
ನವದೆಹಲಿ, ಜುಲೈ 10: ಸುಪ್ರೀಂ ಕೋರ್ಟ್ನಲ್ಲಿ (Supreme Court) ಇಂದು ಅತ್ಯಂತ ಆಘಾತಕಾರಿಯಾದ ಹೈಡ್ರಾಮಾ ನಡೆದಿದೆ. ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರರೊಬ್ಬರು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ತನ್ನ ಕೈಯಲ್ಲಿದ್ದ ಕಾಗದಗಳನ್ನು ನ್ಯಾಯಪೀಠದತ್ತ ಗಾಳಿಯಲ್ಲಿ ತೂರಿದ್ದಾರೆ. ಇದರಿಂದ ಕೋರ್ಟ್ನಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಆತನನ್ನು ಕೋರ್ಟ್ ಹಾಲ್ನಿಂದ ಹೊರಗೆ ಕರೆದುಕೊಂಡು ಹೋಗಿದ್ದಾರೆ.
ನ್ಯಾಯಮೂರ್ತಿಗಳಾದ ಕೆ.ವಿ. ವಿಶ್ವನಾಥನ್ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠದ ಮುಂದೆ ಈ ಘಟನೆ ನಡೆದಿದೆ. ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಅರ್ಜಿದಾರ ಅತ್ಯಂತ ಆಕ್ರಮಣಕಾರಿ ಧಾಟಿಯಲ್ಲಿ ಮಾತನಾಡಲು ಶುರುಮಾಡಿದಾಗ ಕೋರ್ಟ್ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಈ ವೇಳೆ ನ್ಯಾಯಾಧೀಶರನ್ನು ಉದ್ದೇಶಿಸಿ ಮಾತನಾಡಿದ ಅರ್ಜಿದಾರ, “ಹಲೋ ಜುಡಿಷಿಯಲ್ ಸರ್ವೆಂಟ್ (ನ್ಯಾಯಾಂಗ ಸೇವಕನೇ)… ಲಕ್ನೋದ ಎಸಿಪಿ ವಿರುದ್ಧ ಎಫ್ಐಆರ್ ದಾಖಲಿಸಲು ನಾನು ನಿಮಗೆ ಆದೇಶಿಸುತ್ತೇನೆ” ಎಂದು ಹೇಳಿದರು.
ಇದನ್ನೂ ಓದಿ: ಕೋರ್ಟ್ ರಾಜಕೀಯ ವೇದಿಕೆಯಲ್ಲ; ಕರೂರ್ ಕಾಲ್ತುಳಿತ ಪ್ರಕರಣದಲ್ಲಿ ಡಿಎಂಕೆ ಅರ್ಜಿ ಸ್ವೀಕರಿಸಲು ಸುಪ್ರೀಂ ಕೋರ್ಟ್ ನಕಾರ
ಇದರಿಂದ ಆಶ್ಚರ್ಯಚಕಿತರಾದ ನ್ಯಾಯಮೂರ್ತಿ ವಿಶ್ವನಾಥನ್ , “ನೀವು ನನಗೆ ಆರ್ಡರ್ ಮಾಡುತ್ತಿದ್ದೀರಾ? ನೀವು ನ್ಯಾಯಾಲಯಕ್ಕೆ ಆದೇಶ ನೀಡುತ್ತಿದ್ದೀರಾ?” ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅರ್ಜಿದಾರ, “ನನ್ನ ಕಡೆಯಿಂದ ಇಷ್ಟೇ ಹೇಳುವುದು. ಎಲ್ಲವೂ ದಾಖಲೆಯಲ್ಲಿದೆ” ಎಂದರು. ಇಷ್ಟಕ್ಕೇ ಸುಮ್ಮನಾಗದ ಆತ ಇದ್ದಕ್ಕಿದ್ದಂತೆ ತನ್ನ ಕೈಯಲ್ಲಿದ್ದ ಪ್ರಕರಣದ ಎಲ್ಲಾ ಕಾಗದ ಪತ್ರಗಳನ್ನು ನ್ಯಾಯಪೀಠದತ್ತ ಗಾಳಿಯಲ್ಲಿ ತೂರಿದರು.
