ಶ್ರೀಲಂಕಾದಲ್ಲಿರುವ ತಮಿಳಿಗರಿಗೆ ನಾವು ಸಹಾಯ ಮಾಡುತ್ತೇವೆ, ಅನುಮತಿ ಕೊಡಿ; ಪ್ರಧಾನಿ ಮೋದಿಗೆ ಮನವಿ ಮಾಡಿದ ಸಿಎಂ ಸ್ಟಾಲಿನ್​

ಎಂ.ಕೆ.ಸ್ಟಾಲಿನ್​ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ವೇಳೆ ಒಟ್ಟು 14 ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಅದರಲ್ಲಿ ಮೇಕೆದಾಟು ಜಲಾಶಯ ಯೋಜನೆಗೆ ಅನುಮತಿ ನೀಡಬಾರದು ಎಂಬ ಮನವಿಯೂ ಇದೆ. 

ಶ್ರೀಲಂಕಾದಲ್ಲಿರುವ ತಮಿಳಿಗರಿಗೆ ನಾವು ಸಹಾಯ ಮಾಡುತ್ತೇವೆ, ಅನುಮತಿ ಕೊಡಿ; ಪ್ರಧಾನಿ ಮೋದಿಗೆ ಮನವಿ ಮಾಡಿದ ಸಿಎಂ ಸ್ಟಾಲಿನ್​
ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ಎಂ.ಕೆ.ಸ್ಟಾಲಿನ್​
Follow us
| Updated By: Lakshmi Hegde

Updated on:Apr 01, 2022 | 8:24 AM

ಚೆನ್ನೈ: ಶ್ರೀಲಂಕಾದಲ್ಲೀಗ ಭಾರೀ ಪ್ರಮಾಣದಲ್ಲಿ ಆರ್ಥಿಕ ಬಿಕ್ಕಟ್ಟು (Sri Lanka Economic Crisis) ಉಂಟಾಗಿದೆ. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನರು ಉದ್ಯೋಗ ಕಳೆದುಕೊಂಡು ಪರದಾಡುತ್ತಿದ್ದಾರೆ. ನಿನ್ನೆ ರಾತ್ರಿಯಿಂದ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆಯವರ ಕೊಲಂಬೋದಲ್ಲಿರು ಖಾಸಗಿ ಮನೆಯ ಹೊರಗೆ ನೂರಾರು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಹಿಂಸಾಚಾರ ಸ್ವರೂಪಕ್ಕೂ ತಿರುಗಿದ್ದು, ದೇಶದ ಅನೇಕ ಕಡೆಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ದಶಕಗಳಿಂದಲೂ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಇದೆ. ಸರ್ಕಾರಗಳು, ಆಡಳಿತದಲ್ಲಿರುವವರು ಮನಸು ಮಾಡಿದ್ದರೆ ಅದನ್ನು ಇಷ್ಟೊತ್ತಿಗೆ ಪರಿಹರಿಸಬಹುದಿತ್ತು. ಆದರೆ ನಿರ್ಲಕ್ಷ್ಯದಿಂದಾಗಿ ಇಂದು ಆರ್ಥಿಕ ಬಿಕ್ಕಟ್ಟು ತೀವ್ರತರವಾಗಿದೆ ಎಂಬುದು ಅವರ ಆರೋಪ.

