ಮುಂಬೈನ ಕುಟುಂಬದ ನಿಗೂಢ ಸಾವಿಗೆ ಕಲ್ಲಂಗಡಿ ಕಾರಣವೇ? ಇಲ್ಲಿದೆ ಅಸಲಿ ಸಂಗತಿ
ಮುಂಬೈನಲ್ಲಿ ಕೆಲವು ದಿನಗಳ ಹಿಂದೆ ಒಂದೇ ಕುಟುಂಬದ ನಾಲ್ವರು ನಿಗೂಢವಾಗಿ ಮೃತಪಟ್ಟಿದ್ದರು. ರಾತ್ರಿ ಮನೆಯಲ್ಲೇ ಪಾರ್ಟಿ ಮಾಡಿ, ಬಿರಿಯಾನಿ ತಿಂದು, ಮಲಗುವ ಮುನ್ನ ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ತಿಂದಿದ್ದ ಅವರು ಮರುದಿನ ಹೆಣವಾಗಿದ್ದರು. ಈ ಘಟನೆಯ ಬಳಿಕ ಕಲ್ಲಂಗಡಿ ಹಣ್ಣು ವಿಷವಾಗುವ ಸಾಧ್ಯತೆ ಇರುತ್ತದೆ ಎಂಬ ಸುದ್ದಿಗಳು ಹರಿದಾಡಿತ್ತು. ಆದರೆ, ನಿಜಕ್ಕೂ ಆ ರಾತ್ರಿ ಅಲ್ಲಿ ನಡೆದಿದ್ದೇನು? ಕಲ್ಲಂಗಡಿ ಹಣ್ಣು ತಿಂದರೆ ನಿಜಕ್ಕೂ ಸಾಯುತ್ತಾರಾ? ಎಂಬ ಕುರಿತು ಮಾಹಿತಿ ಇಲ್ಲಿದೆ.

ಮುಂಬೈ, ಮೇ 2: ಮುಂಬೈನ ಗಂಡ, ಹೆಂಡತಿ, ಇಬ್ಬರು ಮಕ್ಕಳು ರಾತ್ರಿ ಕಲ್ಲಂಗಡಿ (Watermelon) ತಿಂದ ನಂತರ ಸಾವನ್ನಪ್ಪಿದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ದಿನನಿತ್ಯ ತಿನ್ನುವ ಹಣ್ಣು ಕೂಡ ನಮ್ಮ ಆರೋಗ್ಯಕ್ಕೆ ಸುರಕ್ಷಿತವಲ್ಲವಾ? ಎಂಬ ಚರ್ಚೆಗಳು ನಡೆದಿದ್ದವು. ಅದಾದ ಕೆಲವು ದಿನಗಳ ನಂತರ, ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತದ (FDA) ಮೃತರ ಮನೆಯಿಂದ ಸಂಗ್ರಹಿಸಿದ ಕಲ್ಲಂಗಡಿ, ಬಿರಿಯಾನಿ, ನೀರು ಮತ್ತು ಮಸಾಲೆಗಳ ಮಾದರಿಗಳ ಮೇಲೆ ನಡೆಸಿದ ಪ್ರಾಥಮಿಕ ಪರೀಕ್ಷೆಗಳಲ್ಲಿ ಕಲಬೆರಕೆಯ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ.
ಮುಂಬೈನ ಪೆಂಡಿ ಬಜಾರ್ ಪ್ರದೇಶದ ಅಬ್ದುಲ್ಲಾ ಟೊಕಾಡಿಯಾ (44), ಅವರ ಪತ್ನಿ ನಸ್ರೀನ್ (35) ಮತ್ತು ಅವರ ಹೆಣ್ಣುಮಕ್ಕಳಾದ ಆಯೇಷಾ (16) ಮತ್ತು ಜೈನಾಬ್ (12) ರಾತ್ರಿ ಊಟ ಮಾಡಿ, ಕಲ್ಲಂಗಡಿ ಹಣ್ಣು ತಿಂದು ಮಲಗಿದ ನಂತರ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಬದುಕಿಸಲು ಸಾಧ್ಯವಾಗಲಿಲ್ಲ. ಈ ಘಟನೆಯ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಹೊಸ ಮಾಹಿತಿ ಸಿಕ್ಕಿದೆ. ಆ ರಾತ್ರಿ 1 ಗಂಟೆ ಸುಮಾರಿಗೆ ಕಲ್ಲಂಗಡಿ ತಿಂದ ನಂತರ ಕುಟುಂಬವು ಅಸ್ವಸ್ಥಗೊಂಡಿರುವಂತೆ ತೋರುತ್ತದೆ. ಇದು ಸಿಹಿ ಅಥವಾ ಬಣ್ಣಕ್ಕಾಗಿ ಹಣ್ಣಿನಲ್ಲಿ ಕೆಲವು ರಾಸಾಯನಿಕಗಳನ್ನು ಬೆರೆಸಿರಬಹುದು ಎಂಬ ಅನುಮಾನಗಳಿಗೆ ಕಾರಣವಾಗಿತ್ತು. ಹೀಗಾಗಿ, ಇದನ್ನು ತನಿಖೆ ಮಾಡಿದ ಆಹಾರ ಮತ್ತು ಔಷಧ ಆಡಳಿತ (FDA) ಅವರ ಮನೆಯಲ್ಲಿ ಇದ್ದ ಕಲ್ಲಂಗಡಿಯಿಂದ ಹಿಡಿದು ಬೇಯಿಸಿದ ಅನ್ನ ಮತ್ತು ಮಸಾಲೆಗಳವರೆಗೆ ಎಲ್ಲವನ್ನೂ ಪರಿಶೀಲಿಸಿತು.
