ಕಲ್ಲಂಗಡಿ ತಿಂದು ಇಡೀ ಕುಟುಂಬ ಮೃತಪಟ್ಟ ಕೇಸ್ ಇನ್ನಷ್ಟು ನಿಗೂಢ; ಆ ಹಣ್ಣಿನಲ್ಲಿತ್ತು ಇಲಿ ಪಾಷಾಣ!

ಮುಂಬೈನಲ್ಲಿ ಮನೆಯಲ್ಲೇ ಪಾರ್ಟಿ ಮಾಡಿ, ಕಲ್ಲಂಗಡಿ ಹಣ್ಣು ತಿಂದು ರಾತ್ರಿ ಮಲಗಿದ್ದ ಇಡೀ ಕುಟುಂಬ ಮರುದಿನ ಮೃತಪಟ್ಟಿತ್ತು. ಕಲ್ಲಂಗಡಿ ಹಣ್ಣು ತಿಂದು ಮೃತಪಟ್ಟ ಪ್ರಕರಣದ ನಿಗೂಢತೆ ಇನ್ನಷ್ಟು ಹೆಚ್ಚಿದ್ದು, ಕುಟುಂಬದವರ ಮನೆಯಿಂದ ಇಲಿ ವಿಷದ ಸ್ಪ್ರೇ, ಪ್ಯಾಕೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಹಾಗೇ, ಮುಂಬೈನ ಕುಟುಂಬವು ಸಾವಿಗೂ ಮುನ್ನ ಸೇವಿಸಿದ ಕಲ್ಲಂಗಡಿ ಹಣ್ಣಿನಲ್ಲಿ ಇಲಿ ವಿಷ ಪತ್ತೆಯಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಕಲ್ಲಂಗಡಿ ತಿಂದು ಇಡೀ ಕುಟುಂಬ ಮೃತಪಟ್ಟ ಕೇಸ್ ಇನ್ನಷ್ಟು ನಿಗೂಢ; ಆ ಹಣ್ಣಿನಲ್ಲಿತ್ತು ಇಲಿ ಪಾಷಾಣ!
Mumbai Family
Image Credit source: TV9

Updated on: May 08, 2026 | 3:46 PM

ಮುಂಬೈ, ಮೇ 8: ಮುಂಬೈನ 44 ವರ್ಷದ ಅಬ್ದುಲ್ಲಾ ಡೊಕಾಡಿಯಾ, ಅವರ ಪತ್ನಿ ನಸ್ರೀನ್ (35) ಮತ್ತು ಅವರ ಹೆಣ್ಣುಮಕ್ಕಳಾದ ಆಯೇಷಾ (16) ಮತ್ತು ಜೈನಾಬ್ (13) ರಾತ್ರಿ ಬಿರಿಯಾನಿ ತಿಂದು, ಕಲ್ಲಂಗಡಿ (Watermelon) ಹಣ್ಣು ತಿಂದು ಮಲಗಿದ್ದವರು ಮರುದಿನ ಮೃತಪಟ್ಟಿದ್ದರು. ವಾಂತಿ, ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಬಿರಿಯಾನಿ ತಿಂದ ಬಳಿಕ ಕಲ್ಲಂಗಡಿ ಹಣ್ಣು ತಿಂದಿದ್ದರಿಂದಲೇ ಫುಡ್ ಪಾಯ್ಸನ್ ಆಗಿರಬಹುದು ಎಂಬ ಅನುಮಾನ ಪೊಲೀಸರನ್ನು ಕಾಡಿತ್ತು. ಇದೀಗ ವೈದ್ಯಕೀಯ ಪರೀಕ್ಷೆಯಲ್ಲಿ ಆ ಕಲ್ಲಂಗಡಿ ಹಣ್ಣಿನಲ್ಲಿ ಇಲಿ ಪಾಷಾಣವಿತ್ತು ಎಂಬ ಅಂಶ ಬಯಲಾಗಿದೆ. ಹಾಗಾದರೆ, ಆ ಕುಟುಂಬಸ್ಥರು ತಾವೇ ಕಲ್ಲಂಗಡಿ ಹಣ್ಣಿನಲ್ಲಿ ವಿಷ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದರಾ ಅಥವಾ ಯಾರಾದರೂ ಕೊಲೆ ಮಾಡಲು ಈ ರೀತಿ ಸಂಚು ಮಾಡಿದ್ದರಾ ಎಂಬುದು ಇನ್ನೂ ನಿಗೂಢವಾಗಿದೆ.

