Manipur Violence: ಮಣಿಪುರ ಹಿಂಸಾಚಾರದ ಬಗ್ಗೆ ಕೆರಳಿದ ವಿಪಕ್ಷಗಳು, ಪ್ರಧಾನಿ ಮಧ್ಯಸ್ಥಿಕೆಗೆ ಮನವಿ

|

Updated on: Jun 18, 2023 | 10:50 AM

ಮಣಿಪುರ ಗಲಭೆ ದಿನದಿಂದ ದಿನಕ್ಕೆ ಹಿಂಸಾಚಾರದ ರೂಪವನ್ನು ತಾಳುತ್ತಲೇ ಇದೆ. ಕಳೆದ ಒಂದೂವರೆ ತಿಂಗಳಿನಿಂದ ರಾಜ್ಯ ಹಿಂಸಾಚಾರದ ಸುಳಿಯಲ್ಲಿ ಸಿಲುಕಿದೆ.

Manipur Violence: ಮಣಿಪುರ ಹಿಂಸಾಚಾರದ ಬಗ್ಗೆ ಕೆರಳಿದ ವಿಪಕ್ಷಗಳು, ಪ್ರಧಾನಿ ಮಧ್ಯಸ್ಥಿಕೆಗೆ ಮನವಿ
ಮಣಿಪುರ ಗಲಭೆ
Follow us on

ಮಣಿಪುರ ಗಲಭೆ ದಿನದಿಂದ ದಿನಕ್ಕೆ ಹಿಂಸಾಚಾರದ ರೂಪವನ್ನು ತಾಳುತ್ತಲೇ ಇದೆ. ಕಳೆದ ಒಂದೂವರೆ ತಿಂಗಳಿನಿಂದ ರಾಜ್ಯ ಹಿಂಸಾಚಾರದ ಸುಳಿಯಲ್ಲಿ ಸಿಲುಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಷ್ಟೇ ಪ್ರಯತ್ನ ಪಟ್ಟರೂ ಹಿಂಸಾಚಾರ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇನ್ನೂ ಹಲವು ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಈಗ ಕಾಂಗ್ರೆಸ್ ನೇತೃತ್ವದ ಮಣಿಪುರದ ಹತ್ತು ವಿರೋಧ ಪಕ್ಷಗಳು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಬೇಕೆಂದು ಒತ್ತಾಯಿಸಿದ್ದು, ಅವರ ಮಧ್ಯಸ್ಥಿಕೆಗೆ ಮನವಿ ಮಾಡಿವೆ.

ಹಿಂಸಾಚಾರದ ಕುರಿತು ಶನಿವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಮೂರು ಬಾರಿ ಮಣಿಪುರದ ಮಾಜಿ ಮುಖ್ಯಮಂತ್ರಿ ಒ ಇಬೋಬಿ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಕೋರಿದ್ದೇನೆ ಎಂದು ಹೇಳಿದರು. ಜೂನ್ 20 ರಂದು ಅಮೆರಿಕಕ್ಕೆ ತೆರಳುವ ಮೊದಲು ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿಯವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ ಎಂದು ಅವರು ಹೇಳಿದರು.

ಮತ್ತಷ್ಟು ಓದಿ: Manipur Violence: ಮಣಿಪುರದಲ್ಲಿ ಮತ್ತೆ ಹಿಂಸಾಚಾರ, 9 ಸಾವು, ಹಲವರಿಗೆ ಗಾಯ

ರಾಜಕೀಯ ಲಾಭ ಪಡೆಯುವುದು ಅವರ ಉದ್ದೇಶವಲ್ಲ ಎಂದು ಇಬೋಬಿ ಸಿಂಗ್ ಹೇಳಿದ್ದಾರೆ. ನಾವು ಶಾಂತಿಯನ್ನು ಮಾತ್ರ ಬಯಸುತ್ತೇವೆ. ದಯವಿಟ್ಟು ನಮಗೆ ಸಹಾಯ ಮಾಡಿ ಎಂದಿದ್ದಾರೆ. ಮೇ 3 ರಿಂದ ರಾಜ್ಯದಲ್ಲಿ ಹಿಂಸಾಚಾರ ನಡೆಯುತ್ತಿದೆ ಮತ್ತು ಈ ಸಂಪೂರ್ಣ ವಿಷಯದ ಬಗ್ಗೆ ಪ್ರಧಾನಿ ಮೋದಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಕಾಂಗ್ರೆಸ್ ನಾಯಕ ಹೇಳಿದರು.

ಎಲ್ಲೆಡೆ ಹಿಂಸಾಚಾರದ ಕೂಗು ಕೇಳಿಬರುತ್ತಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 20 ಸಾವಿರ ಜನರು ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಅವರು ಹೇಳಿದರು. ಈಗಲೂ ಪ್ರಧಾನಿ ರಾಜ್ಯದ ಬಗ್ಗೆ ಏನನ್ನೂ ಹೇಳುತ್ತಿಲ್ಲ. ಮಣಿಪುರ ಭಾರತದ ಭಾಗವೇ ಅಥವಾ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಜೂನ್ 10 ರಂದೇ ಪ್ರಧಾನಿ ಅವರನ್ನು ಭೇಟಿ ಮಾಡುವಂತೆ 10 ವಿರೋಧ ಪಕ್ಷಗಳ ನಾಯಕರು ಇಮೇಲ್ ಕಳುಹಿಸಿದ್ದರು, ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ಪ್ರಧಾನಿ ಭೇಟಿಗೆ ಸಂಬಂಧಿಸಿದ ಪತ್ರವನ್ನು ಜೂನ್ 12 ರಂದು ಪಿಎಂಒಗೆ ಹಸ್ತಾಂತರಿಸಲಾಗಿದೆ.

22 ವರ್ಷಗಳ ಹಿಂದೆ ಮಣಿಪುರದಲ್ಲಿ ಹಿಂಸಾಚಾರ ನಡೆದಾಗ ಅಂದಿನ ಪ್ರಧಾನಿ ಅಟಲ್ ಬಿಹಾರ್ ವಾಜಪೇಯಿ ಅವರು ಎರಡು ಬಾರಿ ಸರ್ವಪಕ್ಷ ಸಭೆ ಕರೆದಿದ್ದರು. ಆಗ ವಾಜಪೇಯಿ ಕೂಡ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದರು.

ನಿಮಾಯ್ ಚಂದ್ ಲುವಾಂಗ್ ಮಾತನಾಡಿ ಗೃಹ ಸಚಿವ ಅಮಿತ್ ಶಾ ಅವರ ಭೇಟಿಯ ನಂತರ ರಾಜ್ಯದಲ್ಲಿ ಹಿಂಸಾಚಾರ ಮುಂದುವರೆದಿದೆ ಎಂದು ಹೇಳಿದರು. ಅಂದರೆ ಈಗಿನ ಸರ್ಕಾರ ಹಿಂಸಾಚಾರವನ್ನು ನಿಭಾಯಿಸುವಲ್ಲಿ ದಯನೀಯವಾಗಿ ವಿಫಲವಾಗಿದೆ.

ಪ್ರಧಾನಿ ಮೋದಿಯವರು ಇದರಲ್ಲಿ ಮಧ್ಯಪ್ರವೇಶಿಸಿ ಹಿಂಸಾಚಾರವನ್ನು ತಡೆಯಲು ಪರಿಹಾರವನ್ನು ಕಂಡುಕೊಳ್ಳಬೇಕೆಂದು ನಾವು ಬಯಸುತ್ತೇವೆ ಎಂದಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