Modi Mann Ki Baat: ‘ಮನ್ ಕಿ ಬಾತ್’: ಕಾರ್ಗಿಲ್ ವೀರರಿಗೆ ಪ್ರಧಾನಿ ಮೋದಿ ನಮನ, ಕ್ಯಾಚ್ ದ ರೇನ್ ಆಂದೋಲನಕ್ಕೆ ಕರೆ

ಪ್ರಧಾನಿ ಮೋದಿ 'ಮನ್ ಕಿ ಬಾತ್'ನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ವೀರಯೋಧರ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸಿದರು. ಜಲಸಂರಕ್ಷಣೆಗಾಗಿ 'ಕ್ಯಾಚ್ ದಿ ರೇನ್' ಅಭಿಯಾನದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಲು ಕರೆ ನೀಡಿದರು, ಮಳೆ ನೀರನ್ನು ಸಂಗ್ರಹಿಸಿ ಅಂತರ್ಜಲ ವೃದ್ಧಿಸುವ ಮಹತ್ವವನ್ನು ಒತ್ತಿಹೇಳಿದರು. ಈ ಕಾರ್ಯಕ್ರಮ 100 ಕೋಟಿಗೂ ಹೆಚ್ಚು ಶ್ರೋತೃಗಳನ್ನು ತಲುಪಿ ದೇಶಾದ್ಯಂತ ಜನಪ್ರಿಯತೆ ಗಳಿಸಿದೆ.

Modi Mann Ki Baat: ‘ಮನ್ ಕಿ ಬಾತ್’: ಕಾರ್ಗಿಲ್ ವೀರರಿಗೆ ಪ್ರಧಾನಿ ಮೋದಿ ನಮನ, ಕ್ಯಾಚ್ ದ ರೇನ್ ಆಂದೋಲನಕ್ಕೆ ಕರೆ
ನರೇಂದ್ರ ಮೋದಿ

Updated on: Jul 26, 2026 | 11:50 AM

ನವದೆಹಲಿ, ಜುಲೈ 26:  ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಅಸಾಧಾರಣ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸಿದ ಪ್ರಧಾನಿ, ಕಾರ್ಗಿಲ್ ದಿನವು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಸಂಕೇತವಾಗಿದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ(Narendra Modi) ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್‌’ನ 136ನೇ ಸಂಚಿಕೆಯ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು.

“ಕಾರ್ಗಿಲ್ ವಿಜಯ್ ದಿವಸ್ ಎಂಬುದು ಕೇವಲ ಒಂದು ದಿನಾಂಕವಲ್ಲ, ಅದು ನಮ್ಮ ರಾಷ್ಟ್ರದ ಶೌರ್ಯ ಮತ್ತು ತ್ಯಾಗದ ಅಮರ ಕಥೆಯಾಗಿದೆ. ದೇಶದ ಗಡಿಯನ್ನು ರಕ್ಷಿಸಲು ನಮ್ಮ ವೀರ ಸೈನಿಕರು ತೋರಿದ ಅಪ್ರತಿಮ ಧೈರ್ಯವನ್ನು ಈ ದಿನ ನಮಗೆ ನೆನಪಿಸುತ್ತದೆ” ಎಂದು ಪ್ರಧಾನಿ ಬಣ್ಣಿಸಿದರು.

ಇದೇ ವೇಳೆ, ಜಲಸಂರಕ್ಷಣೆಯ ಮಹತ್ವವನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಮಳೆಗಾಲದ ಈ ಸಮಯದಲ್ಲಿ ‘ಕ್ಯಾಚ್ ದಿ ರೇನ್’ಅಭಿಯಾನದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಜುಲೈ 4 ರಿಂದ ದೇಶಾದ್ಯಂತ ಚುರುಕುಗೊಂಡಿರುವ ಈ ವಿಶೇಷ ಆಂದೋಲನದಡಿ, ಪ್ರತಿಯೊಬ್ಬರೂ ಬಿದ್ದ ಪ್ರತಿಯೊಂದು ಹನಿ ಮಳೆನೀರನ್ನು ವ್ಯರ್ಥ ಮಾಡದೆ ಇಂಗುಗುಂಡಿಗಳು ಹಾಗೂ ಜಲಮೂಲಗಳ ಮೂಲಕ ಭೂಮಿಯ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ಮತ್ತಷ್ಟು ಓದಿ: “ಥ್ಯಾಂಕ್ಯೂ ಫ್ರೆಂಡ್ಸ್”: ಮತ್ತೊಂದು ಮಹತ್ವದ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ

