Free Flight Travel: ಉಚಿತ ವಿಮಾನ ಪ್ರಯಾಣ: ಹೀಗೊಂದು ಅಫರ್ ಕೊಟ್ಟ ಮ.ಪ್ರ. ಸಿಎಂ

|

Updated on: Feb 06, 2023 | 12:09 PM

Mukhyamantri Teertha Darshan Yojana: ಮಧ್ಯಪ್ರದೇಶ ಮುಖ್ಯಮಂತ್ರಿ ತೀರ್ಥದರ್ಶನ ಯೋಜನೆ ಅಡಿಯಲ್ಲಿ ಹಿರಿಯ ನಾಗರಿಕರಿಗೆ ಉಚಿತವಾಗಿ ನೀಡಲಾಗುತ್ತಿರುವ ದರ್ಶನ ವ್ಯವಸ್ಥೆಯಲ್ಲಿ ವಿಮಾನ ಪ್ರಯಾಣ ಸೌಲಭ್ಯವನ್ನೂ ಸೇರಿಸಲಾಗುವುದು ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

Free Flight Travel: ಉಚಿತ ವಿಮಾನ ಪ್ರಯಾಣ: ಹೀಗೊಂದು ಅಫರ್ ಕೊಟ್ಟ ಮ.ಪ್ರ. ಸಿಎಂ
ವಿಮಾನ ಪ್ರಯಾಣ
Follow us on

ಭೋಪಾಲ್: ತೀರ್ಥ ಕ್ಷೇತ್ರಗಳ ಭೇಟಿಗೆ ಹಿರಿಯ ನಾಗರಿಕರಿಗೆ ಉಚಿತ ವಿಮಾನ ಪ್ರಯಾಣ ಭಾಗ್ಯ ನೀಡುವುದಾಗಿ (Free Flight Travel For Senior Citizens) ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಚೌಹಾಣ್ ಈ ಭರವಸೆ ನೀಡಿದ್ದಾರೆ. ಈ ಆಫರ್ 60 ವರ್ಷ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರಿಕರಿಗೆ ಮಾತ್ರ. ಮಧ್ಯಪ್ರದೇಶ ಸರ್ಕಾರದ ಮುಖ್ಯಮಂತ್ರಿ ತೀರ್ಥ ದರ್ಶನ ಯೋಜನೆಯಲ್ಲಿ ಪಟ್ಟಿಯಾಗಿರುವ ಕ್ಷೇತ್ರಗಳಿಗೆ ಹಿರಿಯ ನಾಗರಿಕರಿಗೆ ಉಚಿತ ಪ್ರಯಾಣ ಸೌಲಭ್ಯ ಕೊಡಲಾಗುವುದು ಎಂದು ಅವರು ಹೇಳಿದ್ದಾರೆ.

ಫೆಬ್ರುವರಿ 5ರಂದು ಭೀಂದ್​ನಲ್ಲಿ ನಡೆದ ಸಂತ ರವಿದಾಸ್ ಜಯಂತಿ ಕಾರ್ಯಕ್ರಮ ಹಾಗೂ ಚಂಬಲ್ ವಿಭಾಗದ ವಿಕಾಸ್ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ ಈ ಘೋಷಣೆ ಮಾಡಿದ್ದಾರೆ.

ತೀರ್ಥ ದರ್ಶನ್ ಯೋಜನೆಯಲ್ಲಿ ಸಂತ ರವಿದಾಸ್ ಅವರ ಜನ್ಮಸ್ಥಳವನ್ನೂ ಒಳಗೊಳ್ಳಲಾಗುವುದು. ಈ ಯೋಜನೆಯಲ್ಲಿರುವ ಕ್ಷೇತ್ರಗಳಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಸರ್ಕಾರಿ ಖರ್ಚಿನಲ್ಲೇ ವಿಮಾನ ಪ್ರಯಾಣದ ವ್ಯವಸ್ಥೆ ಮಾಡಲಾಗುವುದು ಎಂದವರು ಹೇಳಿದ್ದಾರೆ.

