ತಮಿಳುನಾಡು ರಾಜಕೀಯದಲ್ಲಿ ರಜನಿ-ಕಮಲ್​ ಮೈತ್ರಿ? ಸೂಚನೆ ನೀಡಿದ ಸ್ಟಾರ್​ ನಟ

ರಜನಿಕಾಂತ್​ ಹಾಗೂ ಕಮಲ್​ ಹಾಸನ್​ ಸಿನಿಮಾ ಹಿನ್ನಲೆಯವರು. ಎಲ್ಲಕ್ಕಿಂತ ಹೆಚ್ಚಾಗಿ ಇಬ್ಬರ ನಡುವೆ ಉತ್ತಮ ಗೆಳೆತನವಿದೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಮೈತ್ರಿ ಬೆಳೆಯಲಿದೆ ಎನ್ನಲಾಗುತ್ತಿದೆ.

ತಮಿಳುನಾಡು ರಾಜಕೀಯದಲ್ಲಿ ರಜನಿ-ಕಮಲ್​ ಮೈತ್ರಿ? ಸೂಚನೆ ನೀಡಿದ ಸ್ಟಾರ್​ ನಟ
ರಜನಿಕಾಂತ್ ಮತ್ತು ಕಮಲ್ ಹಾಸನ್
Edited By:

Updated on: Dec 16, 2020 | 7:58 PM

ಚೆನ್ನೈ: ಮುಂದಿನ ವರ್ಷ ತಮಿಳುನಾಡಿನಲ್ಲಿ ನಡೆವ ವಿಧಾನಸಭಾ ಚುನಾವಣೆಗೆ ಅಖಾಡ ಸಿದ್ಧವಾಗಿದೆ. ನಟ ಕಮಲ್​ ಹಾಸನ್​ ಈಗಾಗಲೇ ಪಕ್ಷ ಘೋಷಣೆ ಮಾಡಿದ್ದು, ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ತಮಿಳುನಾಡಿನ ಸೂಪರ್​ಸ್ಟಾರ್​ ನಟ ರಜನಿಕಾಂತ್​ ಸಹ ಪಕ್ಷ ಘೋಷಣೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಮಧ್ಯೆ, ಕಮಲ್​ ಹಾಸನ್​ ಹಾಗೂ ರಜನಿ ನಡುವೆ ಮೈತ್ರಿ ಏರ್ಪಡುವ ಸೂಚನೆ ಸಿಕ್ಕಿದೆ.

ರಜನಿಕಾಂತ್ ರಾಜಕೀಯಕ್ಕೆ ಬರುವುದಾಗಿ ಈ ಮೊದಲಿನಿಂದಲೂ ಹೇಳುತ್ತಲೇ ಬರುತ್ತಿದ್ದಾರೆ. ಆದರೆ, ಇದೇ ಮೊದಲ ಬಾರಿ ರಜನಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದರು. ಡಿಸೆಂಬರ್​ 31ರಂದು ಹೊಸ ಪಕ್ಷದ ಹೆಸರನ್ನು ಸೂಪರ್​ಸ್ಟಾರ್​ ಬಹಿರಂಗಪಡಿಸಲಿದ್ದಾರೆ.

ರಜನಿಕಾಂತ್​ ಹಾಗೂ ಕಮಲ್​ ಹಾಸನ್​ ಸಿನಿಮಾ ಹಿನ್ನಲೆಯವರು. ಎಲ್ಲಕ್ಕಿಂತ ಹೆಚ್ಚಾಗಿ ಇಬ್ಬರ ನಡುವೆ ಉತ್ತಮ ಗೆಳೆತನವಿದೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಮೈತ್ರಿ ಬೆಳೆಯಲಿದೆ ಎನ್ನಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಮಕ್ಕಳ್​ ನೀದಿ ಮಯಮ್​ ಪಕ್ಷದ ಸ್ಥಾಪಕ ಕಮಲ್​ ಹಾಸನ್​ ಪ್ರತಿಕ್ರಿಯಿಸಿದ್ದಾರೆ.

ನಮ್ಮಿಬ್ಬರ ಸಿದ್ಧಾಂತಗಳಲ್ಲಿ ಹೋಲಿಕೆಯಿದ್ದರೆ ಮತ್ತು ಅದರಿಂದ ಜನರಿಗೆ ಪ್ರಯೋಜನವಾಗುತ್ತದೆ ಎಂದಾದರೆ ನಮ್ಮ ಅಹಂಕಾರವನ್ನು ಬದಿಗಿಟ್ಟು ಪರಸ್ಪರ ಸಹಕರಿಸಲು ನಾವು ಸಿದ್ಧರಿದ್ದೇವೆ ಎಂದು ಕಮಲ್​ ಹಾಸನ್​ ಹೇಳಿದ್ದಾರೆ. ಈ ಮೂಲಕ ಮೈತ್ರಿ ಸೂಚನೆ ನೀಡಿರುವ ಅವರು, ‘ಇಬ್ಬರ ಮೈತ್ರಿಗೆ ಒಂದು ದೂರವಾಣಿ ಕರೆ ಮಾಡುವುದು ಮಾತ್ರ ಬಾಕಿ ಉಳಿದಿದೆ’ ಎಂದಿದ್ದಾರೆ.

ಮೈತ್ರಿ ಆದರೆ ಯಾರಿಗೆ ಲಾಭ?
ಕಮಲ್​ ಹಾಸನ್​ ಈಗಾಗಲೇ ಪಕ್ಷ ಕಟ್ಟಿ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ರಜನಿಕಾಂತ್​ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ರಜನಿ ಪಕ್ಷ ಘೋಷಣೆ ಮಾಡುತ್ತಿದ್ದಾರೆ. ಪಕ್ಷ ಕಟ್ಟಲು, ಅಭ್ಯರ್ಥಿಗಳ ಆಯ್ಕೆ ಮಾಡಲು ಹಾಗೂ ಪ್ರಚಾರಕ್ಕೆ ರಜನಿಕಾಂತ್​ಗೆ ತುಂಬಾನೇ ಕಡಿಮೆ ಸಮಯಾವಕಾಶ ಸಿಗುತ್ತದೆ. ಹೀಗಾಗಿ, ಕಮಲ್​ ಹಾಸನ್​ ಜೊತೆ ಮೈತ್ರಿ ಮಾಡಿಕೊಂಡರೆ ರಜನಿಕಾಂತ್​ಗೆ ಲಾಭದಾಯಕವಾಗಲಿದೆ.

ಇನ್ನು, ರಜನಿ- ಕಮಲ್​ ಹಾಸನ್​ ಮೈತ್ರಿ ಮಾಡಿಕೊಂಡರೆ ಅಧಿಕಾರಕ್ಕಾಗಿ ಸ್ಪರ್ಧೆ ನಡೆಸುತ್ತಿರುವ ಎಐಡಿಎಂಕೆ ಹಾಗೂ ಡಿಎಂಕೆ ಪಕ್ಷಕ್ಕೆ ದೊಡ್ಡ ಪೆಟ್ಟು ಉಂಟಾಗಲಿದೆ. ಅಲ್ಲದೆ, ಮತಗಳು ಒಡೆಯುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಸೂಪರ್​​ಸ್ಟಾರ್ ರಜನಿಕಾಂತ್ ಪಕ್ಷದ ಹೆಸರು ‘ಮಕ್ಕಳ್ ಸೇವೈ ಕಟ್ಚಿ’ ಪಕ್ಷದ ಚಿಹ್ನೆ ಆಟೋರಿಕ್ಷಾ?

Published On - 7:56 pm, Wed, 16 December 20

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us