
ಅಹಮದಾಬಾದ್, ನವೆಂಬರ್ 04: ತಾನೊಬ್ಬನೇ ಬದುಕಿದ್ದೇನೆ ಎಂದು ಖುಷಿ ಪಡಬೇಕೆ, ತನ್ನೊಂದಿಗೆ ಇದ್ದವರೆಲ್ಲಾ ಕಣ್ಮುಂದೆಯೇ ಹೋದರಲ್ಲಾ ಎಂದು ಮರುಕ ಪಡಬೇಕೆ ಇದೆರಡರ ನಡುವಿನ ಗೊಂದಲದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ ವಿಶ್ವಾಸ್ ಕುಮಾರ್ ರಮೇಶ್. ಜೂನ್ 12ರಂದು ಅಹಮದಾಬಾದಿನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ(Air India) ಬೋಯಿಂಗ್ 787 ಡ್ರೀಮ್ಲೈನರ್ ವಿಮಾನ ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿ ಹೊಡೆದು ಪತನಗೊಂಡಿತ್ತು.
ವಿಮಾನದಲ್ಲಿದ್ದ 241 ಜನರ ಪೈಕಿತುರ್ತು ನಿರ್ಗಮನ ದ್ವಾರದ ಬಳಿ ಇದ್ದ ವಿಶ್ವಾಸ್ ಕುಮಾರ್ ಮಾತ್ರ ಬದುಕುಳಿದರು.ಕೆಲವು ಆಸನಗಳ ದೂರದಲ್ಲಿ ಕುಳಿತಿದ್ದ ಸಹೋದರ ಅಜಯ್ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದೀಗ ವಿಶ್ವಾಸ್ ಕುಮಾರ್ ಖಿನ್ನತೆಗೆ ಜಾರಿದ್ದಾರೆ.
‘‘ನಾನೊಬ್ಬನೆ ಬದುಕುಳಿದಿದ್ದೇನೆ ಎಂದು ನಂಬಲು ಈಗಲೂ ನನಗೆ ಸಾಧ್ಯವಾಗುತ್ತಿಲ್ಲ. ನಾನು ನನ್ನ ಸಹೋದರನನ್ನು ಕಳೆದುಕೊಂಡೆ, ಆತನೇ ನನ್ನ ಬೆನ್ನೆಲುಬಾಗಿದ್ದ. ಕಳೆದ ಕೆಲವು ವರ್ಷಗಳಿಂದ ಸದಾ ನನ್ನ ಎಲ್ಲಾ ಕಾರ್ಯಗಳಲ್ಲಿ ಜತೆಯಾಗಿಯೇ ನಿಂತಿದ್ದ’’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಓದಿ: ಏರ್ ಇಂಡಿಯಾ ಅಪಘಾತ, ತಪ್ಪು ವರದಿ ಕೊಟ್ಟು ಮೃತ ಪೈಲಟ್ ಮೇಲೆ ಆರೋಪ ಹೊರಿಸ್ಬೇಡಿ, ಮೃತರ ಸಂಬಂಧಿಕರ ಮಾತು
ಭಾರತದ ವಿಮಾನ ಅಪಘಾತದ ತನಿಖಾ ಬ್ಯೂರೋದ ಪ್ರಾಥಮಿಕ ವರದಿಗಳ ಪ್ರಕಾರ, ವಿಮಾನ ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಎರಡೂ ಎಂಜಿನ್ಗಳಿಗೆ ಇಂಧನ ಪೂರೈಕೆ ಕಡಿತಗೊಂಡಿತ್ತು. ಇದರಿಂದಾಗಿ ವಿದ್ಯುತ್ ನಷ್ಟವಾಗಿತ್ತು.
ಡ್ರೀಮ್ ಲೈನರ್ ಹಾಸ್ಟೆಲ್ನ ದಕ್ಷಿಣ ಭಾಗಕ್ಕೆ ಡಿಕ್ಕಿ ಹೊಡೆಯುತ್ತಿದ್ದಂತೆ ದೊಡ್ಡ ಶಬ್ದ ಮತ್ತು ಬೆಂಕಿಯ ಉಂಡೆ ಹೊರಬಂದಿತ್ತು. ವಿಡಿಯೋದಲ್ಲಿ ವಿಶ್ವಾಸ್ ಕುಮಾರ್ ದಿಗ್ಭ್ರಮೆಗೊಂಡು ಹೊಗೆಯಿಂದ ಆವೃತವಾದ ಪ್ರದೇಶದಿಂದ ದೂರ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗಿದೆ. ಅಹಮದಾಬಾದಿನ ಸಿವಿಲ್ ಆಸ್ಪತ್ರೆಯಲ್ಲಿ 24 ಗಂಟೆಗಳ ಕಾಲ ನಿಗಾದಲ್ಲಿದ್ದ ವಿಶ್ವಾಸ್ ಅವರನ್ನು ಮರುದಿನ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದರು.
ನಾನು ಹೇಗೆ ಬದುಕಿದೆ ಎಂದು ನನಗೆ ತಿಳಿದಿಲ್ಲ, ಇದೆಲ್ಲವೂ ತುಂಬಾ ವೇಗವಾಗಿ ನಡೆದುಹೋಯಿತು ಎಂದು ಹೇಳಿದ್ದರು. ಡಿಎನ್ಎ ದೃಢೀಕರಣದ ನಂತರ ಅವರ ಸಹೋದರನ ಅವಶೇಷಗಳನ್ನು ಕುಟುಂಬಕ್ಕೆ ಹಸ್ತಾಂತರಿಸಿದ ಅದೇ ದಿನ ಜೂನ್ 17 ರಂದು ಅವರನ್ನು ಬಿಡುಗಡೆ ಮಾಡಲಾಯಿತು.
ಮನೆಗೆ ಹಿಂದಿರುಗಿರುವ ರಮೇಶ್ಗೆ ಆ ದಿನಗಳ ನೆನಪು ಇನ್ನೂ ಕಾಡುತ್ತಿದೆಯಂತೆ, ಪತ್ನಿ, ಮನೆಯವರು ಯಾರ ಬಳಿಯೂ ಮಾತನಾಡದೆ ರೂಮಿನಲ್ಲಿ ಒಂಟಿಯಾಗಿ ಇರುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಬಿಬಿಸಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ನಾವೆಲ್ಲರೂ ಮಾನಸಿಕವಾಗಿ ನೊಂದಿದ್ದೇವೆ, ನನ್ನ ತಾಯಿ ಕೂಡಾ ನಾಲ್ಕು ತಿಂಗಳಿನಿಂದ ಮನೆಯ ಹೊರಗೆ ಹೋಗಿ ಕೂರುತ್ತಿದ್ದಾರೆ. ಯಾರೊಂದಿಗೂ ಅಷ್ಟು ಮಾತನಾಡುತ್ತಿಲ್ಲ. ಈಗ ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ, 21,500 ಯುಕೆ ಪೌಂಡ್ಗಳ (ರೂ. 22 ಲಕ್ಷ) ಮಧ್ಯಂತರ ಪರಿಹಾರವನ್ನು ನೀಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