Family Suicide: 17 ವರ್ಷದ ಮಗ ಹೃದಯಾಘಾತದಿಂದ ಸಾವು, ನೋವು ತಾಳಲಾರದೆ ಮನೆಯವರೆಲ್ಲ ನೇಣಿಗೆ ಶರಣು

| Updated By: ಸಾಧು ಶ್ರೀನಾಥ್​

Updated on: Feb 22, 2021 | 2:00 PM

Suicide: ಕೋಣೆಯ ಬಾಗಿಲು ಮುರಿದು ಒಳಪ್ರವೇಶಿಸಿದಾಗ ಒಬ್ಬ ಪುರುಷ ಮತ್ತು ಮೂವರು ಮಹಿಳೆಯರ ಮೃತ ದೇಹಗಳು ನೇತಾಡುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಹನುಮಾನ್ ಸೈನಿ (45), ತಾರಾ ದೇವಿ (40) ಮತ್ತು ಅವರ ಪುತ್ರಿಯರಾದ ಪೂಜಾ ಸೈನಿ (22), ಚೀಕು (20) ಎಂದು ಗುರುತಿಸಲಾಗಿದೆ.

Family Suicide: 17 ವರ್ಷದ ಮಗ ಹೃದಯಾಘಾತದಿಂದ ಸಾವು, ನೋವು ತಾಳಲಾರದೆ ಮನೆಯವರೆಲ್ಲ ನೇಣಿಗೆ ಶರಣು
ಪ್ರಾತಿನಿಧಿಕ ಚಿತ್ರ
Follow us on

ಜೈಪುರ: ಮಗನ ಸಾವಿನಿಂದ ಮನನೊಂದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಭಾನುವಾರ (ಫೆಬ್ರವರಿ 21) ಸಂಜೆಯ ವೇಳೆಗೆ ಪ್ರಕರಣ ಬೆಳಕಿಗೆ ಬಂದಿದ್ದು, ತಂದೆ, ತಾಯಿ ಹಾಗೂ ಇಬ್ಬರು ಪುತ್ರಿಯರು ಮನೆಯಲ್ಲೇ ನೇಣಿಗೆ ಶರಣಾಗಿರುವುದು ಗೊತ್ತಾಗಿದೆ. ಕಳೆದ 2020 ಸೆಪ್ಟೆಂಬರ್​ ತಿಂಗಳ 27ನೇ ತಾರೀಖಿನಂದು ಈ ಕುಟುಂಬದ 17 ವರ್ಷದ ಬಾಲಕ ಅಮರ್​ ಸೈನಿ ಎಂಬಾತ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಕಿರಿ ಮಗನ ಅಕಾಲಿಕ ಸಾವಿನಿಂದ ಮಾನಸಿಕವಾಗಿ ನೊಂದಿದ್ದ ಆತನ ತಂದೆ, ತಾಯಿ ಕಷ್ಟದಲ್ಲಿ ದಿನದೂಡುತ್ತಿದ್ದರು. ಜೊತೆಗೆ, ಆತನ ಅಕ್ಕಂದಿರು ಸಹ ಕುಗ್ಗಿಹೋಗಿದ್ದರು. ಇದೀಗ ಅದೇ ಕಾರಣಕ್ಕಾಗಿ ನಾಲ್ವರು ಸಹ ನೇಣಿಗೆ ಕೊರಳೊಡ್ಡಿದ್ದಾರೆ.

ಭಾನುವಾರ ಸಂಜೆಯ ವೇಳೆಗೆ ಮನೆಗೆ ಹಾಲು ಹಾಕಲು ಬಂದ ವ್ಯಕ್ತಿ ಎಷ್ಟೇ ಕರೆದರೂ ಯಾರೂ ಸ್ಪಂದಿಸಿಲ್ಲ. ನಂತರ ಏನಾಯಿತೆಂದು ಆತ ಒಳಪ್ರವೇಶಿಸಿದಾಗ ಒಂದು ಕೊಠಡಿಯ ಬಾಗಿಲು ತೆರೆದುಕೊಂಡಿತ್ತು. ಆದರೆ, ಮತ್ತೊಂದು ಕೊಠಡಿಯಲ್ಲಿ ಒಳಗಿನಿಂದ ಚಿಲಕ ಹಾಕಿದ್ದು, ಯಾರೂ ಮಾತನಾಡದಿರುವುದು ಆತನಿಗೆ ಅನುಮಾನ ಮೂಡಿಸಿದೆ. ತಕ್ಷಣವೇ ಅಕ್ಕಪಕ್ಕದವರಿಗೆ ಆತ ಮಾಹಿತಿ ನೀಡಿದ್ದಾನೆ. ಎಚ್ಚೆತ್ತ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿ, ಅವರ ಸಹಾಯದಿಂದ ಬಾಗಿಲು ಒಡೆದಿದ್ದಾರೆ.

