Kanpur Violence: ಕಾನ್ಪುರದಲ್ಲಿ ಕೋಮು ಸಂಘರ್ಷ; ಮೂವರಿಗೆ ಗಾಯ, 18 ಜನರ ಬಂಧನ

ಪ್ರವಾದಿ ಮೊಹಮ್ಮದ್ ಅವರನ್ನು ಅವಮಾನಿಸಿದ್ದನ್ನು ಖಂಡಿಸಿ ಮುಸ್ಲಿಂ ಸಮುದಾಯದ ಗುಂಪು ಕಾನ್ಪುರದಲ್ಲಿ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿತ್ತು. ಈ ವೇಳೆ ಘರ್ಷಣೆ ಹಿಂಸಾಚಾರಕ್ಕೆ ತಿರುಗಿತು.

Kanpur Violence: ಕಾನ್ಪುರದಲ್ಲಿ ಕೋಮು ಸಂಘರ್ಷ; ಮೂವರಿಗೆ ಗಾಯ, 18 ಜನರ ಬಂಧನ
ಕಾನ್ಪುರದಲ್ಲಿ ಹಿಂಸಾಚಾರ
Image Credit source: Zee News
Updated By: ಸುಷ್ಮಾ ಚಕ್ರೆ

Updated on: Jun 04, 2022 | 10:58 AM

ಲಕ್ನೋ: ಉತ್ತರ ಪ್ರದೇಶದ ಕಾನ್ಪುರದಲ್ಲಿ (Kanpur) ಶುಕ್ರವಾರ ಬೇರೆ ಬೇರೆ ಸಮುದಾಯಗಳಿಗೆ ಸೇರಿದ ಎರಡು ಗುಂಪುಗಳು ಮಾರುಕಟ್ಟೆಯನ್ನು ಸ್ಥಗಿತಗೊಳಿಸುವುದರ ಬಗ್ಗೆ ಜಗಳವಾಡಿದಾಗ ಘರ್ಷಣೆ ಸಂಭವಿಸಿತ್ತು. ಈ ವೇಳೆ ಹಿಂಸಾಚಾರ, ಕಲ್ಲು ತೂರಾಟ ನಡೆದಿತ್ತು. ಈ ಗಲಭೆಗೆ ಸಂಬಂಧಿಸಿದಂತೆ ಮೂವರಿಗೆ ಗಾಯಗಳಾಗಿದ್ದು, 18 ಜನರನ್ನು ಬಂಧಿಸಲಾಗಿದೆ ಎಂದು ಕಾನ್ಪುರ ಪೊಲೀಸ್ ಆಯುಕ್ತ ವಿಜಯ್ ಮೀನಾ ತಿಳಿಸಿದ್ದಾರೆ. ಟಿವಿ ಸಂವಾದದಲ್ಲಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ (Nuur Sharma) ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಇದನ್ನು ವಿರೋಧಿಸಿ ಕಾನ್ಪುರದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.

ಪ್ರವಾದಿ ಮೊಹಮ್ಮದ್ ಅವರನ್ನು ಅವಮಾನಿಸಿದ್ದನ್ನು ಖಂಡಿಸಿ ಮುಸ್ಲಿಂ ಸಮುದಾಯದ ಗುಂಪು ಕಾನ್ಪುರದಲ್ಲಿ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿತ್ತು. ಈ ವೇಳೆ ಘರ್ಷಣೆ ಹಿಂಸಾಚಾರಕ್ಕೆ ತಿರುಗಿತು ಮತ್ತು ಗುಂಡಿನ ದಾಳಿ, ಹೊಗೆ ಬಾಂಬ್‌ಗಳು ಮತ್ತು ಕಲ್ಲು ತೂರಾಟಕ್ಕೆ ಕಾರಣವಾಯಿತು. ಈ ಘಟನೆಯಲ್ಲಿ ಮೂವರು ಗಾಯಗೊಂಡರು. ಘರ್ಷಣೆಯ ನಂತರ ಇಬ್ಬರು ಮತ್ತು ಒಬ್ಬ ಪೊಲೀಸ್ ಗಾಯಗೊಂಡಿದ್ದಾರೆ ಎಂದು ಕಾನ್ಪುರ ಪೊಲೀಸ್ ಕಮಿಷನರ್ ವಿಜಯ್ ಸಿಂಗ್ ಮೀನಾ ತಿಳಿಸಿದ್ದಾರೆ. ಕೆಲವರು ಅಂಗಡಿ ಮುಂಗಟ್ಟು ಮುಚ್ಚಲು ಯತ್ನಿಸಿದರು. ಇದಕ್ಕೆ ಇನ್ನೊಂದು ಗುಂಪಿನವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಗಲಾಟೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ದ್ವೇಷ ಭಾಷಣ ಪ್ರಕರಣ: ಕೇರಳದ ಮಾಜಿ ಶಾಸಕ ಪಿಸಿ ಜಾರ್ಜ್​ಗೆ 14 ದಿನಗಳ ನ್ಯಾಯಾಂಗ ಬಂಧನ; ಕೋಮು ದ್ವೇಷ ಸಹಿಸುವುದಿಲ್ಲ ಎಂದ ಪಿಣರಾಯಿ ವಿಜಯನ್

“ಎರಡು ಸಮುದಾಯದ ನಡುವೆ ಘರ್ಷಣೆ ಪ್ರಾರಂಭವಾಯಿತು. ಪೊಲೀಸರು ತಕ್ಷಣ ಅಲ್ಲಿಗೆ ತಲುಪಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಹಿರಿಯ ಅಧಿಕಾರಿಗಳು ತಕ್ಷಣವೇ ಅಲ್ಲಿಗೆ ತಲುಪಿ, ಪರಿಸ್ಥಿತಿಯನ್ನು ನಿಯಂತ್ರಿಸಿದರು” ಎಂದು ಕಾನ್ಪುರ ಹಿಂಸಾಚಾರದ ಕುರಿತು ಉತ್ತರ ಪ್ರದೇಶದ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಹೇಳಿದರು. ಸರ್ಕಾರ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕಳುಹಿಸಲಾಗಿದೆ. ಗೂಂಡಾಗಳನ್ನು ಗುರುತಿಸಲಾಗಿದ್ದು, ಇದುವರೆಗೆ 18 ಮಂದಿಯನ್ನು ಬಂಧಿಸಲಾಗಿದೆ. ನಮ್ಮ ಬಳಿ ವೀಡಿಯೋ ಫೂಟೇಜ್ ಇದೆ, ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

ಶುಕ್ರವಾರದ ಪ್ರಾರ್ಥನೆಯ ನಂತರ ಒಂದು ಸಮುದಾಯದ ಸದಸ್ಯರು ಬೆಕೊಂಗಂಜ್ ಪ್ರದೇಶದಲ್ಲಿ ಅಂಗಡಿಗಳನ್ನು ಮುಚ್ಚಲು ಒತ್ತಾಯಿಸಿದ ನಂತರ ಕಾನ್ಪುರದಲ್ಲಿ ಕೋಮು ಘರ್ಷಣೆ ಸಂಭವಿಸಿದೆ. ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವುದನ್ನು ವಿರೋಧಿಸಿ ಸದಸ್ಯರು ಮಾರುಕಟ್ಟೆಯನ್ನು ಮುಚ್ಚುವುದಾಗಿ ಘೋಷಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