ಮಾಜಿ ಪ್ರಿಯಕರನ ಪತ್ನಿಗೆ ಎಚ್‌ಐವಿ ಸೋಂಕಿತ ಇಂಜೆಕ್ಷನ್ ಚುಚ್ಚಿದ ಮಹಿಳೆ, ಕಾರಣ ಕೇಳಿದ್ರೆ ಶಾಕ್​​ ಆಗ್ತೀರಾ!

ಕರ್ನೂಲ್‌ನಲ್ಲಿ ವಸುಂಧರಾ ತನ್ನ ಮಾಜಿ ಪ್ರಿಯಕರನ ಪತ್ನಿಯ ಮೇಲೆ ಎಚ್‌ಐವಿ ಸೋಂಕಿತ ಇಂಜೆಕ್ಷನ್ ನೀಡಿ ಕೊಲೆಗೆ ಯತ್ನಿಸಿದ್ದಾಳೆ. ಬೇರೊಬ್ಬರನ್ನು ಮದುವೆಯಾದ ಸೇಡಿಗೆ ಈ ಸಂಚು ರೂಪಿಸಿದ್ದಳು. ಸ್ಕೂಟರ್ ಅಪಘಾತದ ನೆಪದಲ್ಲಿ ವೈದ್ಯೆಗೆ ಚುಚ್ಚಿದ್ದು, ಪೊಲೀಸರು ವಸುಂಧರಾ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಿಂದ ರಕ್ತ ಸಂಗ್ರಹದ ಕುರಿತು ತನಿಖೆ ನಡೆಯುತ್ತಿದೆ.

ಮಾಜಿ ಪ್ರಿಯಕರನ ಪತ್ನಿಗೆ ಎಚ್‌ಐವಿ ಸೋಂಕಿತ ಇಂಜೆಕ್ಷನ್ ಚುಚ್ಚಿದ ಮಹಿಳೆ, ಕಾರಣ ಕೇಳಿದ್ರೆ ಶಾಕ್​​ ಆಗ್ತೀರಾ!
ಸಾಂದರ್ಭಿಕ ಚಿತ್ರ

Updated on: Jan 26, 2026 | 1:22 PM

ಆಂಧ್ರಪ್ರದೇಶ, ಜಿ.26: ಕರ್ನೂಲ್ ಪಟ್ಟಣದಲ್ಲಿ ಬಿ.ಬಿ. ವಸುಂಧರಾ (40) ಎಂಬ ಮಹಿಳೆ, ತನ್ನ ಮಾಜಿ ಪ್ರಿಯಕರನ ಪತ್ನಿಯ ಮೇಲೆ ಎಚ್‌ಐವಿ (HIV) ಇಂಜೆಕ್ಟ್ ಮಾಡುವ ಮೂಲಕ ಕೊಲೆಗೆ ಸಂಚು ರೂಪಿಸಿದ್ದಾಳೆ. ಸಂತ್ರಸ್ತ ಮಹಿಳೆಯು ವೃತ್ತಿಯಲ್ಲಿ ವೈದ್ಯೆಯಾಗಿದ್ದು (ಸಹಾಯಕ ಪ್ರಾಧ್ಯಾಪಕಿ), ಈಕೆಯ ಪತಿ ಕೂಡ ವೈದ್ಯರಾಗಿದ್ದಾರೆ. ವಸುಂಧರಾ ತನ್ನ ಮಾಜಿ ಪ್ರಿಯಕರ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದನ್ನು ಸಹಿಸಲಾರದೆ, ಅವರ ಸಂಸಾರವನ್ನು ಹಾಳುಮಾಡಲು ಈ ಭೀಕರ ಸಂಚು ರೂಪಿಸಿದ್ದಳು. ಜನವರಿ 9, 2026 ರಂದು ಸಂತ್ರಸ್ತ ವೈದ್ಯೆ ಸ್ಕೂಟರ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ, ವಸುಂಧರಾ ಮತ್ತು ಆಕೆಯ ಸಹಚರರು ಉದ್ದೇಶಪೂರ್ವಕವಾಗಿ ಬೈಕ್‌ನಿಂದ ಡಿಕ್ಕಿ ಹೊಡೆದಿದ್ದಾರೆ. ವೈದ್ಯೆ ಕೆಳಗೆ ಬಿದ್ದಾಗ, ವಸುಂಧರಾ ಮತ್ತು ಆಕೆಯ ಜತೆಗಿದ್ದ ಇತರರು ಸಹಾಯ ಮಾಡುವ ನೆಪದಲ್ಲಿ ಹತ್ತಿರ ಬಂದಿದ್ದಾರೆ. ಈ ಗದ್ದಲದ ನಡುವೆಯೇ ವಸುಂಧರಾ ಮೊದಲೇ ಸಿದ್ಧಪಡಿಸಿಕೊಂಡಿದ್ದ ಎಚ್‌ಐವಿ ಸೋಂಕಿತ ಇಂಜೆಕ್ಷನ್ ಅನ್ನು ವೈದ್ಯೆಯ ದೇಹಕ್ಕೆ ಚುಚ್ಚಿದ್ದಾಳೆ.

