ಯುವಕರ ಕಲ್ಯಾಣಕ್ಕೆ ಸರ್ಕಾರ ಬದ್ಧ: ರಾಜ್ಯಸಭೆಯಲ್ಲೂ ಮಂಡನೆಯಾಯ್ತು ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ತಿದ್ದುಪಡಿ ಮಸೂದೆ
ರಾಜ್ಯಸಭೆಯಲ್ಲಿ ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ಮಂಡನೆಯಾಗಿದೆ. ಪರೀಕ್ಷಾ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಈ ಮಸೂದೆ ಕಠಿಣ ಕ್ರಮಗಳನ್ನು ಸೂಚಿಸುತ್ತದೆ. ಪರೀಕ್ಷಾ ಮಾಫಿಯಾಗಳಿಗೆ 10 ಕೋಟಿ ರೂ.ವರೆಗೂ ದಂಡ, 7 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. 2 ತಿಂಗಳಲ್ಲಿ ತನಿಖೆ, 3 ತಿಂಗಳಲ್ಲಿ ತೀರ್ಪು ನೀಡಲು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳ ರಚನೆಗೆ ಅವಕಾಶವಿದೆ. ಯುವಜನರ ಭವಿಷ್ಯ ಮತ್ತು ಪರೀಕ್ಷಾ ವ್ಯವಸ್ಥೆಯ ಮೇಲೆ ವಿಶ್ವಾಸ ಮೂಡಿಸುವುದು ಸರ್ಕಾರದ ಗುರಿಯಾಗಿದೆ. ಕಾಕ್ರೋಚ್ ಜನತಾ ಪಕ್ಷ (CJP) ಹಾಗೂ ವಿದ್ಯಾರ್ಥಿ ಸಂಘಟನೆಗಳು ನಡೆಸಿದ ಸುದೀರ್ಘ ಪ್ರತಿಭಟನೆಯಿಂದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದರು. ಬಳಿಕ ಜುಲೈ 27ರಂದು ಕೇಂದ್ರ ಸರ್ಕಾರ ಈ ನೂತನ ತಿದ್ದುಪಡಿ ಮಸೂದೆಯನ್ನು ಸಂಸತ್ತಿಗೆ ತಂದಿತು.

ನವದೆಹಲಿ, ಜುಲೈ 30: ಲೋಕಸಭೆಯಲ್ಲಿ ಅಂಗೀಕಾರಗೊಂಡ ಬೆನ್ನಲ್ಲೇ, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ರಾಜ್ಯಸಭೆ(Rajya Sabha)ಯಲ್ಲಿ ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026ಅನ್ನು ಮಂಡಿಸಿದ್ದಾರೆ. ಈ ಕಠಿಣ ಶಾಸನವು ದೇಶದ ಕೋಟ್ಯಂತರ ವಿದ್ಯಾರ್ಥಿಗಳು ಹಾಗೂ ಯುವಜನರ ಹಿತಾಸಕ್ತಿ ಮತ್ತು ಭವಿಷ್ಯವನ್ನು ಕಾಯುವಲ್ಲಿ ಸರ್ಕಾರದ ಅತ್ಯುನ್ನತ ಬದ್ಧತೆಯನ್ನು ಎತ್ತಿಹಿಡಿಯುತ್ತದೆ. ಹಿರಿಯರ ಹಾಗೂ ಪ್ರಬುದ್ಧರ ಸದನವಾದ ರಾಜ್ಯಸಭೆಯು ಧ್ವನಿ ಎತ್ತುವ ಮೂಲಕ ಇದನ್ನು ಬೆಂಬಲಿಸಬೇಕು” ಎಂದು ಮನವಿ ಮಾಡಿದರು.
