ತಪ್ಪಿತಸ್ಥಳೆಂದು ಸಾಬೀತಾದರೆ ಮಗಳನ್ನು ಕೂಡ ಅದೇ ಕೋಟೆಯಿಂದ ತಳ್ಳಿ, ಸಿಯಾ ಬಗ್ಗೆ ತಂದೆಯ ಭಾವುಕ ಮಾತು

ಮಹಾರಾಷ್ಟ್ರದ ಲೋಹಗಡ ಕೋಟೆಯಲ್ಲಿ ನಿಶ್ಚಿತ ವರ ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ ಸಿಯಾ ಗೋಯಲ್ ತಂದೆ-ತಾಯಿ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಮಗಳು ತಪ್ಪಿತಸ್ಥಳೆಂದು ಸಾಬೀತಾದರೆ, ಕೇತನ್‌ನನ್ನು ತಳ್ಳಿದ ಅದೇ ಕೋಟೆಯಿಂದ ಸಿಯಾನನ್ನೂ ತಳ್ಳುವಂತೆ ತಂದೆ ಪ್ರವೀಣ್ ಗೋಯಲ್ ಆಗ್ರಹಿಸಿದ್ದಾರೆ. ಸಿಯಾ ಈಗ ತನ್ನ ಕರಾಳ ಸಂಚನ್ನು ಒಪ್ಪಿಕೊಂಡಿದ್ದು, ಈ ಪ್ರಕರಣದ ತನಿಖೆ ತೀವ್ರಗೊಂಡಿದೆ. ಎರಡೂ ಕುಟುಂಬಗಳು ದುಃಖದಲ್ಲಿವೆ.

ತಪ್ಪಿತಸ್ಥಳೆಂದು ಸಾಬೀತಾದರೆ ಮಗಳನ್ನು ಕೂಡ ಅದೇ ಕೋಟೆಯಿಂದ ತಳ್ಳಿ, ಸಿಯಾ ಬಗ್ಗೆ ತಂದೆಯ ಭಾವುಕ ಮಾತು
ಸಿಯಾ-ಕೇತನ್

Updated on: Jun 26, 2026 | 7:24 AM

ಮುಖ್ಯಾಂಶಗಳು

  • ಮಗಳು ತಪ್ಪಿತಸ್ಥಳೆಂದು ಸಾಬೀತಾದರೆ ಕೋಟೆಯಿಂದ ತಳ್ಳಿಬಿಡಿ ಸಿಯಾ ತಂದೆಯ ಆಕ್ರೋಶದ ನುಡಿ
  • ಸಿಯಾ ತಾಯಿ ಕೂಡ ಆರೋಪಿಗಳಿಗೆ ಕಠಿಣ ಮರಣದಂಡನೆ ಶಿಕ್ಷೆ ನೀಡಬೇಕೆಂದು ಒತ್ತಾಯ
  • ಪೊಲೀಸರ ತೀವ್ರ ವಿಚಾರಣೆಯ ಬಳಿಕ ಕೊಲೆ ಸಂಚು ಒಪ್ಪಿಕೊಂಡ ಸಿಯಾ

ಪುಣೆ, ಜೂನ್ 26: ಇತ್ತೀಚೆಗೆ ಸಿಯಾ ಎಂಬಾಕೆ ಮಹಾರಾಷ್ಟ್ರದ ಲೋಹಗಡ ಕೋಟೆಯಲ್ಲಿ ತನ್ನ ನಿಶ್ಚಿತ ವರ ಕೇತನ್ ಅಗರ್ವಾಲ್(Ketan Agarwal) ಎಂಬುವವರನ್ನು ಕಂದಕಕ್ಕೆ ತಳ್ಳಿ ಕೊಂದ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಸಿಯಾಳ ತಂದೆ ನೀಡಿರುವ ಹೇಳಿಕೆ ವೈರಲ್ ಆಗಿದೆ. ಮುಖ್ಯ ಆರೋಪಿ ಸಿಯಾ ಗೋಯಲ್ ಅವರ ಹೆತ್ತ ತಂದೆ-ತಾಯಿಯೇ ತಮ್ಮ ಮಗಳಿಗೆ ಕಾನೂನುಬದ್ಧವಾಗಿ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. ನನ್ನ ಮಗಳು ತಪ್ಪಿತಸ್ಥಳೆಂದು ಸಾಬೀತಾದರೆ, ಕೇತನ್‌ನನ್ನು ಯಾವ ಕೋಟೆಯಿಂದ ತಳ್ಳಿ ಕೊಲ್ಲಲಾಗಿದೆಯೋ, ಅದೇ ಕೋಟೆಯಿಂದ ಆಕೆಯನ್ನೂ ಕೂಡ ತಳ್ಳಿ ಎಂದು ಸಿಯಾ ತಂದೆ ಪ್ರವೀಣ್ ಗೋಯಲ್ ಆಕ್ರೋಶ ಹೊರಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರವೀಣ್ ಗೋಯಲ್, ತಮ್ಮ ಕುಟುಂಬಕ್ಕೆ ಆಗಿರುವ ಆಘಾತವನ್ನು ಹಂಚಿಕೊಂಡಿದ್ದಾರೆ. ಕೇತನ್ ನನಗೆ ಮಗನಿದ್ದಂತೆ. ಈ ದುರಂತ ಘಟನೆಯು ನಮ್ಮ ಎರಡೂ ಕುಟುಂಬಗಳನ್ನು ಸಂಪೂರ್ಣವಾಗಿ ಛಿದ್ರಗೊಳಿಸಿದೆ. ನಾವೆಲ್ಲರೂ ಅತ್ಯಂತ ಸಂಭ್ರಮದಿಂದ ಮದುವೆಗೆ ತಯಾರಿ ನಡೆಸುತ್ತಿದ್ದೆವು. ಇಂತಹ ಘೋರ ಕೃತ್ಯ ನಡೆದಿದೆ ಎಂಬುದನ್ನು ಇಂದಿಗೂ ನಮಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಸಿಯಾ ತಾಯಿ ಕೂಡ ಮಾತನಾಡಿ, ಆರೋಪಿಗಳಿಗೆ ಕೋರ್ಟ್ ಮರಣದಂಡನೆ ಶಿಕ್ಷೆಯನ್ನೇ ವಿಧಿಸಬೇಕು. ನನ್ನ ಮಗಳ ತಪ್ಪಿರುವುದು ಸಾಬೀತಾದರೆ ಆಕೆಯನ್ನು ಗಲ್ಲಿಗೇರಿಸಲಿ ಎಂದು ಕಟ್ಟುನಿಟ್ಟಾಗಿ ಹೇಳಿದ್ದಾರೆ.

