
ನವದೆಹಲಿ, ಮೇ 23: ಪ್ರಧಾನಿ ನರೇಂದ್ರ ಮೋದಿ(Narendra Modi)ಅವರು ದೇಶದ 51,000 ಕ್ಕೂ ಹೆಚ್ಚು ಯುವಕರಿಗೆ ರೈಲ್ವೆ, ಬ್ಯಾಂಕಿಂಗ್, ರಕ್ಷಣೆ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಸರ್ಕಾರಿ ನೇಮಕಾತಿ ಪತ್ರಗಳನ್ನು ವರ್ಚುವಲ್ ಮೂಲಕ ವಿತರಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ತಮ್ಮ ಇತ್ತೀಚಿನ ಐದು ದೇಶಗಳ ಪ್ರವಾಸದ ಮಹತ್ವವನ್ನು ವಿವರಿಸುವ ಮೂಲಕ ರಾಜಕೀಯ ವಿರೋಧಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ.
5 ದೇಶಗಳ ಪ್ರವಾಸದ ಅಸಲಿ ಉದ್ದೇಶವೇನು?
ನಾನು ಕೇವಲ ಐದು ರಾಷ್ಟ್ರಗಳಿಗೆ ಪ್ರವಾಸ ಕೈಗೊಂಡು ಬಂದಿಲ್ಲ, ಬದಲಿಗೆ ಈ ಅವಧಿಯಲ್ಲಿ ಡಜನ್ಗಟ್ಟಲೆ ದೇಶಗಳ ಪ್ರಮುಖ ಜಾಗತಿಕ ಕಂಪನಿಗಳ ನಾಯಕರನ್ನು ಭೇಟಿ ಮಾಡಿ ವಿವರವಾದ ಚರ್ಚೆ ನಡೆಸಿದ್ದೇನೆ ಎಂದು ಪ್ರಧಾನಿ ಹೇಳಿದರು. ಇಂದು ಇಡೀ ಜಗತ್ತು ಭಾರತದ ತಾಂತ್ರಿಕ ಪ್ರಗತಿ ಮತ್ತು ಇಲ್ಲಿನ ಯುವಶಕ್ತಿಯ ಬಗ್ಗೆ ಅಪಾರ ಉತ್ಸಾಹ ಹೊಂದಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಯುವಕರಿಗೆ ದೊಡ್ಡ ಮನ್ನಣೆ ಮತ್ತು ಅವಕಾಶಗಳು ಸಿಗಬೇಕೆಂಬುದೇ ನನ್ನ ವಿದೇಶಿ ಪ್ರವಾಸಗಳ ಮುಖ್ಯ ಉದ್ದೇಶವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
#WATCH | Prime Minister Narendra Modi says, “…Today, more than 51,000 youth have received appointment letters for government jobs. Today, all of you are becoming important partners, responsible partners, in the country’s development journey. You are all going to assume new… https://t.co/0K67E3Vs0z pic.twitter.com/YRY5lgaH0L
— ANI (@ANI) May 23, 2026
ಯಾವ ದೇಶದೊಂದಿಗೆ ಎಂತಹ ಒಪ್ಪಂದಗಳು?
ಭಾರತವು ವಿಶ್ವದಲ್ಲೇ ಅತ್ಯಂತ ನಂಬಿಕಸ್ಥ ‘ಸಪ್ಲೈ ಚೈನ್’ ದೇಶವಾಗಿ ಹೊರಹೊಮ್ಮುತ್ತಿದೆ ಎಂದ ಮೋದಿ, ವಿವಿಧ ದೇಶಗಳೊಂದಿಗೆ ಮಾಡಿಕೊಂಡಿರುವ ಪ್ರಮುಖ ಒಪ್ಪಂದಗಳನ್ನು ಪಟ್ಟಿ ಮಾಡಿದರು.
ನೆದರ್ಲ್ಯಾಂಡ್ಸ್: ಜಗತ್ತಿನ ಹೆಸರಾಂತ ಸೆಮಿಕಂಡಕ್ಟರ್ ಕಂಪನಿ ‘ASML’ ಭಾರತದ ‘TATA’ ಕಂಪನಿಯೊಂದಿಗೆ ಅತ್ಯಂತ ಅಪರೂಪದ ಒಪ್ಪಂದ ಮಾಡಿಕೊಂಡಿದೆ. ಇದು ದೇಶದಲ್ಲಿ ಲೆಕ್ಕವಿಲ್ಲದಷ್ಟು ಉದ್ಯೋಗಗಳನ್ನು ಸೃಷ್ಟಿಸಲಿದೆ.
ಸ್ವೀಡನ್ ಮತ್ತು ಇಟಲಿ: ಹಸಿರು ಇಂಧನ, ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ನಾವೀನ್ಯತೆ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ಮಹತ್ವದ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ.
ಯುಎಇ ಮತ್ತು ನಾರ್ವೆ: ಹಡಗು ನಿರ್ಮಾಣ, ಸೂಪರ್ಕಂಪ್ಯೂಟಿಂಗ್ ಮತ್ತು ಹಸಿರು ತಂತ್ರಜ್ಞಾನದಲ್ಲಿ ಜಂಟಿಯಾಗಿ ಕೆಲಸ ಮಾಡಲು ಒಪ್ಪಂದಗಳಾಗಿವೆ.
ಮತ್ತಷ್ಟು ಓದಿ: ನರೇಂದ್ರ ಮೋದಿಗೆ ನಾರ್ವೆಯ ಅತ್ಯುನ್ನತ ಪ್ರಶಸ್ತಿ ಪ್ರದಾನ; ಭಾರತದ ಪ್ರಧಾನಿಗೆ 32ನೇ ಜಾಗತಿಕ ಗೌರವ
ಅಭಿವೃದ್ಧಿ ಹೊಂದಿದ ಭಾರತಕ್ಕೆ ಯುವಕರೇ ಪಾಲುದಾರರು
ನೇಮಕಾತಿ ಪತ್ರ ಪಡೆದ ಯುವಕರನ್ನು ಅಭಿನಂದಿಸಿದ ಪ್ರಧಾನಿ ಮೋದಿ, ಇಂದು ನೀವೆಲ್ಲರೂ ದೇಶದ ಅಭಿವೃದ್ಧಿ ಪ್ರಯಾಣದಲ್ಲಿ ಅತ್ಯಂತ ಜವಾಬ್ದಾರಿಯುತ ಪಾಲುದಾರರಾಗುತ್ತಿದ್ದೀರಿ. ಮುಂಬರುವ ವರ್ಷಗಳಲ್ಲಿ ‘ವಿಕಸಿತ ಭಾರತ’ದ ಸಂಕಲ್ಪವನ್ನು ಈಡೇರಿಸುವಲ್ಲಿ ನಿಮ್ಮ ಪಾತ್ರ ನಿರ್ಣಾಯಕವಾಗಿದೆ ಎಂದು ಕರೆ ನೀಡಿದರು. ಶುದ್ಧ ಇಂಧನ, ಹಸಿರು ಹೈಡ್ರೋಜನ್ ಮತ್ತು ಸುಸ್ಥಿರ ಉತ್ಪಾದನಾ ವಲಯಗಳು ವೇಗವಾಗಿ ಬೆಳೆಯುತ್ತಿದ್ದು, ಯುವಕರಿಗೆ ಭವಿಷ್ಯದಲ್ಲಿ ಉದ್ಯೋಗಾವಕಾಶಗಳ ಮಹಾಪೂರವೇ ಹರಿದುಬರಲಿದೆ ಎಂದು ಅವರು ಭರವಸೆ ನೀಡಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