ಉಷ್ಣ ಅಲೆ ಏಳುವ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ; ಬಿಸಿಲಿನಿಂದ ರಕ್ಷಿಸಿಕೊಳ್ಳಿ, ಈ ಅಂಶಗಳನ್ನು ತಪ್ಪದೆ ಪಾಲಿಸಿ

ಬೇಸಿಗೆ ಬಂದರೆ ಒಂದಷ್ಟು ಆರೋಗ್ಯ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಅದರಲ್ಲೂ ಉಷ್ಣತೆ ಗರಿಷ್ಠ ಮಟ್ಟಕ್ಕೆ ತಲುಪಿ ಏಳುವ ಈ ಉಷ್ಣ ಅಲೆಯ ಸನ್ನಿವೇಶದಲ್ಲಿ ಜನರು ಜಾಗರೂಕತೆಯಿಂದ ಇರಬೇಕು.

ಉಷ್ಣ ಅಲೆ ಏಳುವ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ; ಬಿಸಿಲಿನಿಂದ ರಕ್ಷಿಸಿಕೊಳ್ಳಿ, ಈ ಅಂಶಗಳನ್ನು ತಪ್ಪದೆ ಪಾಲಿಸಿ
ಪ್ರಾತಿನಿಧಿಕ ಚಿತ್ರ
Edited By:

Updated on: Mar 16, 2022 | 12:35 PM

ನಿಧಾನವಾಗಿ ಚಳಿಗಾಲ ಮುಗಿಯುತ್ತಿದೆ. ವಾತಾವರಣದಲ್ಲಿ ಉಷ್ಣತೆ ಹೆಚ್ಚುತ್ತಿದ್ದು, ಬೇಸಿಗೆ ಪ್ರಾರಂಭವಾಗಿದೆ. ಈ ಮಧ್ಯೆ ಭಾರತದ ಹಲವು ಭಾಗಗಳಲ್ಲಿ ಉಷ್ಣದ ಅಲೆ ಏಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮಾರ್ಚ್​ 15ರಂದು ಟ್ವೀಟ್ ಮಾಡಿರುವ ಐಎಂಡಿ, ಸೌರಾಷ್ಟ್ರ-ಕಚ್​, ಕೊಂಕಣ ಮತ್ತು ಪಶ್ಚಿಮ ರಾಜಸ್ಥಾನದಲ್ಲಿ ಗಂಭೀರ ಸ್ವರೂಪದ ಹೀಟ್​ ವೇವ್​ ಉಂಟಾಗುವ ಸಾಧ್ಯತೆ ಇದೆ. ಹಾಗೇ, ಮಧ್ಯ ಪ್ರದೇಶದ ಪಶ್ಚಿಮ ಭಾಗ, ಗುಜರಾತ್​, ರಾಜಸ್ಥಾನದ ಪೂರ್ವ ಭಾಗ ಮತ್ತು ಒಡಿಶಾದಲ್ಲಿ ಸಾಮಾನ್ಯ ಸ್ವರೂಪದ ಶಾಖದ ತರಂಗ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಹೇಳಿದೆ. ವಾತಾವರಣದಲ್ಲಿ ಉಷ್ಣದ ತೀವ್ರತೆ ಹೆಚ್ಚಾಗಿ, ಅದು ಹಲವು ದಿನಗಳ ಕಾಲ ಹಾಗೇ ಇರುವುದನ್ನು ಶಾಖದ ತರಂಗ ಅಥವಾ ಉಷ್ಣ ತರಂಗ ಎಂದು ಕರೆಯಲಾಗುತ್ತದೆ. 

ಉಷ್ಣ ಅಲೆ ವೇಳೆ ಏನು ಮಾಡಬೇಕು?: ಬೇಸಿಗೆ ಬಂದರೆ ಒಂದಷ್ಟು ಆರೋಗ್ಯ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಅದರಲ್ಲೂ ಉಷ್ಣತೆ ಗರಿಷ್ಠ ಮಟ್ಟಕ್ಕೆ ತಲುಪಿ ಏಳುವ ಈ ಉಷ್ಣ ಅಲೆಯ ಸನ್ನಿವೇಶದಲ್ಲಿ ಜನರು ಜಾಗರೂಕತೆಯಿಂದ ಇರಬೇಕು. ಹೀಟ್​ ವೇವ್​​ನಿಂದ ನಮ್ಮ ದೇಹವನ್ನು ಸುರಕ್ಷಿತಗೊಳಿಸಿಕೊಳ್ಳಲು ಏನೆಲ್ಲ ಮಾಡಬಹುದು ಎಂಬುದಕ್ಕೆ ಇಲ್ಲಿದೆ ಒಂದಷ್ಟು ಟಿಪ್ಸ್​

