ ಮಾಡಿದ್ದರು. ಪ್ರತಿಭಟನೆಯಲ್ಲಿ ತೊಡಗಿರುವ ರೈತರ ಸಂಖ್ಯೆ ಕಡಿಮೆಯಾಗಿರುವ ಬಗ್ಗೆ ಟಿಕಾಯತ್ ಬೇಸರ ವ್ಯಕ್ತಪಡಿಸಿದ್ದರು. ಆ ಬಳಿಕ ಮತ್ತೆ ಸಹಸ್ರಾರು ಸಂಖ್ಯೆಯಲ್ಲಿ ರೈತರು ಪ್ರತಿಭಟನಾ ಸ್ಥಳಕ್ಕೆ ಬಂದು ಸೇರುತ್ತಿದ್ದಾರೆ.

ಜನವರಿ 16ರಂದು ಹಿಂಸಾತ್ಮಕ ಕೃತ್ಯಗಳನ್ನು ಎಸಗಿದವರು ನಮ್ಮ ಜನರಲ್ಲ. ಆ ಕೃತ್ಯದ ಹಿಂದೆ ವಿರೋಧಿಗಳ ಷಡ್ಯಂತ್ರವಿದೆ. ನಮ್ಮ ಚಳುವಳಿಯನ್ನು ಕುಗ್ಗಿಸಲು, ಅಪಮಾನ ಮಾಡಲು ಹೀಗೆ ಮಾಡಲಾಗಿದೆ ಎಂದು ಕೇಂದ್ರ ಕಿಸಾನ್ ಸಮಿತಿಯ  ರೈತ ಡಿ.ಪಿ. ಸಿಂಗ್ ಹೇಳಿಕೆ ನೀಡಿದ್ದಾರೆ. ಗಣರಾಜ್ಯೋತ್ಸವ ದಿನದ ಘಟನೆಯಿಂದ ನಾವು ಭಾವನಾತ್ಮಕವಾಗಿ ಕುಗ್ಗಿದ್ದೇವೆ. ನೊಂದಿದ್ದೇವೆ. ಆದರೆ, ಆ ಘಟನೆಯು ನಮ್ಮ ಮೇಲೆ ಪರಿಣಾಮ ಬೀರಿಲ್ಲ. ಅದರಿಂದ ನಾವು ಕುಗ್ಗಿಲ್ಲ. ನಮ್ಮ ಶಕ್ತಿ ಹೆಚ್ಚಿಸಕೊಂಡಿದ್ದೇವೆ, ಒಗ್ಗಟ್ಟಾಗಿದ್ದೇವೆ ಎಂದು ಡಿ.ಪಿ. ಸಿಂಗ್ ಹೇಳಿದ್ದಾರೆ.

ಗಾಜಿಪುರ್​ನಲ್ಲಿ ನೆಲೆಯೂರಿರುವ ಟ್ರ್ಯಾಕ್ಟರ್​ಗಳಲ್ಲಿ ರಾಷ್ಟ್ರ ನಾಯಕರ, ಸ್ವಾತಂತ್ರ್ಯ ಹೋರಾಟಗಾರರ ಫೊಟೊ ರಾರಾಜಿಸುತ್ತಿದೆ. ಜೊತೆಗೆ, ‘ಗರ್ವ್ ಸೇ ಕಹೊ ಕಿಸಾನ್ ಕೆ ಪುತ್ರ ಹೊ’ (ಹೆಮ್ಮೆಯಿಂದ ಹೇಳು, ನಾನು ರೈತನ ಮಗನೆಂದು) ಎಂಬ ಘೋಷಣೆಗಳು ಕಾಣಿಸಿಕೊಂಡಿವೆ. ರಾಷ್ಟ್ರಧ್ವಜ ಮತ್ತು ರೈತ ಸಂಘಟನೆಗಳ ಧ್ವಜಗಳು ಕೂಡ ಹೋರಾಟದಲ್ಲಿ ಕಾಣಿಸಿಕೊಂಡಿದೆ.

ಮಾತುಕತೆ ಮೂಲಕ ರೈತ ಸಮಸ್ಯೆ ಬಗೆಹರಿಸಿಕೊಳ್ಳೋಣ: ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿಯಿಂದ ಮತ್ತೊಮ್ಮೆ ಚರ್ಚೆಗೆ ಆಹ್ವಾನ!

Published On - 9:17 pm, Sat, 30 January 21