ಮಹಾರಾಷ್ಟ್ರ ಪ್ರವಾಹ:ನದಿಯಲ್ಲಿ ಕೊಚ್ಚಿಹೋದ 3,000 ಗ್ಯಾಸ್ ಸಿಲಿಂಡರ್‌ಗಳು, ಮನೆಗೆ ಕೊಂಡೊಯ್ಯಬೇಡಿ ಎಂದು ಡಿಸಿ ಎಚ್ಚರಿಕೆ

ಮಹಾರಾಷ್ಟ್ರದ ರಾಯಗಢ ಪ್ರವಾಹದಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂನ 3,000 LPG ಗ್ಯಾಸ್ ಸಿಲಿಂಡರ್‌ಗಳು ನದಿಯಲ್ಲಿ ಕೊಚ್ಚಿಹೋಗಿವೆ. ಗ್ರಾಮಸ್ಥರು ಇವುಗಳನ್ನು ಮನೆಗೆ ಕೊಂಡೊಯ್ಯುತ್ತಿದ್ದು, ಜಿಲ್ಲಾಧಿಕಾರಿ ಕಠಿಣ ಎಚ್ಚರಿಕೆ ನೀಡಿದ್ದಾರೆ. ಈ ಸಿಲಿಂಡರ್‌ಗಳು ಸ್ಫೋಟಗೊಳ್ಳುವ ಅಪಾಯವಿದ್ದು, ಸಾರ್ವಜನಿಕರು ಅವುಗಳನ್ನು ಬಳಸಬಾರದು. ಕೂಡಲೇ ಹತ್ತಿರದ ಅಧಿಕಾರಿಗಳಿಗೆ ಒಪ್ಪಿಸುವಂತೆ ಸೂಚಿಸಲಾಗಿದೆ. ಜೀವ ಹಾನಿ ತಪ್ಪಿಸಲು ಇದು ಅತ್ಯಗತ್ಯ.

ಮಹಾರಾಷ್ಟ್ರ ಪ್ರವಾಹ:ನದಿಯಲ್ಲಿ ಕೊಚ್ಚಿಹೋದ 3,000 ಗ್ಯಾಸ್ ಸಿಲಿಂಡರ್‌ಗಳು, ಮನೆಗೆ ಕೊಂಡೊಯ್ಯಬೇಡಿ ಎಂದು ಡಿಸಿ ಎಚ್ಚರಿಕೆ
ಸಿಲಿಂಡರ್

Updated on: Jul 09, 2026 | 12:33 PM

ರಾಯಗಢ , ಜುಲೈ 09: ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಸುರಿಯುತ್ತಿರುವ ಭೀಕರ ಮಳೆ(Rain) ಮತ್ತು ಪ್ರವಾಹದ ನಡುವೆ ಅತ್ಯಂತ ಅಪಾಯಕಾರಿ ಹಾಗೂ ಆತಂಕಕಾರಿ ಘಟನೆಯೊಂದು ಸಂಭವಿಸಿದೆ. ಖಲಾಪುರ ತಾಲ್ಲೂಕಿನಲ್ಲಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಗ್ಯಾಸ್ ಬಾಟ್ಲಿಂಗ್ ಸ್ಥಾವರಕ್ಕೆ ಪ್ರವಾಹದ ನೀರು ನುಗ್ಗಿದ ಪರಿಣಾಮ, ಬರೋಬ್ಬರಿ 3,000 ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಇವುಗಳಲ್ಲಿ ಬಹುತೇಕ ಸಿಲಿಂಡರ್‌ಗಳು ಹತ್ತಿರದ ಪಾತಾಳಗಂಗಾ ನದಿಯಲ್ಲಿ ಸಾಲು ಸಾಲಾಗಿ ತೇಲುತ್ತಿರುವುದು ಕಂಡುಬಂದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ನದಿ ದಡದಲ್ಲಿ ಗ್ಯಾಸ್ ಸಿಲಿಂಡರ್ ಆಯ್ದುಕೊಂಡ ಜನ

ನದಿಯಲ್ಲಿ ಸಾವಿರಾರು ಸಿಲಿಂಡರ್‌ಗಳು ತೇಲಿಬರುತ್ತಿರುವುದನ್ನು ಕಂಡ ನದಿ ತೀರದ ಗ್ರಾಮಸ್ಥರು ಮತ್ತು ಸ್ಥಳೀಯ ನಿವಾಸಿಗಳು, ಜೀವದ ಹಂಗು ತೊರೆದು ಆ ಸಿಲಿಂಡರ್‌ಗಳನ್ನು ದಡಕ್ಕೆ ಎಳೆದು ತಂದು ತಂತಮ್ಮ ಮನೆಗಳಿಗೆ ಕೊಂಡೊಯ್ಯುತ್ತಿದ್ದಾರೆ ಎಂಬ ವರದಿಗಳು ಅಧಿಕಾರಿಗಳ ನಿದ್ದೆ ಕೆಡಿಸಿವೆ.

