
ನವದೆಹಲಿ, ಫೆಬ್ರವರಿ 13: ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಅನಿಲ್ ಚೌಹಾಣ್ (Anil Chauhan) ಇಂದು ಸ್ವಾತಂತ್ರ್ಯಾನಂತರದ ಅವಧಿಯಲ್ಲಿ ಭಾರತ-ಚೀನಾ ಸಂಬಂಧಗಳ ಬಗ್ಗೆ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. “1954ರ ಪಂಚಶೀಲ ಒಪ್ಪಂದದ ಅಡಿಯಲ್ಲಿ ಭಾರತವು ಟಿಬೆಟ್ ಅನ್ನು ಚೀನಾದ ಭಾಗವೆಂದು ಗುರುತಿಸಿತು. ಪ್ರಾದೇಶಿಕ ಸ್ಥಿರತೆಯನ್ನು ಕಾಪಾಡಲು ಮತ್ತು ಎರಡು ರಾಷ್ಟ್ರಗಳ ನಡುವೆ ಸಹಕಾರಿ ಸಂಬಂಧವನ್ನು ಉತ್ತೇಜಿಸಲು ಉದ್ದೇಶಿಸಲಾಗಿತ್ತು. ಆದರೆ, ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮಾಡಿಕೊಂಡು ಈ ಒಪ್ಪಂದವನ್ನು ಚೀನಾ ಬೇರೆಯದೇ ರೀತಿ ಬಳಸಿಕೊಂಡಿತು” ಎಂದು ಹೇಳಿದ್ದಾರೆ.
“ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಅಂದಿನ ಚೀನಾದ ಪ್ರಧಾನಿ ಝೌ ಎನ್ಲೈ ಪಂಚಶೀಲ ಒಪ್ಪಂದಕ್ಕೆ ಸಹಿ ಹಾಕಿದರು. ಇದು ಎರಡೂ ದೇಶಗಳ ನಡುವಿನ ಸಂಬಂಧಗಳನ್ನು ಉತ್ತಮಗೊಳಿಸಲು ಶಾಂತಿಯುತ ಸಹಬಾಳ್ವೆ ಸೇರಿದಂತೆ 5 ತತ್ವಗಳನ್ನು ರೂಪಿಸಿತು. ಬ್ರಿಟಿಷರು ನಿರ್ಗಮಿಸಿದ ನಂತರ, ಭಾರತವು ತನ್ನದೇ ಆದ ಗಡಿಗಳನ್ನು ನಿರ್ಧರಿಸಬೇಕಾಗಿತ್ತು. ಆಗ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಪೂರ್ವದಲ್ಲಿರುವ ಮೆಕ್ಮಹಾನ್ ರೇಖೆ ಮತ್ತು ಲಡಾಖ್ನ ಕೆಲವು ಪ್ರದೇಶಗಳು ಸೇರಿದಂತೆ ಭಾರತದ ಹಕ್ಕುಗಳ ಬಗ್ಗೆ ತಿಳಿದಿತ್ತು. ಆದರೆ ಪಂಚಶೀಲ ಒಪ್ಪಂದ ಮಾಡಿಕೊಂಡರೆ ಅದು ಎರಡೂ ದೇಶಗಳ ನಡುವಿನ ಸಂಬಂಧಗಳನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ ಎಂದು ಅವರು ನಂಬಿದ್ದರು” ಎಂದು ಹೇಳಿದ್ದಾರೆ.
