Odisha Train Accident: ಒಡಿಶಾ ಭೀಕರ ರೈಲು ದುರಂತ ಸಂಭವಿಸಿದ್ದು ಹೇಗೆ? ಪ್ರತ್ಯಕ್ಷದರ್ಶಿಗಳು ಹೇಳೋದೇನು?

|

Updated on: Jun 03, 2023 | 10:52 AM

ಇಂಥದ್ದೊಂದು ಭಾರೀ ಅವಘಡ ಸಂಭವಿಸಿದ್ದು ಹೇಗೆ? ನಿಜಕ್ಕೂ ಘಟನಾ ಸ್ಥಳದಲ್ಲಿ ಏನಾಯಿತು ಎಂಬ ಬಗ್ಗೆ ಪ್ರತ್ಯಕ್ಷದರ್ಶಿಗಳ ಹೇಳಿಕೆ ಇಲ್ಲಿದೆ.

Odisha Train Accident: ಒಡಿಶಾ ಭೀಕರ ರೈಲು ದುರಂತ ಸಂಭವಿಸಿದ್ದು ಹೇಗೆ? ಪ್ರತ್ಯಕ್ಷದರ್ಶಿಗಳು ಹೇಳೋದೇನು?
ಅಪಘಾತಕ್ಕೀಡಾಗಿ ಹಳಿತಪ್ಪಿರುವ ಬೋಗಿಗಳು
Follow us on

ಭುವನೇಶ್ವರ: ಒಡಿಶಾದ ಬಾಲಸೋರ್​ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಸುಮಾರು 280 ಜನ ಮೃತಪಟ್ಟಿದ್ದು, 900ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಬಾಲಸೋರ್​​ನ ಬಹನಾಗಾ ರೈಲು ನಿಲ್ದಾಣದ ಬಳಿ ಕೋರಮಂಡಲ್ ಎಕ್ಸ್‌ಪ್ರೆಸ್ (Coromandel Express) ಹಾಗೂ ಸರಕು ಸಾಗಣೆ ರೈಲು ಡಿಕ್ಕಿಯಾಗಿ ಅನೇಕ ಬೋಗಿಗಳು ಹಳಿ ತಪ್ಪಿದ್ದವು. ಅದಾಗಿ ಕೆಲವೇ ನಿಮಿಷಗಳಲ್ಲಿ ಅದೇ ಹಳಿಯಲ್ಲಿ ಬಂದ ಯಶವಂತಪುರ – ಹೌರಾ ಎಕ್ಸ್​​ಪ್ರೆಸ್​​ ಕೂಡ ಡಿಕ್ಕಿಯಾಗಿದ್ದು ಬೋಗಿಗಳು ಹಳಿ ತಪ್ಪಿವೆ. ಇಂಥದ್ದೊಂದು ಭೀಕರ ಅಪಘಾತ ಸಂಭವಿಸಲು ಕಾರಣಗಳೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಖುದ್ದು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ರಕ್ಷಣಾ ಕಾರ್ಯಾಚರಣೆ, ಗಾಯಾಳುಗಳಿಗೆ ಚಿಕಿತ್ಸೆ ನೀಡಲು ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇಂಥದ್ದೊಂದು ಭಾರೀ ಅವಘಡ ಸಂಭವಿಸಿದ್ದು ಹೇಗೆ? ನಿಜಕ್ಕೂ ಘಟನಾ ಸ್ಥಳದಲ್ಲಿ ಏನಾಯಿತು ಎಂಬ ಬಗ್ಗೆ ಪ್ರತ್ಯಕ್ಷದರ್ಶಿಗಳ ಹೇಳಿಕೆ ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಸರಕು ಸಾಗಣೆ ರೈಲಿಗೆ ಡಿಕ್ಕಿಹೊಡೆದಿದೆ. ಪರಿಣಾಮವಾಗಿ ಅನೇಕ ಬೋಗಿಗಳು ಹಳಿತಪ್ಪಿವೆ. ಇದಾದ ಕೆಲವೇ ಕ್ಷಣಗಳಲ್ಲಿ ಬಂದ ಯಶವಂತಪುರ-ಹೌರಾ ಸೂಪರ್​​​ಫಾಸ್ಟ್ ರೈಲು ಹಳಿತಪ್ಪಿದ ಬೋಗಿಗಳಿಗೆ ಡಿಕ್ಕಿಹೊಡೆದಿದೆ.

