‘ಜಮ್ಮು ಕಾಶ್ಮೀರ ಭಾರತದ ಮುಖ್ಯ ಭಾಗ’; ಐತಿಹಾಸಿಕ ಭೇಟಿ ವೇಳೆ ಅಮೆರಿಕ ರಾಯಭಾರಿ ಸೆರ್ಗಿಯೋ ಮಹತ್ವದ ಹೇಳಿಕೆ

ಜಮ್ಮು ಮತ್ತು ಕಾಶ್ಮೀರವು 'ಭಾರತದ ಪ್ರಮುಖ ಭಾಗ'ವಾಗಿದ್ದು, ಈ ಪ್ರದೇಶವು ಈಗ ಹೆಚ್ಚು ಸುರಕ್ಷಿತವಾಗಿದೆ ಎಂದು ಇಂದು (ಆಗಸ್ಟ್ 19) ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ ಮಹತ್ವದ ಹೇಳಿಕೆ ನೀಡಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ತಮ್ಮ ದೇಶದ ಪ್ರವಾಸಿ ಸಲಹೆಯನ್ನು (Travel Advisory) ಸಡಿಲಗೊಳಿಸುವ ಸುಳಿವು ನೀಡಿದ್ದಾರೆ. ಜಮ್ಮು-ಕಾಶ್ಮೀರ ಮತ್ತು ಲಡಾಖ್‌ಗೆ 2 ದಿನಗಳ ಭೇಟಿಗಾಗಿ ಇಂದು ಬೆಳಿಗ್ಗೆ ಶ್ರೀನಗರಕ್ಕೆ ಆಗಮಿಸಿದ ಸೆರ್ಗಿಯೋ ಗೋರ್, ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಭೇಟಿಯಾದ ನಂತರ ಈ ಹೇಳಿಕೆ ನೀಡಿದ್ದಾರೆ.

ಜಮ್ಮು ಕಾಶ್ಮೀರ ಭಾರತದ ಮುಖ್ಯ ಭಾಗ; ಐತಿಹಾಸಿಕ ಭೇಟಿ ವೇಳೆ ಅಮೆರಿಕ ರಾಯಭಾರಿ ಸೆರ್ಗಿಯೋ ಮಹತ್ವದ ಹೇಳಿಕೆ
Sergio With Omar Abdullah
Image Credit source: PTI

Updated on: Aug 19, 2026 | 5:42 PM

ಮುಖ್ಯಾಂಶಗಳು

  • ಜಮ್ಮು ಕಾಶ್ಮೀರಕ್ಕೆ ಅಮೆರಿಕದ ರಾಯಭಾರಿ ಭೇಟಿ
  • ಜಮ್ಮು ಕಾಶ್ಮೀರ ಭಾರತದ ಪ್ರಮುಖ ಭಾಗವೆಂದು ಹೇಳಿದ ಸೆರ್ಗಿಯೋ ಗೋರ್
  • ಕಾಶ್ಮೀರಕ್ಕೆ ಅಮೆರಿಕದ ಪ್ರವಾಸಿ ಸಲಹೆ ಸಡಿಲಗೊಳಿಸುವ ಬಗ್ಗೆಯೂ ಸುಳಿವು

ಶ್ರೀನಗರ, ಆಗಸ್ಟ್ 19: ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ ಇಂದು (ಬುಧವಾರ) ಜಮ್ಮು ಮತ್ತು ಕಾಶ್ಮೀರವನ್ನು (Jammu and Kashmir) ‘ಭಾರತದ ಪ್ರಮುಖ ಭಾಗ’ ಎಂದು ಬಣ್ಣಿಸಿದ್ದು, ಅಮೆರಿಕನ್ ಪ್ರವಾಸಿಗರಿಗಾಗಿ ಜಮ್ಮು-ಕಾಶ್ಮೀರಕ್ಕೆ ವಿಧಿಸಲಾಗಿರುವ ಪ್ರವಾಸಿ ಸಲಹೆಯನ್ನು (Travel Advisory) ಅಮೆರಿಕ ಸರ್ಕಾರವು ಮರುಪರಿಶೀಲಿಸಿ, ಅದನ್ನು ಸಡಿಲಗೊಳಿಸಬಹುದು ಎಂಬ ಸುಳಿವು ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರವನ್ನು ‘ಅತ್ಯಂತ ಸುಂದರ ಪ್ರದೇಶ’ ಎಂದು ಬಣ್ಣಿಸಿದ ಸೆರ್ಗಿಯೋ ಗೋರ್, ಅನೇಕ ಅಮೆರಿಕನ್ನರು ಈ ಪ್ರದೇಶಕ್ಕೆ ಭೇಟಿ ನೀಡಿ ಇಲ್ಲಿನ ಸೌಂದರ್ಯ ಮತ್ತು ಅವಕಾಶಗಳನ್ನು ಅನುಭವಿಸಲು ಇಷ್ಟಪಡುತ್ತಾರೆ ಎಂಬುದು ನನಗೂ ತಿಳಿದಿದೆ ಎಂದು ಹೇಳಿದ್ದಾರೆ.