ಕೇತನ್ ಕುಟುಂಬಸ್ಥರು ಗೋಯಲ್ ಪರಿವಾರದ ಮೇಲೆಯೇ ಮಾಡಿದ್ದ ಆರೋಪಗಳನ್ನು ಪ್ರವೀಣ್ ನಿರಾಕರಿಸಿದ್ದಾರೆ. ಸಿಯಾಳಿಗೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ವಿಷಯ ತಮಗೆ ಮೊದಲೇ ತಿಳಿದಿತ್ತು ಎಂಬುದು ಸುಳ್ಳು ಎಂದಿದ್ದಾರೆ. ನನ್ನ ಮಗಳು ಅತ್ಯಂತ ಸರಳ ಹುಡುಗಿಯಾಗಿದ್ದಳು, ಆಕೆ ಇಂತಹ ಕೆಲಸ ಮಾಡುತ್ತಾಳೆ ಎಂದು ನಾವು ಊಹಿಸಿರಲಿಲ್ಲ. ನಾವೇನನ್ನೂ ಮರೆಮಾಚಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ಓದಿ: ಕೇತನ್ ಕೊಲೆಗೂ ಮುನ್ನ ಲವರ್ ಜೊತೆ ಕೆಫೆಯಲ್ಲಿ ಕುಳಿತು ಪ್ಲಾನ್ ಮಾಡಿದ್ದಳು ಸಿಯಾ ಗೋಯಲ್!

ಹಗರಣದ ತನಿಖೆಗೆ ಎಸ್‌ಐಟಿ (SIT) ರಚನೆ ಸಾಧ್ಯತೆ
26 ವರ್ಷದ ಯುವ ಉದ್ಯಮಿ ಕೇತನ್ ಹತ್ಯೆ ಪ್ರಕರಣದ ತನಿಖೆಗಾಗಿ ಮಹಾರಾಷ್ಟ್ರ ಸರ್ಕಾರವು ವಿಶೇಷ ತನಿಖಾ ತಂಡವನ್ನು (SIT) ರಚಿಸುವ ಸಾಧ್ಯತೆಯಿದೆ. ಸದನದಲ್ಲಿ ಎನ್‌ಸಿಪಿ ನಾಯಕ ಸುನಿಲ್ ಶೆಲ್ಕೆ ಕೂಡ ಈ ವಿಷಯವನ್ನು ಪ್ರಸ್ತಾಪಿಸಿ, ಕೇತನ್‌ಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದ್ದಾರೆ.

ಕೊನೆಗೂ ತಪ್ಪು ಒಪ್ಪಿಕೊಂಡ ಕಿಲ್ಲರ್ ಸಿಯಾ
ಪೊಲೀಸ್ ತನಿಖೆಯ ಪ್ರಕಾರ, ಜೂನ್ 18 ರಂದು ಲೋಹಗಡ್ ಕೋಟೆಯ ತುದಿಗೆ ಕೇತನ್‌ನನ್ನು ಕರೆತಂದ ಸಿಯಾ, ಅಲ್ಲಿ ಅಡಗಿದ್ದ ತನ್ನ ಪ್ರಿಯಕರ ಚೇತನ್ ಚೌಧರಿಗೆ ಕಣ್ಣಿನಲ್ಲೇ ಸಂಕೇತ ನೀಡಿದ್ದಳು. ಆರಂಭದಲ್ಲಿ ಇಬ್ಬರೂ ಆರೋಪಿಗಳು ತಮಗೇನೂ ತಿಳಿಯದಂತೆ ಒಬ್ಬರ ಮೇಲೊಬ್ಬರು ತಪ್ಪು ಹೊರಿಸಲು ಪ್ರಯತ್ನಿಸಿದ್ದರು. ಆದರೆ ಪೊಲೀಸರ ತೀವ್ರ ವಿಚಾರಣೆಯ ಬಳಿಕ, ನಾವು ಮೊದಲೇ ಪ್ಲಾನ್ ಮಾಡಿ, ಹಲವು ಬಾರಿ ವಿಫಲ ಯತ್ನ ನಡೆಸಿದ ನಂತರವೇ ಈ ಕೊಲೆ ಮಾಡಿದ್ದೇವೆ ಎಂದು ಸಿಯಾ ಗೋಯಲ್ ತಾನೇ ರೂಪಿಸಿದ್ದ ಕರಾಳ ಸಂಚನ್ನು ಒಪ್ಪಿಕೊಂಡಿದ್ದಾಳೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:20 am, Fri, 26 June 26

Loading...
Unable to load recommendations.
Follow Us