AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯಪ್ರದೇಶದಲ್ಲಿ ಶಾಲಾ ಮಕ್ಕಳಿಗೆ ಪಠ್ಯಕ್ರಮದಲ್ಲಿ ‘ಆನಂದ’ ವಿಷಯ ಸೇರ್ಪಡೆಗೆ ಸರ್ಕಾರ ನಿರ್ಧಾರ

ರಾಜ್ಯದ ಸಂತೋಷ ಸೂಚ್ಯಂಕವನ್ನು ಮೌಲ್ಯಮಾಪನ ಮಾಡಲು ನಾಲ್ಕು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಸಂತೋಷ ವಿಭಾಗವು ವಿದ್ಯಾರ್ಥಿಗಳು ಒತ್ತಡದಿಂದ ಆತ್ಮಹತ್ಯೆಯಂತಹ ತೀವ್ರ ಕ್ರಮಗಳನ್ನು ತೆಗೆದುಕೊಳ್ಳದಂತೆ ನೋಡಿಕೊಳ್ಳುವ ಉದ್ದೇಶದಿಂದ ಸಂತೋಷದ ಸಂಪೂರ್ಣ ಪಠ್ಯಕ್ರಮವನ್ನು ಸಿದ್ಧಪಡಿಸಿದೆ

ಮಧ್ಯಪ್ರದೇಶದಲ್ಲಿ ಶಾಲಾ ಮಕ್ಕಳಿಗೆ ಪಠ್ಯಕ್ರಮದಲ್ಲಿ ‘ಆನಂದ’ ವಿಷಯ ಸೇರ್ಪಡೆಗೆ ಸರ್ಕಾರ ನಿರ್ಧಾರ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Feb 14, 2022 | 7:08 PM

ಭೋಪಾಲ್: ಕೊವಿಡ್ ಸಾಂಕ್ರಾಮಿಕದ (Covid 19) ನಂತರದ ಪರಿಣಾಮಗಳನ್ನು ಎದುರಿಸಲು ವಿದ್ಯಾರ್ಥಿಗಳು ಜೀವನ ಕೌಶಲ್ಯಗಳನ್ನು ಪಡೆಯಲು ಮತ್ತು ಮಾನಸಿಕವಾಗಿ ಸದೃಢರಾಗಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಮಧ್ಯಪ್ರದೇಶ (Madhya Pradesh) ಸರ್ಕಾರವು ರಾಜ್ಯದ ಶಾಲೆಗಳ ಪಠ್ಯಕ್ರಮದಲ್ಲಿ “ಆನಂದ್” ಅಥವಾ ಸಂತೋಷವನ್ನು(Hapiness) ಹೊಸ ವಿಷಯವಾಗಿ ಪರಿಚಯಿಸಲು ಸಿದ್ಧವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.  ರಾಜ್ಯದ ಸಂತೋಷ ಸೂಚ್ಯಂಕವನ್ನು ಮೌಲ್ಯಮಾಪನ ಮಾಡಲು ನಾಲ್ಕು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಸಂತೋಷ ವಿಭಾಗವು ವಿದ್ಯಾರ್ಥಿಗಳು ಒತ್ತಡದಿಂದ ಆತ್ಮಹತ್ಯೆಯಂತಹ ತೀವ್ರ ಕ್ರಮಗಳನ್ನು ತೆಗೆದುಕೊಳ್ಳದಂತೆ ನೋಡಿಕೊಳ್ಳುವ ಉದ್ದೇಶದಿಂದ ಸಂತೋಷದ ಸಂಪೂರ್ಣ ಪಠ್ಯಕ್ರಮವನ್ನು ಸಿದ್ಧಪಡಿಸಿದೆ ಎಂದು ಶಾಲೆಯ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.  “ಸೈಕಲಾಜಿಕಲ್ ಸೆಷನ್ಸ್, ಹೆಸರಾಂತ ಮತ್ತು ಪ್ರಭಾವಿ ವ್ಯಕ್ತಿಗಳ ವೈಫಲ್ಯದ ಕಥೆಗಳು ಮತ್ತು ಇತರರಿಗೆ ಸಹಾಯ ಮಾಡುವುದು, ಕ್ಷಮೆ, ತೃಪ್ತಿಯ ಭಾವನೆ, ಕೃತಜ್ಞತೆ, ಸ್ವೀಕಾರ, ಧ್ಯಾನದ ಶಕ್ತಿ, ಆತ್ಮ ವಿಶ್ವಾಸ ಮತ್ತು ಉದ್ವೇಗ-ಮುಕ್ತ ಜೀವನವನ್ನು ಹೇಗೆ ನಡೆಸುವುದು ಮುಂತಾದ ವಿವಿಧ ವಿಷಯಗಳನ್ನು ಕೋರ್ಸ್‌ನಲ್ಲಿ ಸೇರಿಸಲಾಗಿದೆ ಎಂದು ರಾಜ್ಯ ಆನಂದ ಸಂಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಖಿಲೇಶ್ ಅರ್ಗಲ್ ಹೇಳಿದರು.  ಆರಂಭದಲ್ಲಿ, 9 ರಿಂದ 12 ನೇ ತರಗತಿಗಳಿಗೆ “ಆನಂದ್” ಅನ್ನು ಪ್ರತ್ಯೇಕ ವಿಷಯವಾಗಿ ಪರಿಚಯಿಸಲಾಗುವುದು ಎಂದು ಅವರು ಹೇಳಿದರು.