ಕೋಣೆಯ ಬಾಗಿಲು ಮುರಿದು ಒಳಪ್ರವೇಶಿಸಿದಾಗ ಒಬ್ಬ ಪುರುಷ ಮತ್ತು ಮೂವರು ಮಹಿಳೆಯರ ಮೃತ ದೇಹಗಳು ನೇತಾಡುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಹನುಮಾನ್ ಸೈನಿ (45), ತಾರಾ ದೇವಿ (40) ಮತ್ತು ಅವರ ಪುತ್ರಿಯರಾದ ಪೂಜಾ ಸೈನಿ (22), ಚೀಕು (20) ಎಂದು ಗುರುತಿಸಲಾಗಿದೆ. ಕೋಣೆಯಲ್ಲಿ ಆತ್ಮಹತ್ಯೆ ಟಿಪ್ಪಣಿಯೂ ಪತ್ತೆಯಾಗಿದ್ದು, ತೀರಿಕೊಂಡಿರುವ ಮಗನ ನೆನಪಿನಲ್ಲಿ ಬದುಕಲಾಗುತ್ತಿಲ್ಲ. ಅವನನ್ನು ಬಿಟ್ಟು ಜೀವಿಸುವುದು ಕಷ್ಟ. ಹೀಗಾಗಿ ನಾವು ಸಾಯುತ್ತಿದ್ದೇವೆ. ಈ ಸಾವಿಗೆ ದಯಮಾಡಿ ಯಾರನ್ನೂ ಹೊಣೆಮಾಡಬೇಡಿ. ನಮಗೆ ಯಾವುದೇ ಸಾಲವಿಲ್ಲ ಎಂದು ಬರೆದಿಡಲಾಗಿದೆ. ಜೊತೆಗೆ, ಅಂತ್ಯಕ್ರಿಯೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸುವಂತೆ ಸಂಬಂಧಿಕರೊಬ್ಬರಿಗೆ ಕೋರಿಕೊಂಡಿದ್ದಾರೆ.

ಈ ಘಟನೆ ಎಲ್ಲರ ಮನಕಲುಕಿದ್ದು, 17 ವರ್ಷ ವಯಸ್ಸಿನ ಮಗನ ಸಾವಿನ ನಂತರ ಬದುಕಲಾಗುತ್ತಿಲ್ಲ ಎಂದು ಹಲವು ಬಾರಿ ನೋವು ತೋಡಿಕೊಂಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಇವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಅಪಾರ ಸಂಖ್ಯೆಯಲ್ಲಿ ಅಕ್ಕಪಕ್ಕದವರು ಮತ್ತು ಸಂಬಂಧಿಗಳು ಆಗಮಿಸಿ ಘಟನೆಗೆ ಕಂಬನಿ ಮಿಡಿದಿದ್ದಾರೆ. ಮಗನ ಸಾವಿನ ನೆಡದಲ್ಲಿ ಇದೀಗ ಇಡೀ ಕುಟುಂಬವೇ ನಿರ್ನಾಮವಾಗಿರುವುದು ಖೇದಕರ ಸಂಗತಿ.

ಇದನ್ನೂ ಓದಿ: ಟಿಕ್​ಟಾಕ್​ ಸ್ಟಾರ್​ ಸಮೀರ್​ ಗಾಯಕ್​ವಾಡ್​​ ಆತ್ಮಹತ್ಯೆ, 21 ವರ್ಷದ ಯುವಕನ ಸಾವಿಗೆ ಕಾರಣವೇನು?

Published On - 1:59 pm, Mon, 22 February 21