NTAಗೆ ಮೇಜರ್ ಸರ್ಜರಿ: 600 ತಜ್ಞರ ವಜಾ, ನಾಲ್ಕು ಹಂತದಲ್ಲಿ ಪ್ರಶ್ನೆಪತ್ರಿಕೆ ತಪಾಸಣೆ ವ್ಯವಸ್ಥೆಗೆ ಜೋಶಿ ಆದೇಶ
NTA reforms: ಎನ್ಟಿಎ ಪರೀಕ್ಷೆಯಲ್ಲಿ ಆಮೂಲಾಗ್ರವಾಗಿ ಬದಲಾವಣೆಗೆ ಮುಂದಾಗಿರುವ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ, ಸಂಸ್ಥೆಯಲ್ಲಿ ಮೇಜರ್ ಸರ್ಜರಿ ಮಾಡಿದ್ದಾರೆ. ಪರೀಕ್ಷಾ ತಂಡದ ಪುನರ್ ರಚನೆ, 600 ತಜ್ಞರನ್ನು ವಜಾ, ಹೊಸ ಅಧಿಕಾರಿಗಳ ನೇಮಕ ಮತ್ತು ನಾಲ್ಕು ಹಂತದ ಪ್ರಶ್ನೆಪತ್ರಿಕೆ ತಪಾಸಣೆ ವ್ಯವಸ್ಥೆ ಸೂಚನೆ ನೀಡಿದ್ದಾರೆ.

ನವದೆಹಲಿ, ಆಗಸ್ಟ್ 18: ಯುಜಿಸಿ ನೆಟ್ (UGC NET) ಪರೀಕ್ಷೆಯಲ್ಲಿನ ಅವ್ಯವಹಾರಗಳ ಬೆನ್ನಲ್ಲೇ ಕೇಂದ್ರ ಸರ್ಕಾರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಲ್ಲಿ (NTA) ಸರ್ಕಾರ ಅಮೂಲಾಗ್ರ ಬದಲಾವಣೆ ಮುಂದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ದೆಹಲಿಯಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸರಣಿ ಸಭೆ ಮಾಡಿದ್ದು, 600 ತಜ್ಞರನ್ನು ತೆಗೆದುಹಾಕಿ ಹೊಸ ತಜ್ಞರನ್ನು ಒಳಗೊಂಡ ಪರೀಕ್ಷಾ ತಂಡ ಪುನಾರಚನೆ ಮಾಡಲು ಆದೇಶಿಸಿದ್ದಾರೆ.
ಎನ್ಟಿಎಗೆ ಭಾರೀ ಮೇಜರ್ ಸರ್ಜರಿ
ದೇಶದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ವಿಶ್ವಾಸಾರ್ಹತೆ ಹೆಚ್ಚಿಸಲು ಹಾಗೂ ಪರೀಕ್ಷಾ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕಗೊಳಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಎನ್ಟಿಎ ಆಡಳಿತ ಮಂಡಳಿ ಹಾಗೂ ಕಾರ್ಯವೈಖರಿಯಲ್ಲಿ ಭಾರೀ ಮೇಜರ್ ಸರ್ಜರಿ ನಡೆಸಲು ಪ್ರಲ್ಹಾದ್ ಜೋಶಿ ನಿರ್ಧರಿಸಿದ್ದು, ದೆಹಲಿಯಲ್ಲಿ ಇಂದು ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಹಲವು ನಿರ್ದೇಶನಗಳನ್ನು ನೀಡಿದ್ದಾರೆ.
ಶಿಕ್ಷಣ ಸಚಿವಾಲಯದಿಂದ ಟ್ವೀಟ್
As a follow up meeting on NTA, Union Education Minister Shri @JoshiPralhad directed that all necessary security and related infrastructural facilities should be put in place for the smooth conduct of examinations.
Following directions from the Minister, DG, NTA apprised on the… pic.twitter.com/SCSnko504d
— Ministry of Education (@EduMinOfIndia) August 18, 2026
ಈ ಕುರಿತಾಗಿ ಶಿಕ್ಷಣ ಸಚಿವಾಲಯದಿಂದ ಟ್ವೀಟ್ ಮಾಡಲಾಗಿದ್ದು, ‘ಪರೀಕ್ಷಾ ತಂಡವನ್ನು ಆಮೂಲಾಗ್ರವಾಗಿ ಪುನರ್ ರಚಿಸಲು ಮುಂದಾಗಿರುವ ಸಚಿವರು, ಹಾಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 600 ತಜ್ಞರನ್ನು ತಂಡದಿಂದ ತೆಗೆದುಹಾಕಿ ಅವರ ಸ್ಥಾನಕ್ಕೆ ಹೊಸ ಪರಿಣಿತ ತಜ್ಞರನ್ನು ಸೇರ್ಪಡೆಗೊಳಿಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಆಡಳಿತಕ್ಕೆ ವೇಗ ಮತ್ತು ಚುರುಕು ಮುಟ್ಟಿಸಲು ಕೆಲವೇ ದಿನಗಳಲ್ಲಿ 20 ರಿಂದ 25 ನೂತನ ಉನ್ನತ ಅಧಿಕಾರಿಗಳನ್ನು ಎನ್ಟಿಎಗೆ ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ.’
4 ಹಂತದ ಪ್ರಶ್ನೆಪತ್ರಿಕೆ ತಪಾಸಣೆ ಮತ್ತು ಸಿಐಎಸ್ಎಫ್ ಭದ್ರತೆ
‘ಪ್ರಶ್ನೆಪತ್ರಿಕೆ ಸೋರಿಕೆಯಂತಹ ಅಕ್ರಮಗಳಿಗೆ ಶಾಶ್ವತ ಕಡಿವಾಣ ಹಾಕುವ ನಿಟ್ಟಿನಲ್ಲಿ ನಾಲ್ಕು ಹಂತಗಳ ಕಠಿಣ ಪ್ರಶ್ನೆಪತ್ರಿಕೆ ತಪಾಸಣಾ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಎನ್ಟಿಎ ಕಚೇರಿಗಳನ್ನು ಸಂಪೂರ್ಣ ಸುಸಜ್ಜಿತವಾದ ನೂತನ ಆವರಣಕ್ಕೆ ಸ್ಥಳಾಂತರಿಸಲು ಸೂಚಿಸಲಾಗಿದ್ದು, ಕಚೇರಿ ಹಾಗೂ ಪರೀಕ್ಷಾ ಸಾಮಗ್ರಿಗಳ ರಕ್ಷಣೆಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲು ನಿರ್ಧರಿಸಲಾಗಿದೆ.’
‘ಪರೀಕ್ಷೆಗಳ ವಿಚಾರದಲ್ಲಿ ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ಅಳವಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಸಚಿವರು, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಯಾವುದೇ ರಾಜಿ ಇಲ್ಲ, ಮುಂಬರುವ ಎಲ್ಲಾ ಪರೀಕ್ಷೆಗಳನ್ನು ಅತ್ಯಂತ ಸುಸೂತ್ರವಾಗಿ, ನಿರ್ಭೀತಿಯಿಂದ ನಡೆಸಲು ಅಗತ್ಯವಿರುವ ಎಲ್ಲಾ ತಾಂತ್ರಿಕ ಭದ್ರತೆ ಹಾಗೂ ಅತ್ಯುನ್ನತ ಮೂಲಸೌಕರ್ಯಗಳನ್ನು ತುರ್ತಾಗಿ ಒದಗಿಸುವಂತೆ’ ಸಚಿವ ಪ್ರಲ್ಹಾದ್ ಜೋಶಿ ಸೂಚಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