“ಶಿಕ್ಷಕರು ಪ್ರತಿ ಸಮಸ್ಯೆಯ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸುವ ಮೂಲಕ ಸಮಸ್ಯೆಯನ್ನು ನೇರವಾಗಿ ಪರಿಹರಿಸುತ್ತಾರೆ. ನಾವು ಕಥೆಯ ನೈತಿಕತೆಯನ್ನು ಕೇಳುವುದಿಲ್ಲ ಆದರೆ ಶಿಕ್ಷಕರು ಮೊದಲು ‘ಚಿಂತಾ ಕಾ ಕೋಯಿ ಲಾಭ್ ನಹೀ ಹೈ’ (ಚಿಂತೆ ಮಾಡುವುದರಿಂದ ಏನೂ ಪ್ರಯೋಜನವಿಲ್ಲ) ಎಂಬಂತಹ ವಿಷಯವನ್ನು ವಿವರಿಸುತ್ತಾರೆ. ನಂತರ ಕಥೆಗಳು, ಕಾರ್ಯಯೋಜನೆಗಳು ಮತ್ತು ವೈಯಕ್ತಿಕ ಅನುಭವದ ಮೂಲಕ ಶಿಕ್ಷಕರು ವಿದ್ಯಾರ್ಥಿಗಳಿಗೆ ಇದರ ಬಗ್ಗೆ ತಿಳುವಳಿಕೆ ಮೂಡಿಸುತ್ತಾರೆ ಎಂದು ಯೋಜನಾಧಿಕಾರಿ ಸತ್ಯ ಪ್ರಕಾಶ್ ಆರ್ಯ ಹೇಳಿದರು.  ಈ ವಿಷಯವನ್ನು ಬೋಧಿಸಲು ಶಿಕ್ಷಕರಿಗೆ ಮೊದಲು ತರಬೇತಿ ನೀಡಲಾಗುವುದು.

“ಇದು ವಿದ್ಯಾರ್ಥಿಗಳ ಜೀವನಶೈಲಿಯನ್ನು ಬದಲಾಯಿಸುತ್ತದೆ. ಭೌತಿಕ ಜೀವನದ ವಿರುದ್ಧ ಹೋರಾಡಲು ಅವರು ತಮ್ಮ ಆಂತರಿಕ ಶಕ್ತಿಯನ್ನು ಅರ್ಥಮಾಡಿಕೊಳ್ಳುತ್ತಾರೆ. ಮೂಲಭೂತವಾಗಿ, ಧ್ಯಾನ ಮತ್ತು ಜೀವನ ಕೌಶಲ್ಯಗಳ ಬೋಧನೆಗಳ ಮೂಲಕ, ನಮ್ಮ ಭವಿಷ್ಯದ ಪೀಳಿಗೆಯನ್ನು ಮಾನಸಿಕವಾಗಿ ಬಲಪಡಿಸಲು ನಾವು ಬಯಸುತ್ತೇವೆ ಎಂದು ಶಾಲಾ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಹೇಳಿದ್ದಾರೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ಎದುರಿಸಲು ಕೋರ್ಸ್ ಅನ್ನು ಪರಿಚಯಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2020 ರ ವಾರ್ಷಿಕ ಮರಣ ಮತ್ತು ಭಾರತದಲ್ಲಿ ಆತ್ಮಹತ್ಯೆ (ADSI) ವರದಿಯ ಪ್ರಕಾರ, ವಿದ್ಯಾರ್ಥಿಗಳ ಆತ್ಮಹತ್ಯೆಯ ವಿಷಯದಲ್ಲಿ ಮಹಾರಾಷ್ಟ್ರದ ನಂತರ ಮಧ್ಯಪ್ರದೇಶವು ಭಾರತದಲ್ಲಿ ಎರಡನೇ ಅತ್ಯಂತ ಕೆಟ್ಟ ರಾಜ್ಯವಾಗಿದೆ. 2019 ಕ್ಕೆ ಹೋಲಿಸಿದರೆ 2020 ರಲ್ಲಿ ಮಧ್ಯಪ್ರದೇಶದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಯ ಸಂಖ್ಯೆ ಶೇ 15 ಹೆಚ್ಚಾಗಿದೆ.

