AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಉದ್ಯೋಗಿಗಳಿಗೆ ಆರ್​ಎಸ್​ಎಸ್​ ನಿಷೇಧ ತೆರವು; ಅಧಿಕಾರಶಾಹಿಗಳೂ ಚಡ್ಡಿಯಲ್ಲಿ ಬರಬಹುದು ಎಂದು ಕಾಂಗ್ರೆಸ್ ಲೇವಡಿ

ಆರ್​ಎಸ್​ಎಸ್ ಚಟುವಟಿಕೆಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರ ಮೇಲಿನ ನಿಷೇಧವನ್ನು ತೆಗೆದುಹಾಕಲಾಗಿದೆ ಎಂದು ಜುಲೈ 9ರಂದು ಹೊರಡಿಸಲಾದ ಸರ್ಕಾರಿ ಆದೇಶವನ್ನು ಉಲ್ಲೇಖಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಲೇವಡಿ ಮಾಡಿದ್ದಾರೆ. ಇನ್ನುಮುಂದೆ ಸರ್ಕಾರಿ ಅಧಿಕಾರಿಗಳು ಸಹ ಚಡ್ಡಿಯಲ್ಲಿ ಬರಬಹುದು ಎಂದು ತಮಾಷೆ ಮಾಡಿದ್ದಾರೆ.

ಸರ್ಕಾರಿ ಉದ್ಯೋಗಿಗಳಿಗೆ ಆರ್​ಎಸ್​ಎಸ್​ ನಿಷೇಧ ತೆರವು; ಅಧಿಕಾರಶಾಹಿಗಳೂ ಚಡ್ಡಿಯಲ್ಲಿ ಬರಬಹುದು ಎಂದು ಕಾಂಗ್ರೆಸ್ ಲೇವಡಿ
ಆರ್​ಎಸ್​ಎಸ್
ಸುಷ್ಮಾ ಚಕ್ರೆ
|

Updated on: Jul 22, 2024 | 1:06 PM

Share

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಅದರ ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿರುವ ಸರ್ಕಾರಿ ನೌಕರರ ಮೇಲಿನ ಹಲವು ದಶಕಗಳ ಹಿಂದಿನ ನಿಷೇಧವನ್ನು ತೆಗೆದುಹಾಕಿದೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಜುಲೈ 9ರಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಹೊರಡಿಸಿದ ಆದೇಶವನ್ನು ಜೈರಾಮ್ ರಮೇಶ್ ಹಂಚಿಕೊಂಡಿದ್ದಾರೆ. 1966ರಿಂದ ಜಾರಿಯಲ್ಲಿದ್ದ ಆರ್​ಎಸ್​ಎಸ್​ ಚಟುವಟಿಕೆಗಳಲ್ಲಿ ಸರ್ಕಾರಿ ಸಿಬ್ಬಂದಿ ಭಾಗವಹಿಸುವ ನಿಷೇಧವನ್ನು ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ.

ಆರ್​ಎಸ್​ಎಸ್​ ಸದಸ್ಯರಾದ ನಾಥೂರಾಂ ಗೋಡ್ಸೆ ಅವರು ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ನಂತರ ಅದರ ಚಟುವಟಿಕೆಗಳ ಮೇಲಿನ ಕಳವಳದಿಂದಾಗಿ ಆರ್​ಎಸ್​ಎಸ್​ ಅನ್ನು 1948ರಲ್ಲಿ ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲಾಯಿತು. 1948ರ ಫೆಬ್ರುವರಿಯಲ್ಲಿ ಗಾಂಧೀಜಿಯವರ ಹತ್ಯೆಯ ನಂತರ ಸರ್ದಾರ್ ಪಟೇಲ್ ಅವರು ಆರ್‌ಎಸ್‌ಎಸ್ ಅನ್ನು ನಿಷೇಧಿಸಿದ್ದರು. ನಂತರ ಉತ್ತಮ ನಡವಳಿಕೆಯ ಭರವಸೆಯ ಮೇರೆಗೆ ಈ ನಿಷೇಧವನ್ನು ಹಿಂಪಡೆಯಲಾಯಿತು. ಇದಾದ ನಂತರವೂ ಆರ್‌ಎಸ್‌ಎಸ್ ನಾಗಪುರದಲ್ಲಿ ತಿರಂಗಾವನ್ನು ಹಾರಿಸಲಿಲ್ಲ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಇದನ್ನೂ ಓದಿ: Kargil Vijay Diwas: ಲಡಾಖ್‌ನಲ್ಲಿ ಕಾರ್ಗಿಲ್ ವಿಜಯ ದಿವಸದ 25ನೇ ವಾರ್ಷಿಕೋತ್ಸವದಲ್ಲಿ ಪ್ರಧಾನಿ ಮೋದಿ ಭಾಗಿ