ನಿಂತುಕೊಂಡಿದ್ದ ಗೂಡ್ಸ್ ರೈಲು ಹಾಗೂ ಎರಡು ಪ್ರಯಾಣಿಕ ರೈಲುಗಳು ಅಪಘಾತಕ್ಕೀಡಾಗಿವೆ ಎಂದು ಭಾರತೀಯ ರೈಲ್ವೆಯ ಕಾರ್ಯನಿರ್ವಾಹಕ ನಿರ್ದೇಶಕ ಅಮಿತಾಭ್ ಶರ್ಮಾ ತಿಳಿಸಿದ್ದಾರೆ. ಸಂಜೆ ಸುಮಾರು 7 ಗಂಟೆಗೆ ಘಟನೆ ಸಂಭವಿಸಿದೆ.

ದುರಂತ ಸಂಭವಿಸಿದ್ದು ಹೀಗೆ…

ಚೆನ್ನೈಗೆ ತೆರಳುತ್ತಿದ್ದ ಕೋರಮಂಡಲ್ ಶಾಲಿಮಾರ್ ಎಕ್ಸ್​​​ಪ್ರೆಸ್ ನಿಂತುಕೊಂಡಿದ್ದ ಗೂಡ್ಸ್ ರೈಲಿಗೆ ಡಿಕ್ಕಿಯಾಗಿ ಹಳಿತಪ್ಪಿದೆ. ಡಿಕ್ಕಿಯ ರಭಸಕ್ಕೆ ಅನೇಕ ಬೋಗಿಗಳು ಹಳಿತಪ್ಪಿ ಚೆಲ್ಲಾಪಿಲ್ಲಿಯಾಗಿ ಹರಡಿವೆ. ಇದಾದ ಕೆಲವು ನಿಮಿಷಗಳ ನಂತರ ಯಶವಂತಪುರ-ಹೌರಾ ಸೂಪರ್​​​ಫಾಸ್ಟ್ ರೈಲು ಆ ಮಾರ್ಗದಲ್ಲಿ ಬಂದಿದೆ. ಹಳಿತಪ್ಪಿರುವ ಕೋರಮಂಡಲ್​ ರೈಲಿನ ಬೋಗಿಗಳಿಗೆ ಡಿಕ್ಕಿಹೊಡೆದಿದೆ. ಅಪಘಾತದ ವೇಳೆ ಎರಡೂ ರೈಲುಗಳು ಭಾರೀ ವೇಗದಲ್ಲಿ ಸಂಚರಿಸುತ್ತಿದ್ದವು.

ಇದನ್ನೂ ಓದಿ: Odisha Train Accident: ಒಡಿಶಾ ರೈಲು ದುರಂತ ಹಿನ್ನಲೆ ತುರ್ತು ಸಭೆ ಕರೆದ ನರೇಂದ್ರ ಮೋದಿ

ಅಧಿಕಾರಿಗಳು ಮತ್ತು ಪ್ರತ್ಯಕ್ಷದರ್ಶಿಗಳು ಹೆಳುವ ಪ್ರಕಾರ, ಸಂಜೆ 6.50 ರಿಂದ 7.10 ರ ಅವಧಿಯಲ್ಲಿ ಎರಡೂ ಅಪಘಾತ ಸಂಭವಿಸಿವೆ. ಕಾರ್ಯಾಚರಣೆ ವೈಫಲ್ಯ ಘಟನೆಗೆ ಕಾರಣವೇ ಎಂಬುದನ್ನು ತಿಳಿಯಲು ರೈಲ್ವೆ ಇಲಾಖೆ ತನಿಖೆಗೆ ಆದೇಶಿಸಿದೆ.

ಕಾರ್ಮಿಕರು ಮತ್ತು ಸ್ಥಳೀಯ ಜನರು ಮೃತದೇಹಗಳನ್ನು ಹಾಗೂ ಬದುಕುಳಿದವರನ್ನು ಅವಶೇಷಗಳಿಂದ ಹೊರತೆಗೆಯಲು ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಈ ಮಧ್ಯೆ, ದುರಂತಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ಕರೆದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