ಆತ್ಮ ನಿರ್ಭರದತ್ತ ಸಾಗುತ್ತಿದೆ ಮಧ್ಯಪ್ರದೇಶ; ಬೆಂಗಳೂರಿನಲ್ಲಿ ಶಿವರಾಜ್ ಸಿಂಗ್ ಚೌಹಾಣ್
ದೇಶದ 5 ಟ್ರಿಲಿಯನ್ ಆರ್ಥಿಕತೆಯ ಗುರಿಗೆ ಮಧ್ಯಪ್ರದೇಶದಿಂದ 50 ಬಿಲಿಯನ್ ಡಾಲರ್ ಕೊಡುಗೆ ನೀಡುತ್ತೇವೆ. ಮಧ್ಯಪ್ರದೇಶದ ತಲಾ ಆದಾಯ ಅಭಿವೃದ್ಧಿಯಾಗುತ್ತಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.

ಬೆಂಗಳೂರು: ಮಧ್ಯಪ್ರದೇಶ (Madhya Pradesh) ಕೂಡ ಆತ್ಮ ನಿರ್ಭರದತ್ತ (Atmanirbhar Madhya Pradesh) ಸಾಗುತ್ತಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಗುರುವಾರ ಹೇಳಿದರು. ನಗರದ (Bengaluru) ಖಾಸಗಿ ಹೋಟೆಲ್ನಲ್ಲಿ, ಮಧ್ಯಪ್ರದೇಶದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು. 2023ರ ಜನವರಿ 11 ಮತ್ತು 12 ರಂದು ಮಧ್ಯಪ್ರದೇಶದ ಇಂದೋರ್ನಲ್ಲಿ ‘ಇನ್ವೆಸ್ಟ್ ಮಧ್ಯಪ್ರದೇಶ (Invest Madhya Pradesh)’ ಸಮಾವೇಶ ಆಯೋಜಿಸಲಾಗುವುದು ಎಂದು ಅವರು ಹೇಳಿದರು.
ದೇಶದ 5 ಟ್ರಿಲಿಯನ್ ಆರ್ಥಿಕತೆಯ ಗುರಿಗೆ ಮಧ್ಯಪ್ರದೇಶದಿಂದ 50 ಬಿಲಿಯನ್ ಡಾಲರ್ ಕೊಡುಗೆ ನೀಡುತ್ತೇವೆ. ಮಧ್ಯಪ್ರದೇಶದ ತಲಾ ಆದಾಯ ಅಭಿವೃದ್ಧಿಯಾಗುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಮಧ್ಯಪ್ರದೇಶ ವಿಶ್ವದ ಜೊತೆ ಸ್ಪರ್ಧೆ ಮಾಡುತ್ತಿದೆ. ಅನೇಕ ಕ್ಷೇತ್ರಗಳಲ್ಲಿ ಹೂಡಿಕೆಗೆ ಸಾಕಷ್ಟು ಸುಧಾರಣೆ ನೀತಿ ತಂದಿದ್ದೇವೆ. ದೇಶದಲ್ಲಿ ಅತ್ಯುತ್ತಮ ಬಾಸುಮತಿ ಅಕ್ಕಿ, ಗೋಧಿ, ದ್ವಿದಳ ಧಾನ್ಯಗಳನ್ನು ಬೆಳೆಯುತ್ತಿದ್ದೇವೆ. ಐಟಿ ಕ್ಷೇತ್ರವೀಗ ಮಧ್ಯಪ್ರದೇಶದತ್ತ ಮುಖ ಮಾಡಿದೆ. ರಾಜ್ಯದ ಫಾರ್ಮಾ ಸೆಕ್ಟರ್ ಕೂಡಾ ಮುಂಚೂಣಿಯಲ್ಲಿದೆ ಎಂದು ಚೌಹಾಣ್ ಹೇಳಿದರು.
ಆಟೋಮೊಬೈಲ್ ಕ್ಷೇತ್ರದಲ್ಲಿ ಮಧ್ಯಪ್ರದೇಶ ಮೊದಲಿನಿಂದಲೂ ಮುಂದಿದೆ. ದೇಶದ ಮಧ್ಯದಲ್ಲಿ ನಮ್ಮ ರಾಜ್ಯವಿರುವುದರಿಂದ ಸರಕು ಸಾಕಾಣಿಕೆಗೆ ಸಾಕಷ್ಟು ಅನುಕೂಲವಿದೆ. ರಾಜ್ಯದಲ್ಲಿ ಸಾಕಷ್ಟು ಪ್ರಾಕೃತಿಕ ಸಂಪತ್ತೂ ಇದೆ. ಸ್ಟಾರ್ಟ್ ಅಪ್ಗಳಿಗೂ ಸಾಕಷ್ಟು ಬೆಂಬಲ ಸಿಗುತ್ತಿದೆ ಎಂದು ಅವರು ತಿಳಿಸಿದರು.
ಇಂದೋರ್ನಲ್ಲಿ ಹೂಡಿಕೆ ಸಮಾವೇಶ
‘ಇನ್ವೆಸ್ಟ್ ಮಧ್ಯಪ್ರದೇಶ’ ಹೂಡಿಕೆದಾರರ ಸಮಾವೇಶ ದೇಶದ ಸ್ವಚ್ಛ ನಗರಿ ಇಂದೋರ್ನಲ್ಲಿ ನಡೆಯಲಿದೆ. ಕೈಗಾರಿಕೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ನಮ್ಮ ಸರ್ಕಾರ ನೀಡಲಿದೆ. ಏಕ ಗವಾಕ್ಷಿ ವ್ಯವಸ್ಥೆ (ಸಿಂಗಲ್ ವಿಂಡೋ ಕ್ಲಿಯರೆನ್ಸ್) ಮೂಲಕ ಅನುಮತಿ ನೀಡಿ ಕೈಗಾರಿಕೆಗಳಿಗೆ ಬೆಂಬಲ ನೀಡಲಿದ್ದೇವೆ. ಖೇಲೋ ಇಂಡಿಯಾ, ಜಿ 20 ಕೂಡಾ ಮಧ್ಯಪ್ರದೇಶದಲ್ಲಿ ನಡೆಯಲಿದೆ ಎಂದು ಅಲ್ಲಿನ ಮುಖ್ಯಮಂತ್ರಿ ತಿಳಿಸಿದರು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