ಘಟನೆಯು ಖಲಾಪುರದ ಎಂಐಡಿಸಿ ಕೈಗಾರಿಕಾ ಪ್ರದೇಶದಲ್ಲಿರುವ ಎಚ್‌ಪಿಸಿಎಲ್ ಪ್ಲಾಂಟ್‌ನಲ್ಲಿ ನಡೆದಿದೆ. ಪ್ರವಾಹದ ನೀರಿನ ರಭಸಕ್ಕೆ ಸಿಲಿಂಡರ್‌ಗಳನ್ನು ಸಂಗ್ರಹಿಸಿಡಲಾಗಿದ್ದ ಆವರಣವೇ ಮುಳುಗಿಹೋಗಿ, ಈ ಅವಾಂತರ ಸೃಷ್ಟಿಯಾಗಿದೆ.

ಜಿಲ್ಲಾಧಿಕಾರಿಗಳ ಕಠಿಣ ಎಚ್ಚರಿಕೆ:ಅವುಗಳನ್ನು ಬಳಸಬೇಡಿ, ಜೀವಕ್ಕೆ ಆಪತ್ತು

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ರಾಯಗಢ ಜಿಲ್ಲಾಧಿಕಾರಿಗಳು ಸಾರ್ವಜನಿಕರಿಗೆ ಕಠಿಣ ಮುನ್ನೆಚ್ಚರಿಕೆ ಸಂದೇಶ ರವಾನಿಸಿದ್ದಾರೆ.ನದಿಯಲ್ಲಿ ಕೊಚ್ಚಿಬಂದಿರುವ ಸಿಲಿಂಡರ್‌ಗಳು ತುಂಬಿವೆಯೇ ಅಥವಾ ಖಾಲಿಯಿವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನೀರಿನ ರಭಸಕ್ಕೆ ಅವುಗಳ ವಾಲ್ವ್ ಹಾನಿಗೊಳಗಾಗಿ ಅನಿಲ ಸೋರಿಕೆಯಾಗುವ ಭೀತಿ ಇರುತ್ತದೆ.

ಮತ್ತಷ್ಟು ಓದಿ: Weather Report : ಕರಾವಳಿ ಮತ್ತು ಮಲೆನಾಡಿನಲ್ಲಿ ಭಾರೀ ಮಳೆ; ‘ರೆಡ್ ಅಲರ್ಟ್’ ಘೋಷಣೆ

ಮನೆಗೆ ಕೊಂಡೊಯ್ಯಬೇಡಿ

ಯಾವುದೇ ನಾಗರಿಕರು ಈ ಸಿಲಿಂಡರ್‌ಗಳನ್ನು ತಮ್ಮ ವೈಯಕ್ತಿಕ ಬಳಕೆಗೆ ಮನೆಗೆ ಕೊಂಡೊಯ್ಯಬಾರದು, ಅವುಗಳನ್ನು ತೆರೆಯಲು ಪ್ರಯತ್ನಿಸಬಾರದು. ಇದು ಭೀಕರ ಸ್ಫೋಟಕ್ಕೆ ಕಾರಣವಾಗಬಹುದು.

ವಿಡಿಯೋ

ಅಧಿಕಾರಿಗಳಿಗೆ ಒಪ್ಪಿಸಿ

ನದಿ ದಡದಲ್ಲಿ ಸಿಲಿಂಡರ್ ಸಿಕ್ಕರೆ ತಕ್ಷಣವೇ ಹತ್ತಿರದ ತಹಶೀಲ್ದಾರ್ ಕಚೇರಿ ಅಥವಾ ಸ್ಥಳೀಯ ಗ್ಯಾಸ್ ವಿತರಕರಿಗೆ ಒಪ್ಪಿಸಬೇಕು ಎಂದು ಆಡಳಿತ ಆದೇಶಿಸಿದೆ.

ರೈಲ್ವೆ ಹಳಿಗಳು ಮತ್ತು ಕೈಗಾರಿಕಾ ಪ್ರದೇಶಗಳ ಪಕ್ಕದಲ್ಲೇ ಹಾದುಹೋಗುವ ಪಾತಾಳಗಂಗಾ ನದಿಯು ಪ್ರಸ್ತುತ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ, ನದಿ ಪಾತ್ರದ ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಸದ್ಯಕ್ಕೆ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾದ ವರದಿಯಾಗಿಲ್ಲ. ಎಚ್‌ಪಿಸಿಎಲ್ ಕಂಪನಿಯ ತಜ್ಞರು ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿ ದೋಣಿಗಳ ಮೂಲಕ ನದಿಯಲ್ಲಿ ತೇಲುತ್ತಿರುವ ಸಿಲಿಂಡರ್‌ಗಳನ್ನು ಮರಳಿ ವಶಪಡಿಸಿಕೊಳ್ಳುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us