ಮನೆಯ ಬೆಡ್ರೂಂನಲ್ಲಿ ತಂಗಿಯೊಂದಿಗೆ ಗುಪ್ತಚರ ಬ್ಯೂರೋ ಅಧಿಕಾರಿಯ ಶವ ಪತ್ತೆ; ಕೊಂದವರು ಯಾರು?
ಗಾಜಿಯಾಬಾದ್ನಲ್ಲಿ ಐಬಿ ಅಧಿಕಾರಿ ಮತ್ತು ಅವರ ತಂಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 28 ವರ್ಷದ ಅವಿನಾಶ್ ದೆಹಲಿಯ ಗುಪ್ತಚರ ಬ್ಯೂರೋದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರ 25 ವರ್ಷದ ಸಹೋದರಿ ಅಂಜಲಿ ಕೂಡ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ರೂಂನಲ್ಲಿ ಲಾಕ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಈ ಸಾವು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.

ಗಾಜಿಯಾಬಾದ್, ಆಗಸ್ಟ್ 1: ದೆಹಲಿಯ ಪಕ್ಕದಲ್ಲಿರುವ ಗಾಜಿಯಾಬಾದ್ನಲ್ಲಿ (Ghaziabad) ಒಂದು ದುರಂತ ಘಟನೆ ನಡೆದಿದೆ. ಗಾಜಿಯಾಬಾದ್ನಲ್ಲಿ ವಾಸಿಸುತ್ತಿದ್ದ ಗುಪ್ತಚರ ಬ್ಯೂರೋ ಅಧಿಕಾರಿ ಮತ್ತು ಅವರ ಸಹೋದರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಒಂದೇ ರೂಂನಲ್ಲಿ ಅವರಿಬ್ಬರ ಶವಗಳು ಪತ್ತೆಯಾಗಿವೆ. ಈ ಪ್ರಕರಣದಲ್ಲಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗದ ಕಾರಣದಿಂದ ಆ ಅಣ್ಣ-ತಂಗಿಯ ಆತ್ಮಹತ್ಯೆಗೆ (Suicide) ಕಾರಣ ಸ್ಪಷ್ಟವಾಗಿಲ್ಲ. ಆದರೆ ಮಲತಾಯಿ ಇಬ್ಬರೂ ಮಕ್ಕಳನ್ನು ಹಿಂಸಿಸುತ್ತಿದ್ದರು. ಅದಕ್ಕಾಗಿಯೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಚಿಕ್ಕಮ್ಮ ಆರೋಪಿಸಿದ್ದಾರೆ.
ಈ ಘಟನೆಯು ಗಾಜಿಯಾಬಾದ್ ನಗರದ ಕವಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗೋವಿಂದಪುರಂ ಪ್ರದೇಶದಲ್ಲಿ ನಡೆದಿದೆ. ಗೋವಿಂದಪುರಂ ಹೆಚ್-ಬ್ಲಾಕ್ನ ಸುಖ್ಬೀರ್ ಸಿಂಗ್ ಅವರ ಮಗ ಅವಿನಾಶ್ ಕುಮಾರ್ ಮತ್ತು ಅವರ ಮಗಳು ಅಂಜಲಿ ಗುರುವಾರ ಸಂಜೆ ವಿಷ ಸೇವಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾದ ನಂತರ ಆ ಕುಟುಂಬವು ಅವರನ್ನು ಕವಿನಗರದ ಸರ್ವೋದಯ ಆಸ್ಪತ್ರೆಗೆ ಕರೆದೊಯ್ದಿತು. ಅಲ್ಲಿ ವೈದ್ಯರು ಅವರಿಬ್ಬರೂ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಇದನ್ನೂ ಓದಿ: Video: ಪೊಲೀಸರು ಹಿಡಿದಿದ್ದಕ್ಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದರು. ಗುಪ್ತಚರ ಬ್ಯೂರೋ ಅಧಿಕಾರಿ ಮತ್ತು ಅವರ ತಂಗಿಯ ಆತ್ಮಹತ್ಯೆಗೆ ಕಾರಣ ಸ್ಪಷ್ಟವಾಗಿಲ್ಲ ಎಂದು ಕವಿನಗರದ ಎಸಿಪಿ ಭಾಸ್ಕರ್ ವರ್ಮಾ ಹೇಳಿದ್ದಾರೆ. ಇಡೀ ಪ್ರಕರಣದ ತನಿಖೆ ನಡೆಯುತ್ತಿದೆ. ಇಬ್ಬರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತರ ತಂದೆ ಸುಖ್ಬೀರ್ ಸಿಂಗ್ ಕೂಡ ಸರ್ಕಾರಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾರೆ. ಅವರ ಮಲತಾಯಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿ. ಅವರ ಮಲತಾಯಿ ಗುರುವಾರ ಸಂಜೆ ಹೊರಗೆ ಹೋಗಿದ್ದರು ಎಂದು ಹೇಳಲಾಗುತ್ತಿದೆ.
ಮೃತರ ಮಲತಾಯಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಹಿಂತಿರುಗಿದಾಗ ಇಬ್ಬರೂ ಮಕ್ಕಳು ಕೋಣೆಯಲ್ಲಿದ್ದರು ಎಂದು ಹೇಳಿದ್ದಾರೆ. ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಅವರು ಚಿಂತಿತರಾದರು. ಮತ್ತೊಮ್ಮೆ ಫೋನ್ ಮಾಡಿದಾಗ ಲಾಕ್ ಆಗಿದ್ದ ರೂಂನಲ್ಲಿ ಮೊಬೈಲ್ ರಿಂಗ್ ಆಗುತ್ತಿತ್ತು. ಆಕೆ ರೂಮಿನ ಬಾಗಿಲು ತೆರೆಯಲು ಪ್ರಯತ್ನಿಸಿದರು. ಆದರೆ, ಅದು ಒಳಗಿನಿಂದ ಲಾಕ್ ಆಗಿತ್ತು. ಶಬ್ದ ಕೇಳಿ ನೆರೆಹೊರೆಯವರು ಸ್ಥಳಕ್ಕೆ ತಲುಪಿ ಬಾಗಿಲು ಒಡೆದು ರೂಂನೊಳಗೆ ಹೋದರು. ಅಲ್ಲಿ ಸಹೋದರರಿಬ್ಬರೂ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದರು.
ಇದನ್ನೂ ಓದಿ: ಎಲ್ಲಾ ಆಸ್ತಿನೂ ನಿನ್ನ ಹೆಂಡತಿ ಹೆಸರಿಗೆ ಬರಿ, ಅತ್ತೆ-ಮಾವನ ಕಿರುಕುಳದಿಂದ ಬೇಸತ್ತು ಅಳಿಯ ಆತ್ಮಹತ್ಯೆ
ಅವಿನಾಶ್ ಅವರ ಚಿಕ್ಕಮ್ಮ ರೇಖಾ ಅವರಿಬ್ಬರ ಮಲತಾಯಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅವಿನಾಶ್ ಅವರ ತಾಯಿ 2007ರಲ್ಲಿ ನಿಧನರಾದರು. ಅದಾದ ನಂತರ ಅವರ ತಂದೆ ಬೇರೆ ಮದುವೆಯಾದರು. ಮಲತಾಯಿ ಇಬ್ಬರೂ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದರು, ಇದರಿಂದಾಗಿ ಇಬ್ಬರೂ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