#WATCH | Dehradun, Uttarakhand: Chief of Defence Staff General Anil Chauhan says, “On independence, the British left, and it was for India actually to decide where a front is. Nehru probably knew that we had something, as the McMahon Line was in the east, and we had some kind of… pic.twitter.com/l5aMknInoF
— ANI (@ANI) February 13, 2026
“ಸ್ವಾತಂತ್ರ್ಯದ ಬಳಿಕ ದೇಶ ಬಿಟ್ಟು ಬ್ರಿಟಿಷರು ಹೊರಟುಹೋದರು. ಆದರೆ, ಭಾರತಕ್ಕೆ ಮುಂಭಾಗ ಎಲ್ಲಿದೆ ಎಂಬುದನ್ನು ನಿರ್ಧರಿಸುವುದು ಭಾರತದ ಜವಾಬ್ದಾರಿಯಾಗಿತ್ತು. ಆಗ ಸುಮಾರು 890 ಕಿಮೀ ವಿಸ್ತರಿಸಿದ ಮೆಕ್ಮಹಾನ್ ರೇಖೆಯು ಪೂರ್ವ ವಲಯದಲ್ಲಿ ಬ್ರಿಟಿಷ್ ಭಾರತ ಮತ್ತು ಟಿಬೆಟ್ ನಡುವಿನ ಗಡಿಯಾಗಿ ಕಾರ್ಯನಿರ್ವಹಿಸಿತು” ಎಂದಿದ್ದಾರೆ.
ಇದನ್ನೂ ಓದಿ: ಸ್ವಜನಪಕ್ಷಪಾತವಿಲ್ಲದ ಏಕೈಕ ಸ್ಥಳವೆಂದರೆ ಸೇನೆ; ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಹೇಳಿಕೆ
“ನೆಹರು ಪೂರ್ವ ವಲಯದಲ್ಲಿರುವ ಮೆಕ್ಮಹಾನ್ ರೇಖೆ ಮತ್ತು ಲಡಾಖ್ನಲ್ಲಿ ಭಾರತದ ಹಕ್ಕುಗಳ ಬಗ್ಗೆ ತಿಳಿದಿದ್ದರು. ಆದರೆ ಆ ಬಗ್ಗೆ ಇನ್ನೂ ಅನಿಶ್ಚಿತತೆ ಇತ್ತು. ಅದಕ್ಕಾಗಿಯೇ ಅವರು ಪಂಚಶೀಲ ಒಪ್ಪಂದ ಮಾಡಿಕೊಳ್ಳಲು ಬಯಸಿದ್ದರು. 890 ಕಿ.ಮೀ ಮೆಕ್ಮಹಾನ್ ರೇಖೆಯು ಈಶಾನ್ಯದಲ್ಲಿ ಭಾರತ ಮತ್ತು ಚೀನಾ ನಡುವಿನ ವಾಸ್ತವಿಕ ಗಡಿಯಾಗಿದೆ. ಇದು ನಿರ್ದಿಷ್ಟವಾಗಿ ಅರುಣಾಚಲ ಪ್ರದೇಶ ಮತ್ತು ಟಿಬೆಟ್ ನಡುವಿನ ಗಡಿಯನ್ನು ಗುರುತಿಸುತ್ತದೆ. ಈ ಮಾರ್ಗದ ಬಗ್ಗೆ 1913ರ ಶಿಮ್ಲಾ ಸಮಾವೇಶದ ಸಮಯದಲ್ಲಿ ಮಾತುಕತೆ ನಡೆಸಲಾಯಿತು. ಅದಕ್ಕೆ ಬ್ರಿಟಿಷ್ ಸಮಾಲೋಚಕ ಸರ್ ಹೆನ್ರಿ ಮೆಕ್ಮಹಾನ್ ಅವರ ಹೆಸರಿಡಲಾಗಿದೆ. ಆದರೆ, ಚೀನಾ ಎಂದಿಗೂ ಗಡಿಯನ್ನು ಒಪ್ಪಿಕೊಳ್ಳಲಿಲ್ಲ. ಇದು ಬ್ರಿಟಿಷ್ ಭಾರತ ಮತ್ತು ಟಿಬೆಟ್ನಿಂದ ಹೇರಲ್ಪಟ್ಟಿದೆ ಎಂದು ಚೀನಾ ಹೇಳಿಕೊಂಡಿದೆ” ಎಂದು ಹೇಳಿದ್ದಾರೆ.
