New Mumbai Police Commissioner: ಮುಂಬೈ ಪೊಲೀಸ್​ ಆಯುಕ್ತ ಎತ್ತಂಗಡಿ.. ಮುಕೇಶ್​ ಅಂಬಾನಿಯ ಮುಟ್ಟಲು ಹೋಗಿ ಕೈಸುಟ್ಟುಕೊಂಡ ಮುಂಬೈ ಪೊಲೀಸ್!

ಹಾಲಿ ಪೊಲೀಸ್​ ಆಯುಕ್ತ ಪರಮವೀರ್ ಸಿಂಗ್ ಅವರನ್ನು ಎತ್ತಂಗಡಿ ಮಾಡಲಾಗಿದೆ. ಇದೀಗ ಹೇಮಂತ್​ ನಗರಾಳೆ ಅವರನ್ನು ನೂತನ ಪೊಲೀಸ್ ಆಯುಕ್ತರನ್ನಾಗಿ ಪ್ರತಿಷ್ಠಾಪಿಸಲಾಗಿದೆ.

New Mumbai Police Commissioner: ಮುಂಬೈ ಪೊಲೀಸ್​ ಆಯುಕ್ತ ಎತ್ತಂಗಡಿ.. ಮುಕೇಶ್​ ಅಂಬಾನಿಯ ಮುಟ್ಟಲು ಹೋಗಿ ಕೈಸುಟ್ಟುಕೊಂಡ ಮುಂಬೈ ಪೊಲೀಸ್!
ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್
Follow us
| Updated By: KUSHAL V

Updated on:Mar 17, 2021 | 5:49 PM

ಮುಂಬೈ: ಏಷ್ಯಾದ ಶ್ರೀಮಂತ ಮುಕೇಶ್​ ಅಂಬಾನಿಯನ್ನು ಮುಟ್ಟಲು ಹೋಗಿ ಮುಂಬೈ ಪೊಲೀಸರು ಕೈಸುಟ್ಟುಕೊಂಡಿದ್ದಾರೆ! ಹಾಲಿ ಪೊಲೀಸ್​ ಆಯುಕ್ತ ಪರಮವೀರ್ ಸಿಂಗ್ ಅವರನ್ನು ಎತ್ತಂಗಡಿ ಮಾಡಲಾಗಿದೆ. ಇದೀಗ ಹೇಮಂತ್​ ನಗರಾಳೆ ಅವರನ್ನು ನೂತನ ಪೊಲೀಸ್ ಆಯುಕ್ತರನ್ನಾಗಿ ಪ್ರತಿಷ್ಠಾಪಿಸಲಾಗಿದೆ.

ವಿವಾದಿತ ಪರಮವೀರ್ ಸಿಂಗ್ ಅವರನ್ನು ಒಂದು ವರ್ಷದ ಹಿಂದೆಯಷ್ಟೇ ಮುಂಬೈ ಮಹಾನಗರದ ಪೊಲೀಸ್​ ಆಯುಕ್ತರನ್ನಾಗಿ ನೇಮಿಸಲಾಗಿತ್ತು. ಇದೀಗ ಪರಮವೀರ್ ಸಿಂಗ್​ಗೆ ಸದ್ಯಕ್ಕೆ ಯಾವುದೇ ಹುದ್ದೆ ತೋರಿಸದೆ ಮುಂಬೈ ಪೊಲೀಸ್​ ಆಯುಕ್ತ ಸ್ಥಾನದಿಂದ ಬಿಡುಗಡೆಗೊಳಿಸಲಾಗಿದೆ. ಆದರೆ ತಾಜಾ ವರದಿಗಳ ಪ್ರಕಾರ ಪರಮವೀರ್ ಸಿಂಗ್​ಗೆ ಗೃಹರಕ್ಷಕ ದಳದ (Home Guards) ಜವಾಬ್ದಾರಿ ವಹಿಸಲಾಗಿದೆ. ಇತ್ತೀಚೆಗೆ ಏಷ್ಯಾದ ನಂಬರ್ 1 ಧನಿಕ ಮುಕೇಶ್​ ಅಂಬಾನಿ ನಿವಾಸ ಆಂಟಿಲಾ ಎದುರು ಜಿಲೆಟಿನ್​ ಸ್ಫೋಟಕಗಳು ತುಂಬಿದ್ದ ಐಷಾರಾಮಿ ವಾಹನವೊಂದು ಪತ್ತೆಯಾಗಿತ್ತು.

