ಮುಂಬೈನಲ್ಲಿ ಭಾರೀ ಮಳೆ: ಮಹಾರಾಷ್ಟ್ರದ ರಾಯಘಡ, ರತ್ನಗಿರಿ, ಸತಾರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಬಹುತೇಕ ಜಲಾಶಯಗಳು ಈಗಾಗಲೇ ಭರ್ತಿಯಾಗಿವೆ.

ಮುಂಬೈನಲ್ಲಿ ಭಾರೀ ಮಳೆ: ಮಹಾರಾಷ್ಟ್ರದ ರಾಯಘಡ, ರತ್ನಗಿರಿ, ಸತಾರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
ಮಳೆ (ಸಂಗ್ರಹ ಚಿತ್ರ)
Edited By:

Updated on: Sep 13, 2022 | 3:28 PM

ಮುಂಬೈ: ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಮಂಗಳವಾರ ವ್ಯಾಪಕವಾಗಿ ಮಳೆಯಾಗಿದೆ. ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ಬೆಳಿಗ್ಗೆಯಿಂದ ಭಾರಿ ಮಳೆಯಾಗುತ್ತಿದ್ದು ಭಾರತೀಯ ಹವಾಮಾನ ಇಲಾಖೆಯು (India Meteorological Department – IMD) ನಗರದಲ್ಲಿ ಮಳೆ ಪ್ರಮಾಣ ಮತ್ತಷ್ಟು ಹೆಚ್ಚಾಗಬಹುದು ಎಂದು ಎಚ್ಚರಿಸಿದೆ.

ಮಹಾರಾಷ್ಟ್ರದ ರಾಯಗಡ, ರತ್ನಗಿರಿ ಮತ್ತು ಸತಾರಾ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ‘ಆರೆಂಜ್ ಅಲರ್ಟ್’ ಘೋಷಿಸಿದೆ. ಮೂರು ಜಿಲ್ಲೆಗಳ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯು ಎಚ್ಚರಿಸಿದೆ. ಮುಂಬೈ ಹೊರವಲಯದ ಪ್ರಾತಿನಿಧಿಕ ಹವಾಮಾನ ವೀಕ್ಷಣಾಲಯ ಇರುವ ಸಾಂತಾಕ್ರೂಜ್ ಪ್ರದೇಶದಲ್ಲಿ ಸೆ 13ರ ಮುಂಜಾನೆ 8.30ರ ವೇಳೆಗೆ ಕಳೆದ 24 ಗಂಟೆಗಳ ಅವಧಿಯಲ್ಲಿ 93.4 ಮಿಮೀ ಮಳೆಯಾಗಿತ್ತು. ಐಲ್ಯಾಂಡ್ ಸಿಟಿಯ ಕೊಲಾಬಾ ವೀಕ್ಷಣಾಲಯವು ಇದೇ ಅವಧಿಯಲ್ಲಿ 59.2 ಮಿ.ಮೀ ಮಳೆಯನ್ನು ದಾಖಲಿಸಿತ್ತು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಇಂದು ಮಧ್ಯಾಹ್ನದಿಂದ ಸಂಜೆಯ ವೇಳೆಗೆ ಮುಂಬೈ ಮತ್ತು ರಾಯಗಡದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಹವಾಮಾನ ಇಲಾಖೆಯು ಹವಾಮಾನ ಪರಿಸ್ಥಿತಿಯ ಆಧಾರದ ಮೇಲೆ ನಾಲ್ಕು ಬಣ್ಣ-ಸಂಕೇತದ ಮುನ್ಸೂಚನೆಗಳನ್ನು ನೀಡುತ್ತದೆ. ಅದರಂತೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಬಹುತೇಕ ಜಲಾಶಯಗಳು ಈಗಾಗಲೇ ಭರ್ತಿಯಾಗಿವೆ. ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಭೀಮಾ ನದಿಗಳು ಉಕ್ಕಿ ಹರಿಯುತ್ತಿವೆ. ಕರ್ನಾಟಕದ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಹಲವು ಸೇತುವೆಗಳು ಮುಳುಗಿದ್ದು ಪ್ರವಾಹದ ಭೀತಿ ಎದುರಾಗಿದೆ.

Published On - 3:28 pm, Tue, 13 September 22