ಈ ಬಾರಿಯದ್ದು 74ನೇ ಸ್ವಾತಂತ್ರ್ಯೋತ್ಸವವೋ? 75ನೇಯದ್ದೋ?- ಶುರುವಾಗಿದೆ ಹೀಗೊಂದು ಗೊಂದಲ..!

| Updated By: Skanda

Updated on: Aug 13, 2021 | 7:20 AM

Independence Day 2021: ಸ್ವಾತಂತ್ರ್ಯ ಬಂದ ಮೇಲೆ ಖುಷಿಯೇನೋ ಇತ್ತು. ಅದರೊಂದಿಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಅಹಿಂಸಾ ಮಾರ್ಗ ಹಿಡಿದಿದ್ದ ನಾಯಕರೋ..ಕ್ರಾಂತಿಕಾರಿಗಳೋ? ಎಂಬಿತ್ಯಾದ ತರ್ಕ, ಪ್ರಶ್ನೆಗಳೂ ಎದ್ದವು. ವಾದವಿವಾದಗಳೂ ನಡೆದವು.

ಈ ಬಾರಿಯದ್ದು 74ನೇ ಸ್ವಾತಂತ್ರ್ಯೋತ್ಸವವೋ? 75ನೇಯದ್ದೋ?- ಶುರುವಾಗಿದೆ ಹೀಗೊಂದು ಗೊಂದಲ..!
ರಾಷ್ಟ್ರಧ್ವಜ
Follow us on

ಸುಮಾರು 2 ಶತಮಾನಗಳಷ್ಟು ಕಾಲ ನಮ್ಮ ದೇಶವನ್ನಾಳಿದ ಬ್ರಿಟಿಷರ ಆಡಳಿತ ಕೊನೆಯಾದ ದಿನವನ್ನು ಪ್ರತಿವರ್ಷ ಸ್ವಾತಂತ್ರ್ಯ ದಿನ (Independence Day ) ವನ್ನಾಗಿ ಆಚರಿಸಲಾಗುತ್ತದೆ. ನಮ್ಮ ದೇಶ ಸ್ವಾತಂತ್ರ್ಯ ಪಡೆದದ್ದು 1947ರ ಆಗಸ್ಟ್​ 14ರ ಮಧ್ಯರಾತ್ರಿ. ಅದರ ನೆನಪಿಗಾಗಿ ಪ್ರತಿವರ್ಷವೂ ಆಗಸ್ಟ್​ 15ರಂದು ಸ್ವಾತಂತ್ರ್ಯ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ದೇಶವನ್ನು ಬ್ರಿಟಿಷ (British)ರ ಕಪಿಮುಷ್ಟಿಯಿಂದ ಬಿಡಿಸಲು ಲಕ್ಷಾಂತರ ಹೋರಾಟಗಾರರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಅಂಥ ಸ್ವಾತಂತ್ರ್ಯ ಹೋರಾಟಗಾರ (Freedom Fighters of India)ರನ್ನು ನೆನಪಿಸಿಕೊಳ್ಳುವ ದಿನ ಇದು. ಒಟ್ಟಾರೆ ಭಾರತೀಯ ಪಾಲಿಗೆ ಇದು ಹೆಮ್ಮೆ ಪಡುವ ದಿನ.

ಸ್ವಾತಂತ್ರ್ಯ ದಿನದ ಮಹತ್ವ
ಭಾರತದ ಸ್ವಾತಂತ್ರ್ಯ ದಿನವನ್ನು ಅಷ್ಟೊಂದು ಸಂಭ್ರಮದಿಂದ ಆಚರಿಸುವುದರ ಹಿಂದೆ ಒಂದು ಕಹಿ ಹೋರಾಟದ ಹಾದಿಯಿದೆ. ಅನೇಕಾನೇಕ ವೀರರು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಕಠಿಣ ಹೋರಾಟದ ಹಾದಿ ಹಿಡಿದಿದ್ದರು. ಬ್ರಿಟಿಷರಿಂದ ಚಿತ್ರಹಿಂಸೆ ಅನುಭವಿಸಿದ್ದಾರೆ. ಅದೆಷ್ಟೋ ಜನ ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ.

