‘ನಿನ್ನಂಥ ಸಾವಿರ ಗಂಡಂದಿರನ್ನು ಇಟ್ಟುಕೊಳ್ಳಬಲ್ಲೆ’ ಎಂದಿದ್ದ ಹೆಂಡತಿಯ ಕೊಲೆ: ಪತಿಯ ಜೀವಾವಧಿ ಶಿಕ್ಷೆ 7 ವರ್ಷಕ್ಕೆ ಕಡಿತಗೊಳಿಸಿದ ಹೈಕೋರ್ಟ್!

"ನಿನ್ನಂಥ ಸಾವಿರ ಗಂಡಂದಿರನ್ನು ಇಟ್ಟುಕೊಳ್ಳಬಲ್ಲೆ" ಎಂದು ನಿಂದಿಸಿದ ಹೆಂಡತಿಯನ್ನು ಕಲ್ಲಿನಿಂದ ಹೊಡೆದು ಕೊಂದಿದ್ದ ಪತಿಯ ಜೀವಾವಧಿ ಶಿಕ್ಷೆಯನ್ನು ಮಧ್ಯಪ್ರದೇಶ ಹೈಕೋರ್ಟ್ 7 ವರ್ಷಕ್ಕೆ ಕಡಿತಗೊಳಿಸಿದೆ. ಪತ್ನಿಯ ಮಾತು ಗಂಡನ ಅಸ್ತಿತ್ವವನ್ನು ಪ್ರಶ್ನಿಸುವಂತಿದ್ದು, ಇದು ಹಠಾತ್ ಪ್ರಚೋದನೆಯಾಗಿದೆಯೇ ಹೊರತು ಪೂರ್ವ ನಿಯೋಜಿತ ಕೊಲೆಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

‘ನಿನ್ನಂಥ ಸಾವಿರ ಗಂಡಂದಿರನ್ನು ಇಟ್ಟುಕೊಳ್ಳಬಲ್ಲೆ’ ಎಂದಿದ್ದ ಹೆಂಡತಿಯ ಕೊಲೆ: ಪತಿಯ ಜೀವಾವಧಿ ಶಿಕ್ಷೆ 7 ವರ್ಷಕ್ಕೆ ಕಡಿತಗೊಳಿಸಿದ ಹೈಕೋರ್ಟ್!
ಸಾಂದರ್ಭಿಕ ಚಿತ್ರ
Image Credit source: gettyimages.com

Updated on: Jul 04, 2026 | 1:35 PM

ಮುಖ್ಯಾಂಶಗಳು

  • ಹೆಂಡತಿಯ ನಿಂದನಾತ್ಮಕ ಮಾತನ್ನು ತೀವ್ರ ಪ್ರಚೋದನೆ ಎಂದು ಪರಿಗಣಿಸಿದ ಹೈಕೋರ್ಟ್.
  • ಗರ್ಭಿಣಿ ಪತ್ನಿಯ ಕೊಲೆಗೀಡಾಗಿದ್ದ ಪತಿಯ ಜೀವಾವಧಿ ಶಿಕ್ಷೆ ಕಡಿತ.
  • ಜೀವಾವಧಿ ಶಿಕ್ಷೆಯನ್ನು 7 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಇಳಿಸಿದ ಪೀಠ.

ಮಧ್ಯಪ್ರದೇಶ, ಜುಲೈ 04: ರಾಜ್ಯದಲ್ಲಿ 7 ತಿಂಗಳ ಗರ್ಭಿಣಿಯನ್ನು ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ ಇದೀಗ ಶಿಕ್ಷೆಯನ್ನು 7 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಕಡಿತಗೊಳಿಸಿ ಮಧ್ಯಪ್ರದೇಶ ಹೈಕೋರ್ಟ್ (High Court)​ ಆದೇಶ ಹೊರಡಿಸಿದೆ. ಮೊದಲಿಗೆ ಮಹಿಳೆಯ ಕೊಲೆ ಪೂರ್ವನಿಯೋಜಿತವಾಗಿರಬಹುದೆಂದು ಹೇಳಲಾಗಿತ್ತು. ಆದರೆ “ನಿನ್ನಂತಹ ಸಾವಿರ ಗಂಡಂದಿರನ್ನು ನಾನು ಇಟ್ಟುಕೊಳ್ಳಬಲ್ಲೆ” ಎಂಬ ಪತ್ನಿಯ ಮಾತಿನಿಂದ ಪ್ರಚೋದನೆಗೊಳಗಾಗಿಯೇ ಹತ್ಯೆ ನಡೆದಿದೆ ಎಂದು ಕೋರ್ಟ್​ ಸ್ಪಷ್ಟಪಡಿಸಿದ್ದು, ಪತಿಯ ಶಿಕ್ಷೆಯನ್ನು ಕಡಿತಗೊಳಿಸಿ ನ್ಯಾಯಮೂರ್ತಿಗಳಾದ ವಿವೇಕ್ ಅಗರ್ವಾಲ್ ಮತ್ತು ಅವನೀಂದ್ರ ಕುಮಾರ್ ಸಿಂಗ್ ಅವರಿದ್ದ ವಿಭಾಗೀಯ ಪೀಠವು ಈ ಮಹತ್ವದ ತೀರ್ಪು ನೀಡಿದೆ.