  1. ಜಾಸ್ತಿ ನೀರು, ಎಳೆನೀರು ಮತ್ತಿತರ ಆರೋಗ್ಯಕ್ಕೆ ಒಳ್ಳೆಯದಾದ ಪಾನೀಯಗಳನ್ನು ಸೇವಿಸಬೇಕು. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಉಷ್ಣತೆ ತೀವ್ರವಾಗಿದ್ದಾಗ ನಮ್ಮ ದೇಹ ಬಹುಬೇಗನೇ ಡಿಹೈಡ್ರೇಟ್​ ಆಗುತ್ತದೆ. ಹೀಗೆ ದೇಹ ಡಿಹೈಡ್ರೇಟ್​ (ನಿರ್ಜಲೀಕರಣ)ಆದಾಗ ವಾಂತಿ, ಅತಿಯಾಗಿ ಬೆವರುವುದು, ಬಾಯಿ ಒಣಗುವುದು, ತಲೆ ನೋವು, ತಲೆಸುತ್ತಿನಂತ ತೊಂದರೆಗಳನ್ನು ತರಬಲ್ಲದು.
  2. ಉಷ್ಣ ಅಲೆಯ ವೇಳೆ ಅತಿಯಾದ ಬಿಸಿಲು ಇರುವುದರಿಂದ ನಾವು ನಮ್ಮ ಬಗ್ಗೆಯಷ್ಟೇ ಕಾಳಜಿ ಮಾಡುವುದಲ್ಲ. ಸಾಕಿದ ಬೆಕ್ಕು, ನಾಯಿ, ಜಾನುವಾರುಗಳನ್ನೂ ಸುರಕ್ಷಿತ ಮಾಡಬೇಕಾಗುತ್ತದೆ. ಅವು ಬಿಸಿಲಿನಲ್ಲಿ ಅಡ್ಡಾಡದಂತೆ ಎಚ್ಚರ ವಹಿಸಬೇಕು. ಅವುಗಳಿಗೂ ತಲೆ ಮೇಲೊಂದು ಸೂರು ಕಟ್ಟಿಡಬೇಕು. ಆಗಾಗ ನೀರು, ಮೇವು ಕೊಡುತ್ತಿರಬೇಕು. ಬೇಸಿಗೆಯಲ್ಲಿ ಪ್ರಾಣಿಗಳಿಗೂ ಕೂಡ ಜಾಸ್ತಿ ನೀರು ಬೇಕಾಗುತ್ತದೆ.
  3. ಸಾಧ್ಯವಾದಷ್ಟೂ ಮನೆಯಲ್ಲೇ ಇರಿ. ಅಗತ್ಯ ಕೆಲಸವಿದ್ದರೆ ಮಾತ್ರ ಹೋಗಿ. ಹನ್ನೊಂದು ಗಂಟೆ ನಂತರದ ಬಿಸಿಲು ಭೀಕರವಾಗಿರುತ್ತದೆ. ನಿಮ್ಮನ್ನು ನೀವು ಜಾಸ್ತಿ ಈ ಬಿಸಿಲು, ಶಾಖಕ್ಕೆ ಒಡ್ಡಿಕೊಳ್ಳುವುದರಿಂದ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಹಾಗೊಮ್ಮೆ ಹೊರಹೋಗಲೇಬೇಕು ಅನಿವಾರ್ಯವಿದೆ ಎಂದಾದರೆ ರಕ್ಷಣಾ ಮಾರ್ಗಗಳನ್ನು ಕಂಡುಕೊಳ್ಳಿ. ಉದಾಹರಣೆಗೆ ಛತ್ರಿ ಬಳಕೆ ಮಾಡಬಹುದು. ಸನ್​ ಗ್ಲಾಸ್​ಗಳನ್ನು ಧರಿಸಿ, ಪೂರ್ತಿ ತೋಳಿರುವ ಉಡುಪುಗಳು ಇರಲಿ ಹಾಗೇ, ತಲೆಗೆ ಟೊಪ್ಪಿಯನ್ನೂ ಹಾಕಬಹುದು.
  4. ಮನೆಯ ಬಾಗಿಲು, ಕಿಟಕಿಗಳನ್ನೂ ಆದಷ್ಟು ಮುಚ್ಚಿ. ನೇರವಾಗಿ ಬಿಸಿಲು ಮನೆಯೊಳಗೆ ಬರುವಂತಿರುವ ಎಲ್ಲ ತೆರೆದ ಜಾಗಗಳನ್ನೂ ಮುಚ್ಚಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಈ ಸೆಖೆಯಲ್ಲಿ ಗಾಳಿಯೂ ಕೂಡ ಬಿಸಿಯಾಗಿಯೇ ಇರುವುದರಿಂದ ತುಂಬ ಎಚ್ಚರಿಕೆಯಿಂದ ಇರಬೇಕು. ಯಾವುದೇ ಅನಾರೋಗ್ಯ ಉಂಟಾದರೂ ತತ್​​ಕ್ಷಣಕ್ಕೆ ಲಭ್ಯ ಇರುವ ತುರ್ತು ಫೋನ್​ನಂಬರ್​ ಇಟ್ಟುಕೊಳ್ಳಿ.
