ಮುಂಬೈ ಗಣಪತಿ ಪಂಡಲ್ ಬಳಿ ಭೀಕರ ವಿದ್ಯುತ್ ಅವಘಡ: 8 ವರ್ಷದ ಬಾಲಕಿ ಸೇರಿ ಇಬ್ಬರು ಸಾವು, ನಾಲ್ವರಿಗೆ ಗಾಯ

ಮುಂಬೈ ಲಾಲ್‌ಬಾಗ್ ಗಣಪತಿ ಪಂಡಲ್ ಬಳಿ ಭೀಕರ ವಿದ್ಯುತ್ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್‌ನಿಂದ 8 ವರ್ಷದ ಬಾಲಕಿ ಸೇರಿ ಇಬ್ಬರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿದ್ದಾರೆ. ತಾತ್ಕಾಲಿಕ ಅಂಗಡಿಯ ವಿದ್ಯುತ್ ವೈರಿಂಗ್ ಲೋಪವೇ ದುರಂತಕ್ಕೆ ಕಾರಣ. ಗಣೇಶೋತ್ಸವದ ಸಂದರ್ಭದಲ್ಲಿ ಭಕ್ತರ ಸುರಕ್ಷತೆಗೆ ಮಂಡಳಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ BMC ಸೂಚಿಸಿದೆ.

ಮುಂಬೈ ಗಣಪತಿ ಪಂಡಲ್ ಬಳಿ ಭೀಕರ ವಿದ್ಯುತ್ ಅವಘಡ: 8 ವರ್ಷದ ಬಾಲಕಿ ಸೇರಿ ಇಬ್ಬರು ಸಾವು, ನಾಲ್ವರಿಗೆ ಗಾಯ
ಮುಂಬೈ
Image Credit source: Salon.com

Updated on: Sep 20, 2026 | 12:07 PM

ಮುಂಬೈ, ಸೆಪ್ಟೆಂಬರ್ 20: ಮುಂಬೈನ ಪ್ರಸಿದ್ಧ ಲಾಲ್‌ಬಾಗ್-ಕಲಾಚೌಕಿ ಪ್ರದೇಶದಲ್ಲಿ ಭಾನುವಾರ ಮುಂಜಾನೆ ಗಣಪತಿ ದರ್ಶನಕ್ಕೆ ಆಗಮಿಸಿದ್ದ ಭಕ್ತರ ಮೇಲೆ ಭೀಕರ ವಿದ್ಯುತ್ ಆಘಾತ ಸಂಭವಿಸಿದೆ. ಕಲಾಚೌಕಿ ವಿಭಾಗ್ ಸಾರ್ವಜನಿಕ ಉತ್ಸವ ಮಂಡಲದ ಪ್ರವೇಶದ್ವಾರದ ಬಳಿ ಇದ್ದ ತಾತ್ಕಾಲಿಕ ಮಳಿಗೆಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ನೆಲದ ಮೇಲೆ ವಿದ್ಯುತ್ ಪ್ರವಾಹ ಹರಿದ ಪರಿಣಾಮ, ಎಂಟು ವರ್ಷದ ಬಾಲಕಿ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, 12 ವರ್ಷದ ಮತ್ತೊಬ್ಬ ಬಾಲಕಿ ಸೇರಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಮುಂಜಾನೆ 2.20 ರ ಸುಮಾರಿಗೆ ಭಕ್ತರ ಭಾರೀ ಜನಸಂದಣಿಯ ನಡುವೆಯೇ ಈ ದುರ್ಘಟನೆ ನಡೆದಿದೆ.

ಕೂಲ್ ಡ್ರಿಂಕ್ಸ್ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್: ಪಂಡಲ್ ಪ್ರವೇಶದ್ವಾರದ ಬಳಿ ಇದ್ದ ತಾತ್ಕಾಲಿಕ ಕುಡಿಯುವ ನೀರು ಮತ್ತು ತಂಪು ಪಾನೀಯ ಅಂಗಡಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಜಾಗದಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದೆ. ತಕ್ಷಣವೇ ಸುತ್ತಲಿನ ಪ್ರದೇಶದಲ್ಲಿ ಕರೆಂಟ್ ಹರಿದು ಆರು ಮಂದಿ ಆಘಾತಕ್ಕೊಳಗಾಗಿದ್ದಾರೆ. 8 ವರ್ಷದ ರಾಗಿಣಿ ಯಾದವ್ ಹಾಗೂ 33 ವರ್ಷದ ಸುಜಾತ ಎಂಬುವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

12 ವರ್ಷದ ರುಹಿ ಸಿಂಗ್ ಎಂಬ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದೆ. ಕಿರಣ್ ಅಕ್ಬರ್ ನಾಯಕ್ (19, ತನ್ವಿ ನರೇಶ್ ಹಂಡೆ (19) ಮತ್ತು ಸಾಹಿಲ್ ಸಂದೀಪ್ ತಾರೆ (19) ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಗಣೇಶೋತ್ಸವಕ್ಕೆ ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೆ ಮಾರ್ಗಸೂಚಿ ಹೊರಡಿಸಿದ ಬೆಸ್ಕಾಂ