ಇದನ್ನೂ ಓದಿ: ಬಿರಿಯಾನಿ ತಿಂದ ನಂತರ ಕಲ್ಲಂಗಡಿ ಸೇವನೆ ಮಾರಕವೇ? ಮುಂಬೈ ಘಟನೆಯ ಬೆನ್ನಲ್ಲೇ ತಜ್ಞರು ನೀಡಿದ ಎಚ್ಚರಿಕೆ ಇಲ್ಲಿದೆ!
ಆದರೆ, ಆ ಪರೀಕ್ಷೆಯಲ್ಲಿ ಹಣ್ಣಿನ ಬಣ್ಣ, ಸಿಹಿ ಹೆಚ್ಚಿಸಲು ಯಾವುದೇ ಕೃತಕ ಬಣ್ಣ ನೀಡುವ ವಸ್ತುಗಳು ಅಥವಾ ರಾಸಾಯನಿಕವನ್ನು ಸೇರಿಸಿಲ್ಲ ಎಂದು ದೃಢಪಟ್ಟಿದೆ. ಇದು ಈ ಪ್ರಕರಣದ ನಿಗೂಢತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಇದಲ್ಲದೆ, ಮೃತರ ಶವಪರೀಕ್ಷೆಯ ವರದಿಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಮೃತರ ಪ್ರಮುಖ ಅಂಗಗಳಾದ ಮೆದುಳು, ಹೃದಯ ಮತ್ತು ಕರುಳು ಹಸಿರು ಬಣ್ಣಕ್ಕೆ ತಿರುಗಿರುವುದು ಕಂಡುಬಂದಿದೆ. ವೈದ್ಯಕೀಯ ತಜ್ಞರ ಪ್ರಕಾರ, ಇದು ಸಾಮಾನ್ಯ ಫುಡ್ ಪಾಯಿಸನಿಂಗ್ ಅಲ್ಲ. ದೇಹದ ಎಲ್ಲಾ ಪ್ರಮುಖ ಅಂಗಗಳು ಒಂದೇ ಸಮಯದಲ್ಲಿ ಬಣ್ಣವನ್ನು ಬದಲಾಯಿಸಲು ಯಾವುದಾದರೂ ವಿಷಕಾರಿ ವಸ್ತುವು ದೇಹದಾದ್ಯಂತ ರಕ್ತದ ಮೂಲಕ ಬಹಳ ಬೇಗನೆ ಹರಿಯಬೇಕು ಎಂದು ವೈದ್ಯರು ತಿಳಿಸಿದ್ದಾರೆ.
ಈ ತನಿಖೆಯಲ್ಲಿನ ಮತ್ತೊಂದು ಆಘಾತಕಾರಿ ಅಂಶವೆಂದರೆ, ಮೃತ ಅಬ್ದುಲ್ಲಾ ಅವರ ದೇಹದಲ್ಲಿ ‘ಮಾರ್ಫಿನ್’ ಎಂಬ ಮಾದಕ ವಸ್ತುವಿನ ಅಂಶಗಳು ಕಂಡುಬಂದಿವೆ ಎಂದು ವರದಿಗಳು ತಿಳಿಸಿವೆ. ಇದು ಈ ಪ್ರಕರಣವನ್ನು ಸಂಪೂರ್ಣವಾಗಿ ವಿಭಿನ್ನ ದಿಕ್ಕಿನತ್ತ ಕೊಂಡೊಯ್ದಿದೆ. ಇದು ಆತ್ಮಹತ್ಯೆಯೋ, ಪ್ಲಾನ್ ಮಾಡಿ ಮಾಡಲಾದ ಕೊಲೆಯೋ ಅಥವಾ ಅನಿರೀಕ್ಷಿತವಾಗಿ ನಡೆದ ಘಟನೆಯೋ ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ರಾತ್ರಿ ಕಲ್ಲಂಗಡಿ ಹಣ್ಣು ತಿಂದವರು ಬೆಳಗ್ಗೆ ಹೆಣವಾದರು; ಮುಂಬೈನಲ್ಲಿ ಇಡೀ ಕುಟುಂಬದ ದುರಂತ ಅಂತ್ಯ
ನೀರಿನ ಮಾದರಿಗಳ ಅಧ್ಯಯನಗಳು ಇನ್ನೂ ಪೂರ್ಣಗೊಂಡಿಲ್ಲ. ಆ ಮನೆಯಲ್ಲಿದ್ದ ಬೇಯಿಸಿದ ಮಾಂಸದ ಮಾದರಿಗಳನ್ನು ಪ್ರೋಟೀನ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಇತರ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಆಹಾರದಲ್ಲಿ ಯಾವುದೇ ಬ್ಯಾಕ್ಟೀರಿಯಾದ ಸೋಂಕುಗಳು ಅಥವಾ ಪತ್ತೆಯಾಗದ ವಿಷಕಾರಿ ಅಂಶಗಳು ಇವೆಯೇ ಎಂದು ನಿರ್ಧರಿಸಲು ಅಧಿಕಾರಿಗಳು ವಿವರವಾದ ವಿಧಿವಿಜ್ಞಾನ ವರದಿಗಾಗಿ ಕಾಯುತ್ತಿದ್ದಾರೆ. ಪೂರ್ಣ ವಿಧಿವಿಜ್ಞಾನ ವರದಿ ಹೊರಬಂದ ನಂತರವೇ ಆ ನಾಲ್ವರು ಜೀವಗಳನ್ನು ಬಲಿ ತೆಗೆದುಕೊಂಡ ಹಸಿರು ವಿಷ ಯಾವುದು ಎಂಬ ನಿಗೂಢ ಪ್ರಶ್ನೆಗೆ ಉತ್ತರ ಸಿಗುವ ಸಾಧ್ಯತೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




