ನಾನು ಬೀದಿ ಹೋರಾಟಗಾರ: ಜೈರಾಮ್ ರಮೇಶ್ ಹೇಳಿಕೆಗೆ ಧರ್ಮೇಂದ್ರ ಪ್ರಧಾನ್ ತಿರುಗೇಟು
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ನಂತರ ರಾಜೀನಾಮೆ ನೀಡಿದ ಧರ್ಮೇಂದ್ರ ಪ್ರಧಾನ್ ಸಂಸತ್ಗೆ ಮರಳಿದರು. ಎನ್ಡಿಎ ಸಂಸದರು ಭವ್ಯ ಸ್ವಾಗತ ನೀಡಿದರು. ಜೈರಾಮ್ ರಮೇಶ್ ಅವರ ವ್ಯಂಗ್ಯಕ್ಕೆ ಪ್ರಧಾನ್, "ನಾನು ಬೀದಿ ಹೋರಾಟಗಾರ, ಎಸಿ ಕೊಠಡಿಯಲ್ಲಿ ಕೂರುವ ಕಾರ್ಯಕರ್ತನಲ್ಲ" ಎಂದು ಖಡಕ್ ತಿರುಗೇಟು ನೀಡಿದರು. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ ಅವರ ನಿರ್ಧಾರವನ್ನು ಬಿಜೆಪಿ ನಾಯಕರು ಶ್ಲಾಘಿಸಿದ್ದಾರೆ, ಪ್ರಧಾನ್ ಅವರ ಮುಂದಿನ ರಾಜಕೀಯ ಪಾತ್ರ ಕುತೂಹಲ ಕೆರಳಿಸಿದೆ.

ನವದೆಹಲಿ, ಜುಲೈ 27: ನೀಟ್(NEET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಬೆನ್ನಲ್ಲೇ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮೊದಲ ಬಾರಿಗೆ ಸಂಸತ್ತಿಗೆ ಆಗಮಿಸಿದ ಧರ್ಮೇಂದ್ರ ಪ್ರಧಾನ್ ಅವರಿಗೆ ಎನ್ಡಿಎ ಸಂಸದರು ಭವ್ಯ ಸ್ವಾಗತ ಕೋರಿದರು. ಈ ವೇಳೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರ ಹೇಳಿಕೆಗೆ ಪ್ರಧಾನ್ ನೀಡಿದ ತಿರುಗೇಟು ಸಂಸತ್ತಿನ ಅಂಗಳದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಸಂಸತ್ತಿನ ಆವರಣದಲ್ಲಿ ಪ್ರಧಾನ್ ಅವರನ್ನು ಎದುರುಗೊಂಡ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, “ಇದೆಲ್ಲಾ ನಡೆಯುತ್ತಿರುತ್ತದೆ ಬಿಡಿ” ಎಂದು ವ್ಯಂಗ್ಯವಾಗಿ ಮಾತನಾಡಿ ಸಮಾಧಾನಪಡಿಸಲು ಯತ್ನಿಸಿದರು. ಇದಕ್ಕೆ ತಕ್ಷಣವೇ ಪ್ರತ್ಯುತ್ತರ ನೀಡಿದ ಪ್ರಧಾನ್, “ಏನೂ ಆಗಿಲ್ಲ, ನಾನು ಬೀದಿ ಹೋರಾಟಗಾರ , ಎಸಿ ಕೊಠಡಿಯಲ್ಲಿ ಕೂರುವ ಕಾರ್ಯಕರ್ತನಲ್ಲ ಎಂದು ಖಡಕ್ ಆಗಿ ತಿರುಗೇಟು ನೀಡಿದ್ದಾರೆ.
