ಹಾರ್ಮುಜ್ ಜಲಸಂಧಿ ಬಿಕ್ಕಟ್ಟು, ಚಬಹಾರ್ ಬಂದರು ಭವಿಷ್ಯ: ಇರಾನ್ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ಹೈವೋಲ್ಟೇಜ್ ಮಾತುಕತೆ

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಮತ್ತು ಪ್ರಧಾನಿ ಮೋದಿ ಮಾತುಕತೆ, ಹಾರ್ಮುಜ್ ಜಲಸಂಧಿ ಬಿಕ್ಕಟ್ಟು ಹಾಗೂ ಚಾಬಹಾರ್ ಬಂದರು ಭವಿಷ್ಯದ ಮೇಲೆ ಕೇಂದ್ರೀಕರಿಸಿದೆ. ಅಮೆರಿಕ-ಇರಾನ್ ಉದ್ವಿಗ್ನತೆ ಮಧ್ಯೆ, ಭಾರತದ ಇಂಧನ ಭದ್ರತೆ ಮತ್ತು ಜಾಗತಿಕ ಶಾಂತಿಗೆ ಈ ಭೇಟಿ ನಿರ್ಣಾಯಕವಾಗಿದೆ. ಸಂಘರ್ಷ ನಿವಾರಣೆಗೆ ಭಾರತ 'ಸೇತುವೆ'ಯಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದ್ದು, ರಾಜತಾಂತ್ರಿಕ ಸಮತೋಲನ ಕಾಯ್ದುಕೊಳ್ಳುವುದು ಸವಾಲಾಗಿದೆ.

ಹಾರ್ಮುಜ್ ಜಲಸಂಧಿ ಬಿಕ್ಕಟ್ಟು, ಚಬಹಾರ್ ಬಂದರು ಭವಿಷ್ಯ: ಇರಾನ್ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ಹೈವೋಲ್ಟೇಜ್ ಮಾತುಕತೆ
ನರೇಂದ್ರ ಮೋದಿ, ಪೆಜೆಸ್ಕಿಯಾನ್
Image Credit source: PTI

Updated on: Sep 11, 2026 | 12:00 PM

ನವದೆಹಲಿ, ಸೆಪ್ಟೆಂಬರ್ 11: ಬ್ರಿಕ್ಸ್ ಶೃಂಗಸಭೆಗಾಗಿ ಭಾರತಕ್ಕೆ ಆಗಮಿಸಿರುವ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹೊತ್ತಿನಲ್ಲಿ ಈ ಭೇಟಿ ಜಾಗತಿಕ ಗಮನ ಸೆಳೆದಿದೆ. ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಾಗಣೆಗೆ ಅಡ್ಡಿಯಾಗಿ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 100 ಡಾಲರ್ ದಾಟಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ಕೇವಲ ವ್ಯಾಪಾರಕ್ಕಷ್ಟೇ ಸೀಮಿತವಾಗಿರದೆ, ಭಾರತದ ಇಂಧನ ಭದ್ರತೆ ಹಾಗೂ ಜಾಗತಿಕ ಶಾಂತಿಯ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿದೆ.

ಶಾಂತಿಗಾಗಿ ಭಾರತದ ಮೊರೆ ಹೋದ ಇರಾನ್: ಅಮೆರಿಕ, ಇಸ್ರೇಲ್, ಕೊಲ್ಲಿ ರಾಷ್ಟ್ರಗಳು ಮತ್ತು ರಷ್ಯಾದೊಂದಿಗೆ ಸಮಾನ ಬಾಂಧವ್ಯ ಹೊಂದಿರುವ ಭಾರತದ ಪ್ರಭಾವವನ್ನು ಬಳಸಿ, ರಕ್ತಪಾತ ನಿಲ್ಲಿಸಿ ರಾಜತಾಂತ್ರಿಕ ಮಾತುಕತೆ ಆರಂಭಿಸಲು ಸಹಾಯ ಮಾಡುವಂತೆ ಅಧ್ಯಕ್ಷ ಪೆಜೆಶ್ಕಿಯಾನ್ ಪ್ರಧಾನಿ ಮೋದಿಯವರನ್ನು ಕೋರಿದ್ದಾರೆ.

ಹಾರ್ಮುಜ್ ಜಲಸಂಧಿಯ ಆತಂಕ: ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಹೆಚ್ಚಿರುವುದು ಭಾರತದ ಆಮದು ವೆಚ್ಚವನ್ನು ಹೆಚ್ಚಿಸಿದೆ. ಈ ಜಲಮಾರ್ಗದಲ್ಲಿ ವಾಣಿಜ್ಯ ಹಡಗುಗಳ ಸಂಚಾರ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲು ಇರಾನ್‌ನೊಂದಿಗೆ ನೇರ ಸಂಪರ್ಕ ಅಗತ್ಯವಾಗಿದೆ.

