ಝಲ್ಮುರಿ ತಿಂದಿದ್ದು ನಾನು, ಖಾರವಾಗಿದ್ದು ಟಿಎಂಸಿಗೆ: ಬಂಗಾಳದಲ್ಲಿ ಪ್ರಧಾನಿ ಮೋದಿ ಲೇವಡಿ

ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರವನ್ನು ಮೋದಿ ಟೀಕಿಸಿದ್ದಾರೆ. ಕಳೆದ ಬಾರಿ ಬಂಗಾಳಕ್ಕೆ ಬಂದಾಗ ನಾನು ಝಲ್ಮುರಿ ತಿಂದಿದ್ದೆ. ಆದರೆ, ತೃಣಮೂಲ ಪಕ್ಷ ಅದರ ಖಾರ ಅನುಭವಿಸಿತು ಎಂದು ಬಂಗಾಳದಲ್ಲಿ ಮೋದಿ ವಾಗ್ದಾಳಿ ನಡೆಸಿದ್ದಾರೆ. 152 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಒಟ್ಟಾರೆ ಶಾಂತಿಯುತ ಮತ್ತು ಹಿಂಸಾಚಾರ ಮುಕ್ತ ಚುನಾವಣೆಯನ್ನು ನಡೆಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಆಯೋಗಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಝಲ್ಮುರಿ ತಿಂದಿದ್ದು ನಾನು, ಖಾರವಾಗಿದ್ದು ಟಿಎಂಸಿಗೆ: ಬಂಗಾಳದಲ್ಲಿ ಪ್ರಧಾನಿ ಮೋದಿ ಲೇವಡಿ
Pm Modi In Bengal
Image Credit source: PTI

Updated on: Apr 23, 2026 | 4:50 PM

ನವದೆಹಲಿ, ಏಪ್ರಿಲ್ 23: “ಬಂಗಾಳದಲ್ಲಿ ನಾನು ಝಲ್ಮುರಿ ಸವಿದ ವಿಷಯವು ಇಲ್ಲಿನ ಕೆಲವು ಜನರನ್ನು ನಡುಗಿಸಿತು ಎಂದು ನಾನು ಕೇಳಿದೆ. ತಮಾಷೆಯೆಂದರೆ ಝಲ್ಮುರಿ ತಿಂದಿದ್ದು ನಾನೇ ಆದರೂ ಅದರ ಖಾರ ಅನುಭವಿಸಿದ್ದು ತೃಣಮೂಲ ಕಾಂಗ್ರೆಸ್. ಮೇ 4ರಂದು ಫಲಿತಾಂಶಗಳು ಘೋಷಣೆಯಾದ ನಂತರ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ವಿಜಯವನ್ನು ಆಚರಿಸುತ್ತದೆ. ಆ ಸಮಯದಲ್ಲಿ ಸಿಹಿತಿಂಡಿಗಳು ಮತ್ತು ಝಲ್ಮುರಿ ಎರಡನ್ನೂ ವಿತರಿಸಲಾಗುತ್ತದೆ” ಎಂದು ಪ್ರಧಾನಿ ಮೋದಿ (PM Narendra Modi) ಹೇಳಿದ್ದಾರೆ.

“ಇಂದು ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ. ನಾನು ಎಲ್ಲಾ ಮತದಾರರನ್ನು ಅಭಿನಂದಿಸುತ್ತೇನೆ. ಎಲ್ಲರೂ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಬೇಕು. ಈ ಬಾರಿ ಇಲ್ಲಿಯವರೆಗೆ ಹಿಂಸಾಚಾರ ಕಡಿಮೆಯಾಗಿದೆ. ನಾನು ಭಾರತದ ಚುನಾವಣಾ ಆಯೋಗವನ್ನು ಅಭಿನಂದಿಸುತ್ತೇನೆ” ಎಂದು ಏಪ್ರಿಲ್ 29ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಕೃಷ್ಣನಗರದಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಹೇಳಿದ್ದಾರೆ.


ಇದನ್ನೂ ಓದಿ: ಬಂಗಾಳ ಚುನಾವಣಾ ಕಣದಲ್ಲಿ ಮೋದಿ ‘ಝಲ್​ಮುರಿ’ ಸವಿ; ಝಾರ್​ಗ್ರಾಮ್​ನಲ್ಲಿ ಜನಸಾಮಾನ್ಯರಂತೆ ಮಿಂಚಿದ ಪ್ರಧಾನಿ

“ಮತದಾನ ನಡೆಯುತ್ತಿರುವ ರೀತಿ ಮತ್ತು ಮತದಾರರು ಮತ ಚಲಾಯಿಸುತ್ತಿರುವ ಉತ್ಸಾಹವನ್ನು ನೋಡಿದರೆ ಈ ಬಾರಿ ಎಲ್ಲಾ ದಾಖಲೆಗಳು ಮುರಿಯುತ್ತವೆ ಎಂದು ತೋರುತ್ತದೆ. ಮತದಾನ ಪ್ರಕ್ರಿಯೆಯನ್ನು ಶಾಂತಿಯುತವಾಗಿಸಲು ರಾಜ್ಯ ಸರ್ಕಾರಿ ನೌಕರರು ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರನ್ನೂ ನಾನು ಅಭಿನಂದಿಸುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.


ಇದನ್ನೂ ಓದಿ: ಪ್ರಧಾನಿ ಮೋದಿಯವರ ‘ಝಲ್ಮುರಿ’ ವಿಡಿಯೋ ವೈರಲ್: ಇನ್ಸ್​ಟಾಗ್ರಾಮ್‌ನಲ್ಲಿ 100 ಮಿಲಿಯನ್ ವೀಕ್ಷಣೆ

ಪ್ರಧಾನಿ ಮೋದಿ ಝಲ್ಮುರಿಯನ್ನು ತಿನ್ನುತ್ತಾ ಎಂಜಾಯ್ ಮಾಡುತ್ತಿರುವ ದೃಶ್ಯಗಳು ವೈರಲ್ ಆದ ಕೂಡಲೇ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದನ್ನು ಚುನಾವಣಾ ಗಿಮಿಕ್ ಮತ್ತು ನಾಟಕ ಎಂದು ಕರೆದಿದ್ದರು. ಇದನ್ನು ಮೊದಲೇ ಸ್ಕ್ರಿಪ್ಟ್ ಮಾಡಲಾಗಿತ್ತು ಎಂದು ಅವರು ಟೀಕಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us