ಇದನ್ನೂ ಓದಿ: Madhya Pradesh: ಕಾಯಿಲೆ ಗುಣವಾಗಲೆಂದು ಕಾದ ಕಬ್ಬಿಣದಿಂದ 20 ಬಾರಿ ಚುಚ್ಚಿ ಹಸುಗೂಸು ಸಾವು

ಏನಿದು ತೀರ್ಥದರ್ಶನ ಯೋಜನೆ?

ಮಧ್ಯಪ್ರದೇಶದ ಹಿರಿಯ ನಾಗರಿಕರಿಗೆ ಭಾರತದ ಪವಿತ್ರ ಧಾರ್ಮಿಕ ತೀರ್ಥ ಕ್ಷೇತ್ರಗಳ ದರ್ಶನ ಮಾಡಿಸುವ ಯೋಜನೆ ಇದು. ಸಂಪೂರ್ಣ ಉಚಿತವಾಗಿ ಸೇವೆ ಇದೆ. ಸದ್ಯ ವಿಶೇಷ ರೈಲು, ಬಸ್ಸು, ಆಹಾರ, ವಸತಿ, ಗೈಡ್ ಇತ್ಯಾದಿ ಹಲವು ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತದೆ. ಈಗ ಸಿಎಂ ಅವರು ವಿಮಾನದ ವ್ಯವಸ್ಥೆಯನ್ನೂ ಮಾಡುವುದಾಗಿ ಹೇಳಿದ್ದಾರೆ. ಇದು ಮಧ್ಯಪ್ರದೇಶದ ಹಿರಿಯ ನಾಗರಿಕರಿಗೆ ಮಾತ್ರ ಲಭ್ಯ ಇರುವ ಉಚಿತ ದರ್ಶನ ಸೇವೆ.

ಯಾವ್ಯಾವ ಸ್ಥಳಗಳು:

ಬದ್ರಿನಾಥ್, ಕೇದಾರನಾಥ್, ಅಮರನಾಥ್, ಶಿರಡಿ, ರಾಮೇಶ್ವರಂ, ಶ್ರವಣಬೆಳಗೊಳ ಸೇರಿದಂತೆ ಹಲವು ಧಾರ್ಮಿಕ ಸ್ಥಳಗಳು ಈ ಪಟ್ಟಿಯಲ್ಲಿವೆ. ಮುಸ್ಲಿಮರ ಅಜ್ಮೇರ್ ಷರೀಫ್ ಮಸೀದಿ, ಕ್ರೈಸ್ತರ ವೇಲಂಕಣಿ ಚರ್ಚ್ ಕೂಡ ಒಳಗೊಂಡಿವೆ.

ಇದನ್ನೂ ಓದಿ: Telangana: ಶಾಸಕರ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಹೈಕೋರ್ಟ್​​ನಿಂದ ಮಹತ್ವದ ತೀರ್ಪು

2012ರಿಂದಲೂ ಮಧ್ಯಪ್ರದೇಶ ಸರ್ಕಾರದಿಂದ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಕೇವಲ ಹಿರಿಯ ನಾಗರಿಕರಿಗೆ ಮಾತ್ರವಲ್ಲ, ಶೇ. 60ರಷ್ಟು ದೈಹಿಕ ಊನತೆ ಇರುವ ವಿಶೇಷ ಚೇತನದ ವ್ಯಕ್ತಿಗಳು ತಮ್ಮೊಂದಿಗೆ ಒಬ್ಬ ಪಾಲಕನನ್ನು ಕರೆದೊಯ್ಯಬಹುದು.

ಪುರುಷರಾದರೆ 60 ವರ್ಷ ಮೇಲ್ಪಟ್ಟಿರಬೇಕು. ಮಹಿಳೆಯಾದರೆ 58 ವರ್ಷ ಮೇಲ್ಪಟ್ಟಿರಬೇಕು. ದಂಪತಿ ಪೈಕಿ ವಯೋಮಿತಿಯಲ್ಲಿ ಯಾರಾದರೊಬ್ಬರು ಅರ್ಹರಿದ್ದರೆ ಸಾಕು ಇಬ್ಬರೂ ಜೊತೆಯಲ್ಲಿ ಹೋಗಿ ಉಚಿತ ದರ್ಶನ ಭಾಗ್ಯ ಪಡೆಯಬಹುದು.