ಮೃತರ ದೇಹದಲ್ಲಿ ಇಲಿ ವಿಷ ಇರುವುದನ್ನು ದೃಢಪಡಿಸಿದ ನಂತರ, ತನಿಖಾಧಿಕಾರಿಗಳು ಈಗ ಮುಂಬೈನ ಪೈಧೋನಿಯಲ್ಲಿರುವ ಡೊಕಾಡಿಯಾ ಕುಟುಂಬದ ಮನೆಯಿಂದ ಇಲಿ ವಿಷವನ್ನು ವಶಪಡಿಸಿಕೊಂಡಿದ್ದಾರೆ. ಇದು ಕುಟುಂಬದ ನಾಲ್ವರು ಸದಸ್ಯರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಪ್ರಮುಖ ಬೆಳವಣಿಗೆಯಾಗಿದೆ. ಮೊಘಲ್ ಬಿಲ್ಡಿಂಗ್‌ನಲ್ಲಿರುವ ಕುಟುಂಬದ ನಿವಾಸದಿಂದ ಪೊಲೀಸರು 2 ಪ್ಯಾಕೆಟ್ ಇಲಿ ವಿಷ ಮತ್ತು ಇಲಿ ವಿಷದ ಸ್ಪ್ರೇ ಅನ್ನು ವಶಪಡಿಸಿಕೊಂಡಿದ್ದಾರೆ. ಆದರೆ ವಿಧಿವಿಜ್ಞಾನ ಪರೀಕ್ಷೆಗಳಲ್ಲಿ ಮೃತರು ಸೇವಿಸಿದ ಕಲ್ಲಂಗಡಿ ಹಣ್ಣಿನಲ್ಲಿ ವಿಷದ ಕುರುಹುಗಳನ್ನು ಸಹ ಪತ್ತೆಹಚ್ಚಿವೆ.

ಇದನ್ನೂ ಓದಿ: Biryani and Watermelon: ಬಿರಿಯಾನಿ ತಿಂದ ನಂತರ ಕಲ್ಲಂಗಡಿ ಸೇವನೆ ಮಾರಕವೇ? ಮುಂಬೈ ಘಟನೆಯ ಬೆನ್ನಲ್ಲೇ ತಜ್ಞರು ನೀಡಿದ ಎಚ್ಚರಿಕೆ ಇಲ್ಲಿದೆ!

ಒಂದು ಪ್ಯಾಕೆಟ್ ಇಲಿ ವಿಷವನ್ನು ಸೀಲ್ ಮಾಡಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇಲಿ ವಿಷದ ಸ್ಪ್ರೇ ಅನ್ನು ಬಳಸಿರುವುದು ಪತ್ತೆಯಾಗಿದೆ. ಡೊಕಾಡಿಯಾ ಕುಟುಂಬ ವಾಸಿಸುತ್ತಿದ್ದ ಮೊಘಲ್ ಬಿಲ್ಡಿಂಗ್‌ನಲ್ಲಿ ತೀವ್ರ ಇಲಿಗಳ ಬಾಧೆ ಇತ್ತು ಎಂದು ಮೂಲಗಳು ತಿಳಿಸಿವೆ. ಹೀಗಾಗಿ, ಆ ಪಾಷಾಣವನ್ನು ಮನೆಯಲ್ಲಿಟ್ಟುಕೊಂಡಿರುವ ಸಾಧ್ಯತೆ ಇರುತ್ತದೆ.

ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ (ಎಫ್‌ಎಸ್‌ಎಲ್) ಸಂಶೋಧನೆಗಳು ಎಲ್ಲಾ ನಾಲ್ವರು ಕುಟುಂಬ ಸದಸ್ಯರು ಇಲಿ ವಿಷ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿವೆ ಎಂದು ವರದಿಯಾಗಿದೆ. ಮೃತರ ದೇಹಗಳಲ್ಲಿ ಹಾಗೂ ತನಿಖೆಯ ಸಮಯದಲ್ಲಿ ಸಂಗ್ರಹಿಸಲಾದ ಕಲ್ಲಂಗಡಿ ಮಾದರಿಗಳಲ್ಲಿ ಸತು ಫಾಸ್ಫೈಡ್‌ನ ಕುರುಹುಗಳು ಪತ್ತೆಯಾಗಿವೆ.

ಇದನ್ನೂ ಓದಿ: ರಾತ್ರಿ ಕಲ್ಲಂಗಡಿ ಹಣ್ಣು ತಿಂದವರು ಬೆಳಗ್ಗೆ ಹೆಣವಾದರು; ಮುಂಬೈನಲ್ಲಿ ಇಡೀ ಕುಟುಂಬದ ದುರಂತ ಅಂತ್ಯ

ಈ ಘಟನೆ ನಡೆದು 11 ದಿನಗಳು ಕಳೆದಿವೆ. ಅವರು ಸೇವಿಸಿದ್ದ ಹಣ್ಣಿನಲ್ಲಿ ವಿಷ ಇರುವುದು ದೃಢಪಟ್ಟಿರುವುದರಿಂದ ಪೊಲೀಸರ ತನಿಖೆಗೆ ಹೊಸ ಆಯಾಮ ಸಿಕ್ಕಂತಾಗಿದೆ. ಈ ಸಾವುಗಳು ಸಾಮೂಹಿಕ ಆತ್ಮಹತ್ಯೆಯ ಪರಿಣಾಮವೇ ಅಥವಾ ವಿಷವನ್ನು ಕಲ್ಲಂಗಡಿಯಲ್ಲಿ ಬೇರೆ ಯಾವುದಾದರೂ ವಿಧಾನದಿಂದ ಬೆರೆಸಲಾಗಿತ್ತೇ ಎಂದು ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us