Golden Temple: ಅಮೃತಸರದ ಸ್ವರ್ಣ ಮಂದಿರ ಅಪವಿತ್ರಗೊಳಿಸಲು ಯತ್ನ; ಯುವಕನನ್ನು ಥಳಿಸಿ ಕೊಂದ ಸಿಖ್ಖರು!

| Updated By: ಸುಷ್ಮಾ ಚಕ್ರೆ

Updated on: Dec 19, 2021 | 10:02 AM

ಅಮೃತಸರ ಗೋಲ್ಡನ್ ಟೆಂಪಲ್​ನಲ್ಲಿ ಸಂಜೆ ನಡೆಯುವ ಪ್ರಾರ್ಥನೆ ವೇಳೆ ಆ ಯುವಕ ಕಬ್ಬಿಣದ ಸರಪಳಿಯ ಮೇಲಿನಿಂದ ಹಾರಿ ಗುರು ಗ್ರಂಥ ಸಾಹೀಬ್ (ಸಿಖ್ ಧರ್ಮದ ಪವಿತ್ರ ಗ್ರಂಥ) ಬಳಿ ಇರಿಸಲಾಗಿದ್ದ ಖಡ್ಗವನ್ನು ಎತ್ತಿಕೊಂಡಿದ್ದ.

Golden Temple: ಅಮೃತಸರದ ಸ್ವರ್ಣ ಮಂದಿರ ಅಪವಿತ್ರಗೊಳಿಸಲು ಯತ್ನ; ಯುವಕನನ್ನು ಥಳಿಸಿ ಕೊಂದ ಸಿಖ್ಖರು!
ಗೋಲ್ಡನ್ ಟೆಂಪಲ್​ನಲ್ಲಿ ಸಿಖ್ಖರ ಗುಂಪು
Follow us on

ಅಮೃತಸರ: ಪಂಜಾಬ್​ನಲ್ಲಿರುವ ಸಿಖ್ಖರ ಪವಿತ್ರ ಕ್ಷೇತ್ರವಾದ ಅಮೃತಸರದ ಸ್ವರ್ಣ ಮಂದಿರವನ್ನು ಅಪವಿತ್ರಗೊಳಿಸಲು ಪ್ರಯತ್ನಿಸಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೋಪಗೊಂಡ ಭಕ್ತರು ಯುವಕನೊಬ್ಬನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಅಮೃತಸರ ಗೋಲ್ಡನ್ ಟೆಂಪಲ್​ನಲ್ಲಿ ಸಂಜೆ ನಡೆಯುವ ಪ್ರಾರ್ಥನೆ ವೇಳೆ ಆ ಯುವಕ ಕಬ್ಬಿಣದ ಸರಪಳಿಯ ಮೇಲಿನಿಂದ ಹಾರಿ ಗುರು ಗ್ರಂಥ ಸಾಹೀಬ್ (ಸಿಖ್ ಧರ್ಮದ ಪವಿತ್ರ ಗ್ರಂಥ) ಬಳಿ ಇರಿಸಲಾಗಿದ್ದ ಖಡ್ಗವನ್ನು ಎತ್ತಿಕೊಂಡಿದ್ದ. ಇದರಿಂದ ಕೋಪಗೊಂಡ ಪ್ರಾರ್ಥನಾನಿರತ ಸಿಖ್ಖರ ಗುಂಪು ಹಾಗೂ ಅಲ್ಲಿದ್ದ ಭದ್ರತಾ ಸಿಬ್ಬಂದಿ ಆತನಿಗೆ ಮನಬಂದಂತೆ ಥಳಿಸಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಆತ ಸಾವನ್ನಪ್ಪಿದ್ದಾನೆ.

ನೀಟಾಗಿ ಕ್ಷೌರ ಮಾಡಿಸಿಕೊಂಡಿದ್ದ ಆತ ತಲೆಗೆ ಹಳದಿ ಬಣ್ಣದ ಬಟ್ಟೆ ಕಟ್ಟಿಕೊಂಡಿದ್ದ. ಖಡ್ಗದ ಬಳಿ ಯಾರೂ ಹೋಗದಂತೆ ಕಬ್ಬಿಣದ ಸರಪಳಿಯನ್ನು ಹಾಕಲಾಗಿತ್ತು. ಆ ಸರಪಳಿಯನ್ನು ದಾಟಿ ಆತ ಖಡ್ಗ ಎತ್ತಿಕೊಂಡಿದ್ದ. ತಕ್ಷಣ ಕರ್ತವ್ಯನಿರತ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುವಾಗ ಆತನಿಗೆ ಥಳಿಸಿದ್ದರು. ಅಲ್ಲಿದ್ದ ಸಿಖ್ಖರು ಕೂಡ ಆತನಿಗೆ ಹೊಡೆದಿದ್ದರು.

ಅಮೃತಸರ ಪೊಲೀಸ್ ಆಯುಕ್ತರು ನೀಡಿರುವ ಮಾಹಿತಿಯ ಪ್ರಕಾರ, ಆ ಯುವಕ ಸಿಖ್ಖರ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಉದ್ದೇಶದಿಂದಲೇ ಈ ಕೃತ್ಯ ಎಸಗಲು ಯತ್ನಿಸಿದ್ದ. ಆದ್ದರಿಂದ ಸಾರ್ವಜನಿಕರು ಆತನನ್ನು ಸಾಯುವ ಹಾಗೆ ಥಳಿಸಿದ್ದಾರೆ ಎಂದು ಹೇಳಿದ್ದಾರೆ. ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ಪ್ರಾರಂಭಿಸಿದ್ದಾರೆ.

ಮೃತ ಯುವಕನ ವಯಸ್ಸು 20-25 ವರ್ಷ ಇರಬಹುದು ಎನ್ನಲಾಗಿದೆ. ಆತ ಯಾರೆಂಬ ಬಗ್ಗೆಯೂ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಆ ಪ್ರಾರ್ಥನೆಯ ಸಂದರ್ಭದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಂದು ಆತನ ಮರಣೋತ್ತರ ಪರೀಕ್ಷೆ ನಡೆಯಲಿದೆ.

ಇದನ್ನೂ ಓದಿ: ಬೀದರನ ಗುರು ನಾನಕ್ ಜೀರಾ ಸಾಹಿಬ್ ಅಮೃತಸರ್​ನಲ್ಲಿರುವ ಸ್ವರ್ಣಮಂದಿರಕ್ಕೆ ಪರ್ಯಾಯ ಎನಿಸಿಕೊಂಡಿದೆ

ಅಮೃತಸರದ ವೃದ್ಧೆಗೆ ಸಹಾಯ ಮಾಡಲು ಮುಂದಾದ ನೆಟ್ಟಿಗರು! ನೀವೂ 80 ವರ್ಷದ ಅಜ್ಜಿಯನ್ನು ಬೆಂಬಲಿಸುವುದಾದರೆ ಇದನ್ನು ಓದಿ

Published On - 9:53 am, Sun, 19 December 21