“1954ರಲ್ಲಿ ಭಾರತವು ಟಿಬೆಟ್ ಅನ್ನು ಚೀನಾದ ಭಾಗವೆಂದು ಗುರುತಿಸಿತು. ಎರಡೂ ದೇಶಗಳು ಪಂಚಶೀಲ ಒಪ್ಪಂದಕ್ಕೆ ಸಹಿ ಹಾಕಿದವು. ಇದರೊಂದಿಗೆ, ಭಾರತವು ಉತ್ತರ ಗಡಿಯನ್ನು ಇತ್ಯರ್ಥಪಡಿಸಿದೆ ಎಂದು ಭಾವಿಸಿತ್ತು. ಆದರೆ, ನಮ್ಮ ದೇಶದಲ್ಲಿ ಇತ್ಯರ್ಥವಾಗದ ಏಕೈಕ ಗಡಿ ಪ್ರದೇಶ ಅದಾಗಿತ್ತು. ಆ ಗಡಿ ಭಾಗ ಅನೇಕ ಸವಾಲುಗಳನ್ನು ತಂದೊಡ್ಡಿತು” ಎಂದು ಅನಿಲ್ ಚೌಹಾಣ್ ಹೇಳಿದ್ದಾರೆ.
ಇದನ್ನೂ ಓದಿ: ಸ್ವಲ್ಪವಾದರೂ ರಾಷ್ಟ್ರೀಯತೆ, ದೇಶಭಕ್ತಿ ಇರಲಿ: ಭಾರತೀಯ ಉದ್ಯಮ ಕ್ಷೇತ್ರಕ್ಕೆ ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಖಡಕ್ ಸಂದೇಶ
“ಪಂಚಶೀಲ ಒಪ್ಪಂದವನ್ನು ವ್ಯಾಪಾರಕ್ಕಾಗಿ ಮಾತ್ರ ಮಾತುಕತೆ ನಡೆಸಲಾಗಿದೆ. ಅದು ಗಡಿಯಲ್ಲಿ ಚೀನಾದ ನಿಲುವನ್ನು ಯಾವುದೇ ರೀತಿಯಲ್ಲಿ ಪ್ರತಿಬಿಂಬಿಸುವುದಿಲ್ಲ ಎಂಬುದು ಚೀನಾದ ನಿಲುವಾಗಿತ್ತು. ಕಳೆದ ವರ್ಷ ಪ್ರಧಾನಿ ಮೋದಿ ಬೀಜಿಂಗ್ನಲ್ಲಿ ಕ್ಸಿ ಜಿನ್ಪಿಂಗ್ ಅವರನ್ನು ಭೇಟಿ ಮಾಡಿದಾಗ ಚೀನಾ ಅಧ್ಯಕ್ಷರು ಪಂಚಶೀಲ ಒಪ್ಪಂದವನ್ನು ಎರಡೂ ದೇಶಗಳು ಪಾಲಿಸಬೇಕು ಮತ್ತು ಉತ್ತೇಜಿಸಬೇಕು ಎಂದು ಒತ್ತಿ ಹೇಳಿದರು. ಭಾರತ ಮತ್ತು ಚೀನಾ ತಮ್ಮ ಸಂಬಂಧಗಳನ್ನು ಮರುಸ್ಥಾಪಿಸಿದ ನಂತರ, 7 ವರ್ಷಗಳ ಬಳಿಕ ಪ್ರಧಾನಿ ಮೋದಿ ಚೀನಾಕ್ಕೆ ಭೇಟಿ ನೀಡಿದಾಗ ಎರಡೂ ದೇಶಗಳು ತಮ್ಮ ಗಡಿ ಬಿಕ್ಕಟ್ಟನ್ನು ಕೊನೆಗೊಳಿಸಿದವು” ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