
ಜೈಪುರ, ಆಗಸ್ಟ್ 24: ಇತ್ತೀಚೆಗಷ್ಟೇ ಹುಟ್ಟಿಕೊಂಡಿರುವ ಕಾಕ್ರೋಚ್ ಜನತಾ ಪಾರ್ಟಿ(Cockroach Janata Party)ಯು, ಸರ್ಕಾರಿ ಶಾಲೆಗಳಿಗೆ ತೆರಳಿ ಮೂಲಸೌಕರ್ಯಗಳು, ಶಿಕ್ಷಕರ ಕೊರತೆ, ಶಿಕ್ಷಕರ ವರ್ತನೆ ಕುರಿತು ತಪಾಸಣೆ ನಡೆಸುತ್ತಿದೆ. ಹಾಗೆಯೇ ಜೈಪುರದ ಗ್ರಾಮೀಣ ಪ್ರದೇಶದ ರಾಂಪುರ ಕನ್ವರ್ಪುರ ಗ್ರಾಮದಲ್ಲಿ ಸರ್ಕಾರಿ ಶಾಲೆಯೊಂದರ ವಾಸ್ತವಿಕ ಸ್ಥಿತಿ ಪರಿಶೀಲಿಸಲು ತೆರಳಿದ್ದ ರಾಜಕೀಯ ನಾಯಕರು ಹಾಗೂ ಗ್ರಾಮಸ್ಥರ ನಡುವೆ ನಡೆದ ವಾಗ್ವಾದವು ಈಗ ಉದ್ವಿಗ್ನ ಸ್ವರೂಪ ಪಡೆದುಕೊಂಡಿದೆ.
ಶಾಲಾ ತಪಾಸಣೆಯ ವೇಳೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಎರಡೂ ಕಡೆಯಿಂದಲೂ ಪರಸ್ಪರ ‘ಕ್ರಾಸ್ ಎಫ್ಐಆರ್’ ದಾಖಲಾಗಿದ್ದು, ಪ್ರಕರಣ ತೀವ್ರ ಕುತೂಹಲ ಮೂಡಿಸಿದೆ. ಶಾಲೆಗಳನ್ನು ಸರಿಪಡಿಸಿ ಅಭಿಯಾನದ ಭಾಗವಾಗಿ ಸಿಜೆಪಿ (CJP) ಪಕ್ಷದ ನಾಯಕರು ರಾಂಪುರ ಕನ್ವರ್ಪುರ ಗ್ರಾಮದಲ್ಲಿ ಎಮ್ಮೆಗಳ ಕೊಟ್ಟಿಗೆಯೊಂದರಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಸರ್ಕಾರಿ ಶಾಲೆಯನ್ನು ಪರಿಶೀಲಿಸಲು ತೆರಳಿದ್ದರು.
ಶಾಲೆಯನ್ನು ತಲುಪುವ ಮುನ್ನವೇ ಸ್ಥಳೀಯರು ಅವರನ್ನು ತಡೆದಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಕಲ್ಲುತೂರಾಟ ಹಾಗೂ ಹಲ್ಲೆಯ ಹಂತಕ್ಕೆ ತಿರುಗಿದೆ ಎಂದು ಆರೋಪಿಸಲಾಗಿದೆ.
ಗ್ರಾಮದ ದಲಿತ ಯುವಕ ಭಗವಾನ್ ಸಹಾಯ್ ಧಂಕಾ ನೀಡಿದ ದೂರಿನ ಮೇರೆಗೆ, ಸಿಜೆಪಿ ವಕ್ತಾರ ಅಶುತೋಷ್ ರಂಕಾ ಹಾಗೂ 60ಕ್ಕೂ ಹೆಚ್ಚು ಜನರ ವಿರುದ್ಧ ಹಲ್ಲೆ, ಕೊಲೆ ಯತ್ನ ಹಾಗೂ ಜಾತಿ ನಿಂದನೆಗಾಗಿ ದೂರು ದಾಖಲಿಸಲಾಗಿದೆ.
ಮತ್ತೊಂದೆಡೆ, ಸಿಜೆಪಿ ನಾಯಕಿ ರೇಖಾ ಶರ್ಮಾ ದೂರು ನೀಡಿ, ತಮ್ಮ ತಂಡದ ಮೇಲೆ ಗ್ರಾಮಸ್ಥರು ಹಾಗೂ ಕೆಲ ರಾಜಕೀಯ ಪ್ರಭಾವಿಗಳು ಯೋಜಿತ ದಾಳಿ ನಡೆಸಿ ವಾಹನಗಳ ಗಾಜು ಒಡೆದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದು, ಪೊಲೀಸರು ಆ ದೂರಿನ ಮೇಲೆಯೂ ಎಫ್ಐಆರ್ ದಾಖಲಿಸಿದ್ದಾರೆ. ಕಾಯ್ದೆಯಡಿ ಶಿವದಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಓದಿ: ‘ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ’; ಕಾಕ್ರೋಚ್ ವಿವಾದಕ್ಕೆ ಸಿಜೆಐ ಸೂರ್ಯಕಾಂತ್ ಬೇಸರ
ಸಿಜೆಪಿ ಪಕ್ಷವು ತಮ್ಮ ಬಳಿ ಘಟನೆಯ ವಿಡಿಯೋ ದೃಶ್ಯಾವಳಿಗಳಿದ್ದು, ಗ್ರಾಮಸ್ಥರೇ ತಮ್ಮ ಮೇಲೆ ದಾಳಿ ನಡೆಸಿದ್ದಾರೆ ಎಂದು ವಾದಿಸುತ್ತಿದೆ. ಆದರೆ ಪೊಲೀಸರು ಎರಡೂ ಕಡೆಯ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ಚಕ್ಸು ವೃತ್ತದ ಎಸಿಪಿ ಭವಾನಿ ಸಿಂಗ್ ಅವರ ನೇತೃತ್ವದಲ್ಲಿ ತನಿಖೆ ಮುಂದುವರಿಸಿದ್ದಾರೆ.
ಜೋಧಪುರ ಮಹಾನಗರ ಪಾಲಿಕೆ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲೇ ಈ ಘಟನೆ ನಡೆದಿರುವುದು ರಾಜಸ್ಥಾನ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಶಾಲಾ ಮೂಲಸೌಕರ್ಯಗಳ ಕೊರತೆಯ ವಿಷಯವು ಹಿನ್ನೆಲೆಗೆ ಸರಿದು ಸಂಘರ್ಷ ಮುನ್ನೆಲೆಗೆ ಬಂದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