ಮುಂಬೈನಲ್ಲಿ ಭೀಕರ ದುರಂತ; ಶಾಲಾ ಬಸ್ ಮೇಲೆ ದೊಡ್ಡ ಮರ ಬಿದ್ದು 11 ವರ್ಷದ ವಿದ್ಯಾರ್ಥಿ ಸಾವು

ಮುಂಬೈನ ಚೆಂಬೂರ್ ಪ್ರದೇಶದಲ್ಲಿ ಮಂಗಳವಾರ 18 ಮಕ್ಕಳಿದ್ದ ಶಾಲಾ ಬಸ್ಸಿನ ಮೇಲೆ ಮರವೊಂದು ಬಿದ್ದ ಪರಿಣಾಮವಾಗಿ 11 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟು, 4 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಿಲಕ್ ನಗರದ ಯೂನಿವರ್ಸಲ್ ಶಾಲೆಗೆ ಸೇರಿದ ಬಸ್ಸಿನ ಮೇಲೆ ಮಧ್ಯಾಹ್ನ ಮರ ಉರುಳಿ ಬಿದ್ದಾಗ ಈ ಅಪಘಾತ ಸಂಭವಿಸಿದೆ. ಬಸ್ ನಿರ್ವಾಹಕ (ಕಂಡಕ್ಟರ್) ಮತ್ತು ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಹೊರಗೆಳೆದಿದ್ದಾರೆ.

ಮುಂಬೈನಲ್ಲಿ ಭೀಕರ ದುರಂತ; ಶಾಲಾ ಬಸ್ ಮೇಲೆ ದೊಡ್ಡ ಮರ ಬಿದ್ದು 11 ವರ್ಷದ ವಿದ್ಯಾರ್ಥಿ ಸಾವು
Mumbai Accident
Image Credit source: x

Updated on: Jun 30, 2026 | 8:16 PM

ಮುಂಬೈ, ಜೂನ್ 30: ಮುಂಬೈನ ಚೆಂಬೂರ್ ಉಪನಗರದಲ್ಲಿ ಇಂದು (ಜೂನ್ 30) ಭೀಕರ ಅಪಘಾತವೊಂದು (Mumbai Accident) ಸಂಭವಿಸಿದೆ. ಚಲಿಸುತ್ತಿದ್ದ ಶಾಲಾ ಬಸ್ಸಿನ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮದಿಂದ 11 ವರ್ಷದ ಶಾಲಾ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಬಸ್​​ನಲ್ಲಿ ಒಟ್ಟು 18 ಮಕ್ಕಳಿದ್ದರು. ಸ್ಥಳೀಯ ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯ ಪ್ರಕಾರ, ಚೆಂಬೂರ್‌ನ ಪ್ರಮುಖ ರಸ್ತೆಯೊಂದರಲ್ಲಿ ಶಾಲಾ ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಬಸ್ಸು ಚಲಿಸುತ್ತಿದ್ದಾಗ ರಸ್ತೆ ಬದಿಯಲ್ಲಿದ್ದ ಬೃಹತ್ ಮರವೊಂದು ಇದ್ದಕ್ಕಿದ್ದಂತೆ ಬುಡಸಮೇತ ಬಸ್ಸಿನ ಮೇಲೆ ಉರುಳಿ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಬಸ್ಸಿನ ಮೇಲ್ಛಾವಣಿ ಸಂಪೂರ್ಣವಾಗಿ ಜಖಂಗೊಂಡಿದೆ.

ಅಪಘಾತದ ಸಮಯದಲ್ಲಿ ಬಸ್ಸಿನಲ್ಲಿ ಹಲವು ವಿದ್ಯಾರ್ಥಿಗಳಿದ್ದರು. ದುರದೃಷ್ಟವಶಾತ್, ಮರ ಬಿದ್ದ ಜಾಗದಲ್ಲಿ ಕುಳಿತಿದ್ದ 11 ವರ್ಷದ ವಿದ್ಯಾರ್ಥಿ ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆ ನಡೆದ ತಕ್ಷಣವೇ ಸ್ಥಳೀಯ ನಿವಾಸಿಗಳು, ಮುಂಬೈ ಮಹಾನಗರ ಪಾಲಿಕೆ (BMC) ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಬಸ್ಸಿನೊಳಗೆ ಸಿಲುಕಿಕೊಂಡಿದ್ದ ಮಕ್ಕಳನ್ನು ತಕ್ಷಣವೇ ಹೊರತೆಗೆಯಲಾಯಿತು.

ಇದನ್ನೂ ಓದಿ: ಕಾಶ್ಮೀರದ ಮಾತಾ ವೈಷ್ಣೋದೇವಿ ದೇವಸ್ಥಾನದ ಬಳಿ ಭೀಕರ ಬಸ್ ಅಪಘಾತ; 8 ಸಿಐಎಸ್ಎಫ್ ಸಿಬ್ಬಂದಿ, ಚಾಲಕನಿಗೆ ಗಾಯ

ಅಪಘಾತದಲ್ಲಿ ಗಾಯಗೊಂಡಿರುವ ಇತರ 4 ಜನರನ್ನು (ಮೂವರು ವಿದ್ಯಾರ್ಥಿಗಳು ಮತ್ತು ಬಸ್ ಚಾಲಕ) ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ ಪೈಕಿ ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.


ಪೋಷಕರ ಆಕ್ರೋಶ:

ಮುಂಬೈನಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಈ ಸಮಯದಲ್ಲಿ ದುರ್ಬಲವಾಗಿರುವ ಮರಗಳನ್ನು ಗುರುತಿಸಿ ಅವುಗಳನ್ನು ಕತ್ತರಿಸುವಲ್ಲಿ ಮುಂಬೈ ಮಹಾನಗರ ಪಾಲಿಕೆ (BMC) ನಿರ್ಲಕ್ಷ್ಯ ವಹಿಸಿದೆ ಎಂದು ಮೃತ ವಿದ್ಯಾರ್ಥಿಯ ಪೋಷಕರು ಮತ್ತು ಸ್ಥಳೀಯ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಲಿಕೆಯ ಬೇಜವಾಬ್ದಾರಿತನವೇ ತಮ್ಮ ಮಗುವಿನ ಸಾವಿಗೆ ಕಾರಣ ಎಂದು ಅವರು ಆರೋಪಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us