ಸಂಸತ್ತಿನಲ್ಲಿ ಭವ್ಯ ಸ್ವಾಗತ ಸೋಮವಾರ ಪ್ರಧಾನ್ ಅವರು ಕಾರಿನಿಂದ ಇಳಿಯುತ್ತಿದ್ದಂತೆ ಎನ್ಡಿಎ ಸಂಸದರು “ಧರ್ಮೇಂದ್ರ ಪ್ರಧಾನ್ ಜಿಂದಾಬಾದ್” ಎಂದು ಜಯಘೋಷ ಕೂಗಿದರು. ಒಬ್ಬ ಸಂಸದರು ಸಾಂಪ್ರದಾಯಿಕ ಟೋಪಿ ಹಾಕಿ, ಶಾಲು ಹೊದಿಸಿ ಗೌರವಿಸಿದರು. ಯಾವುದೇ ನೇರ ಆರೋಪಗಳಿಲ್ಲದಿದ್ದರೂ ಯುವಕರ ಭವಿಷ್ಯಕ್ಕಾಗಿ ಹಾಗೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ ಅವರ ನಿರ್ಧಾರವನ್ನು ಬಿಜೆಪಿ ನಾಯಕರು “ತ್ಯಾಗ ಮತ್ತು ರಾಜಕೀಯ ಹೊಣೆಗಾರಿಕೆಯ ಮಾದರಿ” ಎಂದು ಬಣ್ಣಿಸಿದ್ದಾರೆ.
ವಿಡಿಯೋ
#WATCH | Delhi: Former Union Education Minister and BJP MP Dharmendra Pradhan arrives at the Parliament.
BJP-NDA MPs sloganeer “Dharmendra Pradhan zindabad” as they receive him here. pic.twitter.com/7DHXIzMkvI
— ANI (@ANI) July 27, 2026
ಒಡಿಶಾದ ಸಂಬಲ್ಪುರ ಕ್ಷೇತ್ರದ ಸಂಸದರಾಗಿರುವ ಧರ್ಮೇಂದ್ರ ಪ್ರಧಾನ್, ರಾಜ್ಯ ಬಿಜೆಪಿಯ ಅತ್ಯಂತ ಪ್ರಭಾವಿ ನಾಯಕರಾಗಿದ್ದಾರೆ. ಒಡಿಶಾದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವಲ್ಲಿ ಮತ್ತು 78 ಶಾಸಕರಲ್ಲಿ ಬಹುಪಾಲು ಶಾಸಕರನ್ನು ಬೆಳೆಸುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ.
ಮತ್ತಷ್ಟು ಓದಿ: ನೀಟ್ ಕೇಸ್ ಬಳಿಕ ಎಚ್ಚೆತ್ತ ಕೇಂದ್ರ: ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ದಿಟ್ಟ ನಿರ್ಧಾರ ಕೈಗೊಂಡ ಮೋದಿ, ಏನದು?
ಪ್ರಧಾನ್ ಅವರು ಕೇವಲ ಸಚಿವರಷ್ಟೇ ಅಲ್ಲದೆ, ಪಕ್ಷದ ಪ್ರಮುಖ ‘ಚುನಾವಣಾ ತಂತ್ರಜ್ಞ’ ಎಂದು ಹೆಸರು ಪಡೆದಿದ್ದಾರೆ. ಇತ್ತೀಚೆಗೆ ಹರಿಯಾಣ, ಬಿಹಾರ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದ ಭವಾನಿಪುರ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಗೆಲುವಿನ ಹಿಂದೆ ಇವರ ಪರಿಶ್ರಮವಿತ್ತು. ಸಚಿವ ಸ್ಥಾನದಿಂದ ಕೆಳಗಿಳಿದಿರುವ ಪ್ರಧಾನ್ ಅವರಿಗೆ ಮುಂಬರುವ 5 ರಾಜ್ಯಗಳ ವಿಧಾನಸಭಾ ಚುನಾವಣೆಗಳ ಉಸ್ತುವಾರಿ ಅಥವಾ ಬಿಜೆಪಿ ಪಕ್ಷದ ಸಂಘಟನೆಯಲ್ಲಿ ಪ್ರಮುಖ ರಾಷ್ಟ್ರೀಯ ಹುದ್ದೆಯನ್ನು ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