ಇದೇ ವೇಳೆ, ತಾವು ಜಮ್ಮು ಮತ್ತು ಕಾಶ್ಮೀರಕ್ಕೆ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದು, ಇದನ್ನು ‘ಭಾರತದ ಪ್ರಮುಖ ಭಾಗ’ ಎಂದು ಸೆರ್ಗಿಯೋ ಗೋರ್ ಬಣ್ಣಿಸಿದ್ದಾರೆ. “ಇಲ್ಲಿಗೆ ಬಂದಿರುವುದು ಸಂತಸ ತಂದಿದೆ. ಜಮ್ಮು ಕಾಶ್ಮೀರ ಭಾರತದ ಪ್ರಮುಖ ಭಾಗವಾಗಿದೆ. ನಾನು ಮೊದಲ ಬಾರಿಗೆ ಇಲ್ಲಿಗೆ ಭೇಟಿ ನೀಡುತ್ತಿದ್ದೇನೆ. ಇದೊಂದು ಅತ್ಯಂತ ಸುಂದರವಾದ ಸ್ಥಳ. ಈ ಸ್ಥಳವನ್ನು ವೀಕ್ಷಿಸಲು ನಾನು ರೋಮಾಂಚನಗೊಂಡಿದ್ದೇನೆ. ನಾವೀಗಷ್ಟೇ ಸಿಎಂ ಜೊತೆ ಸಭೆಯನ್ನು ನಡೆಸಿದ್ದೇವೆ. ಕೆಲವು ವಿಷಯಗಳ ಮುಂದುವರಿದ ಭಾಗವಾಗಿ, ನಾವು ಅವುಗಳನ್ನು ವಾಷಿಂಗ್ಟನ್ ಮತ್ತು ದೆಹಲಿಗೆ ಕೊಂಡೊಯ್ಯಲು ಆಶಿಸುತ್ತೇವೆ” ಎಂದು ಅಮೆರಿಕ ರಾಯಭಾರಿ ಹೇಳಿದ್ದಾರೆ.

ಇದನ್ನೂ ಓದಿ: ‘ಜಮ್ಮು ಕಾಶ್ಮೀರ, ಲಡಾಖ್​ ಭಾರತದ ಅವಿಭಾಜ್ಯ ಅಂಗ’; ಪಾಕಿಸ್ತಾನಕ್ಕೆ ವಿದೇಶಾಂಗ ಸಚಿವಾಲಯ ತಿರುಗೇಟು