ಪೋಷಕರ ಆಕ್ರಂದನ: “ಜನಸಂದಣಿ ಹೆಚ್ಚಿದ್ದರಿಂದ ದರ್ಶನ ಮಾಡದೆ ಹೊರಡಲು ತೀರ್ಮಾನಿಸಿ ಪಕ್ಕದ ಅಂಗಡಿ ಬಳಿ ನಿಂತಿದ್ದೆವು. ಅಲಂಕಾರಿಕ ದೀಪಗಳ ಸುರಕ್ಷತೆ ಬಗ್ಗೆ ಮಂಡಳಿಯವರು ಕಾಳಜಿ ವಹಿಸಬೇಕಿತ್ತು. ನಮ್ಮ ಮುಗ್ಧ ಮಗುವನ್ನು ಯಾರು ಮರಳಿ ತರುತ್ತಾರೆ?” ಎಂದು ಬಾಲಕಿಯ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

ಮುಂಬೈ ಅಗ್ನಿಶಾಮಕ ದಳ ಮತ್ತು ಬೆಸ್ಟ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಸ್ಥಳೀಯ ಎಲೆಕ್ಟ್ರಿಷಿಯನ್ ಅಳವಡಿಸಿದ್ದ ತಾತ್ಕಾಲಿಕ ಮೀಟರ್ ಮತ್ತು ವೈರಿಂಗ್ ಲೋಪಗಳ ಕುರಿತು ಕಲಾಚೌಕಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಲಾಲ್‌ಬಾಗ್‌ನಲ್ಲಿ ಸತತ ದುರಂತ: ಈ ಘಟನೆಗೂ ಒಂದು ದಿನ ಮುನ್ನ (ಸೆಪ್ಟೆಂಬರ್ 17 ರಂದು), ಪುಣೆ ಮೂಲದ 25 ವರ್ಷದ ಮೆಕ್ಯಾನಿಕಲ್ ಎಂಜಿನಿಯರ್ ಜೈದೀಪ್ ಮೇಘರಾಜ್ ನೆಮಾಡೆ ಅವರು ವಿಶ್ವಪ್ರಸಿದ್ಧ ‘ಲಾಲ್‌ಬಾಗ್ಚಾ ರಾಜಾ’ ದರ್ಶನಕ್ಕಾಗಿ ಗಂಟೆಗಳ ಕಾಲ ಕ್ಯೂನಲ್ಲಿ ನಿಂತಿದ್ದಾಗ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

ರಾತ್ರಿಯಿಡೀ ಹರಿದುಬರುವ ಜನಸಾಗರ: ಮುಂಬೈನ ಕಲಾಚೌಕಿ, ಲಾಲ್‌ಬಾಗ್, ಗಣೇಶ್‌ಗಲ್ಲಿ ಪ್ರದೇಶಗಳಲ್ಲಿನ ಪ್ರಸಿದ್ಧ ಗಣಪತಿ ಮೂರ್ತಿಗಳ ದರ್ಶನಕ್ಕಾಗಿ ವಾರಾಂತ್ಯದಲ್ಲಿ ಲಕ್ಷಾಂತರ ಜನರು ರಾತ್ರಿಯಿಡೀ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಲಕ್ಷಾಂತರ ಭಕ್ತರು ಸೇರುವ ಜಾಗಗಳಲ್ಲಿ ತಾತ್ಕಾಲಿಕ ವಿದ್ಯುತ್ ಕನೆಕ್ಷನ್‌ಗಳು, ಓಪನ್ ವೈರಿಂಗ್ ಮತ್ತು ಮಳೆ ನೀರಿನ ಸಂಪರ್ಕ ಭಕ್ತರ ಪಾಲಿಗೆ ಜೀವನ್ಮರಣದ ಅಪಾಯ ತಂದೊಡ್ಡುತ್ತಿವೆ.

ಪಾಲಿಕೆ ಮತ್ತು ಅಗ್ನಿಶಾಮಕ ದಳದ ಕಟ್ಟುನಿಟ್ಟಿನ ಸೂಚನೆ: ದುರಂತದ ಬೆನ್ನಲ್ಲೇ ಬೃಹನ್‌ಮುಂಬೈ ಮಹಾನಗರ ಪಾಲಿಕೆ (BMC) ಹಾಗೂ ಅಗ್ನಿಶಾಮಕ ದಳವು ಮುಂಬೈನ ಎಲ್ಲಾ ಸಾರ್ವಜನಿಕ ಗಣಪತಿ ಮಂಡಲಗಳಿಗೆ ಎಚ್ಚರಿಕೆ ನೀಡಿದ್ದು, ಎಂಸಿಬಿ (MCB) ಸ್ವಿಚ್‌ಗಳು, ಅರ್ಥಿಂಗ್ ಮತ್ತು ಕೇಬಲ್ ನಿರೋಧಕ ಕವರ್‌ಗಳಿಲ್ಲದೆ ಅನಧಿಕೃತವಾಗಿ ಅಳವಡಿಸಲಾದ ಎಲ್ಲಾ ತಾತ್ಕಾಲಿಕ ಅಂಗಡಿಗಳ ವಿದ್ಯುತ್ ಸಂಪರ್ಕಗಳನ್ನು ತಕ್ಷಣ ತಪಾಸಣೆ ಮಾಡುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Loading...
Unable to load recommendations.
Follow Us