ರಾಷ್ಟ್ರಪತಿಗೆ ಮಾಡಿದ ಅವಮಾನ; ರಾಮ ಮಂದಿರ ಶುದ್ಧೀಕರಣ ಹೇಳಿಕೆಗೆ ಪ್ರಧಾನಿ ಮೋದಿ ಅಸಮಾಧಾನ

|

Updated on: May 11, 2024 | 10:35 PM

ಇಂಡಿಯಾ ಬಣ ಅಧಿಕಾರಕ್ಕೆ ಬಂದ ನಂತರ ರಾಮ ಮಂದಿರದ ಶುದ್ಧೀಕರಣ ಮಾಡಲಾಗುವುದು ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಹೇಳಿದ್ದರು. ಈ ಹೇಳಿಕೆ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರತಿಕ್ರಿಯಿಸಿದ್ದಾರೆ.

ರಾಷ್ಟ್ರಪತಿಗೆ ಮಾಡಿದ ಅವಮಾನ; ರಾಮ ಮಂದಿರ ಶುದ್ಧೀಕರಣ ಹೇಳಿಕೆಗೆ ಪ್ರಧಾನಿ ಮೋದಿ ಅಸಮಾಧಾನ
ಪ್ರಧಾನಿ ಮೋದಿ
Follow us on

ನವದೆಹಲಿ: ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ (Nana Patole) ರಾಮ ಮಂದಿರದ ಕುರಿತು ನೀಡಿರುವ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಟೀಕಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ರಾಮ ಮಂದಿರಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಮ ಮಂದಿರದ (Ram Temple) ಶುದ್ಧೀಕರಣದ ಹೇಳಿಕೆ ನೀಡುವ ಮೂಲಕ ನಮ್ಮ ದೇಶದ ರಾಷ್ಟ್ರಪತಿಗೆ ಅವಮಾನ ಮಾಡಿದ್ದಾರೆ. ಅಂತಹ ನಾಯಕರಿಗೆ ರಾಜಕೀಯದಲ್ಲಿರಲು ಹಕ್ಕಿದೆಯೇ? ಎಂದು ಜನರನ್ನು ಮೋದಿ ಪ್ರಶ್ನಿಸಿದ್ದಾರೆ.

ಇಂಡಿಯಾ ಬಣ ಅಧಿಕಾರಕ್ಕೆ ಬಂದ ನಂತರ ರಾಮಮಂದಿರದ ಶುದ್ಧೀಕರಣ ನಡೆಯಲಿದೆ ಎಂದು ನಾನಾ ಪಟೋಲೆ ಹೇಳಿದ್ದರು. ರಾಮ ಮಂದಿರದ ಉದ್ಘಾಟನೆಯ ಸಮಯದಲ್ಲಿ ನಾಲ್ವರು ಶಂಕರಾಚಾರ್ಯ ಮಠದವರು ಸರಿಯಾದ ಆಚರಣೆಗಳನ್ನು ಅನುಸರಿಸಲಿಲ್ಲ. ನಾವು ಶಂಕರಾಚಾರ್ಯರು ಹೇಳಿದಂತೆಯೇ ರಾಮ ಮಂದಿರವನ್ನು ಶುದ್ಧೀಕರಣ ಮಾಡುತ್ತೇವೆ ಎಂದು ಪಟೋಲೆ ಹೇಳಿದ್ದರು.

ಇದನ್ನೂ ಓದಿ: ನರೇಂದ್ರ ಮೋದಿ 3ನೇ ಬಾರಿಯೂ ಪ್ರಧಾನಿಯಾಗುವುದರಲ್ಲಿ ಅನುಮಾನವೇ ಇಲ್ಲ; ರಾಜನಾಥ್ ಸಿಂಗ್

