Monsoon Rain 2026: ಭಾರತಕ್ಕೆ ಮುಂಗಾರುಅಧಿಕೃತ ಪ್ರವೇಶ, ಕರ್ನಾಟಕ ಸೇರಿ 19 ರಾಜ್ಯಗಳಲ್ಲಿ ವಿಪರೀತ ಗಾಳಿ, ಮಳೆ

ಕೇರಳಕ್ಕೆ ಆಗಮಿಸಿದ ನೈಋತ್ಯ ಮುಂಗಾರು, ಕರ್ನಾಟಕ, ಕೇರಳ, ದೆಹಲಿ-ಎನ್‌ಸಿಆರ್‌ಗೆ ಭಾರಿ ಮಳೆ ತರಲಿದೆ. ಜೂನ್ 4 ರಂದು ಘೋಷಣೆಯಾದ ಮುಂಗಾರು ರೈತರಿಗೆ ವರದಾನವಾಗಿದ್ದು, ವಿಶೇಷವಾಗಿ ಮುಂಗಾರು ಬಿತ್ತನೆಗೆ ಸಹಕಾರಿಯಾಗಲಿದೆ. ಎಲ್ ನಿನೋ ಪರಿಸ್ಥಿತಿಗಳ ನಡುವೆಯೂ, ಧನಾತ್ಮಕ ಐಓಡಿ ಮಳೆಗೆ ಪೂರಕವಾಗಿದೆ. ದಕ್ಷಿಣ, ಉತ್ತರ ಮತ್ತು ಈಶಾನ್ಯ ಭಾರತದಾದ್ಯಂತ ತಾಪಮಾನ ಇಳಿಸಿ, ದೇಶವನ್ನು ತಂಪಾಗಿಸಲಿದೆ.

Monsoon Rain 2026: ಭಾರತಕ್ಕೆ ಮುಂಗಾರುಅಧಿಕೃತ ಪ್ರವೇಶ, ಕರ್ನಾಟಕ ಸೇರಿ 19 ರಾಜ್ಯಗಳಲ್ಲಿ  ವಿಪರೀತ ಗಾಳಿ, ಮಳೆ
ಮಳೆ
Image Credit source: PTI

Updated on: Jun 05, 2026 | 9:46 AM

ನವದೆಹಲಿ, ಜೂನ್ 05: ಇಡೀ ದೇಶವೇ ಅತ್ಯಂತ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ನೈಋತ್ಯ ಮುಂಗಾರು(Monsoon) ಕೊನೆಗೂ ಕೇರಳಕ್ಕೆ ಆಗಮಿಸಿದೆ. ಭಾರತೀಯ ಹವಾಮಾನ ಇಲಾಖೆ (IMD) ಜೂನ್ 4 ರ ಗುರುವಾರ ಬೆಳಗ್ಗೆ 11 ಗಂಟೆಗೆ ಮುಂಗಾರು ಮಾರುತಗಳ ಅಧಿಕೃತ ಆಗಮನವನ್ನು ಘೋಷಿಸಿದೆ. ಕೇವಲ ಒಂದು ವಾರದ ತಾಂತ್ರಿಕ ವಿಳಂಬವನ್ನು ಹೊರತುಪಡಿಸಿ, ಪ್ರಸ್ತುತ ಮುಂಗಾರು ಅತ್ಯಂತ ಸಕ್ರಿಯವಾಗಿದ್ದು, ದೇಶದ ಕೃಷಿ ಚಟುವಟಿಕೆಗಳು ಭಾರಿ ಚುರುಕಾಗಿವೆ. ಈ ಭರವಸೆಯ ಮಳೆಯು ಲಕ್ಷದ್ವೀಪ, ಕೇರಳ, ಮಾಹೆ ಸೇರಿದಂತೆ ಕರ್ನಾಟಕ ಮತ್ತು ತಮಿಳುನಾಡಿನ ಪ್ರಮುಖ ಭಾಗಗಳನ್ನು ಯಶಸ್ವಿಯಾಗಿ ಆವರಿಸಿಕೊಂಡಿದೆ.