2020 ರಲ್ಲಿ 235 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ವಿಫಲವಾದ ಕಾರಣ ಎಂಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡರು, 287 ಪ್ರಕರಣಗಳನ್ನು ದಾಖಲಿಸಿದ ಮಹಾರಾಷ್ಟ್ರದ ನಂತರ ಭಾರತದಲ್ಲಿ ಎರಡನೇ ಅತಿ ಹೆಚ್ಚು. ಅದೇ ರೀತಿ, ವಿದ್ಯಾರ್ಥಿಗಳ ಒಟ್ಟಾರೆ ಆತ್ಮಹತ್ಯೆಯಲ್ಲಿ, ಮಹಾರಾಷ್ಟ್ರದ ನಂತರ 1,158 ಪ್ರಕರಣಗಳೊಂದಿಗೆ ಎಂಪಿ ಎರಡನೇ ಸ್ಥಾನದಲ್ಲಿದೆ, ಅಲ್ಲಿ 1,648 ಪ್ರಕರಣಗಳು ವರದಿಯಾಗಿವೆ ಎಂದು ವರದಿ ತಿಳಿಸಿದೆ.

ಕೊವಿಡ್ 19 ಕ್ಕಿಂತ ಮೊದಲು, 10 ವಿದ್ಯಾರ್ಥಿಗಳಲ್ಲಿ ಮೂವರಿಗೆ ಮಾನಸಿಕ ಸಹಾಯದ ಅಗತ್ಯವಿದೆ ಆದರೆ ಕೊವಿಡ್ 19 ನಂತರ ಈಗ 10 ರಲ್ಲಿ ಏಳು ಮಕ್ಕಳಿಗೆ ಇದರ ಅಗತ್ಯವಿದೆ” ಎಂದು ಕ್ಲಿನಿಕಲ್ ಸೈಕಿಯಾಟ್ರಿಸ್ಟ್ ಡಾ ಸತ್ಯಕಾಂತ್ ತ್ರಿವೇದಿ ಅವರು ರಾಜ್ಯ ಸರ್ಕಾರದಲ್ಲಿ ಮಾನಸಿಕ ಆರೋಗ್ಯಕ್ಕೆ ಪ್ರತ್ಯೇಕ ತರಗತಿಗಳನ್ನು ಹೊಂದಲು ವಿನಂತಿಸಿದ್ದಾರೆ.

“ಆನ್‌ಲೈನ್ ತರಗತಿಗಳು ಮತ್ತು ದೀರ್ಘಕಾಲದವರೆಗೆ ಶಾಲೆಗಳನ್ನು ಮುಚ್ಚುವುದರಿಂದ ವಿದ್ಯಾರ್ಥಿಗಳು ಅಸಾಮಾನ್ಯ ಖಿನ್ನತೆಯನ್ನು ಎದುರಿಸುತ್ತಿದ್ದಾರೆ. ಅವರನ್ನು ತರಗತಿಯಲ್ಲಿ ತೇರ್ಗಡೆ ಮಾಡಲಾಗುತ್ತದೆ. ಆದರೆ ಅವರಿಗೆ ಪರಿಕಲ್ಪನೆಗಳು ಸ್ಪಷ್ಟವಾಗಿರದ ಕಾರಣ ವಿದ್ಯಾರ್ಥಿಗಳು ಮಾನಸಿಕವಾಗಿ ತೊಂದರೆಗೊಳಗಾಗುತ್ತಾರೆ ಎಂದು ತ್ರಿವೇದಿ ಹೇಳಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್ ಸರ್ಕಾರಗಳು ರಿಮೋಟ್ ಕಂಟ್ರೋಲ್ ಮೂಲಕ ನಡೆಯುತ್ತಿವೆ: ಪಂಜಾಬ್​​ನಲ್ಲಿ ಮೋದಿ ವಾಗ್ದಾಳಿ