ಕುಡಿದ ಮತ್ತಿನಲ್ಲಿದ್ದ ಪೊಲೀಸ್ ಕಾರು ಆಟೋಗೆ ಡಿಕ್ಕಿ ಹೊಡೆದು 25 ವರ್ಷದ ಯುವತಿ ಸಾವು

ಹರಿಯಾಣದ ಅಂಬಾಲದಲ್ಲಿ ಕುಡಿದ ಮತ್ತಿನಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರ ಕಾರು ಇ-ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ 25 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಮೊದಲು ಆಟೋಗೆ ಕಾರು ಡಿಕ್ಕಿ ಹೊಡೆದಾಗ ಆ ಮಹಿಳೆ ಕೆಳಗೆ ಬಿದ್ದಿದ್ದಾರೆ. ಆದರೂ ನಿಲ್ಲಿಸದ ಪೊಲೀಸ್ ಆಕೆಯ ಮೇಲೆ ಕಾರು ಹತ್ತಿಸಿಕೊಂಡು ಹೋಗಿದ್ದಾರೆ. ಇದರಿಂದ ತೀವ್ರ ಗಾಯಗಳಾಗಿ ಆಕೆ ಮೃತಪಟ್ಟಿದ್ದಾರೆ.

ಕುಡಿದ ಮತ್ತಿನಲ್ಲಿದ್ದ ಪೊಲೀಸ್ ಕಾರು ಆಟೋಗೆ ಡಿಕ್ಕಿ ಹೊಡೆದು 25 ವರ್ಷದ ಯುವತಿ ಸಾವು
Haryana Police

Updated on: Feb 12, 2026 | 6:51 PM

ಅಂಬಾಲ, ಫೆಬ್ರವರಿ 12: ಹರಿಯಾಣದ ಅಂಬಾಲದಲ್ಲಿ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದ ಹರಿಯಾಣದ ಪೊಲೀಸ್ ಅಧಿಕಾರಿಯೊಬ್ಬರು 25 ವರ್ಷದ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಆ ಮಹಿಳೆ ಸಾವನ್ನಪ್ಪಿದ್ದಾರೆ. ಮಹಿಳೆ ಇ-ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಪೊಲೀಸ್ ಅಧಿಕಾರಿ ಚಲಾಯಿಸುತ್ತಿದ್ದ ಕಾರು ಡಿಕ್ಕಿ (Car Accident) ಹೊಡೆದ ಪರಿಣಾಮದಿಂದಾಗಿ ಈ ಘಟನೆ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ರಸ್ತೆಗೆ ಬಿದ್ದಿದ್ದು, ನಂತರ ಕಾರು ಆಕೆಯ ಮೇಲೆ ಹರಿದಿದೆ. ಮೃತಳನ್ನು ನಿಕಿತಾ ಎಂದು ಗುರುತಿಸಲಾಗಿದೆ.

ಅಂಬಾಲದ ಕಾಳಿ ಪಲ್ಟನ್ ಸೇತುವೆ ಬಳಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, 9 ಗಂಟೆ ಸುಮಾರಿಗೆ ಆ ಮಹಿಳೆ ಇ-ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ, ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಬಳಿಕ ಆಕೆಯ ಮೇಲೆ ಕಾರು ಹಾದುಹೋಯಿತು. ಇದರಿಂದ ಅವರಿಗೆ ಗಂಭೀರ ಗಾಯಗಳಾಗಿದ್ದು, ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಸಾವನ್ನಪ್ಪಿದರು.

ಇದನ್ನೂ ಓದಿ: ಹೈವೇ ಪಕ್ಕದಲ್ಲಿ ಎಸೆದಿದ್ದ ಸೂಟ್​ಕೇಸ್​​ನಲ್ಲಿ ಯುವತಿಯ ಅರೆಬೆಂದ ದೇಹ ಪತ್ತೆ

ಈ ಘಟನೆಯ ಸಮಯದಲ್ಲಿ ಪೊಲೀಸ್ ಅಧಿಕಾರಿ ಕುಡಿದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅಪಘಾತದ ನಂತರ, ಅಲ್ಲಿ ಜಮಾಯಿಸಿದ್ದ ಸ್ಥಳೀಯರು ಅವರನ್ನು ಹಿಡಿದಿದ್ದಾರೆ. ನಂತರ, ಅವರನ್ನು ಪೊಲೀಸರಿಗೆ ಹಸ್ತಾಂತರಿಸಲಾಯಿತು. ಪೊಲೀಸ್ ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ.

“ನಾನು ಅಂಬಾಲಾ ಕಂಟೋನ್ಮೆಂಟ್‌ನಿಂದ ಇ-ರಿಕ್ಷಾದಲ್ಲಿ ನಾಲ್ವರು ಪ್ರಯಾಣಿಕರೊಂದಿಗೆ ಬರುತ್ತಿದ್ದೆ. ವೇಗವಾಗಿ ಬಂದ ಪೊಲೀಸ್ ಅಧಿಕಾರಿಯೊಬ್ಬರ ಕಾರು ನಮ್ಮ ಇ-ರಿಕ್ಷಾಗೆ ಡಿಕ್ಕಿ ಹೊಡೆಯಿತು. ಆಗ ನಮ್ಮ ಆಟೋದಲ್ಲಿದ್ದ ಒಬ್ಬಳು ಹುಡುಗಿ ಅದರಿಂದ ಬಿದ್ದಳು. ನಂತರ, ಪೊಲೀಸ್ ಅಧಿಕಾರಿ ಆ ಹುಡುಗಿಯ ಮೇಲೆ ಕಾರು ಹತ್ತಿಸಿಕೊಂಡು ಹೋದರು. ಆಕೆಯನ್ನು ಆಸ್ಪತ್ರೆಗೆ ಕರೆತರುವಾಗ ಆಕೆ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಪೊಲೀಸ್ ಅಧಿಕಾರಿ ಕುಡಿದಿದ್ದರು,” ಎಂದು ಇ-ರಿಕ್ಷಾ ಚಾಲಕ ರವೀಂದರ್ ಸಿಂಗ್ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us