ಈ ಕುರಿತು ಒಡಿಶಾದ ಬರ್ಗರ್‌ನಲ್ಲಿ ಶನಿವಾರ ನಡೆದ ರ್ಯಾಲಿಯಲ್ಲಿ ಪ್ರಸ್ತಾಪಿಸಿದ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ರಾಮ ಮಂದಿರಕ್ಕೆ ಭೇಟಿ ನೀಡಿದ ನಂತರ ನಾನಾ ಪಟೋಲೆ ಈ ರೀತಿಯ ಹೇಳಿಕೆಯನ್ನು ನೀಡಿರುವುದು ಸರಿಯಲ್ಲ. ನಮ್ಮ ರಾಷ್ಟ್ರಪತಿ ದ್ರೌಪದಿ ಮುರ್ಮು ಕೆಲವು ದಿನಗಳ ಹಿಂದೆ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು ಮತ್ತು ದೇಶದ ಕಲ್ಯಾಣಕ್ಕಾಗಿ ರಾಮಲಲ್ಲಾ ಅವರ ಆಶೀರ್ವಾದವನ್ನು ಕೋರಿದ್ದರು. ಅವರ ಭೇಟಿಯ ಒಂದು ದಿನದ ಬಳಿಕ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಗಂಗಾಜಲದಿಂದ ರಾಮಮಂದಿರದ ಶುದ್ಧೀಕರಣವನ್ನು ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಅಂತಹವರಿಗೆ ಭಾರತದ ರಾಜಕೀಯದಲ್ಲಿ ಇರಲು ಹಕ್ಕಿದೆಯೇ? ಎಂದು ಮೋದಿ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅವಮಾನಿಸಿದ ಕಾಂಗ್ರೆಸ್ ಪಕ್ಷವು ಎಲ್ಲಾ ಸ್ಥಾನಗಳಲ್ಲಿ ಠೇವಣಿ ಕಳೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಇದು ದೇಶ, ಬುಡಕಟ್ಟು ಸಮಾಜ, ತಾಯಂದಿರು ಮತ್ತು ಸಹೋದರಿಯರಿಗೆ ಮಾಡಿದ ಅವಮಾನವಾಗಿದೆ ಎಂದು ಬಾರ್‌ಗಢ್‌ನಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ಒಪ್ಪಿದರೆ ನಾನು ಸಿದ್ಧ; ಚುನಾವಣೆ ಕುರಿತ ಚರ್ಚೆಗೆ ತಯಾರೆಂದ ರಾಹುಲ್ ಗಾಂಧಿ

ಕಾಂಗ್ರೆಸ್ ಸಂವಿಧಾನವನ್ನು ಬದಲಾಯಿಸಲು ಮತ್ತು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ಮೀಸಲಾತಿ ಹಕ್ಕುಗಳನ್ನು ತೆಗೆದುಕೊಂಡು ಅವರ ವೋಟ್ ಬ್ಯಾಂಕ್​ಗೆ ನೀಡಲು ಬಯಸುತ್ತದೆ. ಆದರೆ ಭಾರತೀಯ ಸಂವಿಧಾನದ ರಕ್ಷಕರಾದ ರಾಷ್ಟ್ರಪತಿ ಓರ್ವ ಆದಿವಾಸಿ ಮಹಿಳೆ ಹಾಗೂ ನಿಮ್ಮ ಪ್ರಧಾನಿ ಒಬಿಸಿಯವರಾಗಿದ್ದು, ನಿಮ್ಮ ಹಕ್ಕುಗಳನ್ನು ಯಾರೂ ಕಸಿದುಕೊಳ್ಳುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ! ಎಂದು ಮೋದಿ ಆಶ್ವಾಸನೆ ನೀಡಿದ್ದಾರೆ.

ಬಿಜೆಪಿ ಒಡಿಶಾದ ಬುಡಕಟ್ಟು ಸಮುದಾಯದ ಮಗಳನ್ನು ಭಾರತದ ರಾಷ್ಟ್ರಪತಿಯನ್ನಾಗಿ ಮಾಡಿದೆ. ಆದರೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಪದೇ ಪದೇ ಅವರನ್ನು ಅಗೌರವಗೊಳಿಸುತ್ತಿವೆ ಎಂದು ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:34 pm, Sat, 11 May 24