ಬಳಿಕ, 1966ರಲ್ಲಿ ಹೊಸ ನಿಷೇಧವನ್ನು ಪರಿಚಯಿಸಲಾಯಿತು. ಆ ಆದೇಶದಲ್ಲಿ ಸರ್ಕಾರಿ ನೌಕರರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಜಮಾತ್-ಎ-ಇಸ್ಲಾಮಿಯ ಸದಸ್ಯತ್ವ ಮತ್ತು ಚಟುವಟಿಕೆಗಳಲ್ಲಿ ಭಾಗವಹಿಸುವ ಬಗ್ಗೆ ಸರ್ಕಾರದ ನೀತಿಯ ಬಗ್ಗೆ ಕೆಲವು ಅನುಮಾನಗಳನ್ನು ಹುಟ್ಟುಹಾಕಲಾಗಿದೆ. ಈ ಎರಡು ಸಂಸ್ಥೆಗಳ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸುವುದು ಕೇಂದ್ರ ನಾಗರಿಕ ಸೇವೆಗಳ ನಡವಳಿಕೆಯ ನಿಯಮಗಳನ್ನು ಆಕರ್ಷಿಸುವ ರೀತಿಯದ್ದಾಗಿದೆ.

ಜೈ ರಮೇಶ್ ಆರ್​ಎಸ್​ಎಸ್​ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳುವುದನ್ನು ಖಂಡಿಸಿದ್ದಾರೆ. “ಅಧಿಕಾರಶಾಹಿಗಳು ಈಗ ಚಡ್ಡಿಗಳಲ್ಲಿ ಬರಬಹುದು ಎಂದು ನನಗೆ ಅನಿಸುತ್ತಿದೆ” ಎಂದಿರುವ ಅವರು 2016ರಲ್ಲಿ ಕಂದು ಬಣ್ಣದ ಪ್ಯಾಂಟ್‌ನಿಂದ ಬದಲಾಯಿಸಲ್ಪಟ್ಟ ಖಾಕಿ ಬಣ್ಣದ ಆರ್‌ಎಸ್‌ಎಸ್ ಚಡ್ಡಿಯ (ನಿಕ್ಕರ್) ಸಮವಸ್ತ್ರವನ್ನು ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ: ಪ್ರತಿ ವರ್ಷ 1 ಲಕ್ಷಕ್ಕೂ ಹೆಚ್ಚು ಯುವ ಜನರು ಆರ್‌ಎಸ್‌ಎಸ್‌ಗೆ ಸೇರ್ಪಡೆ: ಸುನೀಲ್ ಅಂಬೇಕರ್

ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಈ ಆದೇಶದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. 58 ವರ್ಷಗಳ ಹಿಂದೆ 1966ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರ ಮೇಲೆ ನಿಷೇಧ ಹೇರುವ ಅಸಂವಿಧಾನಿಕ ಆದೇಶವನ್ನು ಹೊರಡಿಸಲಾಗಿತ್ತು. ಈ ಆದೇಶವನ್ನು ಮೋದಿ ಸರ್ಕಾರ ಹಿಂಪಡೆದಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್​ಎಸ್​ಎಸ್​) ಕಳೆದ 99 ವರ್ಷಗಳಿಂದ ರಾಷ್ಟ್ರದ ಪುನರ್ ನಿರ್ಮಾಣ ಮತ್ತು ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ರಾಷ್ಟ್ರೀಯ ಭದ್ರತೆ, ಐಕ್ಯತೆ ಮತ್ತು ಸಮಗ್ರತೆ ಮತ್ತು ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಸಮಾಜವನ್ನು ಕೊಂಡೊಯ್ಯುವಲ್ಲಿ ಆರ್​ಎಸ್​ಎಸ್​ ಕೊಡುಗೆ ನೀಡಿದೆ. ತನ್ನ ರಾಜಕೀಯ ಹಿತಾಸಕ್ತಿಗಳಿಂದಾಗಿ, ಅಂದಿನ ಸರ್ಕಾರವು ಸಂಘದಂತಹ ರಚನಾತ್ಮಕ ಸಂಘಟನೆಯ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಸರ್ಕಾರಿ ನೌಕರರನ್ನು ಆಧಾರರಹಿತವಾಗಿ ನಿಷೇಧಿಸಿತು. ಸರ್ಕಾರದ ಪ್ರಸ್ತುತ ನಿರ್ಧಾರವು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಹೊರಟಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್​) ಅಖಿಲ ಭಾರತ ಪ್ರಚಾರ ಮುಖ್ಯಸ್ಥ ಸುನಿಲ್ ಅಂಬೇಕರ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