ದೆಹಲಿಯಲ್ಲಿ ಮುಂದುವರೆದ ಬಾಂಬ್ ಬೆದರಿಕೆ ಕರೆ: 8 ತಿಂಗಳಲ್ಲಿ 150ಕ್ಕೂ ಹೆಚ್ಚು ಶಾಲಾ-ಕಾಲೇಜುಗಳಿಗೆ ಬೆದರಿಕೆ ಸಂದೇಶ

ಇತ್ತೀಚೆಗೆ ದೆಹಲಿಯ ಶಾಲೆ ಕಾಲೇಜುಗಳಿಗೆ ಸರಣಿ ಬಾಂಬ್ ಬೆದರಿಕೆ ಹೆಚ್ಚಾಗಿದೆ. ಇದೀಗ ಶನಿವಾರದಂದು ದೆಹಲಿಯ ಹಲವು ಶಾಲೆಗಳಿಗೆ ದುಷ್ಕರ್ಮಿಗಳಿಂದ ಇ-ಮೇಲ್ ಮೂಲಕ​ ಬಾಂಬ್​ ಬೆದರಿಕೆ ಸಂದೇಶ ರವಾನಿಸಲಾಗಿದೆ. ಕಳೆದ 8 ತಿಂಗಳಲ್ಲಿ 150ಕ್ಕೂ ಹೆಚ್ಚು ಶಾಲಾ-ಕಾಲೇಜುಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿವೆ.

ದೆಹಲಿಯಲ್ಲಿ ಮುಂದುವರೆದ ಬಾಂಬ್ ಬೆದರಿಕೆ ಕರೆ: 8 ತಿಂಗಳಲ್ಲಿ 150ಕ್ಕೂ ಹೆಚ್ಚು ಶಾಲಾ-ಕಾಲೇಜುಗಳಿಗೆ ಬೆದರಿಕೆ ಸಂದೇಶ
ದೆಹಲಿಯ ಶಾಲೆ

Updated on: Sep 20, 2025 | 10:17 AM

ದೆಹಲಿ, ಸೆಪ್ಟೆಂಬರ್ 20: ದೆಹಲಿಯಲ್ಲಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ (Bomb threat) ಮುಂದುವರೆದಿದೆ. ದ್ವಾರಕ ಡಿಪಿಎಸ್ ಸೇರಿದಂತೆ ಹಲವು ಶಾಲೆಗಳಿಗೆ ದುಷ್ಕರ್ಮಿಗಳಿಂದ ಇ-ಮೇಲ್ ಮೂಲಕ​ ಬಾಂಬ್​ ಬೆದರಿಕೆ ಸಂದೇಶ ರವಾನಿಸಲಾಗಿದೆ. ಬಾಂಬ್ ಬೆದರಿಕೆ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸ್ಥಳಾಂತರ ಮಾಡಲಾಗಿದೆ. ಶಾಲೆಗಳಲ್ಲಿ ಬಾಂಬ್ ಪತ್ತೆ ದಳ ಹಾಗೂ ಶ್ವಾನ ದಳದಿಂದ ಪರಿಶೀಲನೆ ಮಾಡಲಾಗುತ್ತಿದೆ.

ಡಿಪಿಎಸ್​ ದ್ವಾರಕಾ ಹಾಗೂ ನಜಾಫ್ ಗಡ, ದೆಹಲಿ ಪಬ್ಲಿಕ್ ಸ್ಕೂಲ್, ಕೃಷ್ಣ ಮಾಡೆಲ್ ಪಬ್ಲಿಕ್ ಸ್ಕೂಲ್ ಹಾಗೂ ಸರ್ವೋದಯ ವಿದ್ಯಾಲಯ ಸೇರಿ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಪರೀಕ್ಷೆಗಳ ಸಮಯದಲ್ಲಿ ಬಾಂಬ್ ಬೆದರಿಕೆ ಕರೆ ಹಲವು ಅನುಮಾನಗಳಿಗೂ ಕಾರಣವಾಗಿದೆ.

ಕಳೆದ 8 ತಿಂಗಳಲ್ಲಿ 150ಕ್ಕೂ ಹೆಚ್ಚು ಬಾಂಬ್ ಬೆದರಿಕೆ ಕರೆ 

ದೆಹಲಿಯ ಶಾಲೆಗಳಿಗೆ ಸರಣಿ ಬಾಂಬ್ ಬೆದರಿಕೆಗಳು ಬರುತ್ತಿವೆ. ಕಳೆದ 8 ತಿಂಗಳಲ್ಲಿ 150ಕ್ಕೂ ಹೆಚ್ಚು ಶಾಲಾ-ಕಾಲೇಜುಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿವೆ. ಸದ್ಯ ದೆಹಲಿ ಪೊಲೀಸರಿಗೆ ಈ ಬಾಂಬ್ ಬೆದರಿಕೆ ಸಂದೇಶಗಳು ತಲೆನೋವಾಗಿ ಪರಿಣಮಿಸಿದೆ.

ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಿಷ್ಟು

ಈ ವಿಚಾರವಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನಾವು ಕ್ಯಾಂಪಸ್​ನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದೇವೆ. ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿಯ ತಾಜ್ ಪ್ಯಾಲೇಸ್ ಹೋಟೆಲ್‌ಗೆ ಬಾಂಬ್ ಬೆದರಿಕೆ; ಪೊಲೀಸರಿಂದ ಬಿಗಿ ಭದ್ರತೆ

ಇನ್ನು ಇತ್ತೀಚೆಗೆ ದೆಹಲಿ ಹೈಕೋರ್ಟ್​ಗೆ ಬಾಂಬ್ ಬೆದರಿಕೆ ಬಂದಿತ್ತು. ಕೋರ್ಟ್‌ಗೆ ಈ ಮೇಲ್ ಮೂಲಕ ಬಂದ ಬಾಂಬ್ ಬೆದರಿಕೆ ಕೆಲಕಾಲ ತಲ್ಲಣವನ್ನುಂಟು ಮಾಡಿತ್ತು. ವಿಷಯ ತಿಳಿಯುತ್ತಿದ್ದಂತೆ ಕೋರ್ಟ್‌ನಿಂದ ಎಲ್ಲರನ್ನು ತೆರವುಗೊಳಿಸಲಾಗಿತ್ತು. ಬಾಂಬ್ ನಿಷ್ಕ್ರಿಯ ದಳ, ಪೊಲೀಸರು, ಶ್ವಾನ ದಳ ಸ್ಥಳಕ್ಕೆ ದಾಡಾಯಿಸಿದ್ದವು. ಭದ್ರತಾ ಸಿಬ್ಬಂದಿ ಇಡೀ ಕೋರ್ಟ್‌ ಆವರಣ ಸುತ್ತುವರಿದಿದ್ದರು.

ಕೋರ್ಟ್‌ನಲ್ಲಿದ್ದ ವಕೀಲರು ಆತಂಕದಿಂದಲೇ ಹೊರ ಬಂದರು. ಬಾಂಬ್ ನಿಷ್ಕ್ರಿಯ ದಳ, ಪೊಲೀಸರು, ಶ್ವಾನ ದಳ ಕೋರ್ಟ್‌ನಲ್ಲಿ ಶೋಧ ನಡೆಸಿದರು ಯಾವುದೇ ಸ್ಫೋಟಕ ಪತ್ತೆಯಾಗಲಿಲ್ಲ. ಇದರಿಂದ ವಕೀಲರು ನಿಟ್ಟಿಸಿರು ಬಿಟ್ಟಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.