ಒಮಿಕ್ರಾನ್​ ಮಾರಣಾಂತಿಕವಲ್ಲ, ಆದರೆ ಭಾರತೀಯರು ಕೊರೊನಾ 3ನೇ ಅಲೆಗೆ ಸಿದ್ಧರಾಗಬೇಕು: ತಜ್ಞರ ವರದಿ

ಒಮಿಕ್ರಾನ್​ ಕೊವಿಡ್​ 19ನ ಹೊಸ ತಳಿಯಾಗಿದ್ದು, ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡಿದೆ. ಈಗಂತೂ ಭಾರತಕ್ಕೂ ಕಾಲಿಟ್ಟಿದ್ದು, ಒಟ್ಟು 4 ಕೇಸ್​ಗಳು ದಾಖಲಾಗಿವೆ.

ಒಮಿಕ್ರಾನ್​ ಮಾರಣಾಂತಿಕವಲ್ಲ, ಆದರೆ ಭಾರತೀಯರು ಕೊರೊನಾ 3ನೇ ಅಲೆಗೆ ಸಿದ್ಧರಾಗಬೇಕು: ತಜ್ಞರ ವರದಿ
ಸಾಂಕೇತಿಕ ಚಿತ್ರ
Edited By:

Updated on: Dec 04, 2021 | 10:08 PM

ಹೈದರಾಬಾದ್​: ಸದ್ಯ ಜಗತ್ತಿನಾದ್ಯಂತ ಆತಂಕಕ್ಕೆ ಕಾರಣವಾಗಿರುವ ಕೊವಿಡ್​ 19 ಹೊಸ ರೂಪಾಂತರ ಒಮಿಕ್ರಾನ್​ ಬಗ್ಗೆ ಇನ್ನೂ ಯಾರಿಗೂ ನಿಖರ ಮಾಹಿತಿ ಸಿಕ್ಕಿಲ್ಲ. ಇದು ಡೆಲ್ಟಾಕ್ಕಿಂತಲೂ ಅಪಾಯಕಾರಿ ಎಂದು ಹೇಳಲಾಗಿತ್ತಾದರೂ, ಹಾಗೇನೂ ಇಲ್ಲ ಎಂದು ತಜ್ಞರ ತಂಡ ಹೇಳಿದೆ. ಆದರೆ ಪ್ರಸರಣ ವೇಗವಾಗಿ ಆಗಬಲ್ಲದು ಎನ್ನಲಾಗಿದೆ. ಹೀಗಿರುವಾಗ ಆರೋಗ್ಯ ತಜ್ಞರ ತಂಡ ಎಚ್ಚರಿಕೆಯೊಂದನ್ನು ನೀಡಿದೆ. ಇದೀಗ ಕಾಣಿಸಿಕೊಂಡಿರುವ ಒಮಿಕ್ರಾನ್ ಮಾರಣಾಂತಿಕವಲ್ಲ. ಆದರೆ ಕೊವಿಡ್​ 19 ಮೂರನೇ ಅಲೆಯನ್ನು ಉಂಟು ಮಾಡುವಷ್ಟು ಪ್ರಸರಣ ಸಾಮರ್ಥ್ಯ ಹೊಂದಿದ್ದು, ಅದನ್ನು ಎದುರಿಸಲು ಭಾರತವೂ ಸಿದ್ಧವಾಗಬೇಕು ಎಂದು ಆರೋಗ್ಯ ಕ್ಷೇತ್ರದ ತಜ್ಞರು ತಿಳಿಸಿದ್ದಾರೆ. 

ಏಮ್ಸ್​​ನ ಬಿಬಿನಗರ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವಿಕಾಸ್​ ಭಾಟಿಯಾ ಈ ಬಗ್ಗೆ ಎಎನ್​ಐ ಜತೆ ಮಾತನಾಡಿದ್ದು, ಒಮಿಕ್ರಾನ್​ ಬಗ್ಗೆ ಯಾವುದೇ ರೀತಿಯ ಊಹೆ ಮಾಡುವುದು ಕಷ್ಟ. ಈಗಾಗಲೇ 30ಕ್ಕೂ ಹೆಚ್ಚು ದೇಶಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಒಮಿಕ್ರಾನ್​  ಪ್ರಕರಣಗಳು ಪತ್ತೆಯಾಗಿವೆ. ಈ ಒಮಿಕ್ರಾನ್​ ಬಗ್ಗೆ ನಾವು ಇನ್ನಷ್ಟು ಮಾಹಿತಿ, ಸ್ಪಷ್ಟತೆಗಾಗಿ ಕಾಯುತ್ತಿದ್ದೇವೆ. ಆದರೂ ಈ ಹೊತ್ತಲ್ಲಿ ನಾವು ಮೂರನೇ ಅಲೆಗೆ ಸಿದ್ಧರಾಗಬೇಕು. ಇದ್ದುದರಲ್ಲೇ ಒಳ್ಳೆಯ ಸುದ್ದಿಯೆಂದರೆ ಒಮಿಕ್ರಾನ್​ ಮಾರಣಾಂತಿಕ ವೈರಸ್​ ಅಲ್ಲ ಎಂಬುದು. ಯಾಕೆಂದರೆ ಈಗಾಗಲೇ ಹಲವು ದೇಶಗಳಲ್ಲಿ ಒಮಿಕ್ರಾನ್​ ಪತ್ತೆಯಾಗಿದ್ದರೂ ಇನ್ನೂ ಅದರಲ್ಲಿ ಯಾರೋ ಮೃತಪಟ್ಟ ಬಗ್ಗೆ ಯಾವುದೇ ವರದಿಯಾಗಿಲ್ಲ ಎಂದು ವಿಕಾಸ್​ ಭಾಟಿಯಾ ಹೇಳಿದ್ದಾರೆ.