1757ರಲ್ಲಿ ನಡೆದ ಪ್ಲಾಸಿ ಕದನದ ಬಳಿಕ ಭಾರತ ಬ್ರಿಟಿಷರ ಮುಷ್ಟಿ ಸೇರಿತ್ತು. ಈ ಕದನ ಬಂಗಾಳದ ನವಾಬ ಮತ್ತು ಬ್ರಿಟಿಷ ನಡುವೆ ನಡೆದು, ಅದರಲ್ಲಿ ಬ್ರಿಟಿಷರು ಗೆದ್ದಿದ್ದರು. ನಂತರ ಈಸ್ಟ್ ಇಂಡಿಯಾ ಕಂಪನಿ ನಮ್ಮ ರಾಷ್ಟ್ರವನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಆಡಳಿತ ಶುರು ಮಾಡಿತ್ತು. ಸರಿಸುಮಾರು ಎರಡು ಶತಮಾನಗಳ ಕಾಲ ಭಾರತೀಯರನ್ನು ಗುಲಾಮರಂತೆ ಪರಿಗಣಿಸಿತು. ಕಾನೂನಿನ ಹೆಸರಲ್ಲಿ ಲೂಟಿ ಮಾಡಿತು.

ಭಾರತೀಯರ ಕಿಚ್ಚು ಸಾಮಾನ್ಯದ್ದಲ್ಲ. ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲೇಬೇಕು ಎಂಬ ಮಹತ್ವಾಕಾಂಕ್ಷೆ, ಛಲದೊಂದಿಗೆ ಸ್ವಾತಂತ್ರ್ಯ ಹೋರಾಟವನ್ನು …ರಲ್ಲಿ ಶುರು ಮಾಡಲಾಯಿತು. ಗಾಂಧೀಜಿ ಮತ್ತು ಅವರ ಅನುಯಾಯಿಗಳದ್ದು ಅಹಿಂಸಾ ಮಾರ್ಗವಾಗಿದ್ದರೆ, ಭಗತ್​ ಸಿಂಗ್​ರಂತ ಯುವಕರದ್ದು ಕ್ರಾಂತಿಕಾರಿ ಮನೋಭಾವ ಆಗಿತ್ತು. ಎಲ್ಲರ ಉದ್ದೇಶವೂ ಒಂದೇ ಆಗಿದ್ದರೂ..ಹಲವು ಮಾರ್ಗಗಳ ಮೂಲಕ ಹೋರಾಟ ಮಾಡಿದ್ದರು. ಭಾರತ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟವನ್ನು ಜಗತ್ತಿನ ಹಲವು ರಾಷ್ಟ್ರಗಳು ಶ್ಲಾಘಿಸಿವೆ.

ಹೀಗೆ ನಮ್ಮ ದೇಶಕ್ಕಾಗಿ ದುಡಿದ, ಹೋರಾಡಿದ, ಮಡಿದ ವೀರರಿಗೆ ಗೌರವ ಸಲ್ಲಿಸುವ ಜತೆ, ಅವರು ತಂದುಕೊಟ್ಟ ಸ್ವಾತಂತ್ರ್ಯವನ್ನು ಸಂಭ್ರಮಿಸುವ ಸಲುವಾಗಿಯೇ ಪ್ರತಿವರ್ಷವೂ ದೇಶದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲ್ಪಡುತ್ತದೆ. ಬೇರೆ ದೇಶಗಳಲ್ಲಿ ಇರುವ, ಭಾರತೀಯರೂ ಕೂಡ ಈ ದಿನವನ್ನು ಸಂಭ್ರಮಿಸುತ್ತಾರೆ. ಸರ್ಕಾರಿ ಶಾಲೆ, ಕಚೇರಿಗಳಷ್ಟೇ ಅಲ್ಲ.. ಈಗೀಗ ಖಾಸಗಿ ಸಂಘ-ಸಂಸ್ಥೆಗಳಲ್ಲೂ ತ್ರಿವರ್ಣ ಧ್ವಜಾರೋಹಣ ಮಾಡಲಾಗುತ್ತದೆ. ಒಟ್ಟಾರೆ ಸ್ವಾತಂತ್ರ್ಯೋತ್ಸವ ಎಂಬುದು ಸಂಪೂರ್ಣವಾಗಿ ಸಂಭ್ರಮಿಸುವ ಹಬ್ಬವಾಗಿದೆ. ಮಹಾತ್ಮ ಗಾಂಧಿ, ಜಾನ್ಸಿ ರಾಣಿ ಲಕ್ಷ್ಮೀ ಭಾಯಿ, ಭಗತ್​ ಸಿಂಗ್, ಮಂಗಲ್ ಪಾಂಡೆ, ಚಂದ್ರ ಶೇಖರ್ ಆಜಾದ್, ಸುಭಾಶ್​ ಚಂದ್ರ ಬೋಸ್​ ಸೇರಿ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ಹೆಸರು ಈಗಲೂ ಅಜರಾಮರವಾಗಿದೆ. ಇನ್ನು ಲೇಖನಿಯನ್ನೇ ಸ್ವಾತಂತ್ರ್ಯ ಹೋರಾಟದ ಅಸ್ತ್ರವನ್ನಾಗಿಸಿಕೊಂಡಿದ್ದ ಸರೋಜಿನಿ ನಾಯ್ಡು, ಬಿ.ಆರ್​.ಅಂಬೇಡ್ಕರ್​, ರವೀಂದ್ರನಾಥ್​ ಟಾಗೋರ್​, ಜ್ಯೋತಿಬಾಯ್​ ಫುಲೆ ಇನ್ನೂ ಅನೇಕರು ಜನಮಾನಸದಲ್ಲಿ ಉಳಿದಿದ್ದಾರೆ.

