
ಮಿರ್ಜಾಪುರ, ಜುಲೈ 16: ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ಬೆಳಗಿನ ಜಾವ ನಡೆದ ಭೀಕರ ರಸ್ತೆ ಅಪಘಾತ(Accident)ದಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಸಿಮೆಂಟ್ ತುಂಬಿದ ಲಾರಿಯೊಂದು ಚಲಿಸುತ್ತಿರುವಾಗಲೇ ಟೈರ್ ಸ್ಫೋಟಗೊಂಡು, ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಯೊಂದಕ್ಕೆ ನುಗ್ಗಿದ್ದರಿಂದ ಈ ಘೋರ ದುರಂತ ಸಂಭವಿಸಿದೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ. ಸಿಮೆಂಟ್ ಚೀಲಗಳನ್ನು ಹೊತ್ತ ಟ್ರಕ್ ವಾರಾಣಸಿಯಿಂದ ಸೋನಭದ್ರಕ್ಕೆ ವೇಗವಾಗಿ ಪ್ರಯಾಣಿಸುತ್ತಿತ್ತು. ಮಿರ್ಜಾಪುರ ಜಿಲ್ಲೆಯ ಹೆದ್ದಾರಿ ಬಳಿ ತಲುಪುತ್ತಿದ್ದಂತೆ ಲಾರಿಯ ಒಂದು ಟೈರ್ ಹಠಾತ್ತನೆ ಸ್ಫೋಟಗೊಂಡಿದೆ. ಇದರಿಂದಾಗಿ ಚಾಲಕನ ನಿಯಂತ್ರಣ ತಪ್ಪಿದ ದೈತ್ಯ ಟ್ರಕ್, ನೇರವಾಗಿ ರಸ್ತೆ ಪಕ್ಕದಲ್ಲಿದ್ದ ಮನೆಯೊಳಗೆ ನುಗ್ಗಿದೆ.
ಗಾಢ ನಿದ್ರೆಯಲ್ಲಿದ್ದಾಗಲೇ ನಜ್ಜುಗುಜ್ಜಾದ ಜೀವಗಳು
ಅಪಘಾತ ಸಂಭವಿಸಿದಾಗ ಮುಂಜಾನೆ ಸಮಯವಾಗಿದ್ದರಿಂದ ಮನೆಯ ಸದಸ್ಯರೆಲ್ಲರೂ ಗಾಢ ನಿದ್ರೆಯಲ್ಲಿದ್ದರು. ನಿಯಂತ್ರಣ ತಪ್ಪಿದ ಲಾರಿ ನೇರವಾಗಿ ಮನೆಗೆ ಡಿಕ್ಕಿ ಹೊಡೆದ ರಭಸಕ್ಕೆ ಗೋಡೆಗಳು ಕುಸಿದು ಬಿದ್ದಿದ್ದು, ಮಲಗಿದ್ದವರ ಮೇಲೆಯೇ ಲಾರಿ ಹರಿದಿದೆ.
ಘಟನೆಯಲ್ಲಿ ರಾಜಾರಾಮ್ (47), ಸುಖಿಯಾ (70) ಮತ್ತು ಚಂದತಾರಾ (45) ಎಂಬುವವರು ಲಾರಿಯ ಚಕ್ರಗಳ ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮತ್ತಷ್ಟು ಓದಿ: ಎರಡು ಟ್ರಕ್ಗಳ ನಡುವೆ ಸಿಲುಕಿ ಪಿಕಪ್ ವ್ಯಾನ್ ನಜ್ಜುಗುಜ್ಜು, ಮದುವೆ ಮನೆಯಿಂದ ಬರುತ್ತಿದ್ದ 13 ಮಂದಿ ಸಾವು
ಇಬ್ಬರಿಗೆ ಗಂಭೀರ ಗಾಯ: ಅಪಘಾತದಲ್ಲಿ 12 ವರ್ಷದ ಬಾಲಕಿ ಸೇರಿದಂತೆ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಮತ್ತು ಪೊಲೀಸರು ಗಾಯಾಳುಗಳನ್ನು ರಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ವಾರಣಾಸಿಯ ಟ್ರಾಮಾ ಸೆಂಟರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಡಿಯೋ
यूपी:मिर्जापुर में एक परिवार के 5 लोग घर के अंदर गहरी नींद में सो रहे थे,सुबह करीब 3 बजे एक ट्रक बेकाबू होकर घर के अंदर घुसा और सो रहे लोगों को कुचल डाला
दो महिलाओं समेत 3 लोगों की मौत हो गयी और 2 गंभीर रूप से घायल है pic.twitter.com/FtIvH0mcCI
— Mukesh Rajput Journalist (@Mukeshk92294988) July 16, 2026
ಕ್ರೇನ್ ಮೂಲಕ ಟ್ರಕ್ ಹೊರಕ್ಕೆ
ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಲಾರಿ ಸಂಪೂರ್ಣವಾಗಿ ಮನೆಯೊಳಗೆ ಸಿಲುಕಿಕೊಂಡಿತ್ತು. ನಂತರ ಪೊಲೀಸರು ಭಾರಿ ಗಾತ್ರದ ಕ್ರೇನ್ ಯಂತ್ರವನ್ನು ಸ್ಥಳಕ್ಕೆ ತರಿಸಿ, ಹಾನಿಗೊಳಗಾದ ಮನೆಯ ಅವಶೇಷಗಳ ಮಧ್ಯದಿಂದ ಟ್ರಕ್ ಅನ್ನು ಹೊರಕ್ಕೆ ತೆಗೆದಿದ್ದಾರೆ. ಸದ್ಯ ಲಾರಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದು, ಅಪಘಾತಕ್ಕೆ ಚಾಲಕನ ಬೇಜವಾಬ್ದಾರಿತನ ಕಾರಣವೇ ಅಥವಾ ತಾಂತ್ರಿಕ ದೋಷವೇ ಎಂಬುದನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ. ನಿದ್ರೆಯಲ್ಲಿದ್ದಾಗಲೇ ಮೂವರನ್ನು ಬಲಿಪಡೆದ ಈ ದುರಂತ ಸ್ಥಳೀಯರಲ್ಲಿ ಭಾರಿ ಶೋಕ ಮೂಡಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