  5. ಉಷ್ಣ ಅಲೆಯಿದ್ದು, ಶಾಖದ ತೀವ್ರತೆ ಸಿಕ್ಕಾಪಟೆ ಇರುವ ಸಂದರ್ಭದಲ್ಲಿ ಊಟ-ತಿಂಡಿಯ ವಿಚಾರದಲ್ಲೂ ಎಚ್ಚರಿಕೆ ವಹಿಸಬೇಕು. ಹೊಟ್ಟೆಬಿರಿಯುವಷ್ಟು ತಿನ್ನುವುದು ಒಳ್ಳೆಯದಲ್ಲ. ಇದು ನಿಮ್ಮ ಜೀರ್ಣ ವ್ಯವಸ್ಥೆಯನ್ನು ಹಾಳುಗೆಡವಬಹುದು. ಅದರಲ್ಲೂ ಈ ವೇಳೆ ಗಟ್ಟಿಗಟ್ಟಿ ಪದಾರ್ಥಗಳ ಸೇವನೆಗಿಂತ, ನೀರಿನ ಅಂಶ ಜಾಸ್ತಿ ಇರುವ ಆಹಾರ ಸೇವನೆ ಒಳ್ಳೆಯದು. ನಾರಿನ ಅಂಶ ಹೆಚ್ಚಿರುವ ತರಕಾರಿಗಳೂ ಒಳ್ಳೆಯದು ಎಂಬುದನ್ನು ವೈದ್ಯರೂ ಹೇಳುತ್ತಾರೆ.
  6. ಇನ್ನೊಂದು ಮುಖ್ಯ ವಿಷಯ ಚರ್ಮದ ಆರೋಗ್ಯ. ಬಿರುಬೇಸಿಗೆಯಲ್ಲಿ ಚರ್ಮವನ್ನು ಕಾಪಾಡಿಕೊಳ್ಳುವುದು ಒಂದು ಆದ್ಯತೆ ಮತ್ತು ಅಷ್ಟೇ ದೊಡ್ಡ ಸವಾಲು. ಬೇಸಿಗೆಯಲ್ಲಿ ಚರ್ಮ ಬಹುಬೇಗ ಕಪ್ಪಾಗುತ್ತದೆ. ಸನ್​ಬರ್ನ್​ ಕಾಣಿಸಿಕೊಳ್ಳುತ್ತದೆ. ಅದರಿಂದ ಪಾರಾಗಲು ಸನ್​ಸ್ಕ್ರೀನ್​ ಹಚ್ಚಿಕೊಳ್ಳಬೇಕು. ಬಿಸಿಲಿಗೆ ಮುಖ ಒಡ್ಡುವುದನ್ನು ಕಡಿಮೆ ಮಾಡಬೇಕು. ಈ ಬಗ್ಗೆ ಚರ್ಮದ ತಜ್ಞರು, ಬ್ಯೂಟಿಷಿಯನ್​​ ಬಳಿ ಸಲಹೆಯನ್ನೂ ಕೇಳಬಹುದು.
  7. ಉಷ್ಣತೆ ಹೆಚ್ಚಿದ್ದಾಗ ನೀರು ಜಾಸ್ತಿ ಕುಡಿಯಬೇಕು, ನೀರಿನ ಅಂಶವಿರುವ ಹಣ್ಣುಗಳ ಸೇವನೆ ಒಳಿತು. ಹಾಗಂತ ಸೋಡಾ, ಮದ್ಯ ಮತ್ತಿತರ ಸಕ್ಕರೆ ಅಂಶ ಜಾಸ್ತಿ ಇರುವ ಪಾನೀಯಗಳನ್ನು ಸೇವಿಸುವುದು ಒಳ್ಳೆಯದಲ್ಲ. ಇದೆಲ್ಲ ಒಮ್ಮೆ ಬಾಯಾರಿಕೆಯನ್ನು ಹೋಗಲಾಡಿಸಿದರೂ, ನಿಮ್ಮ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ.

ಇದನ್ನೂ ಓದಿ: Aadhaar Card Update: ನಿಮ್ಮ ಮೊಬೈಲ್ ಫೋನ್ ಸಂಖ್ಯೆ ಆಧಾರ್​ಗೆ ಜೋಡಣೆ ಆಗಿದೆಯಾ? ಅನುಕೂಲಗಳನ್ನು ತಿಳಿಯಿರಿ

Web contact

TV9 Kannada

Read More
Follow Us