ಎಲ್ಲರ ಶ್ರಮವೂ ಬಹುಮುಖ್ಯ
ಸ್ವಾತಂತ್ರ್ಯ ಬಂದ ಮೇಲೆ ಖುಷಿಯೇನೋ ಇತ್ತು. ಅದರೊಂದಿಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಅಹಿಂಸಾ ಮಾರ್ಗ ಹಿಡಿದಿದ್ದ ನಾಯಕರೋ..ಕ್ರಾಂತಿಕಾರಿಗಳೋ? ಎಂಬಿತ್ಯಾದ ತರ್ಕ, ಪ್ರಶ್ನೆಗಳೂ ಎದ್ದವು. ವಾದವಿವಾದಗಳೂ ನಡೆದವು. ಆದರೆ ಬ್ರಿಟಿಷರ ಆಡಳಿತದಿಂದ ಭಾರತವನ್ನು ಮುಕ್ತಗೊಳಿಸುವಲ್ಲಿ ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರರೂ ಶ್ರಮ ಪಟ್ಟಿದ್ದಾರೆ. ಲಕ್ಷಾಂತರ ಜನರು ಹೋರಾಟದಲ್ಲಿ ಪಾಲ್ಗೊಂಡು ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ರಾಷ್ಟ್ರಧ್ವಜದ ಮಹತ್ವ
ಪ್ರತಿವರ್ಷವೂ ಸ್ವಾತಂತ್ರ್ಯ ದಿನದಂದು ಭಾರತ ಪ್ರಧಾನಮಂತ್ರಿಯಾದವರು ದೆಹಲಿಯ ಕೆಂಪುಕೋಟೆ ಮೇಲೆ ನಮ್ಮ ರಾಷ್ಟ್ರದ ತ್ರಿವರ್ಣ ಧ್ವಜವನ್ನು ಹಾರಿಸುತ್ತಾರೆ..ಮತ್ತು ದೇಶವನ್ನು ಉದ್ದೇಶಿಸಿ ಮಾತನಾಡುತ್ತಾರೆ. ಸೇನೆಗಳ ಪರೇಡ್ ನಡೆಯುತ್ತದೆ. ರಾಷ್ಟ್ರಪತಿ ಕೂಡ ಸ್ವಾತಂತ್ರ್ಯದಿನದ ಭಾಷಣ ಮಾಡುತ್ತಾರೆ. ಹಾಗೇ ಪ್ರತಿವರ್ಷವೂ ಸಹ, ಗೌರವಾರ್ಥವಾಗಿ 21 ಗುಂಡುಗಳು ಹಾರಿಸಲ್ಪಡುತ್ತವೆ. ಆಕಾಶದೆತ್ತರಕ್ಕೆ ಧ್ವಜ ಸ್ವಚ್ಛಂದವಾಗಿ ಹಾರಾಡುತ್ತದೆ. ಅದರ್ಥ ನಾವೂ ಸಹ ಅಂದರೆ ನಮ್ಮ ದೇಶ ಸ್ವತಂತ್ರವಾಗಿದೆ ಎಂದು.

