ಕೋಲ್ಕತ್ತಾ ಅತ್ಯಾಚಾರ-ಕೊಲೆ ಪ್ರಕರಣ: ಮಮತಾ ಭೇಟಿಯನ್ನು ಸ್ವಾಗತಿಸಿದ ಕಿರಿಯ ವೈದ್ಯರು, ಮಾತುಕತೆಗೆ ಸಿಎಂ ನಿವಾಸಕ್ಕೆ ಆಹ್ವಾನ

|

Updated on: Sep 14, 2024 | 8:09 PM

ವೈದ್ಯರ ಬೇಡಿಕೆಗಳು, ವಿಶೇಷವಾಗಿ ಭದ್ರತೆ ಮತ್ತು ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಸಹ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ತನಿಖೆಗೆ ಸಂಬಂಧಿಸಿದ ಚರ್ಚೆಗಳಲ್ಲಿ ಭಾಗವಹಿಸಲು ಗುಂಪಿನಿಂದ 15 ಪ್ರತಿನಿಧಿಗಳನ್ನು ಕೇಳಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಖಚಿತಪಡಿಸಿದ್ದಾರೆ.

ಕೋಲ್ಕತ್ತಾ ಅತ್ಯಾಚಾರ-ಕೊಲೆ ಪ್ರಕರಣ: ಮಮತಾ ಭೇಟಿಯನ್ನು ಸ್ವಾಗತಿಸಿದ ಕಿರಿಯ ವೈದ್ಯರು, ಮಾತುಕತೆಗೆ ಸಿಎಂ ನಿವಾಸಕ್ಕೆ ಆಹ್ವಾನ
ಮಮತಾ ಬ್ಯಾನರ್ಜಿ
Follow us on

ಕೋಲ್ಕತ್ತಾ ಸೆಪ್ಟೆಂಬರ್ 14: ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಆರ್‌ಜಿ ಕರ್ ಬಿಕ್ಕಟ್ಟನ್ನು ಪರಿಹರಿಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಚರ್ಚೆ ನಡೆಸಲು ಧರಣಿ ನಿರತ ಕಿರಿಯ ವೈದ್ಯರು ಶನಿವಾರ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಕಿರಿಯ ವೈದ್ಯರು, ಆರೋಗ್ಯ ಇಲಾಖೆಯ ಪ್ರಧಾನ ಕಚೇರಿಯಾದ ಸ್ವಾಸ್ಥ್ಯ ಭವನದ ಹೊರಗಿನ ತಮ್ಮ ಪ್ರತಿಭಟನಾ ಸ್ಥಳಕ್ಕೆ ಮುಖ್ಯಮಂತ್ರಿಯವರ ದಿಢೀರ್ ಭೇಟಿಯನ್ನು ಸ್ವಾಗತಿಸಿದ್ದಾರೆ.

ನಮ್ಮ ಪ್ರತಿಭಟನಾ ಸ್ಥಳಕ್ಕೆ ಸಿಎಂ ಮಮತಾ ಬ್ಯಾನರ್ಜಿ ಬಂದಿದ್ದರು. ಎರಡೂ ಕಡೆಯಿಂದ ಚರ್ಚೆ ಮತ್ತು ಸಂವಾದಕ್ಕೆ ಬಾಗಿಲು ತೆರೆದಿರುವುದು ನಮಗೆ ಸಂತೋಷ ತಂದಿದೆ. ಇದಕ್ಕಾಗಿ ಸಿಎಂ ಕಚೇರಿಗೆ ಮೇಲ್ ಕೂಡ ಕಳುಹಿಸಿದ್ದು, ಆಕೆ ಬಂದಿದ್ದಕ್ಕೆ ನಮಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ. ಪಶ್ಚಿಮ ಬಂಗಾಳದ ಜೂನಿಯರ್ ಡಾಕ್ಟರ್ಸ್ ಫ್ರಂಟ್ ಅವರಿಗೆ ನೀಡಿರುವ ಐದು ಅಂಶಗಳ ಬೇಡಿಕೆಯ ಬಗ್ಗೆ ಚರ್ಚಿಸಲು ನಾವು ಸಿದ್ಧರಿದ್ದೇವೆ. ಪ್ರತಿಭಟನಾಕಾರರಲ್ಲಿ ಒಬ್ಬರಾದ ಡಾ ಆರಿಫ್ ಹೇಳಿದ್ದಾರೆ.  ಶನಿವಾರ ಸಂಜೆ 6 ಗಂಟೆಗೆ ಬ್ಯಾನರ್ಜಿ ಅವರ ನಿವಾಸದಲ್ಲಿ ಸಭೆ ನಡೆಸಲು ರಾಜ್ಯ ಸರ್ಕಾರವು ಪ್ರತಿಭಟನಾನಿರತ ವೈದ್ಯರನ್ನು ಆಹ್ವಾನಿಸಿತ್ತು.