ಪ್ರಸಾರ ಭಾರತಿ ಮತ್ತು ಐಐಎಂ ರೋಹ್ಟಕ್ ನಡೆಸಿದ ಇತ್ತೀಚಿನ ಅಧ್ಯಯನದ ಪ್ರಕಾರ, ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ಕನಿಷ್ಠ ಒಮ್ಮೆಯಾದರೂ ಕೇಳಿದವರ ಸಂಖ್ಯೆ 100 ಕೋಟಿ (1 ಬಿಲಿಯನ್) ತಲುಪಿದ್ದು, ದೇಶದ ಶೇಕಡಾ 96 ರಷ್ಟು ಜನರಿಗೆ ಈ ಕಾರ್ಯಕ್ರಮದ ಅರಿವಿದೆ. ಸಮಾಜ, ಶಿಕ್ಷಣ, ಸಂಸ್ಕೃತಿ ಮತ್ತು ನಾವೀನ್ಯತೆಯ ಯಶೋಗಾಥೆಗಳನ್ನು ಪ್ರಚುರಪಡಿಸುವ ಈ ಕಾರ್ಯಕ್ರಮವನ್ನು ಆಲ್ ಇಂಡಿಯಾ ರೇಡಿಯೋ, ದೂರದರ್ಶನ ಮತ್ತು ವಿವಿಧ ಡಿಜಿಟಲ್ ವೇದಿಕೆಗಳಲ್ಲಿ ಹಿಂದಿ ಸೇರಿದಂತೆ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರ ಮಾಡಲಾಯಿತು.

ರಕ್ಷಣಾ ವಿಚಾರಗಳ ಜೊತೆಗೆ ಜಲಸಂರಕ್ಷಣೆಯ ಮಹತ್ವದ ಕುರಿತು ಮಾತನಾಡಿದ ಪ್ರಧಾನಿ, ಜುಲೈ 4 ರಿಂದ ದೇಶಾದ್ಯಂತ ಆರಂಭವಾಗಿರುವ ವಿಶೇಷ ಅಭಿಯಾನದಲ್ಲಿ ಎಲ್ಲರೂ ಭಾಗಿಯಾಗಬೇಕೆಂದು ಕರೆ ನೀಡಿದರು. ಮಳೆನೀರು ಕೊಯ್ಲು, ಅಂತರ್ಜಲ ಮರುಪೂರಣ, ಹಳೆಯ ಜಲಮೂಲಗಳ ಜೀರ್ಣೋದ್ಧಾರ ಮತ್ತು ಬೃಹತ್ ಸಸಿ ನೆಡುವ ಕಾರ್ಯಕ್ರಮಗಳಲ್ಲಿ ಹಳ್ಳಿ, ನಗರ ಹಾಗೂ ಪಂಚಾಯಿತಿಗಳು ಸಕ್ರಿಯವಾಗಿ ತೊಡಗಿಸಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಕೆರೆ, ಬಾವಿಗಳನ್ನು ಸಂರಕ್ಷಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ರಕ್ಷಣಾ ಉತ್ಪಾದನೆ, ರಫ್ತು ಮತ್ತು ಸ್ನೇಹಪರ ರಾಷ್ಟ್ರಗಳೊಂದಿಗಿನ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಭಾರತ ಹೊಸ ಎತ್ತರಕ್ಕೇರುತ್ತಿದೆ ಎಂದ ಪ್ರಧಾನಿ, ಇತ್ತೀಚೆಗಷ್ಟೇ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಅತ್ಯಾಧುನಿಕ ಯುದ್ಧನೌಕೆ ಐಎನ್ಎಸ್ ಮಹೇಂದ್ರಗಿರಿಯನ್ನು ಉಲ್ಲೇಖಿಸಿದರು. ಈ ಯುದ್ಧನೌಕೆಯಲ್ಲಿ ಶೇಕಡಾ 75ಕ್ಕೂ ಹೆಚ್ಚು ದೇಶೀಯ  ವಸ್ತುಗಳನ್ನು ಬಳಸಲಾಗಿದ್ದು, ಇದು ‘ಆತ್ಮನಿರ್ಭರ ಭಾರತ’ದ ಬಲಕ್ಕೆ ಸಾಕ್ಷಿಯಾಗಿದೆ ಎಂದರು.