ಚಬಹಾರ್ ಬಂದರಿನ ಭವಿಷ್ಯ: ಪಾಕಿಸ್ತಾನವನ್ನು ಬೈಪಾಸ್ ಮಾಡಿ ಮಧ್ಯ ಏಷ್ಯಾ ತಲುಪಲು ಭಾರತಕ್ಕೆ ಇರಾನ್‌ನ ಚಬಹಾರ್ ಬಂದರು ಬಹುಮುಖ್ಯ. ಈ ಯೋಜನೆಗೆ ನೀಡಲಾಗಿದ್ದ ಅಮೆರಿಕದ ನಿರ್ಬಂಧ ವಿನಾಯಿತಿ ಏಪ್ರಿಲ್ 2026ಕ್ಕೆ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ, ಯೋಜನೆಯನ್ನು ಮುಂದುವರಿಸುವ ಕುರಿತು ಉಭಯ ನಾಯಕರು ಸಮಾಲೋಚನೆ ನಡೆಸಲಿದ್ದಾರೆ.

ಬ್ರಿಕ್ಸ್‌ನಲ್ಲಿ ಒಮ್ಮತದ ಸವಾಲು: ಬ್ರಿಕ್ಸ್‌ನ ಹೊಸ ಸದಸ್ಯರಾದ ಯುಎಇ ಮತ್ತು ಇರಾನ್ ನಡುವೆ ಭಿನ್ನಾಭಿಪ್ರಾಯಗಳಿದ್ದು, ಒಕ್ಕೂಟದೊಳಗೆ ಸಮತೋಲನ ಕಾಯ್ದುಕೊಳ್ಳುವುದು ಭಾರತದ ಪಾಲಿಗೆ ರಾಜತಾಂತ್ರಿಕ ಪರೀಕ್ಷೆಯಾಗಿದೆ.

ಭಾರತವು ಈ ಸಂಘರ್ಷವನ್ನು ತಾನಾಗಿಯೇ ಅಂತ್ಯಗೊಳಿಸಲು ಸಾಧ್ಯವಿಲ್ಲದಿದ್ದರೂ, ಪರಸ್ಪರ ಮುಖಾಮುಖಿ ಮಾತನಾಡಲು ಹಿಂದೇಟು ಹಾಕುತ್ತಿರುವ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಸಂದೇಶ ರವಾನಿಸುವ ‘ವಿಶ್ವಾಸಾರ್ಹ ಸೇತುವೆ’ಯಾಗಿ ಕೆಲಸ ಮಾಡುವ ಶಕ್ತಿ ಭಾರತಕ್ಕಿದೆ.

ತೈಲ ಮತ್ತು ಆರ್ಥಿಕ ಸಮತೋಲನ: ಅಮೆರಿಕದ ನಿರ್ಬಂಧಗಳಿಂದಾಗಿ ಭಾರತವು ಇರಾನ್‌ನಿಂದ ನೇರವಾಗಿ ಕಚ್ಚಾ ತೈಲ ಖರೀದಿಸುವುದನ್ನು ಕಡಿಮೆ ಮಾಡಿ, ರಷ್ಯಾ ಮತ್ತು ಲ್ಯಾಟಿನ್ ಅಮೆರಿಕದ ಮೇಲೆ ಅವಲಂಬಿತವಾಗಿದೆ. ಆದಾಗ್ಯೂ, ಪಶ್ಚಿಮ ಏಷ್ಯಾದ ಯುದ್ಧ ಭೀತಿಯಿಂದ ಜಾಗತಿಕ ಇಂಧನ ದರಗಳು ಗಗನಕ್ಕೇರಿದರೆ ಭಾರತೀಯ ಆರ್ಥಿಕತೆಗೆ ಹೊಡೆತ ಬೀಳುವುದರಿಂದ ಯುದ್ಧ ನಿಲ್ಲಿಸುವುದು ಭಾರತದ ಸ್ವಂತ ಹಿತಾಸಕ್ತಿಯೂ ಹೌದು.

ಸೂಕ್ಷ್ಮ ವಿದೇಶಾಂಗ ನೀತಿ: ಭಾರತವು ಇರಾನ್ ಜತೆಗೆ ಕೈಜೋಡಿಸುತ್ತಲೇ, ತನ್ನ ಹತ್ತಿರದ ಮಿತ್ರರಾದ ಅಮೆರಿಕ, ಯುಎಇ ಮತ್ತು ಸೌದಿ ಅರೇಬಿಯಾದ ಸಂಬಂಧಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾದ ‘ರಾಜತಾಂತ್ರಿಕ ಹಗ್ಗದ ಮೇಲಿನ ನಡಿಗೆ’ಯನ್ನು ಮುಂದುವರೆಸಬೇಕಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us