ವೈದ್ಯರ ಬೇಡಿಕೆಗಳು, ವಿಶೇಷವಾಗಿ ಭದ್ರತೆ ಮತ್ತು ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಸಹ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ತನಿಖೆಗೆ ಸಂಬಂಧಿಸಿದ ಚರ್ಚೆಗಳಲ್ಲಿ ಭಾಗವಹಿಸಲು ಗುಂಪಿನಿಂದ 15 ಪ್ರತಿನಿಧಿಗಳನ್ನು ಕೇಳಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಖಚಿತಪಡಿಸಿದ್ದಾರೆ.

ಪ್ರತಿಭಟನಾನಿರತ ವೈದ್ಯರಲ್ಲಿ ಮಮತಾ ಬ್ಯಾನರ್ಜಿ ಹೇಳಿದ್ದೇನು?

ಇದಕ್ಕೂ ಮುನ್ನ ಮಂಗಳವಾರದಿಂದ ವೈದ್ಯರು ಮೊಕ್ಕಾಂ ಹೂಡಿರುವ ಪ್ರತಿಭಟನಾ ಸ್ಥಳಕ್ಕೆ ಬ್ಯಾನರ್ಜಿ ದಿಢೀರ್ ಭೇಟಿ ನೀಡಿದರು. “ನಮಗೆ ನ್ಯಾಯ ಬೇಕು” ಎಂದ ಘೋಷಣೆ ಕೂಗಿದ ಗುಂಪನ್ನು ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ವೈದ್ಯರಿಗೆ ಒತ್ತಾಯಿಸಿದ್ದು, ಅವರ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು.

‘‘ನಾನು ಮುಖ್ಯಮಂತ್ರಿಯಾಗಿ ಅಲ್ಲ, ನಿಮ್ಮ ‘ದೀದಿ’ಯಾಗಿ (ಅಕ್ಕ) ನಿಮ್ಮನ್ನು ಭೇಟಿಯಾಗಲು ಬಂದಿದ್ದೇನೆ. “ನಾನು ನಿಮ್ಮ ಬೇಡಿಕೆಗಳನ್ನು ಅಧ್ಯಯನ ಮಾಡುತ್ತೇನೆ. ಯಾರಾದರೂ ತಪ್ಪಿತಸ್ಥರಾಗಿದ್ದರೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ .
ಶುಕ್ರವಾರ ರಾತ್ರಿಯಿಡೀ ಮಳೆ ಸುರಿಯಿತು. ನೀವು ಇಲ್ಲಿ ಕುಳಿತಿರುವ ರೀತಿ ನನಗೂ ಸಂಕಟವಾಗುತ್ತಿದೆ. ಕಳೆದ 34 ದಿನಗಳಿಂದ ನಾನು ರಾತ್ರಿಯಿಡೀ ಮಲಗಿಲ್ಲ ಏಕೆಂದರೆ, ನೀವು ರಸ್ತೆಯಲ್ಲಿದ್ದರೆ, ನಾನು ಕಾವಲುಗಾರನಾಗಿ ಎಚ್ಚರವಾಗಿರಬೇಕಾಗುತ್ತದೆ, ”ಎಂದು ಬ್ಯಾನರ್ಜಿ ಹೇಳಿದ್ದಾರೆ.

ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಎಂದು ಕರೆಯುವುದು ದುರದೃಷ್ಟಕರ: ಯೋಗಿ ಆದಿತ್ಯನಾಥ್

ಪ್ರತಿಭಟನೆಗಳು ಸಾರ್ವಜನಿಕ ಆರೋಗ್ಯ ಸೇವೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ, ಮುಷ್ಕರದ ಪರಿಣಾಮವಾಗಿ ವಿಳಂಬವಾದ ಚಿಕಿತ್ಸೆಯಿಂದಾಗಿ 29 ಸಾವುಗಳು ಸಂಭವಿಸಿವೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