
ನವದೆಹಲಿ, ಮೇ 04: ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಕಾರ್ಯನಿರ್ವಾಹಕ ನಿರ್ದೇಶಕ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರ ಮೂರು ವರ್ಷಗಳ ಅವಧಿ ಮುಗಿಯುವ ಆರು ತಿಂಗಳ ಮೊದಲೇ ಭಾರತ ಸರ್ಕಾರ(Indian Government) ಅವರನ್ನು ಸೇವೆಯಿಂದ ವಜಾಗೊಳಿಸಿದೆ. ಸಂಪುಟದ ನೇಮಕಾತಿ ಸಮಿತಿಯು ಏಪ್ರಿಲ್ 30, 2025 ರಿಂದ ಜಾರಿಗೆ ಬರುವಂತೆ ಸುಬ್ರಮಣಿಯನ್ ಅವರ ಸೇವೆಗಳನ್ನು ವಜಾಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಸುಬ್ರಮಣಿಯನ್ ಅವರ ರಾಜೀನಾಮೆಗೆ ಕಾರಣಗಳನ್ನು ಅಧಿಕೃತವಾಗಿ ಘೋಷಿಸಿಲ್ಲ.
ಸರ್ಕಾರ ಶೀಘ್ರದಲ್ಲೇ ಅವರ ಬದಲಿಗೆ ಐಎಂಎಫ್ ಮಂಡಳಿಯಲ್ಲಿ ನೇಮಕ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಸುಬ್ರಮಣಿಯನ್ ಅವರು ಐಎಂಎಫ್ ದತ್ತಾಂಶ ಸಂಗ್ರಹದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಇತ್ತೀಚಿನ ಪುಸ್ತಕ ಇಂಡಿಯಾ @ 100 ರ ಪ್ರಚಾರದ ವೇಳೆ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪವೂ ಇತ್ತು.
ಸುಬ್ರಮಣಿಯನ್ ಅವರನ್ನು ನವೆಂಬರ್ 1, 2022 ರಿಂದ ಜಾರಿಗೆ ಬರುವಂತೆ ಮೂರು ವರ್ಷಗಳ ಅವಧಿಗೆ IMF ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ (ಭಾರತ) ನೇಮಿಸಲಾಯಿತು. ಇದಕ್ಕೂ ಮೊದಲು, ಅವರು ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದರು.
ಮತ್ತಷ್ಟು ಓದಿ: ಭಾರತೀಯ ರಾಜ್ಯಗಳು, ಹಣಕಾಸು ಮತ್ತು ಹಣಕಾಸಿನ ಸ್ಥಿತಿ
ಪಾಕಿಸ್ತಾನಕ್ಕೆ ನೆರವು ನೀಡುವ ವ್ಯವಸ್ಥೆಯ ಪರಾಮರ್ಶೆಗಾಗಿ ಮೇ 9ರಂದು ಐಎಂಎಫ್ ಆಡಳಿತ ಮಂಡಳಿಯ ಸಭೆ ನಡೆಯಲಿದ್ದು, ಇದಕ್ಕೆ ಮುನ್ನವೇ ಸುಬ್ರಮಣಿಯನ್ ಅವರ ನಿರ್ಗಮನ ಕುತೂಹಲಕ್ಕೆ ಕಾರಣವಾಗಿದೆ. ಭಯೋತ್ಪಾದನೆಗೆ ನೆರವು ನೀಡುತ್ತಿದೆ ಎಂದು ಆಪಾದಿಸಿ ಪಾಕಿಸ್ತಾನಕ್ಕೆ ಹೆಚ್ಚುವರಿ ಹಣಕಾಸು ನೆರವು ನೀಡುವುದನ್ನು ಭಾರತ ವಿರೋಧಿಸುವ ನಿರೀಕ್ಷೆ ಇದೆ.
IMF ನ ಕಾರ್ಯನಿರ್ವಾಹಕ ಮಂಡಳಿಯು ಸದಸ್ಯ ರಾಷ್ಟ್ರಗಳು ಅಥವಾ ದೇಶಗಳ ಗುಂಪುಗಳಿಂದ ಆಯ್ಕೆಯಾದ 25 ನಿರ್ದೇಶಕರನ್ನು ಒಳಗೊಂಡಿದೆ. ಭಾರತವು ನಾಲ್ಕು ರಾಷ್ಟ್ರಗಳ ಕ್ಷೇತ್ರದಲ್ಲಿದ್ದು, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಭೂತಾನ್ ಸದಸ್ಯರಾಗಿದ್ದಾರೆ.
ಅವರು 2018 ರಿಂದ 2021 ರವರೆಗೆ ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು. ಅವರು ಚಿಕಾಗೋ ವಿಶ್ವವಿದ್ಯಾಲಯದ ಬೂತ್ ಸ್ಕೂಲ್ ಆಫ್ ಬಿಸಿನೆಸ್ನಿಂದ ಹಣಕಾಸು ಅರ್ಥಶಾಸ್ತ್ರದಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:23 am, Sun, 4 May 25