ಎಲ್​ಪಿಜಿ ಟ್ಯಾಂಕರ್ ಟೋಲ್ ಬೂತ್‌ ಡಿವೈಡರ್​ಗೆ ಡಿಕ್ಕಿ, ಸ್ಫೋಟ, 5 ಮಂದಿ ಸಾವು

ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಎಲ್‌ಪಿಜಿ ಟ್ಯಾಂಕರ್ ಟೋಲ್ ಬೂತ್ ಡಿವೈಡರ್​ಗೆ ಡಿಕ್ಕಿ ಹೊಡೆದು ಸ್ಫೋಟಗೊಂಡ ಪರಿಣಾಮ ಐವರು ಸಾವನ್ನಪ್ಪಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಇದೀಗ ವೈರಲ್ ಆಗಿವೆ. ಭಾರಿ ಬೆಂಕಿ ಮತ್ತು ಸ್ಫೋಟದಿಂದ ಅಪಾರ ಆಸ್ತಿ ನಷ್ಟ ಸಂಭವಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಚಾಲಕನ ನಿರ್ಲಕ್ಷ್ಯ ಅಥವಾ ತಾಂತ್ರಿಕ ದೋಷದ ಬಗ್ಗೆ ತನಿಖೆ ನಡೆಯುತ್ತಿದೆ.

ಎಲ್​ಪಿಜಿ ಟ್ಯಾಂಕರ್ ಟೋಲ್ ಬೂತ್‌ ಡಿವೈಡರ್​ಗೆ  ಡಿಕ್ಕಿ, ಸ್ಫೋಟ, 5 ಮಂದಿ ಸಾವು
ಟೋಲ್

Updated on: Jul 03, 2026 | 3:14 PM

ಲಕ್ನೋ, ಜುಲೈ 03: ಉತ್ತರ ಪ್ರದೇಶದ ಕೌಶಂಬಿಯಲ್ಲಿ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಸಾಗಿಸುತ್ತಿದ್ದ ಟ್ಯಾಂಕರ್ ಒಂದು ಟೋಲ್ ಬೂತ್‌ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಬೆನ್ನಲ್ಲೇ ಗ್ಯಾಸ್ ಸೋರಿಕೆಯಾಗಿ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಜೂನ್ 26 ರಂದು ಮುಂಜಾನೆ ಸಂಭವಿಸಿದ ಈ ಘಟನೆಯ ಭೀಕರ ಸಿಸಿಟಿವಿ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬೆಳಕಿಗೆ ಬಂದಿವೆ. ಕಾನ್ಪುರದಿಂದ ಪ್ರತಾಪ್‌ಗಢಕ್ಕೆ ಹೋಗುತ್ತಿದ್ದ ಎರಡು ಟ್ಯಾಂಕರ್‌ಗಳು ಟೋಲ್ ಪ್ಲಾಜಾ ಸಮೀಪಿಸುತ್ತಿದ್ದಾಗ, ಅದರಲ್ಲಿ ಒಂದು ಟ್ಯಾಂಕರ್ ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡಿದೆ.

ನಿಯಂತ್ರಣ ತಪ್ಪಿದ ಟ್ಯಾಂಕರ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನೇರವಾಗಿ ಟೋಲ್ ಬೂತ್‌ಗೆ ನುಗ್ಗಿದೆ. ತಕ್ಷಣವೇ ಅನಿಲ ಸೋರಿಕೆಯಾಗಿ ಭಾರಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಸುಮಾರು ಎರಡು ಕಿಲೋಮೀಟರ್ ದೂರದವರೆಗೂ ಬೆಂಕಿಯ ಜ್ವಾಲೆಗಳು ಗೋಚರಿಸುತ್ತಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಿ:LPG Cylinder Price: ವಾಣಿಜ್ಯ ಸಿಲಿಂಡರ್ ದರದಲ್ಲಿ 183.50 ರೂ ಇಳಿಕೆ! ಹೋಟೆಲ್ ಮಾಲೀಕರಿಗೆ ಬಿಗ್ ರಿಲೀಫ್

 

ಮೃತರ ವಿವರ

ಧರ್ಮೇಂದ್ರ ದುಬೆ (40): ಟ್ಯಾಂಕರ್ ಚಾಲಕ (ಸ್ಥಳದಲ್ಲೇ ಸಾವು)

ಅಲೋಕ್ ಸಿಂಗ್: ಟೋಲ್ ಪ್ಲಾಜಾ ಉದ್ಯೋಗಿ (ಸ್ಥಳದಲ್ಲೇ ಸಾವು)

ಅನಿಲ್ ಕುಮಾರ್: ಟೋಲ್ ಉದ್ಯೋಗಿ (ಜುಲೈ 1 ರಂದು ಚಿಕಿತ್ಸೆ ಫಲಿಸದೆ ಸಾವು)

ಹೀರಾಮಣಿ ಸಿಂಗ್: ಟೋಲ್ ಉದ್ಯೋಗಿ (ಜುಲೈ 2 ರಂದು ಸಾವು)

ಕೃಷ್ಣ ಪಾಲ್ ಮೌರ್ಯ: ಟೋಲ್ ಉದ್ಯೋಗಿ (ಜುಲೈ 2 ರಂದು ಸಾವು)

ಆಸ್ತಿ ಪಾಸ್ತಿ ನಷ್ಟ ಮತ್ತು ಕ್ರಮ
ಟೋಲ್ ಪ್ಲಾಜಾ ಬಳಿ ನಿಲ್ಲಿಸಲಾಗಿದ್ದ 16 ಮೋಟಾರ್ ಸೈಕಲ್‌ಗಳು ಹಾಗೂ 2 ಕಾರುಗಳು ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣವಾಗಿ ಸುಟ್ಟು ಬೂದಿಯಾಗಿವೆ. ಜಿಲ್ಲೆಯ ಎಲ್ಲಾ ಅಗ್ನಿಶಾಮಕ ದಳದ ವಾಹನಗಳು ಮತ್ತು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಅಪಘಾತದ ಬಳಿಕ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು, ವಾಹನಗಳು ಯಾವುದೇ ಶುಲ್ಕವಿಲ್ಲದೆ ಟೋಲ್ ದಾಟಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. ಈ ಭೀಕರ ಅಪಘಾತಕ್ಕೆ ತಾಂತ್ರಿಕ ದೋಷ ಕಾರಣವೇ ಅಥವಾ ಚಾಲಕನ ನಿರ್ಲಕ್ಷ್ಯವೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ವಿಶೇಷ ತಾಂತ್ರಿಕ ತನಿಖಾ ತಂಡವನ್ನು ರಚಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us