ಲೋಕಸಭೆಯಲ್ಲಿ ಸುಮಾರು 10 ಗಂಟೆಗಳ ಕಾಲ ನಡೆದ ಸುದೀರ್ಘ ಚರ್ಚೆ ಹಾಗೂ ಪ್ರತಿಪಕ್ಷಗಳ ಅಡೆತಡೆಗಳ ನಡುವೆಯೂ ಮಸೂದೆ ಅಂಗೀಕಾರಗೊಂಡಿರುವುದನ್ನು ಸಿಂಗ್ ಉಲ್ಲೇಖಿಸಿದರು. ಪರೀಕ್ಷಾ ಮಾಫಿಯಾವನ್ನು ಸಂಪೂರ್ಣವಾಗಿ ಮಟ್ಟಹಾಕಲು ಹಾಗೂ ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯ ಮೇಲೆ ವಿದ್ಯಾರ್ಥಿಗಳಿಗೆ ವಿಶ್ವಾಸ ಮೂಡಿಸಲು ಈ ಹೊಸ ಕಾನೂನು ಸಹಕಾರಿಯಾಗಲಿದೆ ಎಂದರು.
ಪರೀಕ್ಷಾ ವಂಚನೆ ಹಾಗೂ ಪೇಪರ್ ಸೋರಿಕೆಯಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ 5 ರಿಂದ 10 ವರ್ಷಗಳ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ. ದಂಡ ವಿಧಿಸಲಾಗುವುದು. ಸಂಘಟಿತ ಪರೀಕ್ಷಾ ಮಾಫಿಯಾ ಅಥವಾ ಗ್ಯಾಂಗ್ಗಳಿಗೆ ಕನಿಷ್ಠ 7 ವರ್ಷ ಜೈಲು ಶಿಕ್ಷೆ ಹಾಗೂ 10 ಕೋಟಿ ರೂ.ವರೆಗೆ ಭಾರಿ ದಂಡ ವಿಧಿಸಲು ತಿದ್ದುಪಡಿಯಲ್ಲಿ ಅವಕಾಶವಿದೆ. ಪೇಪರ್ ಸೋರಿಕೆ ತನಿಖೆಯನ್ನು ಕೇವಲ 2 ತಿಂಗಳೊಳಗೆ ಪೂರ್ಣಗೊಳಿಸಬೇಕು.
ಮತ್ತಷ್ಟು ಓದಿ: ನಿಟ್ಟುಸಿರು ಬಿಟ್ಟ ನೀಟ್ ಪ್ರತಿಭಟನಾಕಾರರು: ಬಿಹಾರದ ಬೆನ್ನಲ್ಲೇ ಪ್ರಕರಣ ಹಿಂಪಡೆಯಲು ಅಸ್ಸಾಂ ಸರ್ಕಾರ ನಿರ್ಧಾರ
ವಿಚಾರಣೆಗಾಗಿ ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತಿದ್ದು, ಚಾರ್ಜ್ಶೀಟ್ ಸಲ್ಲಿಕೆಯಾದ 3 ತಿಂಗಳೊಳಗೆ ದಿನನಿತ್ಯದ ಆಧಾರದಲ್ಲಿ ವಿಚಾರಣೆ ಮುಗಿಸಿ ತೀರ್ಪು ನೀಡಬೇಕಾಗುತ್ತದೆ. ಅಗತ್ಯವಿದ್ದಲ್ಲಿ ತನಿಖೆಗಾಗಿ ಕೇಂದ್ರ ಸರ್ಕಾರವೇ ಪ್ರತ್ಯೇಕ ‘ವಿಶೇಷ ಕಾರ್ಯಪಡೆ’ (STF) ರಚಿಸಬಹುದಾಗಿದೆ. ಜುಲೈ 20 ರಂದು ಜಂತರ್ ಮಂತರ್ ಬಳಿ ‘ಸಂಸತ್ ಚಲೋ’ ನಡೆಸಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಬಲಪ್ರಯೋಗ ಮಾಡಿದ್ದಾರೆ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಪೆಲೆಟ್ ಗನ್ ಬಳಸಲು ಆದೇಶಿಸಿದ್ದಾರೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಭಾರಿ ಗದ್ದಲ ಏರ್ಪಟ್ಟಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




