ಎಲ್‌ಡಿಎಫ್ ನೇತೃತ್ವದ ಕೇರಳ ವಿಧಾನಸಭೆಯಲ್ಲಿ ಅಳಿಯ ಶಾಸಕ, ಮಾವ ಮುಖ್ಯಮಂತ್ರಿ

|

Updated on: May 03, 2021 | 5:07 PM

Kerala Assembly Election 2021: 77 ರ ಹರೆಯದ ಪಿಣರಾಯಿ ವಿಜಯನ್ ಕಣ್ಣೂರ್ ಜಿಲ್ಲೆಯ ಧರ್ಮಡಂ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದು ಇವರ ಮಗಳ ಗಂಡ ಪಿ.ಎ ಮೊಹಮ್ಮದ್ ರಿಯಾಜ್ ಕೋಯಿಕ್ಕೋಡ್ ಜಿಲ್ಲೆಯ ಬೇಪ್ಪೂರ್ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ.

ಎಲ್‌ಡಿಎಫ್ ನೇತೃತ್ವದ ಕೇರಳ ವಿಧಾನಸಭೆಯಲ್ಲಿ ಅಳಿಯ ಶಾಸಕ, ಮಾವ ಮುಖ್ಯಮಂತ್ರಿ
ಪಿಣರಾಯಿ ವಿಜಯನ್ - ಪಿ.ಎ.ಮೊಹಮ್ಮದ್ ರಿಯಾಜ್
Follow us on

ತಿರುವನಂತಪುರಂ: ಕೇರಳ ರಾಜ್ಯ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಪಿಣರಾಯಿ ವಿಜಯನ್ ಎರಡನೇ ಬಾರಿ ಮುಖ್ಯಮಂತ್ರಿ ಗಾದಿಗೇರಿದ್ದಾರೆ. ಪಿಣರಾಯಿ ನೇತೃತ್ವದ ಎಲ್​ಡಿಎಫ್ ಸರ್ಕಾರದಲ್ಲಿ ಇನ್ನೊಂದು ವಿಶೇಷವೆಂದರೆ ಇವರ ಅಳಿಯ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದಾರೆ. 77 ರ ಹರೆಯದ ಪಿಣರಾಯಿ ವಿಜಯನ್ ಕಣ್ಣೂರ್ ಜಿಲ್ಲೆಯ ಧರ್ಮಡಂ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದು ಇವರ ಮಗಳ ಗಂಡ ಪಿ.ಎ ಮೊಹಮ್ಮದ್ ರಿಯಾಜ್ ಕೋಯಿಕ್ಕೋಡ್ ಜಿಲ್ಲೆಯ ಬೇಪ್ಪೂರ್ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ. ಮೊಹಮ್ಮದ್ ರಿಯಾಜ್ ಡಿವೈಎಫ್ಐ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.

ಪಿಣರಾಯಿ ವಿಜಯನ್​ ಅವರ ಮಗಳು ವೀಣಾ ಅವರ ಪತಿ ಆಗಿದ್ದಾರೆ ರಿಯಾಜ್. 2020 ಜೂನ್ 15ರಂದು ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕ್ಲಿಫ್ ಹೌಸ್ ನಲ್ಲಿ ವೀಣಾ ಮತ್ತು ರಿಯಾಜ್ ಅವರ ಸರಳ ವಿವಾಹ ನಡೆದಿತ್ತು. ಹಲವಾರು ರಾಜಕಾರಣಿಗಳ ಕುಟುಂಬದ ಸದಸ್ಯರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವುದು ಇದೆ . ಆದರೆ ಮಾವ ಮತ್ತು ಅಳಿಯ ಇಬ್ಬರೂ ಗೆದ್ದು ವಿಧಾನಸಭೆಗೆ ಆಯ್ಕೆಯಾಗಿರುವುದು ಇದೇ ಮೊದಲು. ರಿಯಾಜ್ 2009ರಲ್ಲಿ ಕೊಯಿಕ್ಕೋಡ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು.