 

ಆರು ಪಟ್ಟು ಹೆಚ್ಚಿದ ಖಾದಿ ಮಾರಾಟ:
ಕಳೆದ 12 ವರ್ಷಗಳಲ್ಲಿ ದೇಶದಲ್ಲಿ ಖಾದಿಯ ಜನಪ್ರಿಯತೆ ಗಣನೀಯವಾಗಿ ಬೆಳೆದಿದ್ದು, ಮಾರಾಟವು ಆರು ಪಟ್ಟು ಹೆಚ್ಚಾಗಿ 8,000 ಕೋಟಿ ರೂ.ಗೆ ತಲುಪಿದೆ ಎಂದು ಪ್ರಧಾನಿ ಹೇಳಿದರು. ಶೀಘ್ರದಲ್ಲೇ ಬರಲಿರುವ ‘ರಾಷ್ಟ್ರೀಯ ಕೈಮಗ್ಗ ದಿನ’ದ ಅಂಗವಾಗಿ ಪ್ರತಿಯೊಬ್ಬರೂ ಕೈಮಗ್ಗ ಹಾಗೂ ಖಾದಿ ಉತ್ಪನ್ನಗಳನ್ನು ಖರೀದಿಸುವಂತೆ ಮನವಿ ಮಾಡಿದರು. ಜೊತೆಗೆ, ಪೋಚಂಪಲ್ಲಿ, ಕಚ್ ಹಾಗೂ ತ್ರಿಪುರಾದ ಸಾಂಪ್ರದಾಯಿಕ ವಾದ್ಯಗಳನ್ನು ಪುನರುಜ್ಜೀವನಗೊಳಿಸುತ್ತಿರುವ ಸ್ಥಳೀಯ ಕಲಾವಿದರ ಶ್ರಮವನ್ನು ಪ್ರಶಂಸಿಸಿದರು.

ಭಾರತದ ಮೊದಲ ಖಾಸಗಿ ನಿರ್ಮಿತ ‘ವಿಕ್ರಮ್-1’ ರಾಕೆಟ್‌ನ ಯಶಸ್ವಿ ಉಡಾವಣೆಯನ್ನು ಉಲ್ಲೇಖಿಸಿದ ಪ್ರಧಾನಿ, “ಒಂದು ಕಾಲದಲ್ಲಿ ಅಸಾಧ್ಯವೆಂದು ಭಾವಿಸಲಾಗಿದ್ದನ್ನು ನಮ್ಮ ಯುವ ನಾವೀನ್ಯಕಾರರು ಸಾಧಿಸಿ ತೋರಿಸಿದ್ದಾರೆ” ಎಂದು ಬಣ್ಣಿಸಿದರು.

ಏಕ್ ಪೆಡ್ ಮಾ ಕೆ ನಾಮ್: ಈ ಅಭಿಯಾನದಡಿ ಅಹಮದಾಬಾದ್‌ನಲ್ಲಿ ಒಂದೇ ಗಂಟೆಯಲ್ಲಿ 3.5 ಲಕ್ಷಕ್ಕೂ ಹೆಚ್ಚು ಹಾಗೂ ಉತ್ತರ ಪ್ರದೇಶದಲ್ಲಿ ಒಂದೇ ದಿನದಲ್ಲಿ 35 ಕೋಟಿಗೂ ಹೆಚ್ಚು ಸಸಿಗಳನ್ನು ನೆಡಲಾಗಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:21 am, Sun, 26 July 26

Follow Us