ಭಾರತದ ಧ್ವಜಕ್ಕಿದೆ ವಿಶೇಷತೆ
ನಮ್ಮ ರಾಷ್ಟ್ರಧ್ವಜದಲ್ಲಿ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಿದ್ದು, ಪ್ರತಿ ಬಣ್ಣವೂ ಅದರದ್ದೇ ಆದ ಮಹತ್ವ ಹೊಂದಿದೆ. ಹಾಗೇ, ಅಶೋಕ ಚಕ್ರವನ್ನೂ ಒಳಗೊಂಡಿದೆ. ಅಂದಹಾಗೆ ಸ್ವಾತಂತ್ರ್ಯ ಬರುವುದಕ್ಕೂ ಮೊದಲೇ ನಮ್ಮ ದೇಶ ಈ ತ್ರಿವರ್ಣಧ್ವಜವನ್ನು ಅಳವಡಿಸಿಕೊಂಡಿದೆ. 1947ರ ಆಗಸ್ಟ್​ 15 ಕ್ಕೂ 23 ದಿನ ಮೊದಲು, ನಡೆದ ಸಾಂವಿಧಾನಿಕ ಸಭೆಯಲ್ಲಿ ತ್ರಿವರ್ಣ ಧ್ವಜ ಅಂಗೀಕರಿಸಲಾಯಿತು. ಬ್ರಿಟಿಷರ ವಿರುದ್ಧ ದೇಶದ ಜನರನ್ನು ಒಗ್ಗೂಡಿಸಲು, ಅವರಲ್ಲಿ ದೇಶಪ್ರೇಮದ ಕಿಚ್ಚು ಮೂಡಿಸಲು ಈ ಧ್ವಜ ಅಂಗೀಕಾರವಾಯಿತು. ನಮ್ಮ ರಾಷ್ಟ್ರಧ್ವಜವನ್ನು ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಹಾರಿಸುವಂತಿಲ್ಲ. ಅದಕ್ಕೂ ನಿಯಮಗಳಿವೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವುದು ಕಾನೂನು ಪ್ರಕಾರ ಅಪರಾಧವೂ ಹೌದು. ಒಟ್ಟಾರೆ ಇದು ನಮ್ಮ ಸ್ವಾತಂತ್ರ್ಯದ ಸಂಕೇತವಾಗಿದೆ.

ಭಾರತ ಈ ಬಾರಿ ಎಷ್ಟನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದೆ?
ನಾಡಿದ್ದು ಅಗಸ್ಟ್​ 15ರಂದು ಆಚರಿಸಲ್ಪಡುವ ಸ್ವಾತಂತ್ರ್ಯೋತ್ಸವ 75ನೇ ವರ್ಷದ್ದೋ ಅಥವಾ 74ನೇ ವರ್ಷದ್ದೋ? ಹೀಗೊಂದು ಗೊಂದಲ ಈ ಬಾರಿ ಹೊಸದಾಗಿ ಶುರುವಾಗಿದೆ. ಅದಕ್ಕೆ ಕಾರಣವೂ ಇದೆ. 2021ರ ಮಾರ್ಚ್​ 12ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುಜರಾತ್​​ನಲ್ಲಿ ಆಜಾದಿ ಕಾ ಅಮೃತ್​ ಮಹೋತ್ಸವ್​ನ್ನು ಉದ್ಘಾಟಿಸಿದ್ದರು. ಇದು ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಸವಿನೆನಪಿಗಾಗಿ ಶುರುವಾದ ಕಾರ್ಯಕ್ರಮ. ಅಮೃತ ಮಹೋತ್ಸವದ ಸರಣಿ ಕಾರ್ಯಕ್ರಮಗಳು 2021ರ ಮಾರ್ಚ್​ 12ರಂದು ಶುರುವಾಗಿದ್ದು, 2023ರ ಆಗಸ್ಟ್​ 15ಕ್ಕೆ ಇದು ಮುಕ್ತಾಯವಾಗುತ್ತದೆ. ಈ ಬಗ್ಗೆ ಕೇಂದ್ರ ಸಂಸ್ಕೃತಿ ಇಲಾಖೆಯೂ ವಿಡಿಯೋ ಬಿಡುಗಡೆ ಮಾಡಿತ್ತು. ಕೇಂದ್ರ ಸಂಸ್ಕೃತಿ ಇಲಾಖೆ ವಿಡಿಯೋದಲ್ಲಿ ಹೇಳಿರುವಂತೆ ಅಮೃತ ಮಹೋತ್ಸವದ ಸರಣಿ 2023ಕ್ಕೆ ಮುಗಿಯುತ್ತದೆ ಅಂದರೆ 2022ಕ್ಕೆ 75ವರ್ಷವಾಗುತ್ತದೆ ಎಂದರ್ಥ. ಹಾಗೇ, ಇಂಡಿಪೆಂಡೆನ್ಸ್ ಡೇ ಯ ಅಧಿಕೃತ ವೆಬ್​ಸೈಟ್​​ನಲ್ಲಿ 2020ರ ಆಗಸ್ಟ್​ 15, ಭಾರತದ 74ನೇ ಸ್ವಾತಂತ್ರ್ಯ ದಿನಾಚರಣೆ ಎಂದು ಉಲ್ಲೇಖಿಸಲಾಗಿದೆ. ಅಂದರೆ ಈ ಬಾರಿ 74 ನೇಯದ್ದೋ ಅಥವಾ 75ನೇ ವಾರ್ಷಿಕೋತ್ಸವವಾ ಎಂಬ ಪ್ರಶ್ನೆ ಅನೇಕರನ್ನು ಕಾಡಿದೆ. ಈ ಬಗ್ಗೆ ಗಮನಸೆಳೆಯುವ ಲೇಖನಗಳೂ ಪ್ರಕಟವಾಗಿವೆ.