ಒಮಿಕ್ರಾನ್​ ಸೌಮ್ಯವಾದ ಕಾಯಿಲೆಯನ್ನುಂಟು ಮಾಡಬಹುದು. ದಕ್ಷಿಣ ಆಫ್ರಿಕಾದಂತಹ ಕೆಲವು ದೇಶಗಳಲ್ಲಿ ಈ ಸೋಂಕು ಮತ್ತು ರೋಗ ಕಾಣಿಸಿಕೊಳ್ಳುವುದರ ನಡುವಿನ ಅಂತರ ಸ್ವಲ್ಪ ಹೆಚ್ಚಾಗಿರಬಹುದು. ಇದು ಡೆಲ್ಟಾ ವೈರಸ್​ಗಿಂತ ದೀರ್ಘಾವಾಗಿರುವ ಕಾರಣ ಪ್ರಸರಣ ಪ್ರಮಾಣ ಹೆಚ್ಚಾಗಿರುವ ಸಾಧ್ಯತೆ ಇದೆ. ಹೀಗಾಗಿಯೇ ಹೆಚ್ಚೆಚ್ಚು ಜನರಿಗೆ ಒಮಿಕ್ರಾನ್​ ತಗುಲಬಹುದು. ಈ ಸೋಂಕು ತಗುಲಿದರೆ ಜೀವ ಹೋಗುವ ಸಾಧ್ಯತೆ ತುಂಬ ಕಡಿಮೆಯಿದೆ. ಆದರೆ ಒಬ್ಬರಿಂದ ಒಬ್ಬರಿಗೆ ಖಂಡಿತ ಹರಡುತ್ತದೆ ಎಂದೂ ಹೇಳಿದ್ದಾರೆ. ಒಮಿಕ್ರಾನ್​ ಸೋಂಕು ಆಮ್ಲಜನಕ ಮಟ್ಟ ಕಡಿಮೆ ಮಾಡುತ್ತದೆ ಎಂಬುದನ್ನು ಅಲ್ಲಗಳೆದ ಭಾಟಿಯಾ, ಹೌದು, ಆಮ್ಲಜನಕ ಮಟ್ಟದಲ್ಲಿ ಕುಸಿತ, ಮರಣದ ದರ ನಮ್ಮ ಪ್ರಮುಖ ಆತಂಕಗಳಾಗಿವೆ. ಈ ಆತಂಕ ಒಮಿಕ್ರಾನ್​ ವಿಚಾರದಲ್ಲಿ ಬಹಳ ಕಡಿಮೆ ಇದೆ. ಇನ್ನು ಹರಡುವಿಕೆಯ ಬಗ್ಗೆ ತುಂಬ ಭಯ ಬೇಡ. ಈಗಾಗಲೇ ಲಸಿಕೆ ಕೂಡ ನೀಡಲಾಗುತ್ತಿರುವುದರಿಂದ ಹೆದರುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒಮಿಕ್ರಾನ್​ ಕೊವಿಡ್​ 19ನ ಹೊಸ ತಳಿಯಾಗಿದ್ದು, ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡಿದೆ. ಈಗಂತೂ ಭಾರತಕ್ಕೂ ಕಾಲಿಟ್ಟಿದ್ದು, ಒಟ್ಟು 4 ಕೇಸ್​ಗಳು ದಾಖಲಾಗಿವೆ. ಮೊದಲೆರಡು ಪ್ರಕರಣಗಳು ಕರ್ನಾಟಕದಲ್ಲಿ, ಒಂದು ಗುಜರಾತ್​ ಮತ್ತು ಇನ್ನೊಂದು ಮಹಾರಾಷ್ಟ್ರದಲ್ಲಿ ದಾಖಲಾಗಿದೆ. ಇನ್ನು ಒಮಿಕ್ರಾನ್​ ನಿಯಂತ್ರಣಕ್ಕೆ ಕೊವಿಡ್ 19 ಲಸಿಕೆ ಬೂಸ್ಟರ್ ಡೋಸ್ ಅಗತ್ಯ ಇದೆಯಾ ಎಂಬ ಬಗ್ಗೆ ಚರ್ಚಿಸಲು ಡಿಸೆಂಬರ್​ 7ರಂದು ವಿಶ್ವ ಆರೋಗ್ಯ ಸಂಸ್ಥೆಯ ಸಭೆ ನಡೆಯಲಿದೆ. ಒಮಿಕ್ರಾನ್ ಹೈರಿಸ್ಕ್​ ದೇಶಗಳಿಂದ ಬರುವ ಪ್ರಯಾಣಿಕರಿಗೆ ಅನ್ವಯ ಆಗುವಂತೆ ಭಾರತದಲ್ಲಿ ಹೊಸ ಮಾರ್ಗಸೂಚಿಗಳನ್ನು ಕೂಡ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ರವಿಚಂದ್ರನ್ ‘ದೃಶ್ಯ 2’ ತೆರೆಗೆ ಬರುವುದಕ್ಕೂ ಮೊದಲು ಮತ್ತೊಮ್ಮೆ ರಿಲೀಸ್ ಆಗ್ತಿದೆ ‘ದೃಶ್ಯ’; ಎಲ್ಲೆಲ್ಲಿ ಶೋ?

Published On - 10:07 pm, Sat, 4 December 21

Web contact

TV9 Kannada

Read More
Follow Us