ಹೆಂಡತಿಯು ಗಂಡನಿಗೆ ಈ ರೀತಿ ಹೇಳಿದಾಗ, ಅದು ಆತನ ನಿಷ್ಪ್ರಯೋಜಕತೆಯನ್ನು ಪರೋಕ್ಷವಾಗಿ ಬಿಂಬಿಸುತ್ತದೆ. ಅಂದರೆ ಮಾನವನಾಗಿ ಅಥವಾ ಪತಿಯಾಗಿ ಆತನಿಗೆ ಯಾವುದೇ ಮೌಲ್ಯವಿಲ್ಲ ಎಂದು ಸಾರಿದಂತಾಗುತ್ತದೆ. ಇದನ್ನು ಹಠಾತ್ ಪ್ರಚೋದನೆ ಎಂದು ಪರಿಗಣಿಸಬಹುದು ಎಂದು ಹೈಕೋರ್ಟ್ ತಿಳಿಸಿದೆ.

ನಡೆದಿದ್ದೇನು?

ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ಚೌರಾಯ್ ನಿವಾಸಿ ಶಿವ ಕಹಾರ್ ಎಂಬಾತ 2021ರ ಸೆಪ್ಟೆಂಬರ್ 18ರಂದು ತನ್ನ ಪತ್ನಿ ಕಿರಣ್ ಜೊತೆ ಗಲಾಟೆ ಮಾಡಿಕೊಂಡಿದ್ದ. ಜಗಳ ತಾರಕಕ್ಕೇರಿದಾಗ ಕಿರಣ್, “ನಿನ್ನಂಥ ಸಾವಿರ ಗಂಡಂದಿರನ್ನು ನಾನು ಹೊಂದಬಲ್ಲೆ” ಎಂದು ನಿಂದಿಸಿದ್ದರು. ಇದರಿಂದ ತೀವ್ರ ಕೋಪಗೊಂಡ ಶಿವ ಕಹಾರ್, ಹತ್ತಿರದಲ್ಲೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ಹೆಂಡತಿಯ ತಲೆಗೆ ಹೊಡೆದಿದ್ದನು. ಪರಿಣಾಮವಾಗಿ ತೀವ್ರ ರಕ್ತಸ್ರಾವವಾಗಿ 7 ತಿಂಗಳ ಗರ್ಭಿಣಿಯಾಗಿದ್ದ ಕಿರಣ್ ಸ್ಥಳದಲ್ಲೇ ಮೃತಪಟ್ಟಿದ್ದರು.

ಘಟನೆಯ ನಂತರ ಆರೋಪಿಯೇ ಸ್ವತಃ ಮಾವನಿಗೆ ವಿಷಯ ತಿಳಿಸಿ, ಪೊಲೀಸರಿಗೂ ಶರಣಾಗಿದ್ದ. ಈ ಪ್ರಕರಣದ ವಿಚಾರಣೆ ನಡೆಸಿದ್ದ ಛಿಂದ್ವಾರಾದ ಸ್ಥಳೀಯ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆತ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದನು.

ಹೈಕೋರ್ಟ್ ತೀರ್ಪು

ಪ್ರಕರಣದ ಸಂಪೂರ್ಣ ವಿವರಣೆ ಹಾಗೂ ಸಾಕ್ಷ್ಯಗಳನ್ನು ಪರಿಶೀಲಿಸಿದ ಹೈಕೋರ್ಟ್, ಇದು ಮೊದಲೇ ಯೋಜಿಸಿ ಮಾಡಿದ ಕೊಲೆಯಲ್ಲ ಎಂದು ಸ್ಪಷ್ಟಪಡಿಸಿದೆ. ಆರೋಪಿಗೆ ಕೊಲ್ಲುವ ಉದ್ದೇಶ ಇರಲಿಲ್ಲ, ಕೇವಲ ಪತ್ನಿಯ ನಿಂದನೆಯಿಂದ ಉಂಟಾದ ಕೋಪದಿಂದ ಈ ಘಟನೆ ನಡೆದಿದೆ ಎಂದು ಕೋರ್ಟ್ ಹೇಳಿದೆ. ಹೀಗಾಗಿ, ಕೆಳ ನ್ಯಾಯಾಲಯದ ಜೀವಾವಧಿ ಶಿಕ್ಷೆಯನ್ನು ರದ್ದುಪಡಿಸಿ, ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 304 (ಭಾಗ-1) ರ ಅಡಿಯಲ್ಲಿ ಶಿಕ್ಷೆಯನ್ನು 7 ವರ್ಷಗಳ ಕಠಿಣ ಜೈಲು ವಾಸಕ್ಕೆ ಇಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us