
ಇಂದೋರ್, ಏಪ್ರಿಲ್ 16: ಮಧ್ಯಪ್ರದೇಶದ ಡಾ. ಅಂಬೇಡ್ಕರ್ ನಗರದ (ಮೋವ್) ಸಮೀಪವಿರುವ ಬೆರ್ಚಾ ಅರಣ್ಯ ಪ್ರದೇಶವು ಒಂದು ಘೋರ ಅಪರಾಧಕ್ಕೆ ಸಾಕ್ಷಿಯಾಗಿದೆ. ದೇವಸ್ಥಾನಕ್ಕೆ ಭೇಟಿ ನೀಡಿ ಗೆಳೆಯನೊಂದಿಗೆ ಮಾತನಾಡುತ್ತಾ ಕುಳಿತಿದ್ದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ಮೃಗೀಯವಾಗಿ ದಾಳಿ ನಡೆಸಿದ್ದಾರೆ.
ಪೊಲೀಸರ ಮಾಹಿತಿಯ ಪ್ರಕಾರ, ಕಾಲೇಜು ವಿದ್ಯಾರ್ಥಿನಿ ಮತ್ತು ಆಕೆಯ ಗೆಳೆಯ ಮಂಗಳವಾರ ಸಂಜೆ ಪ್ರಸಿದ್ಧ ಲಗ್ನಶಾ ಭೈರವ ಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದರ್ಶನದ ನಂತರ ಇಬ್ಬರೂ ಸಮೀಪದ ‘ಜೈ ಜವಾನ್ ಜೈ ಕಿಸಾನ್’ ಕೊಳದ ಬಳಿ ತೆರಳಿದ್ದರು. ಸಂಜೆ ಅಸ್ಪಷ್ಟ ಬೆಳಕಿರುವಾಗಲೇ ಪೊದೆಯ ಹಿಂದೆ ಹೊಂಚು ಹಾಕಿ ಕುಳಿತಿದ್ದ ಇಬ್ಬರು ಕಾಮುಕರು ಏಕಾಏಕಿ ಆಕಯ ಮೇಲೆರಗಿದ್ದಾರೆ.
ಗೆಳೆಯನಿಗೆ ಬರ್ಬರ ಥಳಿತ, ಯುವತಿಯ ಅಪಹರಣ
ದುಷ್ಕರ್ಮಿಗಳು ಮೊದಲು ವಿದ್ಯಾರ್ಥಿನಿಯ ಗೆಳೆಯನನ್ನು ಗುರಿಯಾಗಿಸಿಕೊಂಡರು. ಕೈಯಲ್ಲಿದ್ದ ಕೋಲುಗಳಿಂದ ಆತನ ತಲೆ ಮತ್ತು ಮೈಮೇಲೆ ಮನಬಂದಂತೆ ಹೊಡೆದು ಗಾಯಗೊಳಿಸಿದರು. ಆತ ಪ್ರಾಣಭಯದಿಂದ ದಿಕ್ಕಾಪಾಲಾಗಿ ಓಡಿದಾಗ, ಕಿಡಿಗೇಡಿಗಳು ಯುವತಿಯನ್ನು ಬಲವಂತವಾಗಿ ದಟ್ಟ ಕಾಡಿನೊಳಗೆ ಎಳೆದುಕೊಂಡು ಹೋಗಿದ್ದಾರೆ. ಅಲ್ಲಿ ಆಕೆಯ ಕಿರುಚಾಟಕ್ಕೂ ಕಿವಿಗೊಡದೆ ಇಬ್ಬರೂ ಅತ್ಯಾಚಾರ ಎಸಗಿದ್ದಾರೆ.
ಮತ್ತಷ್ಟು ಓದಿ: ಐಟಿ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ, ಮತಾಂತರಕ್ಕೆ ಯತ್ನ, ನಾಸಿಕ್ನ ಟಿಸಿಎಸ್ ಕಚೇರಿಗೆ ಬೀಗ
ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು ಹೇಗೆ?
ದುಷ್ಕರ್ಮಿಗಳು ಕೃತ್ಯವೆಸಗಿ ಪರಾರಿಯಾದ ನಂತರ, ತೀವ್ರವಾಗಿ ಗಾಯಗೊಂಡಿದ್ದ ಯುವಕ ಹೇಗೋ ಧೈರ್ಯ ತಂದುಕೊಂಡು ರಸ್ತೆಗೆ ಬಂದು ತುರ್ತು ಸಹಾಯವಾಣಿಗೆ ಕರೆ ಮಾಡಿದ್ದಾನೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡ, ಕಾಡಿನೊಳಗೆ ನರಳುತ್ತಿದ್ದ ಯುವತಿಯನ್ನು ರಕ್ಷಿಸಿ ವೈದ್ಯಕೀಯ ಪರೀಕ್ಷೆಗೆ ರವಾನಿಸಿದೆ.
ತನಿಖೆ ಮತ್ತು ಪೊಲೀಸರ ಕಾರ್ಯಾಚರಣೆ
ಪ್ರಸ್ತುತ ಪೊಲೀಸರು ಈ ಸಂಬಂಧ ಸಾಮೂಹಿಕ ಅತ್ಯಾಚಾರ ಮತ್ತು ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳದಿಂದ ಕೆಲವು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಅರಣ್ಯದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳು ಸ್ಥಳೀಯರೇ ಇರಬಹುದೆಂಬ ಶಂಕೆಯಿದ್ದು, ಶೋಧ ಕಾರ್ಯ ತೀವ್ರಗೊಂಡಿದೆ. ದೇವಸ್ಥಾನದ ಇಂತಹ ಘೋರ ಕೃತ್ಯ ನಡೆದಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಕಾಡಿನ ದಾರಿಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಈಗ ದೊಡ್ಡ ಮಟ್ಟದ ಪ್ರಶ್ನೆಗಳು ಎದ್ದಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:52 am, Thu, 16 April 26