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ವರದಾನವಾಗಲಿರುವ ಮುಂಗಾರು
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ದಕ್ಷಿಣ ಮತ್ತು ಈಶಾನ್ಯ ಭಾರತದಲ್ಲಿ ಮುಂಗಾರು ಅತ್ಯಂತ ವೇಗವಾಗಿ ಪ್ರಗತಿ ಹೊಂದುತ್ತಿದೆ. ಜೂನ್ 5 ರಿಂದ ಮುಂದಿನ 5-7 ದಿನಗಳವರೆಗೆ ಕರ್ನಾಟಕ, ಕೇರಳ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ವಿಶೇಷವಾಗಿ ಉತ್ತರ ಒಳನಾಡಿನ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ ಉತ್ತಮ ಮಳೆಯಾಗಲಿದ್ದು, ಇದು ಮುಂಗಾರು ಬಿತ್ತನೆಗೆ ಸಜ್ಜಾಗಿರುವ ನಮ್ಮ ರೈತರಿಗೆ ಅತ್ಯಂತ ವರದಾನವಾಗಲಿದೆ.

ಪೆಸಿಫಿಕ್ ಮಹಾಸಾಗರದಲ್ಲಿ ಎಲ್ ನಿನೋ ಪರಿಸ್ಥಿತಿಗಳು ಕಂಡುಬರುತ್ತಿದ್ದರೂ, ಹಿಂದೂ ಮಹಾಸಾಗರದಲ್ಲಿ ಸೃಷ್ಟಿಯಾಗುತ್ತಿರುವ ‘ದುರ್ಬಲ ಧನಾತ್ಮಕ ಐಓಡಿ’ (Positive Indian Ocean Dipole) ಮುಂಗಾರು ಮಳೆಗೆ ಪೂರಕ ಶಕ್ತಿಯನ್ನು ನೀಡಲಿದೆ. ಜೂನ್ 11–17ರ ಅವಧಿಯಲ್ಲಿ ಕರ್ನಾಟಕ, ಕೊಂಕಣ-ಗೋವಾ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಆಶಾದಾಯಕ ಮುನ್ಸೂಚನೆ ಇದೆ.

ಉತ್ತರ ಭಾರತ ಹಾಗೂ ದೆಹಲಿ-ಎನ್‌ಸಿಆರ್‌ಗೆ ತಂಪೆರೆದ ಮಳೆ
ಕೇರಳ ಪ್ರವೇಶಿಸಿರುವ ಮಾನ್ಸೂನ್ ಮುಂದಿನ 10-15 ದಿನಗಳಲ್ಲಿ ಮಧ್ಯ ಮತ್ತು ಪೂರ್ವ ಭಾರತಕ್ಕೂ ವ್ಯಾಪಿಸಲಿದೆ. ತೀವ್ರ ಬೇಸಿಗೆಯಿಂದ ಕಂಗಾಲಾಗಿದ್ದ ದೆಹಲಿ ಮತ್ತು ಸುತ್ತಮುತ್ತಲಿನ (Delhi-NCR) ಪ್ರದೇಶಗಳಲ್ಲಿ ಜೂನ್ 5 ರಂದು ಎರಡು ಹಂತಗಳಲ್ಲಿ ಹಗುರ ಮಳೆ ಮತ್ತು ಗುಡುಗು ಸಹಿತ ತಂಗಾಳಿ ಬೀಸಲಿದ್ದು, ತಾಪಮಾನ ಗಣನೀಯವಾಗಿ ಇಳಿಕೆಯಾಗಲಿದೆ.

ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯಾಗಲಿದ್ದು, ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಬಿಹಾರದ ಬಯಲು ಸೀಮೆಯಲ್ಲೂ ಚದುರಿದ ಮಳೆಯಾಗಿ ಇಡೀ ವಾತಾವರಣ ತಂಪಾಗಲಿದೆ.

ಒಡಿಶಾ, ಕರಾವಳಿ ಆಂಧ್ರಪ್ರದೇಶ ಮತ್ತು ಬಿಹಾರದ ಕೆಲವು ಭಾಗಗಳಲ್ಲಿ ಜೂನ್ 6 ರವರೆಗೆ ಸಾಧಾರಣ ತೇವಾಂಶದ ಒಣ ಹವಾಮಾನ ಇರಲಿದ್ದರೂ, ದೇಶಾದ್ಯಂತ ವೇಗವಾಗಿ ವಿಸ್ತರಿಸುತ್ತಿರುವ ಮುಂಗಾರು ಮಳೆಯು ಮುಂದಿನ ಕೆಲವು ದಿನಗಳಲ್ಲಿ ಇಡೀ ಭಾರತದಾದ್ಯಂತ ಕರಾವಳಿ ಹಾಗೂ ಒಳನಾಡುಗಳನ್ನು ತಂಪಾಗಿಸಿ, ಪ್ರಕೃತಿಗೆ ಹಸಿರು ಹೊದಿಕೆಯನ್ನು ನೀಡಲಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:46 am, Fri, 5 June 26

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us