ಇದು 75ನೇ ಸ್ವಾತಂತ್ರ್ಯೋತ್ಸವ
1947ರಲ್ಲಿ ಬ್ರಿಟಿಷ್​ ವಸಾಹತುವಿನಿಂದ ಭಾರತ ತನ್ನನ್ನು ತಾನು ಬಿಡಿಸಿಕೊಂಡಿದೆ. ಆ ವರ್ಷವನ್ನು ಮೂಲವನ್ನಾಗಿ ಇಟ್ಟುಕೊಂಡರೆ 2021ರ ಆಗಸ್ಟ್​ 15ಕ್ಕೆ 74ವರ್ಷಗಳು ಕಳೆದು 75ನೇ ವರ್ಷ ಪ್ರಾರಂಭವಾಗುತ್ತದೆ. ಈ ಪ್ರಾರಂಭವಾಗುವ ವರ್ಷವನ್ನು ನಾವು ಪರಿಗಣಿಸಬೇಕು. ಅಲ್ಲಿಗೆ 2022ರ ಆಗಸ್ಟ್​ 15ಕ್ಕೆ ಸರಿಯಾಗಿ 75ನೇ ವರ್ಷ ತುಂಬುತ್ತದೆ. 75ವರ್ಷ ಕಳೆದು ಒಂದು ವರ್ಷ ಕೂಡ ಈ ಆಜಾದಿ ಕಾ ಅಮೃತ ಮಹೋತ್ಸವ್​​ದ ಸರಣಿ ಕಾರ್ಯಕ್ರಮಗಳು ಮುಂದುವರಿಯಲಿದೆ ಎಂದು ಅದರ ವೆಬ್​ಸೈಟ್​ನಲ್ಲಿ ಉಲ್ಲೇಖವಾಗಿದೆ. ಅಲ್ಲಿಗೆ ಕಾರ್ಯಕ್ರಮಗಳು 2023ರವರೆಗೂ ನಡೆಯಲಿವೆ. ಅಂದರೆ ಈ ಬಾರಿ ದೇಶ 75ನೇ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿದೆ.

ಇದನ್ನೂ ಓದಿ: ಭಾರತದ ಒಲಿಂಪಿಕ್ಸ್ ಸಾಧನೆಯ ಜ್ವರದಲ್ಲಿ ರಾಮನಗರ ಜಿಲ್ಲೆಯಲ್ಲಿ ತಲೆ ಎತ್ತುತ್ತಿವೆ 118 ಸುಸಜ್ಜಿತ ಕ್ರೀಡಾಂಗಣ

ಯುಪಿಎ ಪ್ರತಿ 4 ನಿಮಿಷಕ್ಕೆ 1 ಮಸೂದೆಯನ್ನು ಅಂಗೀಕರಿಸಿತ್ತು; ‘ಚರ್ಚೆ ಮಾಡಿಲ್ಲ’  ಎಂಬ ವಿಪಕ್ಷಗಳ ಆರೋಪಕ್ಕೆ ಸರ್ಕಾರ ತಿರುಗೇಟು