
ಕೌಶಂಬಿ, ಆಗಸ್ಟ್ 31: ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಇಂದು ಭೀಕರ ಸ್ಫೋಟ (Blast) ಉಂಟಾಗಿದೆ. ಈ ಸ್ಫೋಟದಲ್ಲಿ 11 ಜನರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಸ್ಫೋಟದ ರಭಸಕ್ಕೆ ಇಡೀ ಕಾರ್ಖಾನೆಯು ನೆಲಸಮಗೊಂಡು ಧ್ವಂಸಗೊಂಡಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ರಕ್ಷಣಾ ತಂಡಗಳು ಅವಶೇಷಗಳ ಅಡಿಯಿಂದ ಮೃತದೇಹಗಳನ್ನು ಹೊರತೆಗೆಯುತ್ತಿದ್ದು, ಹಲವರು ಸಿಲುಕಿರುವ ಅಥವಾ ನಾಪತ್ತೆಯಾಗಿದ್ದಾರೆ.
ಈ ಸ್ಥಳದಲ್ಲಿ ಸುಮಾರು 8ರಿಂದ 10 ಜೆಸಿಬಿ ಯಂತ್ರಗಳನ್ನು ನಿಯೋಜಿಸಲಾಗಿದ್ದು, ಸತತ 4 ಗಂಟೆಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಐಜಿ ಮತ್ತು ಡಿಐಜಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಭಯೋತ್ಪಾದನಾ ವಿರೋಧಿ ಪಡೆ (ATS) ತಂಡಗಳು ಸ್ಥಳಕ್ಕೆ ಆಗಮಿಸಿದ್ದು, ಸ್ಫೋಟದ ಸುತ್ತಮುತ್ತಲಿನ ಪರಿಸ್ಥಿತಿಗಳ ಕುರಿತು ತನಿಖೆ ನಡೆಸುತ್ತಿವೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ನಂತರವೇ ಸಾವುನೋವುಗಳ ಖಚಿತ ಮಾಹಿತಿ ತಿಳಿಯಲಿದೆ.
ಇದನ್ನೂ ಓದಿ: ದೆಹಲಿಯ ಸಿಎನ್ಜಿ ಪಂಪ್ ಸ್ಟೇಷನ್ನಲ್ಲಿ ಟ್ರಕ್ಗೆ ಗ್ಯಾಸ್ ತುಂಬಿಸುವಾಗ ಭಾರಿ ಸ್ಫೋಟ; 3 ಜನ ಸಾವು, ಮೂವರಿಗೆ ಗಾಯ
ಈ ಸ್ಫೋಟದ ತೀವ್ರತೆಯು ಎಷ್ಟು ಭೀಕರವಾಗಿತ್ತೆಂದರೆ ಕಾರ್ಖಾನೆಯು ಸಂಪೂರ್ಣವಾಗಿ ಕುಸಿದುಬಿದ್ದಿದೆ. ಕಾರ್ಖಾನೆಯ ಸುತ್ತಮುತ್ತಲಿನ ಸುಮಾರು 50 ಮೀಟರ್ ವ್ಯಾಪ್ತಿಯಲ್ಲಿದ್ದ 5ರಿಂದ 7 ಮನೆಗಳು ಹಾನಿಗೊಳಗಾಗಿವೆ. ಸ್ಫೋಟದ ಶಬ್ದವು ಸುಮಾರು 2 ಕಿಲೋಮೀಟರ್ ದೂರದವರೆಗೆ ಕೇಳಿಸಿದೆ ಎಂದು ವರದಿಯಾಗಿದೆ. ಸ್ಫೋಟದ ಬೆನ್ನಲ್ಲೇ ಆಕಾಶಕ್ಕೆ ದಟ್ಟವಾದ ಹೊಗೆಯ ಮೋಡಗಳು ಚಿಮ್ಮಿ ಇಡೀ ಪ್ರದೇಶವನ್ನು ಆವರಿಸಿಕೊಂಡವು. ಕಾರ್ಖಾನೆಯೊಳಗಿದ್ದ ಪಟಾಕಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಸರಣಿ ಸ್ಫೋಟಗಳು ಉಂಟಾಗಿ, ರಕ್ಷಣಾ ಕಾರ್ಯಾಚರಣೆಗೆ ಅಡಚಣೆ ಉಂಟಾಯಿತು.
At least 11 people have lost their lives in a cracker factory explosion in Kaushambi district of Uttar Pradesh. pic.twitter.com/heJTBm4jLj
— Piyush Rai (@Benarasiyaa) August 31, 2026
ಸ್ಪೋಟದ ತೀವ್ರತೆಯು ಎಷ್ಟು ಭೀಕರವಾಗಿತ್ತೆಂದರೆ, ಹತ್ತಿರದ ದೆಹಲಿ-ಹೌರಾ ರೈಲು ಮಾರ್ಗದಲ್ಲಿ ರೈಲು ಸಂಚಾರದ ಮೇಲೆಯೂ ಪರಿಣಾಮ ಬೀರಿದೆ. ಘಟನೆಯ ನಂತರ ಸುಮಾರು ಒಂದು ಗಂಟೆ ಕಾಲ ರೈಲು ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತು. ಸ್ಥಳದ ಸಮೀಪಕ್ಕೆ ತಲುಪಿದ್ದ ಅಜ್ಮೀರ್-ಸೀಲ್ದಾ ಎಕ್ಸ್ಪ್ರೆಸ್ ಅನ್ನು ಹಿಂತಿರುಗಿ ಮನೋರಿ ರೈಲು ನಿಲ್ದಾಣಕ್ಕೆ ಕಳುಹಿಸಲಾಯಿತು. ದೆಹಲಿಯಿಂದ ವಾರಾಣಸಿಗೆ ಪ್ರಯಾಣಿಸುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಸೈಯದ್ ಸರಾವಾನ್ ರೈಲು ನಿಲ್ದಾಣದಲ್ಲಿ ತಡೆಯಲಾಗಿತ್ತು.
ಇದನ್ನೂ ಓದಿ: ಅಮರಾವತಿ ಜಿಲ್ಲಾ ಆಸ್ಪತ್ರೆಯ ಐಸಿಯುನಲ್ಲಿ ವೆಂಟಿಲೇಟರ್ ಸ್ಫೋಟ: 3 ನವಜಾತ ಶಿಶುಗಳು ಬಲಿ, 6 ಮಕ್ಕಳ ಸ್ಥಿತಿ ಗಂಭೀರ
ಪ್ರಾಥಮಿಕ ಮಾಹಿತಿಯ ಪ್ರಕಾರ, ಸ್ಫೋಟ ಸಂಭವಿಸಿದಾಗ ಸುಮಾರು 25 ಕಾರ್ಮಿಕರು ಪಟಾಕಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಕಾರ್ಖಾನೆಯು ಕೌಶಂಬಿಯ ಪುರಾಮುಫ್ತಿ ಪೊಲೀಸ್ ಠಾಣೆ ವ್ಯಾಪ್ತಿಯ ಮನೌರಿ ಪ್ರದೇಶದಲ್ಲಿದೆ. ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ ಮತ್ತು ಆಡಳಿತಾತ್ಮಕ ತಂಡಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಮತ್ತು ಸಿಲುಕಿರುವವರನ್ನು ಹುಡುಕಲು ಕಾರ್ಯಾಚರಣೆ ಮುಂದುವರಿದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