ಅಮೆರಿಕವು ಕಾಲಕಾಲಕ್ಕೆ ತನ್ನ ಪ್ರವಾಸಿ ಸಲಹೆಗಳನ್ನು ಮರುಪರಿಶೀಲಿಸುತ್ತದೆ. ಜಮ್ಮು-ಕಾಶ್ಮೀರಕ್ಕೆ ಇರುವ ಪ್ರಸ್ತುತ ಪ್ರವಾಸಿ ಸಲಹೆಯನ್ನು ಹಿಂಪಡೆಯಬೇಕೇ ಅಥವಾ ಸಡಿಲಗೊಳಿಸಬೇಕೇ ಎಂಬುದರ ಬಗ್ಗೆ ಅಮೆರಿಕ ಸಮಾಲೋಚನೆ ನಡೆಸಲಿದೆ ಎಂದು ಅಮೆರಿಕದ ರಾಯಭಾರಿ ತಿಳಿಸಿದ್ದಾರೆ. “ಅಮೆರಿಕವು ಪ್ರವಾಸಿ ಎಚ್ಚರಿಕೆಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ಆಗಾಗ ಆ ಎಚ್ಚರಿಕೆಗಳನ್ನು ಮರುಮೌಲ್ಯಮಾಪನ ಮಾಡುತ್ತದೆ. ನಾನು ಇಂದು ಇಲ್ಲಿ ಯಾವುದೇ ದೊಡ್ಡ ಘೋಷಣೆ ಮಾಡಲಾರೆ. ಆದರೆ ಈ ಬಗ್ಗೆ ನಾವು ಖಂಡಿತವಾಗಿಯೂ ಪರಿಶೀಲಿಸುತ್ತೇವೆ” ಎಂದು ಸೆರ್ಗಿಯೋ ಗೋರ್ ಹೇಳಿದ್ದಾರೆ. ಹಾಗೇ, ಈ ಪ್ರದೇಶದಲ್ಲಿ ಭದ್ರತೆಯನ್ನು ಸುಧಾರಿಸಲು ಕೇಂದ್ರ ಸರ್ಕಾರ ಮತ್ತು ಜಮ್ಮು-ಕಾಶ್ಮೀರ ಸರ್ಕಾರಗಳು ಮಹತ್ವದ ಕ್ರಮಗಳನ್ನು ಕೈಗೊಂಡಿವೆ ಎಂದು ಅವರು ತಿಳಿಸಿದ್ದಾರೆ.


ಈ ಪ್ರದೇಶದಲ್ಲಿ ಭದ್ರತಾ ವಾತಾವರಣವನ್ನು ಸುಧಾರಿಸಲು ಮತ್ತು ಭದ್ರತೆಯನ್ನು ಬಲಪಡಿಸಲು ಕೇಂದ್ರ ಸರ್ಕಾರ ಹಾಗೂ ಜಮ್ಮು-ಕಾಶ್ಮೀರ ಸರ್ಕಾರಗಳು ಕೈಗೊಂಡಿರುವ ಕ್ರಮಗಳನ್ನು ಅಮೆರಿಕ ರಾಯಭಾರಿ ಮುಕ್ತಕಂಠದಿಂದ ಶ್ಲಾಘಿಸಿದರು. “ನವದೆಹಲಿಯ ಕೇಂದ್ರ ಸರ್ಕಾರ, ಇಲ್ಲಿನ ಮುಖ್ಯಮಂತ್ರಿ ಹಾಗೂ ಸ್ಥಳೀಯ ಸರ್ಕಾರವು ಈ ಪ್ರದೇಶವನ್ನು ಸುರಕ್ಷಿತವಾಗಿಡಲು ಮತ್ತು ಇನ್ನಷ್ಟು ಭದ್ರಗೊಳಿಸಲು ಮಹತ್ವದ ಕ್ರಮಗಳನ್ನು ಕೈಗೊಂಡಿವೆ. ಆದ್ದರಿಂದ, ಅಮೆರಿಕ ಸರ್ಕಾರವು ತನ್ನ ಪ್ರಜೆಗಳಿಗೆ ವಿಧಿಸಿರುವ ಹಾಗೂ ಶಿಫಾರಸು ಮಾಡಿರುವ ಪ್ರವಾಸಿ ಸಲಹೆಯನ್ನು ಸಡಿಲಗೊಳಿಸಬೇಕೇ ಎಂಬುದನ್ನು ನಾವು ಮರುಪರಿಶೀಲಿಸಲಿದ್ದೇವೆ” ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಇರಾನ್-ಅಮೆರಿಕ ನೀ ಕೊಡೆ ನಾ ಬಿಡೆ ಜಗ್ಗಾಟ; ಹಾರ್ಮುಜ್ ಜಲಸಂಧಿ ಅಮೆರಿಕದ ಭೂಭಾಗ ಎಂದು ಟ್ರಂಪ್ ಘೋಷಣೆ