ಘಟನೆಯ ನಂತರ ಅನುಮಾನಗೊಂಡ ವೈದ್ಯೆ ಮತ್ತು ಆಕೆಯ ಪತಿ ಜನವರಿ 10 ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸಂಚಿನ ಬಗ್ಗೆ ಬಹಿರಂಗವಾಗಿದೆ. ವಸುಂಧರಾ ಸೇರಿದಂತೆ ನಾಲ್ವರು ಆರೋಪಿಗಳನ್ನು (ಜ್ಯೋತಿ, ಜಶ್ವಂತ್ ಮತ್ತು ಶ್ರುತಿ) ಬಂಧಿಸಿದ್ದಾರೆ. ಆರೋಪಿ ವಸುಂಧರಾ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಸಂಶೋಧನೆಯ ನೆಪದಲ್ಲಿ ಎಚ್‌ಐವಿ ಪೀಡಿತ ರೋಗಿಗಳ ರಕ್ತವನ್ನು ಸಂಗ್ರಹಿಸಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿ ವಸುಂಧರಾ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಸಂಶೋಧನೆಯ ನೆಪದಲ್ಲಿ ಎಚ್‌ಐವಿ ಪೀಡಿತ ರೋಗಿಗಳ ರಕ್ತವನ್ನು ಸಂಗ್ರಹಿಸಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಇದನ್ನೂ ಓದಿ: ಗಣರಾಜ್ಯೋತ್ಸವದಂದು ರೂಪಿಸಿದ್ದ ಬಹುದೊಡ್ಡ ಸಂಚು ವಿಫಲಗೊಳಿಸಿದ ಭದ್ರತಾ ಪಡೆ, 10,000 ಕೆಜಿ ಸ್ಫೋಟಕ ವಶ

ಬಂಧಿತರಾದ ಮುಖ್ಯ ಆರೋಪಿ ಬಿ. ಬಿ. ವಸುಂಧರಾ ಮತ್ತು ಆಕೆಯ ಮೂವರು ಸಹಚರರನ್ನು (ಜ್ಯೋತಿ, ಜಶ್ವಂತ್ ಮತ್ತು ಶ್ರುತಿ) ಕರ್ನೂಲ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಎಲ್ಲಾ ನಾಲ್ವರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ (Judicial Remand) ವಿಧಿಸಿ ಆದೇಶಿಸಿದೆ. ಕರ್ನೂಲ್ ಪೊಲೀಸರು ಈ ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆಗಾಗಿ ಮತ್ತು ಈ ಸಂಚಿನಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂದು ತಿಳಿಯಲು ಪೊಲೀಸರು ಆರೋಪಿಗಳನ್ನು ತಮ್ಮ ಕಸ್ಟಡಿಗೆ ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಸರ್ಕಾರಿ ಆಸ್ಪತ್ರೆಯಿಂದ ಎಚ್‌ಐವಿ ಸೋಂಕಿತ ರಕ್ತವನ್ನು ಪಡೆಯಲು ಯಾರಾದರೂ ಆಸ್ಪತ್ರೆಯ ಸಿಬ್ಬಂದಿ ಸಹಾಯ ಮಾಡಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Loading...
Unable to load recommendations.
Follow Us