AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಶ್ಮೀರದ ಮಾತಾ ವೈಷ್ಣೋದೇವಿ ದೇವಸ್ಥಾನದ ಬಳಿ ಭೀಕರ ಬಸ್ ಅಪಘಾತ; 8 ಸಿಐಎಸ್ಎಫ್ ಸಿಬ್ಬಂದಿ, ಚಾಲಕನಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಮಾತಾ ವೈಷ್ಣೋದೇವಿ ಸನ್ನಿಧಿಯ ಬಳಿ ಇಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ ಪಲ್ಟಿಯಾದ ಪರಿಣಾಮ 8 ಮಂದಿ ಸಿಐಎಸ್ಎಫ್ ಸಿಬ್ಬಂದಿ ಮತ್ತು ಒಬ್ಬ ನಾಗರಿಕ ಚಾಲಕ ಗಾಯಗೊಂಡಿದ್ದಾರೆ. ದೇವಸ್ಥಾನಕ್ಕೆ ಹೋಗುವ ತಾರಾಕೋಟ್ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿರುವ ಸಿಬ್ಬಂದಿಯನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಶ್ಮೀರದ ಮಾತಾ ವೈಷ್ಣೋದೇವಿ ದೇವಸ್ಥಾನದ ಬಳಿ ಭೀಕರ ಬಸ್ ಅಪಘಾತ; 8 ಸಿಐಎಸ್ಎಫ್ ಸಿಬ್ಬಂದಿ, ಚಾಲಕನಿಗೆ ಗಾಯ
Bus Accident Near Vaishno Devi TempleImage Credit source: TV9
ಸುಷ್ಮಾ ಚಕ್ರೆ
|

Updated on: Jun 28, 2026 | 8:48 PM

Share

ರಿಯಾಸಿ, ಜೂನ್ 28: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಮಾತಾ ವೈಷ್ಣೋದೇವಿ ದೇವಸ್ಥಾನದ ಬಳಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ ಇಂದು ಭೀಕರ ಅಪಘಾತಕ್ಕೆ (Bus Accident) ಒಳಗಾಗಿದೆ. ತಾರಾಕೋಟ್ ಮಾರ್ಗದಲ್ಲಿ ವಾಹನವು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, 8 ಮಂದಿ ಸಿಐಎಸ್ಎಫ್ ಸಿಬ್ಬಂದಿ ಮತ್ತು ಚಾಲಕ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಾಳುಗಳ ಪೈಕಿ ಮೂವರು ಸಿಐಎಸ್ಎಫ್ ಸಿಬ್ಬಂದಿಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಅವರನ್ನು ಹೆಡ್ ಕಾನ್‌ಸ್ಟೆಬಲ್‌ಗಳಾದ ಸ್ಯಾಮಿ ಕುಮಾರ್, ಎಂ.ಎಂ. ದುಬೆ ಮತ್ತು ಕಾನ್‌ಸ್ಟೆಬಲ್ ಪಿ.ಕೆ. ತ್ರಾಯಾ ಎಂದು ಗುರುತಿಸಲಾಗಿದೆ. ಈ ಮೂವರನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದ ಎಲ್​ಒಸಿ ಬಳಿ ಆಕಸ್ಮಿಕ ಗ್ರೆನೇಡ್ ಸ್ಫೋಟ; ನಾಲ್ವರು ಭಾರತೀಯ ಯೋಧರಿಗೆ ಗಾಯ

ಉಳಿದ ಗಾಯಾಳುಗಳಲ್ಲಿ ಒಬ್ಬರು ಸಿಐಎಸ್ಎಫ್ ಸಬ್ ಇನ್​ಸ್ಪೆಕ್ಟರ್ ಮತ್ತು ಬಸ್ ಚಾಲಕ ವೀರೇಂದ್ರ ಸಿಂಗ್ ಸೇರಿದ್ದಾರೆ. ಅವರನ್ನು ಕತ್ರಾದಲ್ಲಿರುವ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ದೇವಸ್ಥಾನದ ಆವರಣದಲ್ಲಿ ತಮ್ಮ ಕರ್ತವ್ಯ ಮುಗಿಸಿ ಸಿಬ್ಬಂದಿ ಕ್ಯಾಂಪ್‌ಗೆ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಬಸ್ ಪಲ್ಟಿಯಾಗಲು ನಿಖರ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ.

ಇದನ್ನೂ ಓದಿ: ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತ; 10 ಜನರಿಗೆ ಗಾಯ

ಇದಕ್ಕೂ ಮುನ್ನ, ರಾಜೌರಿ ಜಿಲ್ಲೆಯ ನೌಶೇರಾ ವಲಯದಲ್ಲಿ ನಿಯಂತ್ರಣ ರೇಖೆಯ (LoC) ಬಳಿ ಕುಮಾಂ ರೆಜಿಮೆಂಟ್‌ನ ತಂಡವೊಂದು ಗಸ್ತು ತಿರುಗುತ್ತಿದ್ದಾಗ ಆಕಸ್ಮಿಕ ಗ್ರೆನೇಡ್ ಸ್ಫೋಟ ಸಂಭವಿಸಿತ್ತು. ಜೂನ್ 16ರಂದು ನಡೆದಿದ್ದ ಈ ಘಟನೆಯಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ (JCO) ಸೇರಿದಂತೆ ನಾಲ್ವರು ಯೋಧರು ಗಾಯಗೊಂಡಿದ್ದರು. ಗಾಯಾಳುಗಳನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿತ್ತು.

ಜಮ್ಮು ಮತ್ತು ಕಾಶ್ಮೀರದ ವಿವಿಧ ಭಾಗಗಳಲ್ಲಿ ಸರಣಿಯಾಗಿ ನಡೆಯುತ್ತಿರುವ ಇಂತಹ ಘಟನೆಗಳು ಭದ್ರತಾ ಸಿಬ್ಬಂದಿ ಎದುರಿಸುತ್ತಿರುವ ಕಾರ್ಯಾಚರಣೆಯ ಅಪಾಯಗಳು ಮತ್ತು ಸುರಕ್ಷತೆಯ ಬಗ್ಗೆ ಕಳವಳವನ್ನು ಉಂಟುಮಾಡಿವೆ. ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ನೆರವು ನೀಡಲಾಗುತ್ತಿದ್ದು, ಅಧಿಕಾರಿಗಳು ಪ್ರತಿ ಘಟನೆಯ ಕಾರಣಗಳ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us