ಇದರಲ್ಲಿ ಮುಂಬೈ ಪೊಲೀಸರ ಕೈವಾಡವಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಆ ಐಷಾರಾಮಿ ವಾಹನವನ್ನು ಇನ್ನೋವಾ ವಾಹನವೊಂದು ಫಾಲೋ ಮಾಡಿದ್ದು, ಅದು ಮುಂಬೈ ಪೊಲೀಸರಿಗೆ ಸೇರಿದ ವಾಹನವೆಂದು ಗುರುತಿಸಲಾಗಿತ್ತು. ನೇರವಾಗಿ ಎನ್​ಐಎ ವಿಚಾರಣೆಗೆ ಇಳಿದಿತ್ತು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇದೀಗ ಪರಮವೀರ್ ಸಿಂಗ್ ಅವರನ್ನು ಎತ್ತಂಗಡಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಮುಕೇಶ್ ಅಂಬಾನಿ ನಿವಾಸದ ಮುಂದೆ ಸ್ಫೋಟಕ ಪತ್ತೆಯಾದ ಪ್ರಕರಣ ಹಾಗೂ ಕಾರ್ ಮಾಲೀಕ ಉದ್ಯಮಿ ಮನ್​ಸುಖ್ ಹಿರೇನ್ ಸಾವು ಪ್ರಕರಣದ ಆರೋಪಿ ಸ್ಥಾನದಲ್ಲಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಈಗಾಗಲೇ ಸಸ್ಪೆಂಡ್ ಆಗಿದ್ದಾರೆ. ಘಟನೆಗೆ ಸಂಬಂಧಿಸಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಚಿನ್ ವಾಜೆ ಪರ ವಹಿಸಿ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ವಿವಾದಗಳ ಸರಮಾಲೆಯನ್ನೇ ಹೊದ್ದಿರುವ ಐಪಿಎಸ್ ಅಧಿಕಾರಿ ಪರಮವೀರ್ ಸಿಂಗ್ ಅವರು ‘26/11 ಮುಂಬೈ ದಾಳಿ ಸಂದರ್ಭದಲ್ಲಿ ಭಯೋತ್ಪಾದಕ ದಾಳಿ ನಡೆದ ಸ್ಥಳಕ್ಕೆ ತೆರಳಿ ಕಾರ್ಯನಿರ್ವಹಿಸಲು ಹಿಂದೇಟು ಹಾಕಿದ್ದರು’ ಎಂದು ಆಗಿನ ಮುಂಬೈ ಪೊಲೀಸ್​ ಆಯುಕ್ತ ಹಸನ್ ಗಫೂರ್​ ತಮ್ಮ ವರದಿಯಲ್ಲಿ ತಿಳಿಸಿದ್ದರು. ಐಪಿಎಸ್ ಅಧಿಕಾರಿ ಪರಮವೀರ್ ಸಿಂಗ್ ಈ ಹಿಂದೆ ಥಾಣೆ ಪೊಲೀಸ್​ ಆಯುಕ್ತರಾಗಿದ್ದರು. ಮುಂಬೈ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್​ ಮಹಾ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: ಸಚಿನ್ ವಾಜೆ ಅಮಾನತು ಪ್ರಕರಣ: ಸರ್ಕಾರಕ್ಕೆ ಮುಜುಗರ ತಪ್ಪಿಸಲು ಶರದ್ ಪವಾರ್-ಉದ್ಧವ್ ಠಾಕ್ರೆ ಮಾತುಕತೆ

Published On - 5:01 pm, Wed, 17 March 21