ಈ ಬಾರಿಯ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಹಲವಾರು ರಾಜಕಾರಣಿಗಳ ಮಕ್ಕಳು ಸ್ಪರ್ಧಿಸಿದ್ದು, ಕೆಲವರು ಮಾತ್ರ ಗೆದ್ದಿದ್ದಾರೆ.

ಎಲ್​ಡಿಎಫ್ ಮಿತ್ರ ಪಕ್ಷವಾಗಿರುವ ಕೇರಳ ಕಾಂಗ್ರೆಸ್ (ಎಂ) ಪಕ್ಷದ ಜೋಸ್.ಕೆ. ಮಾಣಿ ಮತ್ತು ಅವರ ತಂಗಿಯ ಗಂಡ ಯುಡಿಎಫ್ ಅಭ್ಯರ್ಥಿ ಎಂ.ಪಿ.ಜೋಸೆಫ್ ಕ್ರಮವಾಗಿ ಪಾಲಾ ಮತ್ತು ತೃಕರಿಪುರ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ.

ಏತನ್ಮಧ್ಯೆ ಕೇರಳ ಕಾಂಗ್ರೆಸ್ ಅಧ್ಯಕ್ಷ ಪಿ.ಜೆ ಜೋಸೆಫ್ ತೊಡುಪುಳದಲ್ಲಿಗೆದ್ದಿದ್ದು, ಅವರ ಅಳಿಯ ಟ್ವೆಂಟಿ 20 ಪಕ್ಷದ ಅಭ್ಯರ್ಥಿಯಾಗಿ ಕೋದಮಂಗಲಂನಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಕೇರಳದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ದಿವಂಗತ ಕೆ.ಕರುಣಾಕರನ್ ಅವರ ಪುತ್ರ ಸಂಸದ ಕೆ.ಮುರಳೀಧರನ್ ನೇಮಂನಲ್ಲಿ ಪರಾಭವಗೊಂಡಿದ್ದು, ಕರುಣಾಕರನ್ ಅವರ ಪುತ್ರಿ ಪದ್ಮಜಾ ವೇಣುಗೋಪಾಲ್ ತ್ರಿಶ್ಶೂರ್​ನಲ್ಲಿ ಪರಾಭವಗೊಂಡಿದ್ದಾರೆ.

ಏಪ್ರಿಲ್ 6 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ 140 ಸೀಟುಗಳ ಪೈಕಿ 20ಕ್ಕಿಂತಲೂ ಹೆಚ್ಚು ಸೀಟುಗಳಲ್ಲಿ ಎಲ್​ಡಿಎಫ್ ಮತ್ತು ಯುಡಿಎಫ್ ನಾಯಕರ ಮಕ್ಕಳು ಸ್ಪರ್ಧಿಸಿದ್ದಾರೆ.

ಇದನ್ನೂ ಓದಿ: ಫಲಿತಾಂಶ ವಿಶ್ಲೇಷಣೆ: 40 ವರ್ಷಗಳ ನಂತರ ಕೇರಳದಲ್ಲಿ ಕಮ್ಯೂನಿಸ್ಟ್ ಪಕ್ಷಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟ ಪಿಣರಾಯಿ ವಿಜಯನ್

ನರೇಂದ್ರ ಮೋದಿ ಟ್ವೀಟ್: ಮಮತಾ ಬ್ಯಾನರ್ಜಿ, ಸ್ಟಾಲಿನ್, ಪಿಣರಾಯಿ ವಿಜಯನ್​ ಗೆಲುವಿಗೆ ಶ್ಲಾಘನೆ

( Father-in-law CM Pinarayi Vijayan and Son-in-law MLA P A Mohammed Riyas in Kerala Assembly)

Published On - 5:06 pm, Mon, 3 May 21