ಜಮ್ಮು-ಕಾಶ್ಮೀರದ ಪ್ರಾಕೃತಿಕ ಸೌಂದರ್ಯ ಹಾಗೂ ಆರ್ಥಿಕ ಅವಕಾಶಗಳ ಬಗ್ಗೆ ಮಾತನಾಡಿದ ಗೋರ್, ಪ್ರವಾಸಿ ಸಲಹೆಯನ್ನು ಸಡಿಲಗೊಳಿಸಿದರೆ ಹೆಚ್ಚಿನ ಸಂಖ್ಯೆಯ ಅಮೆರಿಕನ್ನರು ಇಲ್ಲಿಗೆ ಆಗಮಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟರು. “ಇದೊಂದು ಸುಂದರ ಪ್ರದೇಶವಾಗಿದೆ. ಪ್ರವಾಸಿ ಸಲಹೆ ಸಡಿಲಗೊಂಡರೆ ಅನೇಕ ಅಮೆರಿಕನ್ನರು ಇಲ್ಲಿಗೆ ಆಗಮಿಸಿ, ಇಲ್ಲಿನ ಸೌಂದರ್ಯವನ್ನು ವೀಕ್ಷಿಸಲು ಮತ್ತು ಇಲ್ಲಿರುವ ಆರ್ಥಿಕ ಅವಕಾಶಗಳನ್ನು ಅನುಭವಿಸಲು ಇಷ್ಟಪಡುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದರು.


ಸಿಎಂ ಒಮರ್ ಅಬ್ದುಲ್ಲಾ ಹೇಳಿದ್ದೇನು?:

ಅಮೆರಿಕದ ರಾಯಭಾರಿಯೊಂದಿಗಿನ ಭೇಟಿಯ ಕುರಿತು ಮಾತನಾಡಿದ ಜಮ್ಮು ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ, ಭಾರತ-ಅಮೆರಿಕ ಸಂಬಂಧಗಳ ಜೊತೆಗೆ ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಅಮೆರಿಕ ಏನು ಮಾಡಬಹುದು ಎಂಬುದರ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದರು. “ಈ ಸಭೆಯು ಅತ್ಯುತ್ತಮವಾಗಿತ್ತು. ನಮ್ಮೆರಡು ದೇಶಗಳ ನಡುವಿನ ಬಾಂಧವ್ಯದ ಜೊತೆಗೆ ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಅಮೆರಿಕ ಏನು ಮಾಡಲು ಸಾಧ್ಯ ಎಂಬುದರ ಕುರಿತು ಚರ್ಚಿಸಲು ನಮಗೆ ಅವಕಾಶ ಸಿಕ್ಕಿತು” ಎಂದು ಸಿಎಂ ಹೇಳಿದ್ದಾರೆ.


ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಅಮೆರಿಕ ಪ್ರವಾಸಿ ಸಲಹೆ:

ಪ್ರಸ್ತುತ ಅಮೆರಿಕದ ಪ್ರವಾಸಿ ಸಲಹೆಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರವನ್ನು ಮಟ್ಟ-4 (Level 4: ಪ್ರಯಾಣಿಸಬೇಡಿ) ಶ್ರೇಣಿಯಲ್ಲಿ ವರ್ಗೀಕರಿಸಲಾಗಿದೆ. ಭಯೋತ್ಪಾದನೆ ಮತ್ತು ನಾಗರಿಕ ಅಶಾಂತಿಯ ಅಪಾಯಗಳನ್ನು ಉಲ್ಲೇಖಿಸಿ ಅಮೆರಿಕವು ತನ್ನ ಪ್ರಜೆಗಳಿಗೆ ಈ ಕೇಂದ್ರಾಡಳಿತ ಪ್ರದೇಶಕ್ಕೆ ಪ್ರಯಾಣಿಸದಂತೆ ಸೂಚನೆ ನೀಡಿದೆ. ಇದರ ಹೊರತಾಗಿ, ಭಾರತದ ಇತರ ಕೆಲವು ಪ್ರದೇಶಗಳಾದ ಭಾರತ-ಪಾಕಿಸ್ತಾನ ಗಡಿ ಭಾಗ, ಮಣಿಪುರ, ಹಾಗೂ ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಮೇಘಾಲಯ ಮತ್ತು ಒಡಿಶಾಗಳ ಕೆಲವು ಭಾಗಗಳನ್ನು ಸಹ ಸುರಕ್ಷತಾ ಕಾಳಜಿಯ ಆಧಾರದ ಮೇಲೆ ವಿವಿಧ ಮಟ್ಟದ ಎಚ್ಚರಿಕೆಯ ಶ್ರೇಣಿಯಲ್ಲಿ ಇರಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:00 pm, Wed, 19 August 26

Loading...
Unable to load recommendations.
Follow Us