“Mr Judicial servant, I order you to register FIR against ACP Vikas Nagar, Lucknow”
Man later goes on to throw papers in the court.
Dramatic scene inside India’s Supreme court. pic.twitter.com/8mPB2GPikV
— Piyush Rai (@Benarasiyaa) July 10, 2026
‘ಲೈವ್ ಲಾ’ ವರದಿಯ ಪ್ರಕಾರ, ಆತ ಭಾರತದ ಮುಖ್ಯ ವಿರುದ್ಧವೂ ಅತ್ಯಂತ ಅವಾಚ್ಯ ಶಬ್ದಗಳನ್ನು ಬಳಸಿ ಕಿರುಚಾಡಿದ್ದಾರೆ. ಘಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಕೋರ್ಟ್ ಹಾಲ್ನಲ್ಲಿದ್ದ ಭದ್ರತಾ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ ಆ ಅರ್ಜಿದಾರನನ್ನು ಹಿಡಿದು ಕೋರ್ಟ್ನಿಂದ ಹೊರಹಾಕಿದರು. ಈ ಇಡೀ ಘಟನೆಯ ವೇಳೆ ಇಬ್ಬರೂ ನ್ಯಾಯಾಧೀಶರು ಅತ್ಯಂತ ತಾಳ್ಮೆಯಿಂದ ವರ್ತಿಸಿದರು. ಯಾವುದೇ ತೀಕ್ಷ್ಣ ಪ್ರತಿಕ್ರಿಯೆ ನೀಡದೆ ಶಾಂತಚಿತ್ತರಾಗಿದ್ದರು. ಅಲ್ಲದೆ, ಆತನ ವಿರುದ್ಧ ತಕ್ಷಣಕ್ಕೆ ಯಾವುದೇ ಕಠಿಣ ಕಾನೂನು ಕ್ರಮ ಕೈಗೊಳ್ಳಲಿಲ್ಲ.
ಇದನ್ನೂ ಓದಿ: ಮದ್ರಾಸ್ ಹೈಕೋರ್ಟ್ನ ಗೋಹತ್ಯೆ ನಿಷೇಧ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ
ಏನಿದು ಪ್ರಕರಣ?:
ಲಕ್ನೋದ ವಿಶೇಷ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ (ಕಸ್ಟಮ್ಸ್) ನೀಡಿದ್ದ ತೀರ್ಪಿನ ವಿರುದ್ಧ ಪ್ರಬಲ್ ಪ್ರತಾಪ್ ಅಲಹಾಬಾದ್ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಮ್ಯಾಜಿಸ್ಟ್ರೇಟ್ ಎಫ್ಐಆರ್ ದಾಖಲಿಸಲು ಆದೇಶಿಸುವ ಬದಲಿಗೆ, ಆತನ ಅರ್ಜಿಯನ್ನು ಖಾಸಗಿ ದೂರು ಎಂದು ಪರಿಗಣಿಸಲು ಸೂಚಿಸಿದ್ದರು. ಇದನ್ನು ಹೈಕೋರ್ಟ್ ಎತ್ತಿಹಿಡಿದಿತ್ತಲ್ಲದೆ, ಅರ್ಜಿದಾರನಿಗೆ ಸೂಕ್ತ ವೇದಿಕೆಯನ್ನು ಸಂಪರ್ಕಿಸಲು ಸ್ವಾತಂತ್ರ್ಯ ನೀಡಿ ಅರ್ಜಿಯನ್ನು ವಜಾಗೊಳಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ಆದೇಶ ಸರಿಯಾಗಿದೆ ಎಂದು ಆತನ ಅರ್ಜಿಯನ್ನು ಸಂಪೂರ್ಣವಾಗಿ ವಜಾಗೊಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:36 pm, Fri, 10 July 26