ಇದೆಲ್ಲದರ ಮಧ್ಯೆ ಶ್ರೀಲಂಕಾದಲ್ಲಿ ವಾಸವಾಗಿರುವ ತಮಿಳಿಗರಿಗೆ ಸಹಾಯ ಮಾಡಲು ಅನುಮತಿ ನೀಡುವಂತೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್​ ಪ್ರಧಾನಿ ಮೋದಿಯವರನ್ನು ಒತ್ತಾಯಿಸಿದ್ದಾರೆ. ಶ್ರೀಲಂಕಾದ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ತಮಿಳಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದು, ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದಾರೆ. ಅವರಿಗೆ ತಮಿಳುನಾಡಿನಿಂದ ಔಷಧಿ, ಕೆಲವು ಅಗತ್ಯ ವಸ್ತುಗಳನ್ನು ಕಳಿಸಿಕೊಡಲು ನಮ್ಮ ರಾಜ್ಯ ಸರ್ಕಾರ ಇಚ್ಛಿಸುತ್ತಿದೆ. ಅದಕ್ಕೆ ಅನುಮತಿ ಬೇಕು ಎಂದು ಸ್ಟಾಲಿನ್​ ಕೇಳಿದ್ದಾರೆ. ಗುರುವಾದ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಈ ಮನವಿ ಮಾಡಿದ್ದಾರೆ. ಇದೇ ವೇಳೆ, ಉಕ್ರೇನ್​ನಿಂದ ವೈದ್ಯಕೀಯ ಶಿಕ್ಷಣ ಅರ್ಧಕ್ಕೇ ನಿಲ್ಲಿಸಿ, ಭಾರತಕ್ಕೆ ಬಂದಿರುವ ವಿದ್ಯಾರ್ಥಿಗಳು ಇಲ್ಲಿಯೇ ಶಿಕ್ಷಣ ಮುಂದುವರಿಸಲು ಕ್ರಮಕೈಗೊಳ್ಳಬೇಕು. ಈ ವಿಚಾರದಲ್ಲಿ ನೀವು ಮಧ್ಯಪ್ರವೇಶಿಸಿ ಎಂದೂ ಕೇಳಿದ್ದಾರೆ.

ಮೇಕೆದಾಟು ಯೋಜನೆಗೆ ಅನುಮತಿ ಕೊಡಬೇಡಿ

ಎಂ.ಕೆ.ಸ್ಟಾಲಿನ್​ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ವೇಳೆ ಒಟ್ಟು 14 ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಅದರಲ್ಲಿ ಮೇಕೆದಾಟು ಜಲಾಶಯ ಯೋಜನೆಗೆ ಅನುಮತಿ ನೀಡಬಾರದು ಎಂಬ ಮನವಿಯೂ ಇದೆ.  ಕರ್ನಾಟಕ ಅನುಷ್ಠಾನ ಮಾಡಲು ಹೊರಟಿರುವ ಮೇಕೆದಾಟು ಯೋಜನೆಗೆ ಅನುಮತಿ ನೀಡದಂತೆ ರಾಜ್ಯ ಜಲ ಶಕ್ತಿ ಸಚಿವಾಲಯಕ್ಕೆ ನಿರ್ದೇಶನ ನೀಡಿ. ಇದಷ್ಟೇ ಅಲ್ಲ, ಕಾವೇರಿ ಜಲಾನಯನ ಪ್ರದೇಶದಲ್ಲಿ ಆ ರಾಜ್ಯಕ್ಕೆ ಯಾವುದೇ ಯೋಜನೆ ರೂಪಿಸಲು ಅನುಮತಿ ಕೊಡುವುದರಿಂದ ತಮಿಳುನಾಡಿನ ರೈತರಿಗೆ ಸಮಸ್ಯೆಯಾಗುತ್ತದೆ. ತಮಿಳುನಾಡು ರಾಜ್ಯ ಸರ್ಕಾರದ ಗಮನಕ್ಕೆ ಬರದೆ, ಕರ್ನಾಟಕ ರಾಜ್ಯ ಸರ್ಕಾರ ಅಲ್ಲಿ ಯಾವುದೇ ಕೆಲಸ ಮಾಡುವಂತಿಲ್ಲ ಎಂದು ಸ್ಟಾಲಿನ್​ ಪ್ರಧಾನಿ ಮೋದಿಯವರಿಗೆ ತಿಳಿಸಿದ್ದಾರೆ.  ಅಷ್ಟೇ ಅಲ್ಲ, ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್​​ನಿಂದ ತಮಿಳುನಾಡನ್ನು ಹೊರಗಿಡಬೇಕು. ಇಲ್ಲಿ ನೀಟ್​ ಬೇಡ ಎಂಬ ಬೇಡಿಕೆಯನ್ನೂ ಸ್ಟಾಲಿನ್​ ಮುಂದಿಟ್ಟಿದ್ದಾರೆ.

ಇದನ್ನೂ ಓದಿ: Gas Cylinder Price Hike: ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 250 ರೂ. ಏರಿಕೆ! ಜೆಟ್ ಇಂಧನ ದರದಲ್ಲಿ ಕೂಡ ಹೆಚ್ಚಳ

Published On - 8:23 am, Fri, 1 April 22